ರಾಜ್ಯಾದಂತ ಮತದಾರರ ಓಲೈಕೆಗೆ ಮದ್ಯದ ಆಮಿಷ ಜೋರು...!
ಬೆಂಗಳೂರು, ಡಿ.20 : ರಾಜ್ಯದಲ್ಲಿ ಡಿ.22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ 24ಗಂಟೆಗಳ ಕಾಲವಷ್ಟೇ ಬಾಕಿಯುಳಿದ ಹಿನ್ನೆಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಓಲೈಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ನಗರ, ಪಟ್ಟಣ ಪ್ರದೇಶಗಳಿಗೆ ಹತ್ತಿರವಿರುವ ಗ್ರಾಮಗಳಲ್ಲಿ ಹಣದ ಹಂಚಿಕೆ, ಮದ್ಯ, ಮಾಂಸದ ಪಾರ್ಟಿಗಳನ್ನು ಆಯೋಜನೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನವೂ ನಡೆಯುತ್ತಿದೆ. ತೋಟದ ಮನೆ, ಧಾಬಾ, ಇಟ್ಟಿಗೆ ಶೆಡ್ ಎಲ್ಲೆಂದರಲ್ಲಿ ಪಾರ್ಟಿಗಳನ್ನು ಆಯೋಜಿಸಿ ಮತದಾರರ ಮನವೊಲಿಕೆಯ ಕಸರತ್ತು ನಡೆಸುತ್ತಿದ್ದಾರೆ. ಅದರ ಜತೆಗೆ ಹಣ ಇನ್ನಿತರ ಆಮಿಷಗಳ ಸುರಿಮಳೆಯಾಗುತ್ತಿದೆ.
ಬಹಿರಂಗ ಮತಯಾಚನೆಗೆ ನಿರ್ಬಂಧ ಬಳಿಕ ಸ್ಪರ್ಧೆಗಿಳಿದವರು ಮನೆಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಎಡಪಕ್ಷಗಳು ಹಾಗೂ ಮತ್ತಿತರ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎಲ್ಲರೂ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.
ಆಣೆ, ಪ್ರಮಾಣದ ರಾಜಕೀಯ: ಹಳ್ಳಿ ಮಟ್ಟದ ಚುನಾವಣೆಯಾಗಿರುವ ಹಿನ್ನೆಲೆಯಲ್ಲಿ ಒಂದೊಂದು ಮತಕ್ಕೂ ಮಾನ್ಯತೆಯಿರುತ್ತದೆ. ಹೀಗಾಗಿ, ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಬೆಂಬಲಿತ ಪಕ್ಷದ ನಾಯಕರುಗಳು ಮತದಾರರಿಗೆ ಎಲೆ-ಅಡಿಕೆ, ಹಣವನ್ನು ಹಂಚಿಕೆ ಮಾಡುವ ಮೂಲಕ ದೇವರ ಮೇಲೆ ಪ್ರಮಾಣ ಮಾಡಿಸಿಕೊಂಡು ನಮಗೆ ಮತ ಹಾಕಬೇಕು ಎನ್ನುವ ಸನ್ನಿವೇಶಗಳು ನಡೆಯುತ್ತಿದೆ. ಅಲ್ಲದೆ, ಗ್ರಾಮದಿಂದ ಹೊರಗುಳಿದ ಮತದಾರರನ್ನು ಚುನಾವಣಾ ದಿನದಂದು ಊರಿಗೆ ಕರೆಸಿಕೊಳ್ಳುವ ಪ್ರಯತ್ನವೂ ನಡೆದಿದೆ.
ಮತದಾರರನ್ನು ಕರೆಸಿಕೊಳ್ಳಲು ದುಂಬಾಲು: ವಿವಿಧ ಕಾರಣಗಳಿಂದ ಹಳ್ಳಿಯನ್ನು ಬಿಟ್ಟು ರಾಜಧಾನಿಯತ್ತ ಮುಖ ಮಾಡಿರುವ ಜನರನ್ನು ವಾಪಸ್ ಹಳ್ಳಿಗೆ ಕರೆಸಿಕೊಳ್ಳುವ ಸಲುವಾಗಿ ಅನೇಕ ಪಕ್ಷಗಳ ಮುಖಂಡರು ದುಂಬಾಲು ಬೀಳುತ್ತಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಹೀಗೆ ಅನೇಕ ಭಾಗಗಳಲ್ಲಿಯೂ ಅಭ್ಯರ್ಥಿಗಳೇ ಮತದಾರರಿಗೆ ಬಸ್ಗಳನ್ನು ಬುಕ್ ಮಾಡುವ ಮೂಲಕ ಅಥವಾ ಒಂದು ಗುಂಪು ಮಾಡಿ ಬಸ್ಗಳಲ್ಲಿ ಮತದಾರರನ್ನು ಕರೆದು ತರುವ ಕೆಲಸವನ್ನು ಮಾಡಲಾಗುತ್ತಿದೆ.
