ಬಿಜೆಪಿಯ ಚುನಾವಣಾ ಗೆಲುವುಗಳೂ ದೇಶದ ಸಂಸದೀಯ ವ್ಯವಸ್ಥೆಯೂ
ಒಂದಷ್ಟು ಚಾಲ್ತಿಯಲ್ಲಿರುವ ರಾಜಕೀಯ ಪಕ್ಷವನ್ನೋ, ಗುಂಪನ್ನೋ, ವ್ಯಕ್ತಿಗಳನ್ನೋ ಬಳಸಿಕೊಂಡು ಚಲಾವಣೆಯಾಗುವ ಮತಗಳ ಒಡೆಯುವಿಕೆ, ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣಾ ಫಲಿತಾಂಶವನ್ನೇ ಏರುಪೇರು ಮಾಡುವುದು, ಜಾತಿ, ಧರ್ಮಗಳ ಆಧಾರದಲ್ಲಿ ಗುಂಪುಗಾರಿಕೆ, ಒಳಗುಂಪುಗಾರಿಕೆ ನಡೆಸಿ ಚುನಾವಣೆಯನ್ನೇ ಬುಡಮೇಲು ಮಾಡುವುದು ಇತ್ಯಾದಿಗಳನ್ನು ಪ್ರಜಾಪ್ರಭುತ್ವದ ಅವಿಭಾಜ್ಯ ಭಾಗವೆಂಬಂತೆ ಬಿಂಬಿಸಿಡಲಾಗಿದೆ. ಅದಕ್ಕೆ ‘ಸೋಶಿಯಲ್ ಇಂಜಿನಿಯರಿಂಗ್’ ಎಂದೋ, ಕುಶಲ ರಾಜಕೀಯ ನಡೆಗಳೆಂದೋ, ರಾಜಕೀಯ ಮುತ್ಸದ್ದಿತನವೆಂದೋ, ಸಂಘಟನಾ ಶಕ್ತಿಯೆಂದೋ, ಪ್ರಚಾರತಂತ್ರವೆಂದೋ ಇತ್ಯಾದಿ ಕರೆದು ಸಾರ್ವಜನಿಕ ಮಾನ್ಯತೆಯನ್ನೂ ಕೂಡ ದಕ್ಕಿಸಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನಲ್ಲಿ ಇವುಗಳು ನಿರ್ಣಾಯಕ ಪಾತ್ರ ವಹಿಸಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ.
ಇಂಡಿಯಾ ಒಕ್ಕೂಟದಲ್ಲಿ ಹಾಲಿ ಅಧಿಕಾರದಲ್ಲಿರುವ ಮೋದಿಯ ಬಿಜೆಪಿ ಸರಕಾರ ತನ್ನ ಅಧಿಕಾರಾವಧಿಯಲ್ಲಿ ಸ್ವಲ್ಪಕ್ಲಿಷ್ಟವೆಂದು ಬಣ್ಣಿಸಲಾಗಿದ್ದ ಐದು ರಾಜ್ಯಗಳ ಚುನಾವಣೆಗಳು ಮುಗಿದು ಫಲಿತಾಂಶಗಳು ಹೊರಬಿದ್ದು ಮೂರು ದಿನಗಳಾದವು. ಪಂಜಾಬ್ ಹೊರತುಪಡಿಸಿದಂತೆ ಉಳಿದ ಉತ್ತರಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಈ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಬಗ್ಗೆ ಪ್ರಗತಿಪರ ಹಾಗೂ ಇನ್ನಿತರ ವಲಯಗಳಲ್ಲಿ ಆಶ್ಚರ್ಯ, ಹತಾಶೆ, ಪ್ರಶ್ನೆಗಳಿಂದೊಡಗೂಡಿದ ವಿಶ್ಲೇಷಣೆಗಳು, ಪ್ರತಿಕ್ರಿಯೆಗಳು ಹೊರಬರುವುದು ಮುಂದುವರಿದಿದೆ.
ಮೋದಿ ಸರಕಾರವನ್ನು ಮಣಿಸಿದ್ದ ಚಾರಿತ್ರಿಕ ಹಾಗೂ ಅಭೂತಪೂರ್ವ ರೈತಾಪಿ ಚಳವಳಿಯ ಪರಿಣಾಮ ಈ ಚುನಾವಣೆಗಳ ಮೇಲೆ ಆಗುತ್ತದೆ. ಜೊತೆಗೆ ಒಕ್ಕೂಟ ಸರಕಾರ ಮತ್ತು ರಾಜ್ಯಗಳ ಬಿಜೆಪಿ ಸರಕಾರಗಳ ದುರಾಡಳಿತ, ಕೋಮುವಾದಿ, ಜಾತಿವಾದಿ ಹಿಂಸೆಗಳ ಪರಿಣಾಮ ಬಿಜೆಪಿ ಧೂಳೀಪಟವಾಗಲಿದೆಯೆಂಬ/ವಾಗಬೇಕೆಂಬ ಅಭಿಪ್ರಾಯ/ಹಂಬಲವಿದ್ದ ವಲಯಗಳು ತೀವ್ರ ಆಘಾತವನ್ನು ಅನುಭವಿಸುತ್ತಿವೆ. ಹಲವು ಸಮಾಜಮುಖಿಗಳು, ಪ್ರಗತಿಪರವಲಯದವರು ಕಾಂಗ್ರೆಸ್ ಪಕ್ಷವನ್ನು ಹಾಗೂ ವಿದ್ಯುನ್ಮಾನ ಮತಯಂತ್ರದ ಬಳಕೆಯೇ ಬಿಜೆಪಿಯ ಗೆಲುವಿಗೆ ಕಾರಣಗಳೆಂದು ತಮ್ಮ ಸಿಟ್ಟು ಆಕ್ರೋಷಗಳನ್ನು ಹರಿಬಿಡುತ್ತಿದ್ದಾರೆ.
ಇನ್ನೊಂದೆಡೆ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಬಹುಮತ ಸಾಧಿಸಿದ್ದನ್ನು ಸ್ವಾಗತಿಸುತ್ತಾ ಇದು ಮೋದಿ ಹಾಗೂ ಬಿಜೆಪಿ ವಿರೋಧಿ ಅಲೆಯ ಪರಿಣಾಮ ಎಂದು ವಿಶ್ಲೇಷಿಸುತ್ತಾ ಸಮಾಧಾನ ಪಟ್ಟುಕೊಳ್ಳುವ ಹಲವು ಬರಹಗಳು ಹರಿದಾಡುತ್ತಿವೆ. ಕೆಲವು ಸಮೀಕ್ಷೆಗಳು ಕೂಡ ಇಂತಹ ಅಭಿಪ್ರಾಯಗಳಿಗೆ ಪೂರಕವಾಗಿವೆ. ಮೋದಿ ಸರಕಾರದ ಮೊದಲ ಅವಧಿಯಲ್ಲಿ ನಡೆದ ಛತ್ತೀಸ್ಗಡ, ಜಾರ್ಖಂಡ್ ಮೊದಲಾದ ರಾಜ್ಯಗಳ ಚುನಾವಣೆ ನಂತರ ಎರಡನೇ ಅವಧಿಯಲ್ಲಿ ನಡೆದ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಮೊದಲಾದ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ನಗಣ್ಯವಾಗಿದ್ದನ್ನು ನೋಡಿ ಬಿಜೆಪಿ ಹಾಗೂ ಸಂಘಪರಿವಾರದ ವಿರೋಧಿ ವಲಯಗಳು ಸಂಭ್ರಮಿಸಿದ್ದವು. ಜನರು ಮೋದಿ ಸರಕಾರದ ವಿರುದ್ಧ ಜಾಗೃತರಾಗಿದ್ದಾರೆ ಎಂದೆಲ್ಲಾ ಹೊಗಳಿದ್ದರು ಕೂಡ.
ನಮ್ಮ ದೇಶದಲ್ಲಿ ಚುನಾವಣೆಗಳು, ಮತ ಚಲಾವಣೆ, ರಾಜಕೀಯ ಪಕ್ಷಗಳ ಸೋಲು ಗೆಲುವುಗಳನ್ನಿಟ್ಟುಕೊಂಡು ಜನಾಭಿಪ್ರಾಯಗಳನ್ನು ಅಳೆಯುವ ಸಾಮಾನ್ಯ ವಿಧಾನವೊಂದನ್ನು ಚಾಲ್ತಿಯಲ್ಲಿಡುತ್ತಾ ಬರಲಾಗುತ್ತಿದೆ. ಅದನ್ನೇ ಪ್ರಜಾಪ್ರಭುತ್ವ ಮತ್ತು ಅಲ್ಲಿ ನಡೆಯುವ ಆಗುಹೋಗುಗಳನ್ನು ಪ್ರಜಾಪ್ರಭುತ್ವದ ಸೌಂದರ್ಯ ಎಂದೆಲ್ಲಾ ಬಣ್ಣಿಸಿ ಸಂಭ್ರಮಿಸುವಂತೆ ಮಾಡುವ ರೂಢಿ ಕೂಡ ಮೊದಲಿನಿಂದಲೂ ಇದೆ.
