ಶಿಕ್ಷಣ ನಿರಾಕರಿಸುವುದರಿಂದ ಸಮಾನತೆ ಬೆಳೆದೀತೇ?
ಇಂತಹ ಮಾದರಿಗಳನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಹಾಗೂ ಸಾಂದರ್ಭಿಕ ಲಾಭಗಳಿಗಾಗಿ ಪಟ್ಟಭದ್ರ ಶಕ್ತಿಗಳು ಸಮಾಜದ ಬಹುಸಂಖ್ಯಾತ ಜನಸಮೂಹದ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಸಾಧ್ಯತೆಗಳು ಈಗ ಮತ್ತಷ್ಟು ಹೆಚ್ಚಾದಂತಾಗಿದೆ. ತಲೆವಸ್ತ್ರ ಇತ್ಯಾದಿ ವಿವಾದವನ್ನು ಬಳಸಿಕೊಂಡು ವಿದ್ಯಾರ್ಥಿಯುವಜನರು ಹಾಗೂ ಇನ್ನಿತರರ ಗಮನವನ್ನು ಅವರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸುವ ಉದ್ದೇಶವೂ ಇದರ ಹಿಂದಿದೆ.
ಉಡುಪಿಯ ಕಾಲೇಜೊಂದರಲ್ಲಿ ಹೆಣ್ಣುಮಕ್ಕಳು ಹಾಕಿಕೊಳ್ಳುವ ತಲೆವಸ್ತ್ರದ ನೆಪವೊಂದನ್ನು ಹಿಡಿದು ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಯಾದ ಸಂಘ ಪರಿವಾರ ಆರಂಭಿಸಿದ ಚಿತಾವಣೆ ಈಗ ರಾಜ್ಯ ಮತ್ತು ಇಡೀ ದೇಶದಲ್ಲೇ ಒಂದು ಸಮುದಾಯವನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ನೇರವಾಗಿ ಗುರಿ ಮಾಡಿದೆ. ಅವರ ಶಿಕ್ಷಣಕ್ಕೇ ಕುತ್ತಾಗಿಸಿದೆ. ಇವುಗಳ ಮೂಲಕ ಅವರ ಶಿಕ್ಷಣದ ಮೂಲಭೂತ ಹಕ್ಕನ್ನೇ ಕಸಿಯಲಾಗುತ್ತಿದೆ. ಅದಕ್ಕೆ ಸಾರ್ವಜನಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಕುಟಿಲ ಪ್ರಯತ್ನ ಬಿರುಸಾಗಿದೆ.
ಇದು ಕೇವಲ ಒಂದು ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣದ ವಿಚಾರ ಮಾತ್ರವಲ್ಲ. ಮುಂದಿನ ದಿನಗಳಲ್ಲಿ ಇಡೀ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಸಾಧ್ಯತೆಗಳನ್ನು ಹೊಂದಿದೆ. ಒಟ್ಟಾರೆಯಾಗಿ ಅಲ್ಪಸಂಖ್ಯಾತ ಮತ್ತು ದಲಿತ ದಮನಿತ ಹಿನ್ನೆಲೆಯ ವಿದ್ಯಾರ್ಥಿ ಸಮೂಹದ ಶಿಕ್ಷಣದ ಹಕ್ಕಿನ ಮೇಲೆಯೇ ಕೆಟ್ಟ ಪರಿಣಾಮ ಬೀರುತ್ತದೆ. ಶಾಲಾ ಕಾಲೇಜುಗಳ ಅಭಿವೃದ್ಧಿ ಸಮಿತಿಗಳನ್ನು ಬಳಸಿಕೊಂಡು ವಸ್ತ್ರ ಸಂಹಿತೆ, ನೀತಿಸಂಹಿತೆಗಳನ್ನು, ಆಚಾರ ಸಂಹಿತೆ, ಧರ್ಮ ಸಂಹಿತೆ ಇತ್ಯಾದಿ ಹೇರಿ ನಿರ್ದಿಷ್ಟ ಇಲ್ಲವೇ ಅಲ್ಪಸಂಖ್ಯಾತ, ದಲಿತ ದಮನಿತ ವಿದ್ಯಾರ್ಥಿ ಸಮೂಹದ ಯುವಜನರನ್ನು ಶಿಕ್ಷಣದಿಂದಲೇ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಹೊರಗಿಡಲು ದಾರಿ ಸುಲಭಮಾಡಿದೆ. ಭಗವದ್ಗೀತೆಯ ಕಲಿಕೆಯನ್ನು ಶಾಲಾ ಪಠ್ಯಗಳಲ್ಲಿ ಕಡ್ಡಾಯಗೊಳಿಸುವ ಹೇಳಿಕೆಗಳು ಬರತೊಡಗಿರುವುದನ್ನು ನಾವಿಲ್ಲಿ ಗಮನಿಸಬಹುದು.
