ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟಿನ ಸುತ್ತಮುತ್ತ
ಚುನಾವಣಾ ಸಂದರ್ಭದಲ್ಲಿ ಜಾಗತಿಕ ಹಣಕಾಸು ಸಂಸ್ಥೆಗಳ ನಿಬಂಧನೆಗಳನ್ನು ಒಪ್ಪಿಕೊಳ್ಳುವುದಿಲ್ಲ, ದೇಶವನ್ನು ಜಾಗತಿಕ ಕಾರ್ಪೊರೇಟ್ಗಳ ಕೈಗೆ ಒಪ್ಪಿಸುವುದಿಲ್ಲ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ ಎಂದೆಲ್ಲಾ ಭರವಸೆಯ ಭಾಷಣಗಳನ್ನು ಮಾಡಿದ್ದ, ಉದಾರವಾದಿಯಂತೆ ತೋರಿಸಿಕೊಂಡಿದ್ದ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ನಂತರ ವರ್ತಿಸಿದ್ದು ಮಾತ್ರ ಅದಕ್ಕೆ ತದ್ವಿರುದ್ಧವಾಗಿ. ಅವರು ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸಾಲನಿಬಂಧನೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾ ದೇಶವನ್ನು ಹೆಚ್ಚು ಜಾಗತಿಕ ಕಾರ್ಪೊರೇಟ್ಗಳ ಕೈಗೆ ದಾಟಿಸುತ್ತಾ ಹೋದರು.
ಶ್ರೀಲಂಕಾದಲ್ಲಿನ ತೀವ್ರತರವಾದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಬಿಕ್ಕಟ್ಟು ಮುಂದುವರಿಯುತ್ತಿರುವಂತೆಯೇ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲೂ ರಾಜಕೀಯ ಬಿಕ್ಕಟ್ಟು ತೀವ್ರವಾಗಿದೆ. ಪಾಕಿಸ್ತಾನದ ಇಮ್ರಾನ್ ಖಾನ್ ಸರಕಾರ ಬಹುಮತ ಕಳೆದುಕೊಂಡು ಅವಿಶ್ವಾಸ ನಿರ್ಣಯದ ಹಂತ ತಲುಪಿ ಪಾಕಿಸ್ತಾನದ ಸಂಸತ್ತನ್ನು ರದ್ದುಗೊಳಿಸಲಾಗಿದೆ. ಪ್ರಧಾನಿ ತಮ್ಮನ್ನು ಪದಚ್ಯುತಗೊಳಿಸಲು ಅಮೆರಿಕದಲ್ಲಿ ಯೋಜನೆ ಹೆಣೆದು ಜಾರಿಗೊಳಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಹೊಸ ಚುನಾವಣೆಯವರೆಗೂ ಇಮ್ರಾನ್ ಖಾನ್ ಉಸ್ತುವಾರಿ ಸರಕಾರವನ್ನು ಮುನ್ನಡೆಸುವ ಇರಾದೆಯೊಂದಿಗೆ ತಮ್ಮ ರಾಜಕೀಯ ನಡೆಗಳನ್ನು ನಡೆಸಲು ಶ್ರಮಿಸಿದ್ದರು. ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಸಂಸತ್ತನ್ನು ರದ್ದುಗೊಳಿಸಿರುವುದನ್ನು ಒಪ್ಪದೆ ಬಹುಮತ ಇದೆಯೋ ಇಲ್ಲವೋ ಎಂಬುದು ಸಂಸತ್ತಿನಲ್ಲಿಯೇ ಸಾಬೀತಾಗಬೇಕು ಎಂದಿತ್ತು. ಈಗ ಇಮ್ರಾನ್ ಖಾನ್ ಸರಕಾರ ಪತನಗೊಂಡಿರುವುದು ಖಾತ್ರಿಯಾಗಿದೆ.
