ಶ್ರೀಲಂಕಾ ತುರ್ತು ಪರಿಸ್ಥಿತಿ: ಜಾಗತೀಕರಣದ ನಿರಂಕುಶತೆಯ ಬಳುವಳಿ
ಜಾಗತೀಕರಣದ ನಂತರ ಜಾಗತಿಕವಾಗಿ ನಿರಂಕುಶತೆ ಅಥವಾ ಫ್ಯಾಶಿಸ್ಟ್ ಆಳ್ವಿಕೆ ಜಾಗತಿಕ ವಿದ್ಯಮಾನವಾಗಿ ನಗ್ನಗೊಂಡಿರುವುದನ್ನು ಶ್ರೀಲಂಕಾದ ಮೂಲಕವೂ ಗ್ರಹಿಸಬಹುದು. ಫ್ಯಾಶಿಸಂ ಯಾವುದೇ ರೂಪದಲ್ಲಿ ಬೇಕಾದರೂ ಜಾರಿಯಾಗಬಹುದು, ಅದು ಭಾರೀ ಆಸ್ತಿವಂತರ ಸೇವೆಗಾಗಿಯೇ ಆಗಿರುತ್ತದೆ. ಆದರೆ ಅದು ಗುರಿ ಮಾಡುವುದು ಎಲ್ಲಾ ಜನಸಾಮಾನ್ಯರನ್ನು ಎನ್ನುವುದು ಶ್ರೀಲಂಕಾದ ಸಿಂಹಳೀಯ ಬಹುಸಂಖ್ಯಾತರ ಇಂದಿನ ಸ್ಥಿತಿ ಕೂಡ ಸ್ಪಷ್ಟವಾಗಿ ಹೇಳುತ್ತಿದೆ.
ತುಂಡು ಬ್ರೆಡ್ಡಿಗಾಗಿ, ಜೀವ ರಕ್ಷಕ ಔಷಧಿಗಳಿಗಾಗಿ, ನಿತ್ಯದ ಆಹಾರ ವಸ್ತುಗಳಿಗಾಗಿ, ನಿತ್ಯಬಳಕೆಯ ಅನಿಲ ಮತ್ತು ಇಂಧನಕ್ಕಾಗಿ ಮೈಲುದ್ದ ಸರತಿ ಸಾಲುಗಳು, ದಿನಕ್ಕೆ ಹದಿನಾರರಿಂದ 20 ಗಂಟೆಗಳ ವಿದ್ಯುತ್ ನಿಲುಗಡೆ, ನೀರು ಸರಬರಾಜು ಇಲ್ಲ. ಆಸ್ಪತ್ರೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾಚರಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ವಿದ್ಯುತ್ ಇಲ್ಲ, ಇತರ ಇಂಧನವೂ ಇಲ್ಲ, ಗಂಟೆಗಟ್ಟಲೆ ಕಾದರೂ ಆಹಾರ ವಸ್ತುಗಳು ಸಿಗುತ್ತಿಲ್ಲ. ಎಲ್ಲಾ ವಸ್ತುಗಳಿಗೂ ಬೆಲೆಗಳು ಗಗನಕ್ಕೇರಿದ್ದರಿಂದಾಗಿ ಕೊಳ್ಳಲಾಗುತ್ತಿಲ್ಲ, ಜನಸಾಮಾನ್ಯರ ಕೈಯಲ್ಲಿ ಹಣವೇ ಇಲ್ಲ. ಹಣ ಸಂಪಾದಿಸಲು ಉದ್ಯೋಗ ಕೂಡ ಇಲ್ಲ. ಸಂಚಾರ ವ್ಯವಸ್ಥೆ ಸ್ತಬ್ಧವಾದಂತಹ ಅನುಭವ, ಎಲ್ಲಾ ಅಗತ್ಯ ವಸ್ತುಗಳನ್ನೂ ಸೇನೆಯ ಉಸ್ತುವಾರಿಯಲ್ಲಿ ಪಡಿತರದ ರೀತಿ ಹಂಚುವಿಕೆ. ಅದೂ ಎಲ್ಲರಿಗೂ ಸಿಗುತ್ತಿಲ್ಲ, ಇಂಧನ ಹಾಗೂ ವಿದ್ಯುತ್ವ್ಯಾಪಕ ಕೊರತೆ, ಇತರ ದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕೂಡ ಹಣವಿಲ್ಲದ ಸ್ಥಿತಿ, ಕೃಷಿಚಟುವಟಿಕೆಗಳಾಗಲೀ, ಕೈಗಾರಿಕಾ ಚಟುವಟಿಕೆಗಳಾಗಲೀ ನಡೆಯಲಾರದ ಸ್ಥಿತಿ. ಎಲ್ಲೆಡೆಯೂ ಜನರ ಹಾಹಾಕಾರ, ಬೀದಿಗಿಳಿದ ಆಕ್ರೋಶಭರಿತ ಜನರಿಂದ ರಾಷ್ಟ್ರದ ಅಧ್ಯಕ್ಷರ ಬಂಗಲೆಯ ಮುತ್ತಿಗೆ, ಲಾಟಿ ಏಟುಗಳು, ಟಿಯರ್ ಗ್ಯಾಸ್ ಸಿಡಿತಗಳು, ಬಂಧನಗಳು, ಚಿತ್ರಹಿಂಸೆಗಳು..ಇಂತಹ ಒಂದು ಸಾಮಾಜಿಕ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದೇ ತೀವ್ರ ಸುಸ್ತಿನ ವಿಚಾರ. ಇನ್ನು ಅನುಭವಿಸಬೇಕಾಗಿ ಬಂದರೆ ಪರಿಸ್ಥಿತಿ ಹೇಗಿರಬಹುದು?. ಇದಕ್ಕಿಂತಲೂ ಕೆಟ್ಟ ಆರ್ಥಿಕ, ರಾಜಕೀಯ, ಆಡಳಿತಾತ್ಮಕ ಹಾಗೂ ಸಾಮಾಜಿಕ ಪರಿಸ್ಥಿತಿ ನಮ್ಮ ಪಕ್ಕದ ತಮಿಳುನಾಡು ರಾಜ್ಯದ ಗಡಿಯಿಂದ ಇಪ್ಪತ್ತೆರಡು ಕಿ.ಮೀಟರುಗಳ ದೂರದಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹುಟ್ಟುಹಾಕಲಾಗಿದೆ.