ಹೆಣ್ಣುಮಕ್ಕಳ ತಲೆವಸ್ತ್ರವನ್ನು ವಿವಾದವನ್ನಾಗಿಸುವಲ್ಲಿ ಸಂಘಪರಿವಾರದ ಕುಮ್ಮಕ್ಕು ಹಾಗೂ ಸಂಘಟಿತ ಪ್ರಯತ್ನ ಪ್ರಧಾನ ಕಾರಣವಾಗಿದೆ ಎನ್ನುವುದರಲ್ಲಿ ಅನುಮಾನವಿರಬೇಕಿಲ್ಲ. ಇದರ ಹಿಂದೆ ಸಂಘ ಪರಿವಾರದ ವ್ಯವಸ್ಥಿತ ಪಿತೂರಿ ಇರುವುದು ಬಹುತೇಕವಾಗಿ ಎಲ್ಲರಿಗೂ ಗೊತ್ತಾಗಿರುವ ವಿಚಾರ. ಇದು ಅವರ ದೂರಗಾಮಿ ಯೋಜನೆಗಳ ಭಾಗವೆಂಬುದೂ ಸಾಕಷ್ಟು ಜನರಿಗೆ ಗೊತ್ತಾಗಿರುವ ವಿಚಾರ. ಅಲ್ಲದೆ ಇದನ್ನು ಬಿಡಿ ಘಟನೆಯನ್ನಾಗಿ ಪರಿಗಣಿಸುವಂತಹುದೂ ಅಲ್ಲ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಅವರು ನಡೆಸಹೊರಟಿರುವ ಕೋಮುವಾದಿ ಕಾರ್ಯಕ್ರಮಗಳ ಭಾಗ ಇದಾಗಿದೆ. ಇದಕ್ಕೆ ಪೂರಕವಾಗಿ ದೇಶದಾದ್ಯಂತ ಹಲವಾರು ಬುಡಮೇಲು ಕೃತ್ಯಗಳನ್ನು ಆಯೋಜಿಸಲಾಗುತ್ತಿದೆ. ಅದಕ್ಕಾಗಿ ದಕ್ಷಿಣದ ರಾಜ್ಯಗಳಲ್ಲಿ ದ್ರಾವಿಡ ಚಿಂತನೆಗಳು ಸ್ವಲ್ಪಬಲಹೀನವಾಗಿರುವ ಮತ್ತು ಅವರದೇ ಸರಕಾರವಿರುವ ಕರ್ನಾಟಕವನ್ನು ಅವರು ಆಯ್ದುಕೊಂಡಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ ಬಿಟ್ಟರೆ ಇತರೆಡೆ ಅವರಿಗೆ ಸರಿಯಾದ ನೆಲೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದನ್ನು ಗಮನಿಸಬೇಕಿದೆ.