ಪಾಕಿಸ್ತಾನದಲ್ಲಿನ ಬಿಕ್ಕಟ್ಟಿಗೂ ಶ್ರೀಲಂಕಾದಲ್ಲಿನ ಬಿಕ್ಕಟ್ಟಿಗೂ ಮೂಲಭೂತವಾಗಿ ವ್ಯತ್ಯಾಸಗಳೇನೂ ಇಲ್ಲ. ಇಮ್ರಾನ್ಖಾನ್ ಸರಕಾರವೂ ಸೇರಿದಂತೆ ಹಿಂದಿನಿಂದಲೂ ಆಳ್ವಿಕೆ ನಡೆಸಿಕೊಂಡು ಬಂದಿರುವ ಪಾಕಿಸ್ತಾನದ ಸರಕಾರಗಳು ಪ್ರಧಾನವಾಗಿ ಜಾಗತಿಕ ಹಣಕಾಸು ಸಂಸ್ಥೆಗಳ ಸಾಲಗಳ ಮೇಲೆ ದೇಶವನ್ನು ನಿಲ್ಲಿಸಿಕೊಂಡು ಬರುತ್ತಿವೆ. ಜಾಗತಿಕ ಭಾರೀ ಕಾರ್ಪೊರೇಟ್ಗಳಿಗೆ ಅನುಕೂಲವಾಗುವಂತೆ ತಮ್ಮ ದೇಶದ ಭೂಮಿ ಇನ್ನಿತರ ಸಂಪತ್ತನ್ನು ಹಲವಾರು ನೆಪಗಳಲ್ಲಿ ಬಿಟ್ಟುಕೊಡುತ್ತಾ ಬಂದಿವೆ. ಜಾಗತಿಕ ಹಣಕಾಸು ಸಂಸ್ಥೆಗಳೆಂದಾಗ ಅದು ವಿಶ್ವಬ್ಯಾಂಕ್, ಅಂತರ್ರಾಷ್ಟ್ರೀಯ ಹಣಕಾಸು ನಿಧಿ, ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಪ್ರಮುಖವಾಗಿವೆ. ಇವುಗಳ ಜೊತೆಗೆ ಚೀನಾ ಹಾಗೂ ರಶ್ಯಗಳಿಂದಲೂ ಸೇನಾ ಸಾಮಗ್ರಿ ಹಾಗೂ ಹಣಕಾಸು ಸಾಲಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. ಜಾಗತೀಕರಣದ ನಿಬಂಧನೆಗಳನ್ನು ಒಂದಲ್ಲಾ ಒಂದು ರೀತಿಯಿಂದ ಪಾಲಿಸುತ್ತಾ ಬರುತ್ತಿದೆ. ಸಹಜವಾಗಿ ಜಾಗತೀಕರಣದ ಆರಂಭದಲ್ಲಿ ಎಲ್ಲೆಡೆಯಂತೆ ಈ ದೇಶದಲ್ಲೂ ಚಾಲ್ತಿಯಲ್ಲಿನ ಮಾನದಂಡಗಳ ಪ್ರಕಾರ ಆರ್ಥಿಕ ಪ್ರಗತಿಯ ಗತಿ ಏರಿತ್ತು ಕೂಡ. ಪಾಕಿಸ್ತಾನ ಹೆಚ್ಚಾಗಿ ಅಮೆರಿಕದ ಬಾಲಂಗೋಚಿ ತರಹವೇ ನಡೆದುಕೊಳ್ಳುತ್ತಾ ಬಂದಿದ್ದು, ಹೆಚ್ಚಾಗಿ ಸೋವಿಯತ್ ರಶ್ಯ ಕಡೆಗೆ ವಾಲಿ ನಿಂತಿದ್ದ ಭಾರತ ಹಾಗೂ ಪಾಕಿಸ್ತಾನದ ನಡುವೆ ನಿರಂತರ ಸಂಘರ್ಷವನ್ನು ಕಾಯ್ದುಕೊಂಡು ಬರುವ ನೀತಿಯನ್ನು ಅಮೆರಿಕ ಅನುಸರಿಸಿತ್ತು. ಶಸ್ತ್ರಾಸ್ತ್ರ ವ್ಯಾಪಾರವನ್ನೂ ಹೆಚ್ಚು ಮಾಡಿಕೊಳ್ಳುತ್ತಾ ಬಂದಿತ್ತು. ಪಾಕಿಸ್ತಾನದ ಸೇನೆ ಕೂಡ ಅಮೆರಿಕ ಪರ ನಿಲುವನ್ನು ಬಹಿರಂಗವಾಗಿಯೇ ಸಾರಿಕೊಳ್ಳುತ್ತಾ ಬಂದಿದೆ. ಸೋವಿಯತ್ ರಶ್ಯ ವಿರುದ್ಧದ ಶೀತಲ ಸಮರದಲ್ಲಿ ಅಮೆರಿಕ ನೇತೃತ್ವದ ಬಣದೊಂದಿಗೆ ಪಾಕಿಸ್ತಾನ ನಿಂತಿದ್ದಲ್ಲದೇ ಅಫ್ಘಾನಿಸ್ತಾನದ ತಾಲಿಬಾನ್, ಮುಜಾಹಿದೀನ್ ಇತ್ಯಾದಿ ಸಂಘಟನೆಗಳಿಗೆ ತನ್ನ ನೆಲದಲ್ಲಿ ಆಶ್ರಯ ಕೊಟ್ಟಿತ್ತು. ಅದು ಅಂತರ್ರಾಷ್ಟ್ರೀಯವಾಗಿಯೂ ಭಾರೀ ಟೀಕೆಗಳಿಗೆ ಗುರಿಯಾಗಿತ್ತು. ಅಲ್ಲದೆ ಹಲವಾರು ಸೋವಿಯತ್ ರಶ್ಯ ವಿರೋಧಿ ಗುಂಪುಗಳಿಗೆ ತರಬೇತಿ ವ್ಯವಸ್ಥೆಯನ್ನೂ ಕಲ್ಪಿಸಿ ಕೊಟ್ಟಿತ್ತು ಕೂಡ. ಜಾರ್ಜ್ ಬುಶ್ ಘೋಷಿಸಿದ ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರದಲ್ಲಿ ಪಾಕಿಸ್ತಾನ ಅಮೆರಿಕದೊಂದಿಗೆ ನಿಂತು ತನ್ನ ಸೇನಾಬಲವನ್ನು ಕೂಡ ಬಳಸಿತ್ತು. ಅದಕ್ಕಾಗಿ ದೊಡ್ಡ ಮೊತ್ತವನ್ನೂ ವ್ಯಯಿಸಿತ್ತು.
ಪಾಕಿಸ್ತಾನದ ಭೂಮಿ ಹಾಗೂ ಇನ್ನಿತರ ಸಂಪತ್ತಿನ ಹಂಚಿಕೆಯಲ್ಲಿ ಭಾರೀ ಅಸಮಾನತೆಗಳಿವೆ. ದೊಡ್ಡ ಭೂಒಡೆಯರು ಪಾಕಿಸ್ತಾನದ ಊಳಿಗಮಾನ್ಯ ಪ್ರತಿನಿಧಿಗಳಾಗಿ ಆ ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಹಾಗಾಗಿ ಅಲ್ಲಿನ ಬಹುಸಂಖ್ಯಾತ ಜನಸಾಮಾನ್ಯರ ತಲಾದಾಯ ಬಹಳ ಕೆಳಮಟ್ಟದಲ್ಲಿದೆ. ನಿರುದ್ಯೋಗ ಹಾಗೂ ಅರೆಉದ್ಯೋಗದ ಪ್ರಮಾಣ ಗಂಭೀರ ಮಟ್ಟದಲ್ಲಿ ಪಾಕಿಸ್ತಾನವನ್ನು ಬಾಧಿಸುತ್ತಾ ಬರುತ್ತಿದೆ. ಕೃಷಿ ಬಹುತೇಕವಾಗಿ ಹಿಂದುಳಿದ ವಿಧಾನಗಳಲ್ಲೇ ಮುಂದುವರಿದಿದೆ. ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿಮೂಲದ ಕೊಡುಗೆಯೇ ಹೆಚ್ಚಿನದಾಗಿದೆ. ನಂತರದ ಸ್ಥಾನ ಗಣಿಗಾರಿಕೆ ಮೊದಲಾದ ಉತ್ಪಾದನಾ ಕ್ಷೇತ್ರದ್ದಾಗಿದೆ. ಮೂಲಭೂತವಾಗಿ ಪಾಕಿಸ್ತಾನ ಕೈಗಾರಿಕಾ ದೇಶವಾಗಿ ಬೆಳೆದಿಲ್ಲ. ಹಾಗಾಗಿ ಕೈಗಾರಿಕಾ ಉತ್ಪಾದನೆಯೆಂದಾಗ ಗಣಿಗಾರಿಕೆ ಹಾಗೂ ಹತ್ತಿ ಬಟ್ಟೆಯ ಕ್ಷೇತ್ರ ಮಾತ್ರ ಹೇಳಬಹುದು.