ಇವುಗಳ ಮಧ್ಯೆ ನಮ್ಮ ದೇಶದ ಚುನಾವಣಾ ಪದ್ಧತಿಯಲ್ಲೇ ಭಾರೀ ಲೋಪವಿರುವ, ಮೊದಲಿನಿಂದಲೂ ಚುನಾವಣಾ ಅಕ್ರಮಗಳು ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿರುವ ಅಂಶವನ್ನು ಮರೆಯಲಾಗುತ್ತಿದೆ. ಚುನಾವಣಾ ಅಕ್ರಮಗಳೆಂದಾಗ ಮತದಾರರ ಪಟ್ಟಿಗಳಲ್ಲಿನ ಅವ್ಯವಹಾರ, ಬಲಾಢ್ಯರು ತೋಳ್ಬಲ ಬಳಸಿ ಮತಗಳನ್ನು, ಮತ ಪೆಟ್ಟಿಗೆಗಳನ್ನು ಕದಿಯುವುದು, ಹೆಂಡ ಸಾರಾಯಿಯ ಅಮಲನ್ನು ಏರಿಸಿ, ಆಸೆ ಆಮಿಷಗಳನ್ನೊಡ್ಡಿ ಮತಗಳ ದಿಕ್ಕನ್ನು ತಪ್ಪಿಸುವುದು, ಜನರನ್ನು ಬೆದರಿಸಿ ಮತಗಟ್ಟೆಗೆ ಬರದಂತೆ ತಡೆಯುವುದು, ಸರಕಾರಿ ಸಶಸ್ತ್ರಪಡೆಗಳ ಮೂಲಕ ಬೆದರಿಸಿ ಮತ ಹಾಕಿಸುವುದರಿಂದ ಹಿಡಿದು ಇಂದಿನ ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆಯವರೆಗೂ ನಡೆಯುತ್ತಾ ಬರುತ್ತಿವೆ. ಇದರಲ್ಲಿ ಹೆಚ್ಚಿನೆಲ್ಲ ಪಕ್ಷಗಳಿಗೂ ಅವುಗಳದೇ ಆದ ಪರಂಪರೆಯೂ ಇವೆ. ಆದರೆ ಹಿಂದೆ ಹಲವಾರು ಕಡೆಗಳಲ್ಲಿ ನಿರ್ಣಾಯಕವಾಗಿದ್ದ ಇಂತಹ ಅಕ್ರಮಗಳು ಇಂದು ಆ ಮಟ್ಟದ ನಿರ್ಣಾಯಕ ಪಾತ್ರ ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕೂಡ ವಾಸ್ತವ. ಅದಕ್ಕೆ ಜನರಲ್ಲಿ ಬೆಳೆದ ಜಾಗೃತಿ ಹಾಗೂ ಅದಕ್ಕೆ ಪೂರಕವಾಗಿನ ಚುನಾವಣಾ ಸುಧಾರಣೆಗಳು ಕೂಡ ಕಾರಣವೆನ್ನಬಹುದು. ಆದರೆ ಇವುಗಳಿಂದ ನಮ್ಮ ಚುನಾವಣಾ ವ್ಯವಸ್ಥೆಯ ಮೂಲಭೂತ ಲೋಪಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿರುವ ವಿಚಾರ.
ಮೊನ್ನೆ ನಡೆದ ಚುನಾವಣೆಗಳು ಮತ್ತವುಗಳ ಫಲಿತಾಂಶಗಳು ಕೂಡ ಇದನ್ನೇ ಹೇಳುತ್ತಿವೆ. ಇದರಲ್ಲಿ ಒಟ್ಟಾರೆ ಚಲಾವಣೆಯಾದ ಮತಗಳ ಸರಾಸರಿ ಶೇಕಡಾವಾರು ಪ್ರಮಾಣ ಐವತ್ತೈದರ ಆಜೂಬಾಜು ಇರಬಹುದು. ಅಂದರೆ ಶೇಕಡಾ ನಲತ್ತೈದರಿಂದ ಐವತ್ತರಷ್ಟು ಮತದಾರರು ಈ ಚುನಾವಣೆಯಲ್ಲಿ ಪಾಲ್ಗೊಂಡಿಲ್ಲ ಅಥವಾ ಚುನಾವಣೆಯ ಮೇಲೆ ಭರವಸೆ ಕಳೆದುಕೊಂಡು ಬಹಿಷ್ಕರಿಸಿದ್ದಾರೆ. ಹಾಗಿದ್ದಾಗ ಬಿಜೆಪಿ ಗೆಲುವನ್ನು ಬಹುಸಂಖ್ಯಾತ ಮತದಾರರ ಅಭಿಪ್ರಾಯ ಎನ್ನಲಾಗದು ತಾನೆ.
ಹಣಬಲ ಹಾಗೂ ತೋಳ್ಬಲ ಅಧಿಕಾರ ಬಲವಿರುವ ಒಂದು ಪಕ್ಷ ಇಲ್ಲವೇ ಗುಂಪು ಇಡೀ ಚುನಾವಣೆಯನ್ನೇ ತಮ್ಮ ನೇರಕ್ಕೆ ತಕ್ಕಂತೆ ತಿರುಗಿಸಿಕೊಳ್ಳಬಹುದು ಎಂಬುದಕ್ಕೆ ಈ ಚುನಾವಣೆಗಳು ಕೂಡ ಮುಂದುವರಿದ ಉದಾಹರಣೆಗಳಾಗಿವೆ. ಒಂದಷ್ಟು ಚಾಲ್ತಿಯಲ್ಲಿರುವ ರಾಜಕೀಯ ಪಕ್ಷವನ್ನೋ, ಗುಂಪನ್ನೋ, ವ್ಯಕ್ತಿಗಳನ್ನೋ ಬಳಸಿಕೊಂಡು ಚಲಾವಣೆಯಾಗುವ ಮತಗಳ ಒಡೆಯುವಿಕೆ, ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣಾ ಫಲಿತಾಂಶವನ್ನೇ ಏರುಪೇರು ಮಾಡುವುದು, ಜಾತಿ, ಧರ್ಮಗಳ ಆಧಾರದಲ್ಲಿ ಗುಂಪುಗಾರಿಕೆ, ಒಳಗುಂಪುಗಾರಿಕೆ ನಡೆಸಿ ಚುನಾವಣೆಯನ್ನೇ ಬುಡಮೇಲು ಮಾಡುವುದು ಇತ್ಯಾದಿಗಳನ್ನು ಪ್ರಜಾಪ್ರಭುತ್ವದ ಅವಿಭಾಜ್ಯ ಭಾಗವೆಂಬಂತೆ ಬಿಂಬಿಸಿಡಲಾಗಿದೆ. ಅದಕ್ಕೆ ‘ಸೋಶಿಯಲ್ ಇಂಜಿನಿಯರಿಂಗ್’ ಎಂದೋ, ಕುಶಲ ರಾಜಕೀಯ ನಡೆಗಳೆಂದೋ, ರಾಜಕೀಯ ಮುತ್ಸದ್ದಿತನವೆಂದೋ, ಸಂಘಟನಾ ಶಕ್ತಿಯೆಂದೋ, ಪ್ರಚಾರತಂತ್ರವೆಂದೋ ಇತ್ಯಾದಿ ಕರೆದು ಸಾರ್ವಜನಿಕ ಮಾನ್ಯತೆಯನ್ನೂ ಕೂಡ ದಕ್ಕಿಸಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನಲ್ಲಿ ಇವುಗಳು ನಿರ್ಣಾಯಕ ಪಾತ್ರ ವಹಿಸಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ. ಇತರ ಕೆಲವು ಪಕ್ಷಗಳು ಅವುಗಳ ನಾಯಕತ್ವದ ಸ್ವಾರ್ಥ ಹಿತಾಸಕ್ತಿಗಾಗಿ ಬಿಜೆಪಿಗೆ ಅನುಕೂಲವಾಗುವಂತೆ ನಡೆಗಳನ್ನು ನಡೆಸಿರುವುದನ್ನು ಕೂಡ ಗಮನಿಸಬಹುದಾಗಿದೆ.
ನಮ್ಮ ದೇಶವಿಂದು ಭಾರೀ ದುರಂತಮಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಗತೊಡಗಿದೆ. ವ್ಯಾಪಕ ಭ್ರಷ್ಟಾಚಾರ, ಮಿತಿಮೀರಿದ ನಿರುದ್ಯೋಗ, ಮಿತಿಮೀರುತ್ತಾ ಸಾಗುತ್ತಿರುವ ಬೆಲೆಯೇರಿಕೆ, ಏರುತ್ತಲೇ ಹೋಗುತ್ತಿರುವ ಕೋಮುವಾರು ಜಾತಿವಾರು ಗಲಭೆಗಳು, ಹತ್ಯೆ, ಅತ್ಯಾಚಾರ, ದೌರ್ಜನ್ಯಗಳು, ಜನಸಾಮಾನ್ಯರಿಗೆ ಆರೋಗ್ಯ, ಶಿಕ್ಷಣ, ಮೊದಲಾದ ಸಾರ್ವಜನಿಕ ವ್ಯವಸ್ಥೆಗಳ ವ್ಯಾಪಕ ನಿರಾಕರಣೆ, ಕಡಿಮೆಯಾಗುತ್ತಾ ಸಾಗುತ್ತಿರುವ ಬದುಕಿನ ಭದ್ರತೆ ಹೀಗೆ ನೂರೆಂಟು ಜಟಿಲ ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಆದರೆ ಇವುಗಳಿಗೆ ಕಾರಣಕರ್ತರಾಗಿರುವ ಅವೇ ಅಧಿಕಾರದ ಅಂಗಗಳು ನಿರಂತರವಾಗಿ ಜನಮಾನ್ಯತೆ ಗಳಿಸುತ್ತಾ ಸಾಗುತ್ತಿರುವಂತೆ ಬಿಂಬಿಸಲಾಗುತ್ತಿದೆ. ಇಂತಹ ಅಧಿಕಾರದ ಹಾಗೂ ವಿರೋಧದ ವಿವಿಧ ವಲಯಗಳ ನಡುವೆಯೇ ಜನಸಾಮಾನ್ಯರು ಗಿರಕಿ ಹೊಡೆಯುತ್ತಿರುವಂತೆ ನಮ್ಮ ಚುನಾವಣಾ ವ್ಯವಸ್ಥೆಯನ್ನು ಹೆಣೆದಿಡಲಾಗಿದೆ. ಬಹುತೇಕ ರಾಜಕೀಯ ವಿಶ್ಲೇಷಣೆಗಳು ಇವೇ ಆಧಾರದಲ್ಲೇ ಇರುತ್ತವೆ. ಬದಲಿ ಪ್ರಜಾತಾಂತ್ರಿಕ ಪರ್ಯಾಯಗಳತ್ತ ವಿಶ್ಲೇಷಣೆಯಾಗಲೀ, ಚರ್ಚೆ, ಸಂವಾದಗಳಾಗಲೀ ಹೊರಳದಂತೆ ನೋಡಿಕೊಳ್ಳಲಾಗುತ್ತಿದೆ. ಸದ್ಯದ ಪರ್ಯಾಯದ ಹೆಸರಿನ ರಾಜಕೀಯ ಚಿಂತನೆಗಳು ಜನರಿಂದ ಹಳಸಲು ಎಂದು ತಿರಸ್ಕರಿಸಲ್ಪಟ್ಟ ಅದೇ ಕಾಂಗ್ರೆಸ್ ಸುತ್ತಮುತ್ತಲೇ ಗಿರಕಿ ಹೊಡೆಯತೊಡಗುತ್ತವೆ.