ನಮ್ಮ ದೇಶದ ದಕ್ಷಿಣಕ್ಕೆ ಇರುವ ದ್ವೀಪ ರಾಷ್ಟ್ರ ಶ್ರೀಲಂಕಾ ಇಂದು ವ್ಯಾಪಕ ಅರಾಜಕತೆಯಲ್ಲಿ ಮುಳುಗಿದೆ. ಅಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದಕ್ಕೂ ಕೆಲವು ತಿಂಗಳ ಮೊದಲಿನಿಂದಲೇ ಆರ್ಥಿಕ ತುರ್ತುಪರಿಸ್ಥಿತಿಯನ್ನು ಹೇರಲಾಗಿತ್ತು. ಅಲ್ಲಿನ ಜನಸಾಮಾನ್ಯರು ತತ್ತರಿಸುವಂತೆ ಮಾಡಲಾಗಿದೆ. ಸುಮಾರು 23 ಕೋಟಿಯಷ್ಟು ಜನಸಂಖ್ಯೆಯಿರುವ, 62,705 ಚದರ ಕಿಲೋಮೀಟರುಗಳಷ್ಟು ಭೂಪ್ರದೇಶವನ್ನು ಹೊಂದಿರುವ ಈ ದ್ವೀಪ ರಾಷ್ಟ್ರದಲ್ಲಿ ಜನಸಾಮಾನ್ಯರು ಈಗ ದಿಕ್ಕೆಟ್ಟು ನಿಲ್ಲುವಂತೆ ಮಾಡಿಡಲಾಗಿದೆ. ಶ್ರೀಲಂಕಾದ ಹಣದುಬ್ಬರದ ಪ್ರಮಾಣ ಇಡೀ ಏಶ್ಯ ಖಂಡದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಶ್ರೀಲಂಕಾದ ಕೇಂದ್ರೀಯ ಬ್ಯಾಂಕಿನ ದತ್ತಾಂಶದಂತೆ ಅದು ಇದೇ ವರ್ಷದ ಫೆಬ್ರವರಿಯಲ್ಲಿ ಶೇಕಡಾ 17.5 ರಷ್ಟಿತ್ತು. ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಪ್ರಕಾರ 2021ನೇ ಸಾಲಿನಲ್ಲಿ ಶ್ರೀಲಂಕಾದ ಒಟ್ಟು ಸಾರ್ವಜನಿಕ ಸಾಲ ಅಲ್ಲಿನ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 119 ಆಗಿತ್ತು. ಅಂದರೆ ಅದರ ಒಟ್ಟು ವಾರ್ಷಿಕ ಉತ್ಪಾದನೆಗಿಂತಲೂ ಶೇಕಡಾ 19ರಷ್ಟು ಹೆಚ್ಚು.
ಭತ್ತ, ತೆಂಗು, ಟೀ, ರಬ್ಬರು, ತಂಬಾಕುಗಳು ಶ್ರೀಲಂಕಾದ ಮುಖ್ಯ ಬೆಳೆಗಳು. ಪ್ರವಾಸೋದ್ದಿಮೆ, ಟೀ, ರಬ್ಬರು, ಸಿದ್ಧ ಉಡುಪುಗಳು ಶ್ರೀಲಂಕಾದ ಮುಖ್ಯ ಕೈಗಾರಿಕೆಗಳಾಗಿವೆ. ಮೊದಲೇ ಮೂರು ದಶಕಗಳ ಅಂತರ್ ಯುದ್ಧದಿಂದ ಬಸವಳಿದಿದ್ದ ಈ ರಾಷ್ಟ್ರದ ಪ್ರವಾಸೋದ್ದಿಮೆ ಮತ್ತಿತರ ಉದ್ದಿಮೆಗಳು 2019ರಲ್ಲಿ ಹಲವೆಡೆ ನಡೆದ ಸರಣಿ ಬಾಂಬ್ ದಾಳಿಗಳ ನಂತರ ನೆಲಕಚ್ಚತೊಡಗಿತ್ತು. ಆ ರಾಷ್ಟ್ರದ ಒಟ್ಟು ವಾರ್ಷಿಕ ಉತ್ಪನ್ನದಲ್ಲಿ ಶೇಕಡಾ ಐದರಷ್ಟು ಪ್ರವಾಸೋದ್ದಿಮೆಯಿಂದ ಬರುತ್ತಿತ್ತು. ಕಳೆದೆರಡು ವರ್ಷಗಳಿಂದ ಕೋವಿಡ್-19ರ ಹೆಸರಿನ ಲಾಕ್ ಡೌನ್ ಇತ್ಯಾದಿ ಅವಾಂತರಗಳಿಂದಾಗಿ ಪ್ರವಾಸೋದ್ದಿಮೆ ಮಾತ್ರವಲ್ಲದೆ ಇದ್ದ ಎಲ್ಲಾ ಉತ್ಪಾದನಾ ಹಾಗೂ ಕೃಷಿ ಚಟುವಟಿಕೆಗಳೂ ಸ್ತಬ್ಧಗೊಂಡ ಪರಿಸ್ಥಿತಿಗೆ ಜಾರಿದ್ದವು. ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ನೆಪದಲ್ಲಿ 2019ರಲ್ಲಿ ಶೇಕಡಾ 15ರಷ್ಟು ತೆರಿಗೆ ಕಡಿತ ಮಾಡಿ ಭಾರೀ ಶ್ರೀಮಂತರ ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಅದರಿಂದಾಗಿ ಸರಕಾರದ ತೆರಿಗೆ ಸಂಗ್ರಹದ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಟೀ ಮತ್ತು ಸಿದ್ಧ ಉಡುಪುಗಳು ಮಾತ್ರವೇ ಶ್ರೀಲಂಕಾದ ಒಟ್ಟು ರಫ್ತಿನಲ್ಲಿ ಶೇಕಡಾ 50ರಷ್ಟು ಪಾಲು ಪಡೆದಿತ್ತು. ಇತರ ಉತ್ಪಾದನೆ ಹಾಗೂ ರಫ್ತುಗಳ ಮೇಲೆ ಗಮನ ನೀಡಲಿಲ್ಲ. ಇಡೀ ದೇಶ ಭಾರೀ ಮೊತ್ತದ ಸಾಲದ ಮೇಲೆ ನಡೆಯತೊಡಗಿತು. ತೈಲ, ಅನಿಲದಿಂದ ಹಿಡಿದು ಪ್ರತಿಯೊಂದನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿಗೆ ದೂಡಲ್ಪಟ್ಟು ವಿದೇಶಿ ವಿನಿಮಯ ಕೊರತೆ ಶೇಕಡಾ 70ನ್ನು ದಾಟಿತು.
2000ದಲ್ಲಿ ಶ್ರೀಲಂಕಾದ ರಪ್ತು ಅದರ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 12ಕ್ಕೆ ಕುಸಿದು ಬಿಟ್ಟಿತ್ತು. ಮೊದಲೇ ಕೆಲವು ದಶಕಗಳಿಂದ ತೀವ್ರವಾಗುತ್ತಾ ನಡೆದಿದ್ದ ವ್ಯಾಪಾರ ಕೊರತೆಯಿಂದ ಬಳಲುತ್ತಾ ಬಂದಿದ್ದ ಶ್ರೀಲಂಕಾ ಸರಕಾರದ ಬೊಕ್ಕಸದಲ್ಲಿ ವಿದೇಶಿ ವಿನಿಮಯ ಮೀಸಲು ಈಗ ಬರಿದಾಗಿದ್ದರಿಂದಾಗಿ ಆಮದು ಮಾಡಿಕೊಳ್ಳುವ ಶಕ್ತಿಯನ್ನೂ ಕಳೆದುಕೊಂಡು ಬಿಟ್ಟಿತು. ಜೊತೆಗೆ ವಿಪರೀತವಾಗಿರುವ ಸಾಲಮರುಪಾವತಿ ಹಾಗೂ ಬಡ್ಡಿ ಪಾವತಿಯ ಮೊತ್ತಗಳಿಂದಾಗಿ ದೇಶದ ಹಣಕಾಸು ವ್ಯವಸ್ಥೆ ದಿಕ್ಕಾಪಾಲಾಗಿದೆ. ಇದರಿಂದಾಗಿ ಇಡೀ ಶ್ರೀಲಂಕಾ ಹಸಿವು, ನೀರಡಿಕೆ, ಕತ್ತಲೆ, ಭವಿಷ್ಯದ ಬಗೆಗಿನ ಆತಂಕ, ಆಕ್ರೋಶಗಳಿಂದ ತತ್ತರಿಸುವಂತಾಯಿತು. ಇದಕ್ಕೆ ಸರಕಾರದ ದುರಾಡಳಿತವೇ ಕಾರಣವೆಂದು ದೇಶಾದ್ಯಂತ ಸರಕಾರದ ರಾಜೀನಾಮೆಗೆ ಒತ್ತಾಯಗಳು ಹೆಚ್ಚಾಗತೊಡಗಿವೆ. ಭಾರೀ ಪ್ರತಿಭಟನೆಗಳಿಗೆ ಕಾರಣವಾಗಿವೆ. ಸರಕಾರ ಸೇನೆಗೆ ಭಾರೀ ಅಧಿಕಾರ ನೀಡಿ ಜನರ ಪ್ರತಿರೋಧವನ್ನು ಹತ್ತಿಕ್ಕತೊಡಗಿದೆ. ನೂರಾರು ಜನರ ಬಂಧನಗಳು ನಡೆದು ಜನಸಾಮಾನ್ಯರ ಮೇಲೆ ಸರಕಾರಿ ಹಿಂಸೆಗಳು ವ್ಯಾಪಕವಾಗಿದೆ. ಪಿಟಿಎ(ಪ್ರೊಟೆಕ್ಷನ್ ಫ್ರಮ್ ಟೆರರಿಸಂ ಆ್ಯಕ್ಟ್) ಎಂಬ ಕರಾಳ ಕಾನೂನಿನ ಮೂಲಕ ಹೋರಾಟ ನಿರತ ಜನರನ್ನು ವಿಚಾರಣೆಯಿಲ್ಲದೇ ಸೆರಮನೆಯಲ್ಲಿಡಲು ತೊಡಗಿದೆ. ಪಿಟಿಎ ಕಾನೂನನ್ನು ಭಯೋತ್ಪಾದನೆ ತಡೆಯುವ ಉದ್ದೇಶದಿಂದ 1979ರಿಂದಲೇ ಶ್ರೀಲಂಕಾದಲ್ಲಿ ಜಾರಿಯಲ್ಲಿಡಲಾಗಿದೆ. ಮೊದಲು ಅಲ್ಲಿ ಸಿಡಿದ ಎಡಪಂಥೀಯ ಹೋರಾಟಗಾರರ ಮೇಲೆ ಅದನ್ನು ಬಳಸಲಾಗಿತ್ತು. ನಂತರ ಅಲ್ಲಿನ ತಮಿಳು ರಾಷ್ಟ್ರೀಯತಾ ಹೋರಾಟಗಾರರ ಮೇಲೆ ವ್ಯಾಪಕವಾಗಿ ಬಳಸಲಾಗಿತ್ತು. ಅದರ ನಂತರ ಅಲ್ಲಿನ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ವ್ಯಾಪಕವಾಗಿ ಬಳಸಲಾಗುತ್ತಿದೆ. ಈಗ ಅದನ್ನು ಹೋರಾಡುತ್ತಿರುವ ಸಿಂಹಳೀಯರ ಮೇಲೆ ಬಳಸಲಾಗುತ್ತಿದೆ.
ಶ್ರೀಲಂಕಾದ ಶೇಕಡಾ 75ಕ್ಕೂ ಹೆಚ್ಚು ಭೂ ಹಿಡುವಳಿಗಳು ಅರ್ಧ ಎಕರೆಗಿಂತಲೂ ಕಡಿಮೆಯದು. ಅಂದರೆ ಶ್ರೀಲಂಕಾದ ಬಹುತೇಕ ಭೂಮಿ ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಅದರಲ್ಲಿ ಟೀ ಹಾಗೂ ರಬ್ಬರ್ ಉದ್ದಿಮೆದಾರರ ಕೈಯಲ್ಲಿ ಕೇಂದ್ರೀಕೃತಗೊಂಡಿರುವ ಭೂಮಿ ದೊಡ್ಡ ಪ್ರಮಾಣದ್ದಾಗಿದೆ. ಟೀ ಉದ್ದಿಮೆ ಪ್ರಧಾನವಾಗಿ ಕೇವಲ ಎರಡು ಕುಟುಂಬಗಳ ಸ್ವತ್ತಾಗಿಬಿಟ್ಟಿದೆ. ಇಂಡಿಯಾ ಮೂಲದ ಕಂಪೆನಿಗಳೂ ಕೂಡ ಶ್ರೀಲಂಕಾದಲ್ಲಿ ಕಾರ್ಯಾಚರಿಸುತ್ತಿವೆ. ಅಲ್ಲಿನ ಪೆಟ್ರೋಲಿಯಂ ಉದ್ದಿಮೆ ಬಹುತೇಕವಾಗಿ ಇಂಡಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಚೆನ್ನೈ ಆಯಿಲ್ ಕಾರ್ಪೊರೇಷನ್ ಹಿಡಿತದಲ್ಲಿ ಇದೆ. ಈ ದೇಶ ಸುಮಾರು ಮೂರು ಲಕ್ಷದಷ್ಟು ಸೇನಾಬಲವನ್ನು ಹೊಂದಿದೆ. ಸೇನಾ ನಿರ್ವಹಣೆಗಾಗಿ 2019ರಲ್ಲಿ 1.67 ಬಿಲಿಯನ್ ಅಮೆರಿಕನ್ ಡಾಲರುಗಳನ್ನು ಅಂದರೆ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 1.64ರಷ್ಟು ವೆಚ್ಚ ಮಾಡಿತ್ತು. 1995ರಲ್ಲಿ ಇದು ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 5.86 ಇದ್ದರೆ 2000ದಲ್ಲಿ ಶೇಕಡಾ 5.3ರಷ್ಟಿತ್ತು. ಈ ಮಟ್ಟದ ಸೇನಾ ವೆಚ್ಚ ಮಾಡುವ ಶ್ರೀಲಂಕಾದಂತಹ ಹಿಂದುಳಿದ ದೇಶಗಳು ಉತ್ಪಾದನೆ ಹಾಗೂ ಅಭಿವೃದ್ಧಿಗಾಗಿ ಗಮನ ಹರಿಸಲು ಸಾಧ್ಯವಾಗುವುದಾದರೂ ಹೇಗೆ?.