2022ರ ಫೆಬ್ರವರಿಯ ಮಧ್ಯಭಾಗದ ಅಂಕಿ-ಅಂಶದ ಪ್ರಕಾರ ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನದ ಮೌಲ್ಯ 347 ಬಿಲಿಯನ್ ಅಮೆರಿಕನ್ ಡಾಲರ್ಗಳಾಗಿದ್ದವು. (ಒಂದು ಬಿಲಿಯನ್ ಎಂದರೆ ನೂರು ಕೋಟಿಗಳು) 2020ರಲ್ಲಿ ಪಾಕಿಸ್ತಾನದ ಜನರ ತಲಾದಾಯ ಕೇವಲ 1,466 ಅಮೆರಿಕನ್ ಡಾಲರ್ಗಳಾಗಿದ್ದವು. 2022ರ ಕೊನೆಯ ವೇಳೆಗೆ ಪಾಕಿಸ್ತಾನದ ಒಟ್ಟು ಸಾರ್ವಜನಿಕ ಸಾಲ ಅದರ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 90ಕ್ಕೂ ಹೆಚ್ಚಾಗಲಿದೆ ಎಂಬ ಮಾಹಿತಿಗಳು ಹೊರಬರುತ್ತಿವೆ. ಈಗಾಗಲೇ ಪಾಕಿಸ್ತಾನದ ಬಾಹ್ಯ ಸಾಲ ಅದರ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 40ನ್ನು ಮೀರಿದೆ. ಈಗಲೇ ಪಾಕಿಸ್ತಾನಕ್ಕೆ ಸಾಲಸಂಬಂಧಿ ಹೊಣೆಗಾರಿಕೆಗಳನ್ನು ಪೂರೈಸಲು ಸಾಧ್ಯವಾಗದಂತಹ ಸ್ಥಿತಿಯಿದೆ. ರಫ್ತು ಬಹಳ ಕಡಿಮೆಯಾಗುತ್ತಾ ಸಾಗುತ್ತಿದೆ. ಅದೇ ವೇಳೆ ಆಮದಿನ ಪ್ರಮಾಣ ಬಹಳ ವೇಗವಾಗಿ ಏರತೊಡಗಿದೆ. ಪಾಕಿಸ್ತಾನ ಗಂಭೀರವಾದ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸಲು ತೊಡಗಿ ಬಹಳ ಕಾಲವಾಗಿದೆ. ಹಾಗಾಗಿ ವಿದೇಶಿ ವಿನಿಮಯ ಮೀಸಲು ಪ್ರಮಾಣ ಕುಗ್ಗುತ್ತಾ ಸಾಗುತ್ತಿದೆ. ಒಟ್ಟಾರೆಯಾಗಿ ಗಮನಿಸಿದರೆ ಪಾಕಿಸ್ತಾನವನ್ನು ದಿವಾಳಿಯತ್ತ ಸಾಗಿಸಲಾಗುತ್ತಿದೆ. 7,70,880 ಚದರ ಕಿಲೋಮೀಟರುಗಳ ವಿಸ್ತೀರ್ಣ ಹಾಗೂ 22.85 ಕೋಟಿಯಷ್ಟು ಜನಸಂಖ್ಯೆಯ ಪಾಕಿಸ್ತಾನ ಜಗತ್ತಿನ ಐದನೇ ದೊಡ್ಡ ಜನಸಂಖ್ಯೆಯಿರುವ ಹಾಗೂ ಜಗತ್ತಿನ 33ನೇ ದೊಡ್ಡ ಭೂಪ್ರದೇಶವನ್ನೂ ಹೊಂದಿರುವ ರಾಷ್ಟ್ರವಾಗಿದೆ. ಸುಮಾರು 6,54,000ದಷ್ಟು ಸೇನಾಬಲ ಹಾಗೂ 4,82,000ದಷ್ಟು ಅರೆ ಸೈನಿಕ ಪಡೆಗಳನ್ನು ಹೊಂದಿರುವ ಪಾಕಿಸ್ತಾನ ಜಾಗತಿಕವಾಗಿ ಆರನೇ ದೊಡ್ಡ ಸೇನಾಬಲವಾಗಿದೆ. ಅಣು ಅಸ್ತ್ರಗಳನ್ನು ಹೊಂದಿರುವ ಈ ರಾಷ್ಟ್ರ ಸೇನೆಯ ನಿರ್ವಹಣೆಗಾಗಿ ತನ್ನ ಆಯವ್ಯಯದ ಶೇಕಡಾ 20ರಷ್ಟನ್ನು ಮೀಸಲಿಡಬೇಕಾದ ಹಂತ ತಲುಪಿದೆ. ಪಾಕಿಸ್ತಾನವು ಸೇನಾ ಶಸ್ತ್ರಾಸ್ತ್ರ ಹಾಗೂ ಉಪಕರಣಗಳಿಗಾಗಿ ಅಮೆರಿಕ ಹಾಗೂ ಚೀನಾವನ್ನು ಆಧರಿಸಿದೆ. ಪಾಕಿಸ್ತಾನ ಇಂತಹ ಭಾರೀ ಮೊತ್ತದ ಸೇನಾ ವೆಚ್ಚಗಳನ್ನು ಭರಿಸುವ ಆರ್ಥಿಕತೆಯನ್ನು ಬೆಳಸಿಕೊಂಡಿಲ್ಲ.