ಇದಕ್ಕೂ ಕೆಲವು ವರ್ಷಗಳ ಹಿಂದೆಯೇ ತಲೆವಸ್ತ್ರವನ್ನು ವಿವಾದ ಮಾಡಿ ಮುನ್ನೆಲೆಗೆ ತರಲಾಗಿದ್ದರೂ ಅದು ವ್ಯಾಪಕತೆ ಪಡೆದುಕೊಂಡಿರಲಿಲ್ಲ. ಜನರು ಸ್ಥಳೀಯವಾಗಿಯೇ ಸರಿಯಾದ ರೀತಿಯಲ್ಲಿ ಅಂತಹ ವಿವಾದವನ್ನು ತಣ್ಣಗಾಗಿಸಿದ್ದರು. ಅದು ಜವಾಬ್ದಾರಿ ಇರುವವರು ಮಾಡಬೇಕಾಗಿದ್ದ ಅತ್ಯಗತ್ಯ ಕಾರ್ಯವಾಗಿತ್ತು. ಆದರೆ ಉಡುಪಿಯಲ್ಲಿ ಅಂತಹ ಕೆಲಸವನ್ನು ಯಾರೂ ಮಾಡದೇ ವಿವಾದವಾಗಿಸಿ ಹರಡಲು ನಿಂತುಬಿಟ್ಟರು. ಸಂಘಪರಿವಾರ ವಿದ್ಯಾರ್ಥಿ ಸಮೂಹವನ್ನು; ಅದರಲ್ಲೂ ದಲಿತ, ಹಿಂದುಳಿದ ಹಿನ್ನೆಲೆಯವರನ್ನು ಹೇಗಾದರೂ ಇದರಡಿ ತೊಡಗಿಸಿ ಮುಸ್ಲಿಮ್ಸಮುದಾಯದ ಹೆಣ್ಣು ಮಕ್ಕಳು ಹಾಗೂ ಆ ಇಡೀ ಸಮುದಾಯವನ್ನೇ ಗುರಿಮಾಡಿ ಕೋಮುದ್ವೇಷದ ಕಾರ್ಕೋಟಕ ವಿಷದಡಿ ಮುಳುಗಿಸಲು ತಮ್ಮ ಎಲ್ಲಾ ಶಕ್ತಿ ಹಾಗೂ ಪ್ರಯತ್ನಗಳನ್ನು ಮುಂದುವರಿಸುತ್ತಾ ಹೋಯಿತು. ತಮ್ಮದೇ ಸರಕಾರವನ್ನು ಕೂಡ ಚೆನ್ನಾಗಿ ಬಳಸಿಕೊಂಡಿತು. ತನ್ನ ಶಿಕ್ಷಣ ಯಂತ್ರಾಂಗದ ಮೂಲಕ ಚಾಣಾಕ್ಷ ನಡೆಗಳನ್ನು ನಡೆಸಿತು. ವಿಚಾರವನ್ನು ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು. ನ್ಯಾಯಾಲಯ ಮಧ್ಯಂತರ ಆದೇಶವೊಂದನ್ನು ಹೊರಡಿಸಿ ಉಡುಪಿಯ ಸಂಬಂಧಿತ ಶಿಕ್ಷಣ ಸಂಸ್ಥೆಯಲ್ಲಿ ಮುಂದಿನ ಆದೇಶದವರೆಗೂ ತಲೆವಸ್ತ್ರಕ್ಕಾಗಲೀ, ಕೇಸರಿ ಶಾಲಿಗಾಗಲಿ ಅವಕಾಶವಿಲ್ಲ ಎಂದಿತು. ಆದರೆ ಸರಕಾರಿ ಯಂತ್ರಾಂಗ ಮತ್ತು ಸಂಘಪರಿವಾರದ ಮೂಲಕ ಆ ಮಧ್ಯಂತರ ಆದೇಶವನ್ನು ರಾಜ್ಯದ ಎಲ್ಲಾ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲೂ ಅನ್ವಯವಾಗುವಂತೆ ಪ್ರತ್ಯಕ್ಷ ಮತ್ತು ಪರೋಕ್ಷ ವಿಧಾನಗಳಿಂದ ಜಾರಿ ಮಾಡಲಾರಂಭಿಸಲಾಯಿತು. ವಿದ್ಯಾರ್ಥಿನಿಯರ ಪ್ರತಿಭಟನೆ ಧರಣಿಗಳು ನಡೆಯತೊಡಗಿದವು. ವಿದ್ಯುನ್ಮಾನ ಹಾಗೂ ಇನ್ನಿತರ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಿ ಒಂದಿಡೀ ಸಮುದಾಯವನ್ನು ದೂರೀಕರಿಸುವ, ಅಪರಾಧೀಕರಿಸಿ ಗುರಿಮಾಡುವ, ಇತರರಿಂದ ಬೇರ್ಪಡಿಸುವ ಕಾರ್ಯಗಳು ಬಿರುಸಾಗಿ ನಡೆಸಲಾಯಿತು. ಒಂದು ಕಾಲೇಜಿನ ತಲೆವಸ್ತ್ರದ ವಿಚಾರ ಇಡೀ ರಾಜ್ಯ ವ್ಯಾಪಿಸುವಂತೆ ಮಾಡಲಾಯಿತು. ವಿನಾಶಕಾರಿ ಕೋಮುವಿಷದ ಜ್ವಾಲೆಗೆ ಜನರನ್ನು ಬಲಿಕೊಡುವ ಪ್ರಯತ್ನದ ಭಾಗವಾಗಿಸಲಾಯಿತು.