ಶ್ರೀಲಂಕಾದಲ್ಲಿ ಬಹುಸಂಖ್ಯಾತರು ಸಿಂಹಳೀಯರಾಗಿದ್ದಾರೆ. ಅಲ್ಲಿನ 2012ರ ಸರಕಾರಿ ಜನಗಣತಿಯ ಅಂಕಿ-ಅಂಶದ ಪ್ರಕಾರ ಸಿಂಹಳೀಯರು ಆ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 74.9ರಷ್ಟಿದ್ದಾರೆ. ಇವರು ಬೌದ್ಧ ಧರ್ಮದ ಅನುಯಾಯಿಗಳೆಂದು ಹೇಳಿಕೊಳ್ಳುತ್ತಾರೆ. ಶೇಕಡಾ 11.2ರಷ್ಟು ಶ್ರೀಲಂಕಾ ತಮಿಳರಿದ್ದರೆ, ಶೇಕಡಾ 4.2ರಷ್ಟು ಇಂಡಿಯಾದ ತಮಿಳರಿದ್ದಾರೆ. ಶೇಕಡಾ 9.2ರಷ್ಟು ಶ್ರೀಲಂಕಾ ಮೂರ (ಟಟ್ಟ)ರಿದ್ದಾರೆ. ಬಹುತೇಕವಾಗಿ ತಮಿಳು ಮಾತನಾಡುವ ಇವರನ್ನು ಶ್ರಿಲಂಕಾದ ಮುಸ್ಲಿಮರೆಂದು ಕರೆಯಲಾಗುತ್ತಿದೆ. ಇವರಲ್ಲೂ ಶ್ರೀಲಂಕಾ ಮೂಲದವರು, ಇಂಡಿಯಾ ಮೂಲದವರು ಮತ್ತು ಮಲಯ ಮೂಲದವರು ಎಂಬ ವಿಂಗಡನೆ ಕೂಡ ಇದೆ. ಇತರ ಸಮುದಾಯದವರು ಶೇಕಡಾ 0.5ರಷ್ಟಿದ್ದಾರೆ.
ಇದರಲ್ಲಿ ಶ್ರೀಲಂಕಾ ತಮಿಳರ ಮೇಲೆ ಬೌದ್ಧ ಧರ್ಮೀಯ ಸಿಂಹಳೀಯ ಪ್ರಭುತ್ವದ ನಿರಂತರವಾದ ಹಿಂಸೆ, ದಮನ, ಕಗ್ಗೊಲೆಗಳು, ಮಾರಣಹೋಮಗಳ ಕಾರಣದಿಂದಾಗಿ ತಮಿಳು ರಾಷ್ಟ್ರೀಯತಾ ಅಸ್ಮಿತೆಯಡಿ ಹೋರಾಟಗಳು ಸಿಡಿಯುತ್ತದೆ. ಅದು ನಂತರ ಸಶಸ್ತ್ರ ಹೋರಾಟವಾಗಿ ಮಾರ್ಪಟ್ಟು ತಮಿಳು ಪ್ರತ್ಯೇಕ ರಾಷ್ಟ್ರಕ್ಕಾಗಿನ ಹೋರಾಟವಾಗುತ್ತದೆ. ಅದರಲ್ಲಿ ಎಲ್ಟಿಟಿಇ ಸಂಘಟನೆ ಮುಂಚೂಣಿಯಾಗುತ್ತದೆ. ಶ್ರೀಲಂಕಾದ ಪ್ರಭುತ್ವ ಇಂಡಿಯಾ, ಅಮೆರಿಕ, ಚೀನಾ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳ ಬೆಂಬಲದೊಂದಿಗೆ ಅಲ್ಲಿನ ಸಶಸ್ತ್ರ ಹೋರಾಟವನ್ನು ಸಂಪೂರ್ಣವಾಗಿ ದಮನಿಸಿ 2009ರಲ್ಲಿ ಎಲ್ಟಿಟಿಇ ನಾಯಕತ್ವವನ್ನು ನಿರ್ನಾಮ ಮಾಡುತ್ತದೆ. ಇದಕ್ಕೆ ಮೂರು ದಶಕಗಳ ಕಾಲಾವಧಿ ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಅಲ್ಲಿನ ಸರಕಾರ ತಮಿಳರ ಮೇಲೆ ವ್ಯಾಪಕ ಹಿಂಸಾಚಾರಗಳನ್ನು ಹರಿಬಿಟ್ಟಿರುವ ಬಗ್ಗೆ ಹಲವಾರು ಜಾಗತಿಕ ಮಾನವಹಕ್ಕು ಸಂಘಟನೆಗಳ ವರದಿಗಳು ಹೇಳುತ್ತವೆ. ವಿಶ್ವಸಂಸ್ಥೆಯಲ್ಲೂ ಈ ವಿಚಾರ ಹಲವು ಬಾರಿ ಚರ್ಚೆಗೆ ಒಳಗಾಗಿ ಆ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮವೆಸಗಿದ ಸೇನಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ ನಿರ್ಣಯದ ಮೂಲಕ ಶ್ರೀಲಂಕಾದ ಸರಕಾರಕ್ಕೆ ತಿಳಿಸುತ್ತದೆ. ಅದಕ್ಕೆ ಕೊನೆಗೂ ಸಮ್ಮತಿಸಿದ ಶ್ರೀಲಂಕಾ ಸರಕಾರ ಆ ನಿರ್ಣಯವನ್ನು ಇದುವರೆಗೂ ಜಾರಿಗೊಳಿಸಿಲ್ಲ. ಅಲ್ಲದೆ ಶ್ರೀಲಂಕಾದ ನ್ಯಾಯಾಲಯಗಳು ಶಿಕ್ಷೆ ವಿಧಿಸಿರುವ ಅಪರಾಧಿ ಅಧಿಕಾರಿಗಳ ಮೇಲಿನ ಶಿಕ್ಷೆಯನ್ನು ಸರಕಾರ ಮನ್ನಾ ಮಾಡಿ ಅವರನ್ನು ತನ್ನ ಸೇವೆಗೆ ಮತ್ತೆ ನಿಯೋಜಿಸಿಕೊಂಡಿದೆ. ಅಕ್ರಮಗಳನ್ನು ಮಾಡಿದ ಸೇನಾಧಿಕಾರಿಗಳನ್ನು ಸನ್ಮಾನಿಸಿ ಬಿರುದು, ಪ್ರಶಸ್ತಿಗಳನ್ನು ನೀಡಿದೆ.
ಇಷ್ಟೆಲ್ಲಾ ರೀತಿಯಲ್ಲಿ ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲಂಘಿಸಿದ್ಧಕ್ಕಾಗಿ ಅಮೆರಿಕವಾಗಲೀ, ಯೂರೋಪಿನ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಯಾವುದೇ ರಾಷ್ಟ್ರಗಳೂ ಕೂಡ, ಕ್ಯೂಬಾ, ಇರಾನ್, ಲಿಬಿಯಾ, ಇರಾಕ್ ಮೊದಲಾದ ರಾಷ್ಟ್ರಗಳ ಮೇಲೆ ಹೇರಿದಂತೆ ಯಾವುದೇ ನಿರ್ಬಂಧಗಳನ್ನೂ ಶ್ರೀಲಂಕಾದ ಮೇಲೆ ಇದುವರೆಗೂ ಹೇರಲೂ ಇಲ್ಲ. ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ (ಡೆಮಾಕ್ರಟಿಕ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ಶ್ರೀಲಂಕಾ) ಎಂದು 1978ರಿಂದ ಕರೆದುಕೊಂಡಿದ್ದರೂ ಶ್ರೀಲಂಕಾದ ಪ್ರಭುತ್ವ ತನ್ನ ಆಚರಣೆಯಲ್ಲಿ ಯಾವತ್ತೂ ಪ್ರಜಾತಾಂತ್ರಿಕವಾಗಲೀ, ಸಮಾಜವಾದಿಯಾಗಲೀ, ಗಣರಾಜ್ಯವಾಗಲೀ ಆಗಿರಲಿಲ್ಲ ಎನ್ನುವುದಕ್ಕೆ ಅದು ನಡೆದುಕೊಂಡು ಬಂದ ಹಾದಿಯನ್ನು ಚಾರಿತ್ರಿಕವಾಗಿ ಅವಲೋಕಿಸಿದರೆ ಗೊತ್ತಾಗುವ ವಿಚಾರ. ಶ್ರೀಲಂಕಾದ ಪ್ರಭುತ್ವ ಬೌದ್ಧ ಧರ್ಮೀಯ ಸಿಂಹಳೀಯರ ಹಿಡಿತದಲ್ಲಿಯೇ ಸಾಗಿ ಬರುತ್ತಿದೆ. ಅಲ್ಲದೆ ದೇಶದ ಭೂಮಿ ಸಂಪತ್ತುಗಳ ಮೇಲೆ ಸಿಂಹಳೀಯರಲ್ಲಿನ ಕೆಲವೇ ಭಾರೀ ಸಂಪತ್ತಿನ ಒಡೆಯರ ಹಿಡಿತವಿದೆ.
ಬೌದ್ಧ ಪುರೋಹಿತಶಾಹಿ ಅಲ್ಲಿನ ಪ್ರಭುತ್ವವನ್ನು ನಿಯಂತ್ರಿಸುತ್ತಾ ಬಂದಿದೆ. ಸರಕಾರದ ಸೇನೆ, ಪೊಲೀಸ್, ಆಡಳಿತಾಂಗ, ನ್ಯಾಯಾಂಗದಲ್ಲಿ ಸಿಂಹಳೀಯರದೇ ಹಿಡಿತವಿದೆ. ತಮಿಳರಿಗಾಗಲೀ, ಅಲ್ಲಿನ ಮುಸ್ಲಿಮರಿಗಾಗಲೀ ಸರಿಯಾದ ಪ್ರಾತಿನಿಧ್ಯ ಇಲ್ಲ. ಶ್ರೀಲಂಕಾ ಉತ್ತರ ಹಾಗೂ ಈಶಾನ್ಯ ಭಾಗದ ತಮಿಳು ಪ್ರದೇಶವನ್ನು ಪ್ರತಿನಿಧಿಸುವವರು ಸರಕಾರದ ಭಾಗವಾಗಿ ನಾಮಮಾತ್ರದಲ್ಲಿ ಇದ್ದು ಸಿಂಹಳೀಯ ಪ್ರಭುತ್ವದ ಹಿತಾಸಕ್ತಿಗಳ ಪರವಾಗಿಯೇ ಕಾರ್ಯ ನಿರ್ವಹಿಸುತ್ತಾ ಬಂದರು. ಶ್ರೀಲಂಕಾ 1948ರಲ್ಲಿ ಬ್ರಿಟಿಷ್ ಪ್ರಭುತ್ವದಿಂದ ಸ್ವಾತಂತ್ರ್ಯಗೊಂಡ ನಂತರದಿಂದಲೂ ಶ್ರೀಲಂಕಾದ ಬಹುಸಂಖ್ಯಾತ ಜನಸಮುದಾಯಗಳ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ನಿರಂಕುಶಾಧಿಕಾರವನ್ನು ಹೇರುತ್ತಾ ಬರಲಾಗಿದೆ. ಇದರ ವಿರುದ್ಧ ಜನರು ಹತ್ತು ಹಲವು ರೀತಿಗಳಲ್ಲಿ ಹೋರಾಡುತ್ತಲೇ ಬರುತ್ತಿದ್ದಾರೆ. ಸಿಂಹಳೀಯ ದುರಭಿಮಾನ ಹಾಗೂ ಬೌದ್ಧ ಕೋಮುವಾದಗಳನ್ನು ಪೋಷಿಸಿಕೊಂಡು ಬಂದ ಅಲ್ಲಿನ ಪ್ರಭುತ್ವ ಅದನ್ನು ಅಲ್ಲಿನ ತಮಿಳರು ಹಾಗೂ ಮುಸ್ಲಿಮರತ್ತ ತಿರುಗಿಸುತ್ತಾ ಬಂದಿದೆ. ಅವರ ಬದುಕು, ದುಡಿಮೆಗಳನ್ನು ಕಬಳಿಸುತ್ತಾ ಬಂದಿದೆ. ಹಲವಾರು ಕೋಮು ಹಾಗೂ ಜನಾಂಗೀಯ ಮಾರಣಹೋಮಗಳನ್ನು ಸಂಘಟಿಸಲಾಗಿದೆ. ಲಕ್ಷದಷ್ಟು ಜನರು ಇದರಲ್ಲಿ ಜೀವ ತೊರೆದಿದ್ದಾರೆ.