ಇದುವರೆಗೂ ಆಳಿಕೊಂಡು ಬಂದ ಕಾಂಗ್ರೆಸ್ ಪಕ್ಷ ನೆಲಕಚ್ಚಿ ಎದ್ದೇಳಲೂ ಆಗದ ಸ್ಥಿತಿಗೆ ತಲುಪಿ ಬಹಳ ಕಾಲವಾಗಿದೆ. ಜನರಿಗೆ ಇದರ ಮೇಲೆ ಇದ್ದ ಒಂದಷ್ಟು ವಿಶ್ವಾಸ ಎಂದೋ ಕಳಚಿ ಬಿದ್ದಾಗಿದೆ. ಪರ್ಯಾಯವಾಗಿ ಆಕ್ರಮಣಕಾರಿ ಕಚ್ಚಾ ಕೋಮುವಾದಿ ಹಾಗೂ ಜಾತೀವಾದಿತನಗಳನ್ನೇ ತಮ್ಮ ಪ್ರಧಾನ ಟ್ರಂಪ್ ಕಾರ್ಡ್ ಆಗಿಸಿ, ಸಂಘಪರಿವಾರದ ಬಿಜೆಪಿ ಬಹುಮತಗಳಿಸಿ ಅಧಿಕಾರಕ್ಕೇರಿ ಎರಡನೇ ಅವಧಿಯಲ್ಲಿ ಸಾಗುತ್ತಿದೆ. ಇದರ ಆಳ್ವಿಕೆಯಲ್ಲಿ ಜನಸಾಮಾನ್ಯರಿಗೆ ಇದ್ದ ಒಂದಷ್ಟು ನೌಕರಿ, ಸೌಲಭ್ಯ ಅನುಕೂಲತೆಗಳು, ಆರೋಗ್ಯ ಸೇವೆ, ಸಾರ್ವಜನಿಕ ಶಿಕ್ಷಣ ಇತ್ಯಾದಿಗಳು ಸಂಪೂರ್ಣವಾಗಿ ಇಲ್ಲವಾಗಿಸಲಾಗುತ್ತಿದೆ. ಈ ಪ್ರಕ್ರಿಯೆಗಳ ಗುಣಾತ್ಮಕವಾದ ಆರಂಭ ಜಾಗತೀಕರಣಕ್ಕೆ ಸಂಪೂರ್ಣವಾಗಿ ದೇಶವನ್ನು ಒತ್ತೆ ಇಟ್ಟಾಗಿನಿಂದ ಎನ್ನಬಹುದು.
ಜನಸಾಮಾನ್ಯರಿಗೆ ಸರಿಯಾದ ಪರ್ಯಾಯಗಳು ಕಾಣದೆ ಆಮ್ ಆದ್ಮಿಯಂತಹ ಕಾರ್ಪೊರೇಟುಗಳು ಹುಟ್ಟು ಹಾಕಿದ ಪಕ್ಷಗಳಿಗೆ ಸಿಟ್ಟು ಆಕ್ರೋಶಗಳಿಂದ ಮತ ನೀಡಿ ಗೆಲ್ಲಿಸುವಂತಾಗುತ್ತಿದೆ. ದಲಿತ ದಮನಿತರ ಬಹುಜನರ ಪಕ್ಷಗಳೆಂದು ಬಿಂಬಿಸಿಕೊಂಡು ಅಧಿಕಾರಕ್ಕೂ ಏರಿ ದಲಿತ ದಮನಿತ ಬಹುಜನರನ್ನು ಬಿಟ್ಟು ಬ್ರಾಹ್ಮಣಶಾಹಿ ಹಾಗೂ ಕಾರ್ಪೊರೇಟ್ ಪರವಹಿಸಿದ ಪರಿಣಾಮ ನೆಲಕಚ್ಚಿದೆ. ತಮಿಳುನಾಡು, ಆಂಧ್ರ, ತೆಲಂಗಾಣದಂತಹ ಕಡೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಧಿಕಾರವಿದೆ. ಆದರೆ ಇವುಗಳು ಒಕ್ಕೂಟ ಸರಕಾರದ ಮರ್ಜಿಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ವಾಸ್ತವವೂ ಜನರ ಮುಂದಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಹುಟ್ಟಿದ ಪ್ರಜಾತಾಂತ್ರಿಕ ವ್ಯವಸ್ಥೆ ವಾಸ್ತವದಲ್ಲಿ ನಂತರ ಬಂಡವಾಳಶಾಹಿಗಳ, ಅನುಕೂಲಸ್ಥರ ಪ್ರಜಾಪ್ರಭುತ್ವವಾಗಿಯೇ ಬೆಳೆದು ಈಗದು ಕುಸಿದುನಿಂತ ಸಂದರ್ಭ ಇದಾಗಿದೆ. ಇದು ನಮ್ಮ ದೇಶದ ಕತೆ ಮಾತ್ರವಲ್ಲ ಮುಂದುವರಿದ ಯುರೋಪ್, ಅಮೆರಿಕಗಳಲ್ಲಿ ಕೂಡ ಅವರು ಪ್ರತಿಪಾದಿಸುತ್ತಿರುವ ಪ್ರಜಾತಾಂತ್ರಿಕ ವ್ಯವಸ್ಥೆ ಚಾಲ್ತಿಯಲ್ಲಿ ಇಲ್ಲ. ಕರಿಯರಿಗೆ, ಕಾರ್ಮಿಕರಿಗೆ ಅಲ್ಲಿನ ಬಿಂಬಿತ ಪ್ರಜಾತಂತ್ರ ವರ್ತಿಸುತ್ತಿಲ್ಲ. ಬದಲಿಗೆ ಕೆಲವೇ ಕಾರ್ಪೊರೇಟ್ ಕೂಟಗಳ ಮರ್ಜಿಯಲ್ಲಿ ಅಲ್ಲಿನ ಚುನಾವಣೆಗಳು ಹಾಗೂ ಪ್ರಜಾಪ್ರಭುತ್ವ ನಿಂತಿವೆ. ನಮ್ಮ ದೇಶದ ಸಂಸದೀಯ ವ್ಯವಸ್ಥೆ ಬಂಡವಾಳಶಾಹಿ ಸಾಮಾಜಿಕ ಬದಲಾವಣೆಯ ಮೂಲವಾದ ಕೈಗಾರಿಕಾ ಕ್ರಾಂತಿಯ ಬುನಾದಿಯ ಮೇಲೆ ಅರಳಿದ್ದಲ್ಲ. ಬದಲಿಗೆ ಪಾಶ್ಚಿಮಾತ್ಯ ಬಂಡವಾಳಶಾಹಿ ಹಾಗೂ ಸಮಾಜವಾದಿ ಸೋವಿಯತ್ ಒಕ್ಕೂಟಗಳ ಜಾಗತಿಕ ಪ್ರಭಾವಗಳ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಇಲ್ಲಿನ ಆಳುವ ಶಕ್ತಿಗಳು ರೂಪಿಸಿಕೊಂಡ ಸಂಸದೀಯ ವ್ಯವಸ್ಥೆಯಾಗಿದೆ. ಇದರಲ್ಲಿ ಬಂಡವಾಳಶಾಹಿಯ ಒಳ್ಳೆಯ ಮೌಲ್ಯಗಳು ಹಾಗೂ ಸಮಾಜವಾದದ ಒಳ್ಳೆಯ ಮೌಲ್ಯಗಳ ಮಿಶ್ರಣವಿರುವ ಇಂಡಿಯಾದ್ದೇ ಆದ ಸಂಸದೀಯ ಪ್ರಜಾಸತ್ತೆ ಎಂದೇ ಬಿಂಬಿಸಿಕೊಂಡು ಬರಲಾಗಿದೆ. ಆದರೆ ಹೂರಣದಲ್ಲಿ ಬ್ರಾಹ್ಮಣಶಾಹಿ ಊಳಿಗಮಾನ್ಯತೆ ಹಾಗೂ ಇಲ್ಲಿ ಬ್ರಿಟಿಷರ ನೆರಳಿನಲ್ಲಿ ಬೆಳೆದು ಬಂದಿದ್ದ ಟಾಟಾ, ಬಿರ್ಲಾ, ಸಿಂಘಾನಿಯಾ, ಬಜಾಜ್ ರಂತಹ ಬಂಡವಾಳಶಾಹಿಗಳ ಹಿಡಿತವೇ ಇದರದಾಗಿತ್ತು. ಇಡೀ ಭಾರತದ ಜನಸಮೂಹವನ್ನು ಯಾವುದಾದರೊಂದು ಎಳೆಯಲ್ಲಿ ಹಿಡಿದಿಟ್ಟುಕೊಳ್ಳುವ ದರ್ದು ಅಂದಿನದಾಗಿತ್ತು. ಯಾಕೆಂದರೆ ಬ್ರಿಟಿಷ್ ಇಂಡಿಯಾದಲ್ಲಿ 560ಕ್ಕೂ ಹೆಚ್ಚು ರಾಜಸಂಸ್ಥಾನಗಳು ಭಾಗವಾಗಿರದೆ ಪ್ರತ್ಯೇಕವಾಗಿದ್ದ ಸಂದರ್ಭವದು. ಹಾಗಾಗಿಯೇ ಸಂವಿಧಾನದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬೆಳೆದ ಬಂಡವಾಳಶಾಹಿ ಪ್ರಜಾತಾಂತ್ರಿಕತೆಯ ಮೌಲ್ಯಗಳು ಹಾಗೂ ಒಕ್ಕೂಟ ತತ್ವ ಮೊದಲಾದ ನೀತಿಗಳನ್ನು ಒಳಗೊಳಿಸಿಕೊಳ್ಳಲಾಗಿದೆ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿದೆ. ಆದರೆ ಜಾರಿಯಾಗುತ್ತಾ ಬಂದಿರುವುದು ಕೇಂದ್ರಾಧಿಪತ್ಯ ಎನ್ನುವುದು ಸಾಮಾನ್ಯ ಅನುಭವ ತಾನೇ.