ನ್ಯಾಯಾಲಯ ತನ್ನ ವಿಚಾರಣೆಯನ್ನು ತಲೆವಸ್ತ್ರ ಧಾರ್ಮಿಕ ಅವಶ್ಯಕತೆ ಹೌದೋ ಅಲ್ಲವೋ ಎನ್ನುವುದರ ಮೇಲೆ ಕೇಂದ್ರೀಕರಿಸಿತು. ತಿಂಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠ ತಲೆವಸ್ತ್ರ ಧಾರ್ಮಿಕ ಅವಶ್ಯಕತೆಯಾಗಿಲ್ಲ, ಸರಕಾರ ಇಲ್ಲವೇ ಸಂಬಂಧಿತ ಶಿಕ್ಷಣಸಂಸ್ಥೆಗಳು, ಇಲ್ಲವೇ ಶಾಲಾಭಿವೃದ್ಧ್ದಿ ಸಮಿತಿಗಳು ನಿರ್ಧರಿಸುವ ಸಮವಸ್ತ್ರ ಅಂಗೀಕರಿಸಿ ಅನುಸರಿಸಬೇಕು ಎಂಬಂತಹ ತೀರ್ಪು ನೀಡಿತು. ಆದರೆ ತಲೆ ವಸ್ತ್ರದ ನೆಪದಲ್ಲಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಹ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯ ಬಗ್ಗೆ ನ್ಯಾಯಾಲಯ ಗಮನ ಕೊಡಲಿಲ್ಲವೇಕೆ?
ನಮ್ಮ ದೇಶದ ಜನರ ತಲಾದಾಯವಾಗಲೀ, ಜೀವನ ಮಟ್ಟವಾಗಲೀ, ಜನರ ಕೊಳ್ಳುವ ಶಕ್ತಿಯಾಗಲೀ, ಉದ್ಯೋಗಾವಕಾಶಗಳಾಗಲೀ, ಉತ್ಪಾದನಾ ವಲಯವಾಗಲೀ, ಕೈಗಾರಿಕಾ ವಲಯವಾಗಲೀ ಬೆಳವಣಿಗೆ ಕಾಣದೆ ದಿನೇದಿನೇ ತೀವ್ರವಾಗಿ ಕುಸಿಯುತ್ತಾ ಹೋಗುತ್ತಿರುವ ಸಂದರ್ಭ ಇದಾಗಿದೆ. ಜನಸಾಮಾನ್ಯರ ಬದುಕಿನ ಮೂಲಭೂತ ಹಕ್ಕುಗಳಿಗೆ ಅವಕಾಶವಿಲ್ಲದಂತೆ ಮಾಡಿಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಇತ್ಯಾದಿ ನೀತಿಗಳ ಹೆಸರಿನಡಿ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಜನಸಾಮಾನ್ಯರಿಂದ ಸಂಪೂರ್ಣವಾಗಿ ಕಿತ್ತುಕೊಳ್ಳಲಾಗುತ್ತಿದೆ. ಇಡೀ ಶಿಕ್ಷಣರಂಗವನ್ನೇ ಸಂಪೂರ್ಣವಾಗಿ ಭಾರೀ ಕಾರ್ಪೊರೇಟ್ಗಳ ದಂಧೆಯಾಗಿಸಲಾಗಿಸುತ್ತಿದೆ. ಭಾರೀ ಕಾರ್ಪೋರೇಟ್ಗಳ ಶಿಕ್ಷಣದ ಕಂಪೆನಿಗಳು ಆರಂಭವಾಗತೊಡಗಿವೆ. ಜನಸಾಮಾನ್ಯರ ಮೂಲಭೂತ ಹಕ್ಕಾದ ಸಾರ್ವಜನಿಕ ಶಿಕ್ಷಣ ಹೋಗಿ ಶಿಕ್ಷಣೋದ್ಯಮ ಎಂದು ಗುರುತಿಸಲು ಶುರುವಾಗಿದೆ.
