ರಂಗೇರಿದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ: ಮೂರು ಪಕ್ಷಗಳಿಂದಲೂ ಭಾರೀ ಪ್ರಚಾರ
ಬೆಂಗಳೂರು, ಅ. 4: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕಾಗಿ ನಡೆಯುವ ಬೆಂಗಳೂರು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣಾ ಕಣರಂಗೇರಿದ್ದು, ಪ್ರತಿಪಕ್ಷ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷದಿಂದಲೂ ಭಾರೀ ಪ್ರಚಾರ ನಡೆಯುತ್ತಿದೆ. ಆದರೆ, ಮತದಾರರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.
ಸತತವಾಗಿ ಎರಡು ದಶಕಗಳಿಂದ ತಮ್ಮದೇ ಪ್ರಭಾವವನ್ನು ಉಳಿಸಿಕೊಂಡಿರುವ ಪುಟ್ಟಣ್ಣ ಈ ಬಾರಿ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿ ಅಲ್ಲಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಸತತ ಗೆಲುವಿನ ಬಲ ಹಾಗೂ ಪಕ್ಷಾಂತರ ಕಳಂಕವನ್ನು ಹೊಂದಿರುವ ಪುಟ್ಟಣ್ಣರನ್ನು ಈ ಬಾರಿ ಮಣಿಸಿಯೇ ತಿರುತ್ತೇವೆ ಎಂದು ಪ್ರತಿಜ್ಞೆ ಮಾಡಿದಂತಿರುವ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಹಾಗೂ ಕಾಂಗ್ರೆಸ್ನ ಅಭ್ಯರ್ಥಿಯಾಗಿ ಪ್ರವೀಣ್ ಪೀಟರ್ ಅಖಾಡಕ್ಕಿಳಿಯಲಿದ್ದಾರೆ.
ವ್ಯಕ್ತಿಗಳ ವರ್ಚಸ್ಸಿನ ನಡುವಿನ ಕಾದಾಟ: ಪದವೀಧರ ಕ್ಷೇತ್ರದ ಚುನಾವಣೆಯು ಆಯಾ ಪಕ್ಷಗಳ ಚುನಾವಣೆಯಡಿ ನಡೆಯುತ್ತದೆ. ಆದರೆ, ಈ ಚುನಾವಣೆ ವ್ಯಕ್ತಿ ವರ್ಚಸ್ಸಿನ ಚುನಾವಣೆಯೇ ಆಗಿ ಬಿಂಬಿತವಾಗಿದೆ. ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ಜೆಡಿಎಸ್ನಲ್ಲಿದ್ದ ಪುಟ್ಟಣ್ಣ ಗೆಲ್ಲುತ್ತಾ ಬಂದಿದ್ದಾರೆ. ಇದೇ ಮಾನದಂಡದ ಮೇಲೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದರೂ ಅವರು ತಮ್ಮ ವೈಯುಕ್ತಿಕ ವರ್ಚಸ್ಸನ್ನೇ ನಂಬಿದ್ದಾರೆ.
ಆದರೆ, ವೃತ್ತಿಯಲ್ಲಿ ವಕೀಲರಾಗಿರುವ ಎ.ಪಿ.ರಂಗನಾಥ್ ಪಕ್ಷದ ಚಿಹ್ನೆಯ ಮೇಲೆ ಅವಲಂಬಿತರಾಗಿದ್ದು, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಶಿಕ್ಷಕರ ಕ್ಷೇತ್ರ ಮತ್ತು ರಾಜ್ಯಕ್ಕೆ ನೀಡಿದ ಕೊಡುಗೆಯ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಇನ್ನು, ಕಾಂಗ್ರೆಸ್ನ ಅಭ್ಯರ್ಥಿಯೂ ಪಕ್ಷದ ವರ್ಚಸ್ಸಿನ ಮೇಲೆಯೇ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದಾರೆ.
ನಕಲಿ ಮತದಾರರ ಹಾವಳಿ: ವಿದ್ಯಾವಂತರ ಕ್ಷೇತ್ರವೆಂದೇ ಕರೆಯುವ ಪದವೀಧರರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೂ ನಕಲಿ ಮತದಾರರ ಹಾವಳಿ ಕಾಲಿಟ್ಟಿದೆ. ಇದರ ವಿರುದ್ಧ ಜೆಡಿಎಸ್ ಅಭ್ಯರ್ಥಿ ರಂಗನಾಥ್ ಹೋರಾಟ ನಡೆಸಿ, ಪ್ರಕರಣವನ್ನು ಕೋರ್ಟ್ ಬಾಗಿಲಿಗೂ ತಂದು ನಿಲ್ಲಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ನಾಲ್ಕು ಸಾವಿರ ನಕಲಿ ಮತದಾರರಿದ್ದು, ಇವರೇ ಪುಟ್ಟಣ್ಣ ಶ್ರೀರಕ್ಷೆಯಾಗಿದ್ದರು ಎಂದು ರಂಗನಾಥ್ ಆರೋಪಿಸಿದ್ದರು. ನಕಲಿಯಿದ್ದರೆ ಪತ್ತೆ ಹಚ್ಚಿ ನ್ಯಾಯಸಮ್ಮತ ಚುನಾವಣೆ ನಡೆಸಲಿ ಎಂದು ಪುಟ್ಟಣ್ಣ ಸವಾಲು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನ.9 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ನೈಜ ಚಿತ್ರಣ ಸಿಗಲಿದೆ.
ಶಾಸಕರ ಬಲ: ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ 36 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಅದರಲ್ಲಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿರುವುದು ಸೇರಿದಂತೆ ಬೆಂಗಳೂರು ನಗರ 26, ರಾಮನಗರ 4, ಬೆಂಗಳೂರು ಗ್ರಾಮಾಂತರ 6 ಸೇರಿ ಒಟ್ಟು 36 ವಿಧಾನಸಭಾ ಕ್ಷೇತ್ರಗಳಿರಲಿವೆ. ಈ ಪೈಕಿ ತಲಾ 14 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರಿದ್ದಾರೆ. ಒಬ್ಬ ಪಕ್ಷೇತರ ಶಾಸಕ ಹಾಗೂ 6 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಆಗ್ನೇಯ ಪದವಿಧರ ಕ್ಷೇತ್ರಕ್ಕೆ ಚಿದಾನಂದ ಎಂ.ಗೌಡ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪ್ರೊ.ಎಸ್.ಸಂಕನೂರ, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶಶಿಲ್ ಜಿ.ನಮೋಶಿ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ ಅವರನ್ನು ಬಿಜೆಪಿ ಅಭ್ಯರ್ಥಿಗಳನ್ನಾಗಿ ಬಿಜೆಪಿ ಸಂಸದೀಯ ಮಂಡಳಿ ಪ್ರಕಟಿಸಿದೆ.
ಶಿಕ್ಷಕರ ಏಳಿಗೆಗಾಗಿ ಎರಡು ದಶಕಕದಿಂದಲೂ ಪ್ರಾಮಾಣಿಕವಾಗಿ ದುಡಿದಿದ್ದೇವೆ. ಪಕ್ಷ, ಜಾತಿ, ಧರ್ಮ ಬದಿಗಿಟ್ಟು ಹೋರಾಟ ಮಾಡಿರುವುದೇ ನನಗೆ ಆತ್ಮಬಲ. ಹಿಂದೆ ಎದುರಾಳಿಯಾಗಿದ್ದ ಪಕ್ಷದಿಂದಲೇ ಈ ಬಾರಿ ನಾನು ಅಭ್ಯರ್ಥಿಯಾಗಿದ್ದಾರೆ.ನನ್ನ ನಿಸ್ವಾರ್ಥ ಸೇವೆ ಜತೆಗೆ ಪಕ್ಷದ ವರ್ಚಸ್ಸು ನನ್ನ ಗೆಲುವಿನ ಹಾದಿ ಸುಲಭಗೊಳಿಸಿದೆ.
-ಪುಟ್ಟಣ್ಣ, ಬಿಜೆಪಿ ಅಭ್ಯರ್ಥಿ
ಶಿಕ್ಷಕರ ಅಭ್ಯುದಯಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಕೆಲಸಗಳೇ ನನ್ನ ಗೆಲುವಿಗೆ ದಾರಿಯಾಗಲಿದೆ. ಪಕ್ಷದ ಚಿಹ್ನೆಯಡಿ ಗೆದ್ದವರಿಂದು ಪಕ್ಷದ ವಿರುದ್ಧವೇ ನಿಂತಿದ್ದಾರೆ. ಆದರೆ, 18 ವರ್ಷಗಳಿಂದ ಪಕ್ಷವನ್ನು ಕೈ ಹಿಡಿದು ನಡೆಸಿರುವ ಶಿಕ್ಷಕರು ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನೇ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.
-ಎಂ.ಪಿ.ರಂಗನಾಥ್, ಜೆಡಿಎಸ್ ಅಭ್ಯರ್ಥಿ