‘ಫೆಡರಲ್ ರಿಪಬ್ಲಿಕ್’ ಎನ್ನುವುದನ್ನು ಒಳಗೊಳಿಸಿಕೊಳ್ಳದೆ, ಸ್ಪಷ್ಟವಾಗಿ ಒಕ್ಕೂಟವೆಂದೂ ಕರೆದುಕೊಳ್ಳದೆ, ‘ಇಂಡಿಯನ್ ಯೂನಿಯನ್’ ಎಂಬ ಅಡ್ಡ ಗೋಡೆಯ ಮೇಲಿನ ದೀಪವಿಟ್ಟಂತೆ ಮಾಡಿಡಲಾಗಿದೆ. ವಾಸ್ತವದಲ್ಲಿ ರಾಜ್ಯಗಳ ಯೂನಿಯನ್ನೂ ಅಲ್ಲ ಹಲವಾರು ರಾಷ್ಟ್ರೀಯತೆಗಳ ಒಕ್ಕೂಟವೂ ಅಲ್ಲದಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಹಲವಾರು ರಾಷ್ಟ್ರೀಯತೆಗಳು ಕೇಂದ್ರಾಧಿಪತ್ಯದಡಿ ನರಳುತ್ತಾ ಸಾಗಿಬಂದಿವೆ. ಅದರ ಗಂಭೀರ ಪರಿಣಾಮಗಳನ್ನು ಕೇಂದ್ರಾಧಿಪತ್ಯದ ಹತ್ತುಹಲವು ಪ್ರತ್ಯಕ್ಷ ಹಾಗೂ ಪರೋಕ್ಷ ಹೇರಿಕೆಗಳಲ್ಲಿ ನಾವು ನೋಡುತ್ತಿದ್ದೇವೆ. ಹಾಲಿ ಸಂವಿಧಾನದಲ್ಲಿ ಹೇಳಿರುವ ರಾಜ್ಯಗಳ ಹಕ್ಕುಗಳನ್ನೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾಯಿಸುತ್ತಾ ಹೋಗುತ್ತಿದ್ದಾರೆ. ಜಿಎಸ್ಟಿ, ನೀಟ್, ರಾಷ್ಟ್ರೀಯ ಶಿಕ್ಷಣ ನೀತಿ ಇತ್ಯಾದಿಗಳು ಇದಕ್ಕಿರುವ ಕೆಲವು ಉದಾಹರಣೆಗಳಾಗಿವೆ.
ಸಂವಿಧಾನ ರಚನೆ ಮತ್ತು ಅನುಮೋದನೆಗಳಲ್ಲೂ ಈ ಶಕ್ತಿಗಳದೇ ನಿರ್ಣಾಯಕವಾಗಿತ್ತು. ಆದರೆ ಅಂಬೇಡ್ಕರ್ರನ್ನು ಸಂವಿಧಾನಕ್ಕೆ ಪರ್ಯಾಯವನ್ನಾಗಿ ಬಿಂಬಿಸಿ ಭಾವನಾತ್ಮಕಗೊಳಿಸಿ ಮುಂದಿಡುತ್ತಾ ಈ ದೇಶದ ದಲಿತದಮನಿತರಿಗೆ ಮಂಕುಬೂದಿ ಎರಚುತ್ತಾ ಬರಲಾಗಿರುವುದನ್ನು ಗ್ರಹಿಸಬೇಕಾಗಿದೆ. ಸಂವಿಧಾನವನ್ನು ಪವಿತ್ರವೆಂದೋ, ಧರ್ಮಗ್ರಂಥವೆಂದೋ ಬಿಂಬಿಸುವ ಅಪಾಯಕಾರಿ ಪರಿಪಾಟ ಕೂಡ ಇದೆ. ಅಂಬೇಡ್ಕರ್ ಸಂವಿಧಾನದ ಕರಡು ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ನಿಜವಾದರೂ ಅದರ ಅನುಮೋದನೆ ಹಾಗೂ ಅನುಷ್ಠಾನದಲ್ಲಿ ಅವರದು ನಿರ್ಣಾಯಕ ಪಾತ್ರವಲ್ಲ ಎಂಬ ಕಟು ಸತ್ಯವನ್ನು ಈಗಲಾದರೂ ಗ್ರಹಿಸುವುದು ಅಗತ್ಯವಾಗಿದೆ. ಸಂವಿಧಾನವನ್ನು ಭಾವನಾತ್ಮಕವಾಗಿ ನೋಡದೆ ವಾಸ್ತವ ನೆಲೆಗಟ್ಟಲ್ಲಿ ನೋಡಬೇಕಾಗಿದೆ. ಯಾಕೆಂದರೆ ಸಂವಿಧಾನ, ಪ್ರಜಾಪ್ರಭುತ್ವ ಮೊದಲಾದವುಗಳು ಬಹುಸಂಖ್ಯಾತ ಜನಸಾಮಾನ್ಯರನ್ನು ಯಾಮಾರಿಸುವ ನಮ್ಮ ದೇಶದ ಆಳುವವರ ಹತ್ಯಾರಗಳಾಗಿಯೇ ಮೂಲಭೂತವಾಗಿ ಬಳಕೆಯಾಗುತ್ತಾ ಬರುತ್ತಿವೆ. ಹಲವಾರು ವಲಯಗಳು ಈಗ ಪ್ರತಿಪಾದಿಸುತ್ತಿರುವ ಸಂವಿಧಾನವನ್ನು ರಕ್ಷಿಸಬೇಕು ಎಂಬುದಲ್ಲ ಆಗಬೇಕಿರುವುದು. ದೇಶದ ಜನಸಾಮಾನ್ಯರನ್ನು ಹಾಗೂ ದೇಶವನ್ನು ರಕ್ಷಿಸಿಕೊಳ್ಳಬೇಕಾಗಿದೆ. ಸಂವಿಧಾನವನ್ನು ಅದಕ್ಕಾಗಿ ಬಳಸಬೇಕಾಗಿದೆ.