ತಮಿಳು ಈಳಂಗಾಗಿನ ಸಶಸ್ತ್ರ ಹೋರಾಟವನ್ನು ದಮನಿಸಿದ ನಂತರದಲ್ಲಿ ರಾಜಪಕ್ಸ ಕುಟುಂಬ ಚುನಾವಣೆಗಳನ್ನು ಬಳಸಿಕೊಂಡು ಸರಕಾರವನ್ನು ಹಿಡಿದಿಟ್ಟುಕೊಳ್ಳುತ್ತಾ ಬಂದಿದೆ. ಈಗಿನ ಸರಕಾರದಲ್ಲಿ ರಾಜಪಕ್ಸ ಕುಟುಂಬದವರೇ ಹದಿನಾರಕ್ಕೂ ಹೆಚ್ಚು ಪ್ರಧಾನ ಹಾಗೂ ಮಹತ್ವದ ಖಾತೆಗಳನ್ನು ನಿರ್ವಹಿಸುತ್ತಾ ಬರುತ್ತಿದ್ದಾರೆ. ಸೇನೆಯಲ್ಲೂ ತನಗೆ ಅನುಕೂಲಿತ ನೇಮಕಾತಿಗಳ ಮೂಲಕ ರಾಜಪಕ್ಸ ಕುಟುಂಬ ಹಿಡಿತ ಸಾಧಿಸಿದೆ. ಈ ಹಿಂದೆ ಮಹಿಂದ ರಾಜಪಕ್ಸರಿಂದ ಆರಂಭವಾದ ಈ ಕುಟುಂಬದ ಹಿಡಿತ ಸಂವಿಧಾನ ತಿದ್ದುಪಡಿಗಳ ಮೂಲಕ ಪ್ರಭುತ್ವದ ಎಲ್ಲಾ ಅಂಗಗಳು ಹಾಗೂ ನ್ಯಾಯಾಂಗದ ಮೇಲೂ ಅಧ್ಯಕ್ಷೀಯ ಹಿಡಿತ ಸಾಧಿಸಿ ಪೂರ್ಣ ಪ್ರಮಾಣದ ಬೌದ್ಧ ಧರ್ಮೀಯ ಫ್ಯಾಶಿಸ್ಟ್ ಆಡಳಿತದಡಿ ಇಡೀ ಶ್ರೀಲಂಕಾವನ್ನು ಹಿಡಿದಿಡಲು ಹೊರಟಿದೆ. ಅದಕ್ಕಾಗಿ ಹಲವಾರು ಕಾನೂನಾತ್ಮಕ ಬದಲಾವಣೆಗಳನ್ನು ಮಾಡುತ್ತಾ ಬರಲಾಗಿದೆ. ‘ಒಂದು ದೇಶ, ಒಂದು ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿ..’ಎಂಬ ಘೋಷಣೆಯಡಿ ಬೌದ್ಧ ಧರ್ಮವನ್ನು ದೇಶದ ಅಧಿಕೃತ ಧರ್ಮವನ್ನಾಗಿ ಮತ್ತು ಸಿಂಹಳೀಯ ಭಾಷೆಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಶ್ರೀಲಂಕಾದ ಎಲ್ಲಾ ಸಮುದಾಯದವರ ಮೇಲೂ ಹೇರಿ, ಶ್ರೀಲಂಕಾ ಬೌದ್ಧ ದೇಶ ಎಂದು ಸಾರಲು ಈಗಿನ ರಾಜಪಕ್ಸ ಕುಟುಂಬ ನೇತೃತ್ವದ ಸರಕಾರ ಹೊರಟಿದೆ.