ಭಾರತದಂತಹ ಅಸಮಾನತೆ, ಬಡತನ, ಶೋಷಣೆ, ಮನುಷ್ಯತ್ವಕ್ಕೇ ಹೇಸಿಗೆಯೆನಿಸುವಷ್ಟು ಜಾತಿ ಹಾಗೂ ವರ್ಗ ತಾರತಮ್ಯಗಳನ್ನು ಕಾಪಾಡುತ್ತಾ ಮತ್ತು ಹೆಚ್ಚಿಸುತ್ತಾ ಬರುತ್ತಿರುವ ದೇಶವೊಂದರಲ್ಲಿ ವಿದ್ಯಾರ್ಥಿಗಳಲ್ಲಿ ಸಮಾನತೆಯ ಚಿಂತನೆಗಳನ್ನು ಬೆಳೆಸಲು ಸಮವಸ್ತ್ರಗಳನ್ನು ನಿಗದಿಪಡಿಸಲಾಗುತ್ತಿದೆ ಹಾಗಾಗಿ ಅದನ್ನು ಪ್ರತಿಯೊಬ್ಬರೂ ಪಾಲಿಸುವುದು ಅಗತ್ಯ ಎಂಬ ಪ್ರತಿಪಾದನೆಯೇ ಹಾಸ್ಯಾಸ್ಪದ ವಿಚಾರವಾಗಿದೆ. ದೇಶದ ಜನಸಾಮಾನ್ಯರ ಬದುಕಿನ ಮಟ್ಟವನ್ನು ಹೆಚ್ಚಿಸುವಲ್ಲಿ, ಸಾಮಾಜಿಕ ಅಂತರವನ್ನು ನಿವಾರಿಸುವಲ್ಲಿ ಯಾವುದೇ ಮೂಲಭೂತ ಪರಿಣಾಮಕಾರಿ ಕಾರ್ಯ ನಿರ್ವಹಿಸದೆ ಅದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಾ ಬರಲಾಗುತ್ತಿದೆ. ಜನಸಾಮಾನ್ಯರನ್ನು ಮತ್ತಷ್ಟು ಅಧೋಗತಿಗೆ ನೂಕಲಾಗುತ್ತಿದೆ. ಜಾತಿ ದೌರ್ಜನ್ಯಗಳು, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಇನ್ನಿತರ ದೌರ್ಜನ್ಯಗಳು ಪ್ರತಿ ಕ್ಷಣ ಹಾಗೂ ಪ್ರತಿದಿನವೂ ಹೆಚ್ಚುತ್ತಾ ಸಾಗುತ್ತಿರುವ ವರದಿಗಳು ಬರುತ್ತಲೇ ಇವೆ.
ಇವನ್ನೆಲ್ಲಾ ಮರೆಮಾಚಿ ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲು ಆಳುವ ಶಕ್ತಿಗಳು ಸಮವಸ್ತ್ರ ಇತ್ಯಾದಿ ಸೋಗಲಾಡಿ ಕಾರ್ಯಗಳನ್ನು ಇಟ್ಟುಕೊಂಡು ಅದರ ಸಮರ್ಥನೆಗೆ ಕಪಟ ಹಾಗೂ ವಿತಂಡವಾದಗಳನ್ನು ಮುಂದಿಡುತ್ತಿರುವುದು ನಡೆಯುತ್ತಿದೆ. ಶಾಲಾಭಿವೃದ್ಧಿ ಸಮಿತಿಗಳಲ್ಲಿ ಆಡಳಿತ ಪಕ್ಷದ ಶಾಸಕರು, ಸ್ಥಳೀಯ ರಾಜಕೀಯ ಪುಡಾರಿಗಳು ಸೇರುವುದು ಸಾಮಾನ್ಯ ವಿಚಾರವೇ. ಅಂತಹ ಸಮಿತಿಗಳ ಕೈಗೆ ವಸ್ತ್ರಸಂಹಿತೆ ಹೇರುವ ಅಧಿಕಾರ ಸಿಕ್ಕರೆ ಆಗುವ ಪರಿಣಾಮಗಳ ಬಗ್ಗೆ ನ್ಯಾಯಾಲಯ ಗಮನ ಹರಿಸಿದಂತೆ ಕಾಣುತ್ತಿಲ್ಲ. ಅಲ್ಲದೆ ಸಮವಸ್ತ್ರದ ಹೇರಿಕೆ ಎನ್ನುವುದು ದೊಡ್ಡ ಹಗರಣಗಳ ಕಾಳದಂಧೆಯಾಗಿ ಮಾರ್ಪಟ್ಟಿರುವ ವಿಚಾರ ಕೂಡ ನಮ್ಮ ಮುಂದೆಯೇ ಇದೆ.