ಕೆಲವರು ಊರುಗಳಿಗೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಂತಹವರನ್ನು ಕರೆದುಕೊಂಡು ಹೋಗಲು ಖುದ್ದು ಅಭ್ಯರ್ಥಿಗಳೇ ವ್ಯವಸ್ಥೆ ಮಾಡುತ್ತಿರುವುದು ಕಂಡುಬಂದಿದೆ. ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ ಮುಂತಾದ ಕಡೆಯಿಂದ ಉದ್ಯೋಗ, ಕೂಲಿ ಅರಸಿ ಬಂದು ಬೆಂಗಳೂರಿನಲ್ಲಿ ನೆಲೆಸಿದವರನ್ನು ಚುನಾವಣೆಯ ಮತದಾನಕ್ಕೆ ಕರೆದುಕೊಂಡು ಹೋಗಲು ವಿವಿಧ ಪಕ್ಷಗಳ ಮುಖಂಡರು, ಲಾರಿ, ವ್ಯಾನ್, ಕಾರು, ಬಸ್ ವ್ಯವಸ್ಥೆ ಕೂಡ ಮಾಡಿದ್ದಾರೆ.
ವಿವಿಧ ನಗರಗಳಲ್ಲಿರುವ ಮತದಾರರು ಬಂದು ಮತದಾನ ಮಾಡಿದರೆ ನಮಗೆ ಅನುಕೂಲವಾಗುತ್ತದೆ. ನಮ್ಮ ಪಕ್ಷದ ಬೆಂಬಲಿಗರು ಗೆಲ್ಲುತ್ತಾರೆ ಎಂಬ ಹಿನ್ನೆಲೆಯಲ್ಲಿ ಅವರನ್ನೆಲ್ಲ ಕರೆದೊಯ್ಯುವ ವ್ಯವಸ್ಥೆ ಕೂಡ ಮಾಡಲಾಗುತ್ತಿದ್ದು, ಬಹತೇಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಮತದಾನ ಬಹಿಷ್ಕಾರ ಎಚ್ಚರಿಕೆ: ಹಕ್ಕುಪತ್ರಗಳ ವಿತರಣೆ ವಿಳಂಬ ವಿರೋಧಿಸಿ ಉಡುಪಿಯಲ್ಲಿ ಒಂದು ಹಳ್ಳಿಯ ಜನರು, ಕಾರ್ಖಾನೆಗಳ ಆರಂಭಕ್ಕೆ ಜಮೀನು ನೀಡಿದ ರೈತ ಕುಟುಂಬಗಳಿಗೆ ಉದ್ಯೋಗ ನೀಡುವಂತೆ ನಂಜನಗೂಡು ತಾಲೂಕಿನ ಒಂದು ಹಳ್ಳಿಯ ಜನರು, ಕಾಲುವೆ ನೀರಿಗಾಗಿ ರಾಯಚೂರಿನಲ್ಲಿ, ಮೂಲಸೌಕರ್ಯ ಕಲ್ಪಿಸಬೇಕು ಎಂದು ರಾಮನಗರ ಜಿಲ್ಲೆಯ ಒಂದು ಗ್ರಾಮ, ಸಕಲೇಶಪುರ ತಾಲೂಕಿನ ಮೂರು ಗ್ರಾ.ಪಂ.ಗಳಲ್ಲಿ ಮತ್ತು ದೇವಲದಕೆರೆಯ ಏಳು ಗ್ರಾ.ಪಂ.ಗಳು ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಚುನಾವಣೆಯಿಂದ ದೂರ ಉಳಿದಿದ್ದಾರೆ. ಹೀಗೆ ರಾಜ್ಯದ ಹಲವಾರು ಕಡೆಗಳಲ್ಲಿ ನೂರಾರು ಹಳ್ಳಿಗಳ ಜನರು ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದು, ಚುನಾವಣಾ ಆಯೋಗ ಎಲ್ಲರ ಮನವೊಲಿಕೆಗೂ ಪ್ರಯತ್ನಿಸಿದೆ ಎನ್ನಲಾಗಿದೆ.