ಅದಕ್ಕಾಗಿ ಬೌದ್ಧ ಪುರೋಹಿತರ ನೇತೃತ್ವದಲ್ಲಿ ಸಮಿತಿಯೊಂದನ್ನು ಮಾಡಲಾಗಿ, ಅದು ತನ್ನ ವರದಿಯಲ್ಲಿ ಈ ಶಿಫಾರಸನ್ನು ಮಾಡಿದೆ. ಕೊರೋನ ಸಂದರ್ಭವನ್ನು ಬಳಸಿಕೊಂಡು ಹಲವಾರು ಕಾನೂನಾತ್ಮಕ ತಿದ್ದುಪಡಿಗಳು ಹಾಗೂ ಕಾನೂನು ಮಾರ್ಪಾಡುಗಳನ್ನು ಮಾಡಲಾಗಿದೆ. ತಮಿಳರು ಹಾಗೂ ಮುಸ್ಲಿಮರ ಮೇಲೆ ಸಿಂಹಳೀಯರ ಮೂಲಕ ಎಲ್ಲಾ ರೀತಿಗಳಿಂದಲೂ ದಾಳಿಗಳನ್ನು ಸಂಘಟಿಸುತ್ತಾ ಬರಲಾಗುತ್ತಿದೆ. ಆದರೆ ಈಗ ಶ್ರೀಲಂಕಾದ ಬೌದ್ಧ ಫ್ಯಾಶಿಸ್ಟ್ ಪ್ರಭುತ್ವ ತಮಿಳರು, ಮುಸ್ಲಿಮರ ಜೊತೆಗೆ ತನ್ನ ದುರಾಡಳಿತವನ್ನು ಪ್ರಶ್ನಿಸಿ ಬೀದಿಗಿಳಿಯುತ್ತಿರುವ ಸಿಂಹಳೀಯ ಬೌದ್ಧ ಬಹುಸಂಖ್ಯಾತರನ್ನು ಗುರಿಮಾಡತೊಡಗಿದೆ. ಪ್ರತಿ ನಾಲ್ಕು ಜನರಿಗೆ ಒಬ್ಬರಂತೆ ಸೇನೆಯನ್ನು ನಿಯೋಜಿಸಿದೆ. ಅಲ್ಲದೆ ಅದಕ್ಕೆ ಅಪರಿಮಿತ ಅಧಿಕಾರವನ್ನು ನೀಡಿದೆ. ಅಧ್ಯಕ್ಷ ಗೊತಬಯ ರಾಜಪಕ್ಸ ಈಗ ಸೇನೆಯ ಸರ್ವೊಚ್ಚ ಅಧಿಕಾರಿಯಾಗಿದ್ದಾರೆ. ಇದೇ ರಾಜಪಕ್ಸ ಕುಟುಂಬಕ್ಕೆ ಚೀನಾ, ಭಾರತ, ಅಮೆರಿಕ ಸೇರಿದಂತೆ ಯೂರೋಪಿನ ರಾಷ್ಟ್ರಗಳು ಕೂಡ ಬೆಂಬಲಿಸುತ್ತಾ ಬರುತ್ತಿವೆ ಎಂಬುದನ್ನೂ ನಾವಿಲ್ಲಿ ಗುರುತಿಸಬೇಕಾಗಿದೆ.
ಇದೀಗ ಚೀನಾ, ಭಾರತ, ಐಎಂಎಫ್ ಶ್ರೀಲಂಕಾ ಸರಕಾರಕ್ಕೆ ಹಣಕಾಸು ಸಾಲ ಒದಗಿಸಿ ಈಗಿನ ಆರ್ಥಿಕ ದುಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಲು ಹೊರಟಿವೆ. ಅದಕ್ಕೆ ಕಠಿಣ ಶರತ್ತುಗಳನ್ನು ಕೂಡ ಶ್ರೀಲಂಕಾ ಸರಕಾರದ ಮೇಲೆ ಹೇರಲಾಗುತ್ತಿದೆ. ಅದರಂತೆ ಶ್ರೀಲಂಕಾ ತನ್ನ ರೂಪಾಯಿ ಮೌಲ್ಯವನ್ನು ಕುಗ್ಗಿಸಿದೆ. ಇಂತಹ ನಡೆಗಳು ದೇಶವನ್ನು ಮತ್ತಷ್ಟು ದಿವಾಳಿಯತ್ತ ಸಾಗಿಸುವ ಸಾಧ್ಯತೆಗಳು ದಟ್ಟವಾಗತೊಡಗಿದೆ. ಜಾಗತೀಕರಣದ ನಂತರ ಜಾಗತಿಕವಾಗಿ ನಿರಂಕುಶತೆ ಅಥವಾ ಫ್ಯಾಶಿಸ್ಟ್ ಆಳ್ವಿಕೆ ಜಾಗತಿಕ ವಿದ್ಯಮಾನವಾಗಿ ನಗ್ನಗೊಂಡಿರುವುದನ್ನು ಶ್ರೀಲಂಕಾದ ಮೂಲಕವೂ ಗ್ರಹಿಸಬಹುದು. ಫ್ಯಾಶಿಸಂ ಯಾವುದೇ ರೂಪದಲ್ಲಿ ಬೇಕಾದರೂ ಜಾರಿಯಾಗಬಹುದು, ಅದು ಭಾರೀ ಆಸ್ತಿವಂತರ ಸೇವೆಗಾಗಿಯೇ ಆಗಿರುತ್ತದೆ. ಆದರೆ ಅದು ಗುರಿ ಮಾಡುವುದು ಎಲ್ಲಾ ಜನಸಾಮಾನ್ಯರನ್ನು ಎನ್ನುವುದು ಶ್ರೀಲಂಕಾದ ಸಿಂಹಳೀಯ ಬಹುಸಂಖ್ಯಾತರ ಇಂದಿನ ಸ್ಥಿತಿ ಕೂಡ ಸ್ಪಷ್ಟವಾಗಿ ಹೇಳುತ್ತಿದೆ.
ಮಿಂಚಂಚೆ: nandakumarnandana67@gmail.com