ನಮ್ಮ ದೇಶದ ವಸ್ತುಸ್ಥಿತಿಯೇ ಹೀಗಿರುವಾಗ ನಿಗದಿತ ಸಮವಸ್ತ್ರ ಮಾತ್ರ ಹಾಕಿಕೊಳ್ಳಬೇಕು, ತಲೆವಸ್ತ್ರ ಹಾಕಲೇಬಾರದು, ಹಾಕಿಕೊಂಡರೆ ಶಿಕ್ಷಣಕ್ಕೆ ಅವಕಾಶವಿಲ್ಲ, ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂಬಂತೆ ಸರಕಾರ ವರ್ತಿಸುವುದು ಜವಾಬ್ದಾರಿಯುತವಾಗಲು ಸಾಧ್ಯವೇ?.
ಇಂತಹ ನಡೆಗಳು ಮುಂದಿನ ದಿನಗಳಲ್ಲಿ ಇಡೀ ಸಾಮಾಜಿಕ ವ್ಯವಸ್ಥೆಯೇ ಸಂಪೂರ್ಣವಾಗಿ ದಿಕ್ಕೆಡಲು, ಸಾಮಾಜಿಕ ಅಶಾಂತಿ ಹಾಗೂ ಜನಸಾಮಾನ್ಯರ ಬದುಕಿನ ಅಭದ್ರತೆಗಳು ಮತ್ತಷ್ಟು ಹೆಚ್ಚಲು ಕಾರಣವಾಗಬಹುದು ಎಂಬ ಸಾಮಾನ್ಯ ಗ್ರಹಿಕೆಗಳ ಕೊರತೆ ಸಾಕಷ್ಟು ಕಾಣುತ್ತಿದೆ. ಇಂತಹ ಮಾದರಿಗಳನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಹಾಗೂ ಸಾಂದರ್ಭಿಕ ಲಾಭಗಳಿಗಾಗಿ ಪಟ್ಟಭದ್ರ ಶಕ್ತಿಗಳು ಸಮಾಜದ ಬಹುಸಂಖ್ಯಾತ ಜನಸಮೂಹದ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಸಾಧ್ಯತೆಗಳು ಈಗ ಮತ್ತಷ್ಟು ಹೆಚ್ಚಾದಂತಾಗಿದೆ. ತಲೆವಸ್ತ್ರ ಇತ್ಯಾದಿ ವಿವಾದವನ್ನು ಬಳಸಿಕೊಂಡು ವಿದ್ಯಾರ್ಥಿಯುವಜನರು ಹಾಗೂ ಇನ್ನಿತರರ ಗಮನವನ್ನು ಅವರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸುವ ಉದ್ದೇಶವೂ ಇದರ ಹಿಂದಿದೆ. ನಾಡಿನ ಎಲ್ಲಾ ಧಾರ್ಮಿಕ, ಜಾತಿ, ಸಮೂಹಗಳ ಜನಸಾಮಾನ್ಯರು ಎಚ್ಚರಗೊಂಡು ಬ್ರಾಹ್ಮಣಶಾಹಿ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ಹಾಗೂ ಅದಕ್ಕೆ ಪೂರಕವಾಗಿ ವರ್ತಿಸುವ ಮತೀಯ ಮೂಲಭೂತವಾದಿ ಶಕ್ತಿಗಳನ್ನು ಪಕ್ಕಕ್ಕಿಟ್ಟು ಸಂಘಟಿತ ಪ್ರಯತ್ನ ಮಾಡದೇ ಇಂತಹ ಗಂಭೀರ ಬಿಕ್ಕಟ್ಟುಗಳಿಗೆ ಪರಿಹಾರ ಸಿಗುವುದಿಲ್ಲ.
ಮಿಂಚಂಚೆ: nandakumarnandana67@gmail.com