ಕೊರೋನ ಸೋಂಕು ಹೆಚ್ಚುತ್ತಿದ್ದರೂ ರಾಜ್ಯದಲ್ಲಿ ಇನ್ನೂ ಏರಿಕೆಯಾಗಿಲ್ಲ ಪರೀಕ್ಷೆಗಳ ಸಂಖ್ಯೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.26: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಕೊರೋನ ಪರೀಕ್ಷೆಗಳು ಹೆಚ್ಚಾಗಿ ನಡೆಯಬೇಕಾಗಿತ್ತು. ಆದರೆ, ಕಳೆದ ಹತ್ತು-ಹದಿನೈದು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸಗಳಲ್ಲಿ ಇಳಿಕೆಯಾಗುತ್ತಿದೆ.
ಕೊರೋನ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇರುವ ಸಂಬಂಧ ಅನೇಕ ತಜ್ಞರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಸಂದಿಗ್ನ ಸಂದರ್ಭದಲ್ಲಿ ಪರೀಕ್ಷೆಗಳನ್ನು ಹೆಚ್ಚಳ ಮಾಡಬೇಕಾದ ಅಗತ್ಯವಿದೆ. ಆದರೆ, ದಿನದಿಂದ ದಿನಕ್ಕೆ ಪರೀಕ್ಷೆಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ವರದಿಯಾಗಿದೆ.
ಆರೋಗ್ಯ ಇಲಾಖೆ ನೀಡುವ ಮಾಹಿತಿ ಅನ್ವಯ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಪರೀಕ್ಷೆಗಳು ನಡೆಯುತ್ತಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಶೀಘ್ರವಾಗಿ ಸೋಂಕಿತರನ್ನು ಪತ್ತೆ ಹಚ್ಚಿ ಗುಣಪಡಿಸಬೇಕೆಂಬ ಕೂಗಿನ ನಡುವೆ ಪರೀಕ್ಷೆ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಸ್ಥಿರತೆ ಇಲ್ಲದಿರುವುದು ಒಟ್ಟಾರೆ ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸೋಲುತ್ತಿದೆಯಾ ಎಂಬ ಅನುಮಾನವೂ ಕಾಡಲು ಶುರುವಾಗಿದೆ.
15 ಸಾವಿರವಷ್ಟೇ ಗರಿಷ್ಠ: ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಥಮ ಪ್ರಕರಣ ವರದಿಯಾದ ನಂತರ ಸುಮಾರು 15 ಸಾವಿರ ಜನರನ್ನು ಒಂದು ದಿನ ಪರೀಕ್ಷೆ ನಡೆಸಿರುವುದು ವರದಿಯಾಗಿದೆ. ಇದನ್ನು ಮೀರಿ ಇದುವರೆಗೂ ಹೆಚ್ಚಿನ ಪರೀಕ್ಷೆಗಳು ನಡೆದಿಲ್ಲ. ಮಾರ್ಚ್ ನಲ್ಲಿ ಪ್ರತಿದಿನ 60-100 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ, ನಂತರದಲ್ಲಿ ಜಿಲ್ಲೆಗೆ ಒಂದರಂತೆ ಪ್ರಯೋಗಾಲಯ ಆರಂಭಿಸಲಾಗಿತ್ತು.
ಅದಾದ ಬಳಿಕ ಹೆಚ್ಚಿನ ಸಾಮರ್ಥ್ಯವಿರುವ ಯಂತ್ರಗಳನ್ನು ಅಳವಡಿಸಿದ್ದರಿಂದ ಸೋಂಕಿತರ ತಪಾಸಣೆ ಸಂಖ್ಯೆ ಹೆಚ್ಚಳವಾಗಿತ್ತು. ಮಾರ್ಚ್ ಅಂತ್ಯಕ್ಕೆ 300 ಗಡಿ ದಾಟಿತ್ತಾದರೂ, ನಿರೀಕ್ಷಿತ ಪ್ರಮಾಣಕ್ಕೆ ಹೋಗಲು ಸಾಧ್ಯವಾಗಿಲ್ಲ. ಅನಂತರ ಎಪ್ರಿಲ್ ಅಂತ್ಯಕ್ಕೆ ಐದು ಸಾವಿರ ಗಡಿದಾಟಿದೆ. ಈ ಹಂತದಲ್ಲಿ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಆದರೆ ಅದೇ ಪ್ರಮಾಣದಲ್ಲಿ ಪತ್ತೆ ಹಚ್ಚುವ ಕೆಲಸ ಏರಿಕೆಯಾಗಿಲ್ಲ.