ಇಂಡಿಯಾದ ದಲಿತದಮನಿತರು, ಆದಿವಾಸಿ ಸಮೂಹಗಳು, ಹಿಂದುಳಿದ ಬಡವರ್ಗಗಳು, ಮುಸ್ಲಿಮ್ ಕ್ರಿಶ್ಚಿಯನ್ ಹಾಗೂ ಇನ್ನಿತರ ಜನಸಮೂಹಗಳಲ್ಲಿನ ಬಹುಸಂಖ್ಯಾತರಿಗೆ ಇಲ್ಲಿನ ಪ್ರಜಾಸತ್ತೆಯಾಗಲೀ, ಸಾಂವಿಧಾನಿಕ ಹಕ್ಕುಗಳಾಗಲೀ ಮೂಲಭೂತವಾಗಿ ಇದುವರೆಗೂ ಸಿಗಲೇ ಇಲ್ಲ ಎಂಬ ವಾಸ್ತವವನ್ನು ಬಿಟ್ಟು ನಾವು ಇಂಡಿಯಾದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಅಳವಡಿಕೆಯನ್ನು ಗ್ರಹಿಸಹೊರಟರೆ ದಾರಿ ತಪ್ಪುವುದು ಸ್ಪಷ್ಟ. ಇಂದು ಒಂದು ನೈಜ ಪ್ರಜಾತಾಂತ್ರಿಕ ವ್ಯವಸ್ಥೆಯ ಸ್ಥಾಪನೆಗಾಗಿ ಜನಸಾಮಾನ್ಯರ ಧ್ವನಿಗಳು ಮೊಳಗಬೇಕಾದ ಸಂದರ್ಭವಾಗಿದೆ. ಸಂಸದೀಯ ವ್ಯವಸ್ಥೆಯಲ್ಲಿ ಇಂಡಿಯಾದ ವಾಸ್ತವವಾದ ಪ್ರತಿಯೊಂದು ಜಾತಿಗಳಿಗೆ ಹಾಗೂ ಆಯಾ ಜಾತಿಗಳ ಮಹಿಳೆಯರಿಗೆ ಅವರುಗಳ ಜನಸಂಖ್ಯಾ ಅನುಪಾತದ ಅನ್ವಯ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಕ್ಕೊತ್ತಾಯಗಳು ಹೆಚ್ಚಬೇಕಿದೆ. ಭಾರೀ ಕಾರ್ಪೊರೇಟ್ಗಳು ಹಾಗೂ ಬ್ರಾಹ್ಮಣಶಾಹಿ ಊಳಿಗಮಾನ್ಯ ಶಕ್ತಿಗಳ ಹಿಡಿತಗಳಿಂದ ಭಾರತವನ್ನು ಬಿಡಿಸಿಕೊಳ್ಳುವಂತಹ ಜನಹೋರಾಟಗಳು ರೂಪುಗೊಂಡು ಬೆಳೆಯಬೇಕಿದೆ. ದೇಶದ ಆಸ್ತಿ ಸಂಪತ್ತುಗಳ ಮೇಲೆ ಈ ದೇಶದ ಜನಸಾಮಾನ್ಯರಿಗೆ ಸರಿಸಮಾನವಾದ ಹಕ್ಕುಗಳಿಗಾಗಿ ಜನಹೋರಾಟಗಳು ಬೆಳೆಯಬೇಕಾಗಿದೆ. ದಿಲ್ಲಿಯಲ್ಲಿ ನಡೆದ ಚಾರಿತ್ರಿಕ ರೈತಹೋರಾಟದ ಪಾಠಗಳಿವೆ. ಎಲ್ಲಾ ಜಾತಿ ಧರ್ಮಗಳ ಜನಸಾಮಾನ್ಯರ ಒಗ್ಗಟ್ಟಿನ ಜನಚಳವಳಿಗಳು ಅರಳಿ ಬೆಳೆಯದೆ ಯಾವುದೇ ಪರ್ಯಾಯವಾಗಲೀ ಪರಿಹಾರವಾಗಲೀ ಸಿಗಲು ಅಸಾಧ್ಯ ಎಂಬ ಸತ್ಯವನ್ನು ಮನಗಾಣುವ ಅಗತ್ಯವಿದೆ.
ಮಿಂಚಂಚೆ: nandakumarnandana67@gmail.com