ರಾಜ್ಯದಲ್ಲಿ ಮೇ 30 ರಂದು ಸುಮಾರು 15 ಸಾವಿರಕ್ಕೂ ಅಧಿಕ ಜನರನ್ನು ಒಂದೇ ದಿನ ಪರೀಕ್ಷೆ ಮಾಡಲಾಗಿತ್ತು. ಇದೇ ಇದುವರೆಗೂ ನಡೆದ ಪರೀಕ್ಷೆಗಳಲ್ಲಿ ಗರಿಷ್ಠ ಪ್ರಮಾಣದ್ದಾಗಿದೆ. ಉಳಿದಂತೆ ಜೂ.3 ರಂದು 15,197 ಪರೀಕ್ಷೆಗಳು ನಡೆದಿದೆ. ಅದಾದ ಬಳಿಕ ಜೂ.9 ರ ನಂತರದಲ್ಲಿ 10 ಸಾವಿರಕ್ಕಿಂತ ಕಡಿಮೆಗೆ ಇಳಿದಿದೆ. ಕಳೆದ 15-20 ದಿನಗಳಲ್ಲಿ 5-6 ದಿನಗಳಷ್ಟೇ 10-12 ಸಾವಿರದ ಗಡಿದಾಟಿದೆ. ಜೂ.10 ರಿಂದ ಜೂ.25 ರವರೆಗೆ 1,44,819 ಮಾದರಿಗಳ ಪರೀಕ್ಷೆ ನಡೆದಿದೆ. ಅಂದರೆ ದಿನಕ್ಕೆ ಸರಿ ಸುಮಾರು 9,654 ಜನರನ್ನಷ್ಟೇ ಪರೀಕ್ಷಿಸಲಾಗಿದೆ ಎಂಬುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ.
25 ಸಾವಿರ ಪರೀಕ್ಷೆ ಯಾವಾಗ ?: ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 11 ಸಾವಿರ ಮೀರಿದೆ. ಈ ಸನ್ನಿವೇಶದಲ್ಲಿ ಕಳೆದ ವಾರ ಪ್ರತಿಕ್ರಿಯಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಕೆಲವೇ ದಿನಗಳಲ್ಲಿ ಪ್ರತಿದಿನ ಕನಿಷ್ಠ 15 ಸಾವಿರ ಹಾಗೂ ಗರಿಷ್ಠ 25 ಸಾವಿರ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದರು.
ಆದರೆ, ಸಂಖ್ಯೆ ಹೆಚ್ಚುವ ಬದಲು ಕುಸಿಯುತ್ತಲೇ ಇದೆ. ಹೊರ ರಾಜ್ಯಗಳಿಂದ ಕಾರ್ಮಿಕರು ಹೆಚ್ಚು ಬಂದಿದ್ದರಿಂದ ಗರಿಷ್ಠ ಪರೀಕ್ಷೆ ನಡೆದಿತ್ತು. ಇದೀಗ ರಾಜ್ಯದಲ್ಲಿರುವವರ ಪರೀಕ್ಷೆಯಷ್ಟೇ ನಡೆಯುತ್ತಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಮರಣ ಪ್ರಮಾಣ ಹೆಚ್ಚಳ: ಕೊರೋನ ಪ್ರಥಮ ಪ್ರಕರಣ ವರದಿಯಾದ ನಂತರದಿಂದ ಆರಂಭವಾಗಿ ಇದುವರೆಗೆ ಹೋಲಿಸಿದರೆ ಮೃತರ ಸಂಖ್ಯೆ ಈಗ ಅಧಿಕವಾಗುತ್ತಿದೆ. ಪ್ರತಿ ಹತ್ತು ಲಕ್ಷ ಜನರಲ್ಲಿ ನಿಧನರಾದವರ ಪ್ರಮಾಣ ಬೆಂಗಳೂರಿನಲ್ಲಿಯೇ ಅಧಿಕವಿದೆ. ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಮೃತಪಟ್ಟವರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ರಾಜ್ಯದ 180 ಮೃತ ಪ್ರಕರಣಗಳಲ್ಲಿ 80ಕ್ಕೂ ಅಧಿಕ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ.
ಕಳೆದ ಹತ್ತು ದಿನಗಳ ಕೊರೋನ ಪರೀಕ್ಷಾ ವಿವರ
ಜೂ.15 : 5362
ಜೂ.16 : 7936
ಜೂ.17 : 7531
ಜೂ.18 : 8709
ಜೂ.19 : 10553
ಜೂ.20 : 9833
ಜೂ.21 : 12872
ಜೂ.22 : 10569
ಜೂ.23 : 10569
ಜೂ.24 : 12709
ಜೂ.25 : 14078