ಪಾಕಿಸ್ತಾನ ಮುಸ್ಲಿಮ್ ಗಣರಾಜ್ಯವೆಂದು ತನ್ನನ್ನು 1956ರಲ್ಲೇ ಘೋಷಿಸಿಕೊಂಡಿದೆ. ಇಸ್ಲಾಮ್ ಅದರ ರಾಷ್ಟ್ರೀಯ ಧರ್ಮವೆಂದು ಸಾಂವಿಧಾನಿಕ ಮಾನ್ಯತೆ ಸಿಕ್ಕಿದೆ. ಅದರೆ ಅದೇ ಸಂವಿಧಾನದ ಪ್ರಕಾರ ಯಾರು ಬೇಕಾದರೂ ಅವರ ನಂಬಿಕೆಯ ಧರ್ಮವನ್ನು ಪಾಲಿಸಲು ಅವಕಾಶ ಕಲ್ಪಿಸಲಾಗಿದೆ. ಪಾಕಿಸ್ತಾನದಲ್ಲಿ ಮುಸ್ಲಿಮರು ಶೇ. 96.47ರಷ್ಟಿದ್ದರೆ, ದಲಿತರು, ಸಿಖ್ಖರು, ಫಶ್ತೂನರು, ಸಿಂಧಿಗಳು, ಸಾರೈಕಾಗಳು, ಮುಹಾಜಿರ್ಗಳು, ಬಲೂಚಿಗಳು ಹಾಗೂ ಇತರ ಜಾತಿಯ ಜನರು ಅಲ್ಲಿನ ಜನಸಂಖ್ಯೆಯ ಶೇಕಡಾ 2.16ರಷ್ಟಿದ್ದಾರೆ. ಕ್ರಿಶ್ಚಿಯನ್ ಸಮುದಾಯದವರು ಶೇಕಡಾ 1.27ರಷ್ಟಿದ್ದಾರೆ. ಅಹಮದೀಯ ಎಂಬ ಪಂಗಡ 0.9ರಷ್ಟಿದೆ. ದಲಿತರನ್ನು ಅಲ್ಲಿ ಅಸ್ಪೃಶ್ಯರನ್ನಾಗಿಟ್ಟು, ಬಹಳ ಕೀಳಾಗಿ ನೋಡಲಾಗುತ್ತಿದೆ. ಅವರ ದುಡಿಮೆಯನ್ನು ದೋಚಲಾಗುತ್ತಿದೆ. 2013ರ ದಲಿತ್ ಸಾಲಿಡಾರಿಟಿ ನೆಟ್ವರ್ಕ್ ಎಂಬ ಅಂತರ್ರಾಷ್ಟ್ರೀಯ ಸಂಸ್ಥೆ ನಡೆಸಿದ ಅಧ್ಯಯನದಂತೆ ದಲಿತರು ಅಲ್ಲಿ 3,30,000 ಜನರಿದ್ದಾರೆ. ಇದು ಅಲ್ಲಿನ ಒಟ್ಟು ಜನಸಂಖ್ಯೆಯ ಶೇಕಡಾ 0.25ರಷ್ಟಾಗಿದೆ. ಇದು ಸರಿಯಾಗಿರುವ ಅಂಕಿ-ಅಂಶವೆಂದು ಭಾವಿಸುವ ಅಗತ್ಯವಿಲ್ಲ. ಯಾಕೆಂದರೆ ಸಿಖ್ ಹಾಗೂ ಮುಸ್ಲಿಮರಲ್ಲೂ ದಲಿತ ಪಂಗಡಗಳಿವೆ. ಅವರನ್ನೆಲ್ಲಾ ಈ ಅಧ್ಯಯನ ಒಳಗೊಂಡಂತೆ ಕಾಣುತ್ತಿಲ್ಲ.
ಅಲ್ಲಿನ ಊಳಿಗಮಾನ್ಯತೆ ಇಸ್ಲಾಮ್ ಧರ್ಮವನ್ನು ತನ್ನ ಹಿತಾಸಕ್ತಿಗಳಿಗೆ ಬಳಸಿಕೊಳ್ಳುತ್ತಾ ಬರುತ್ತಿದೆ. ಅಲ್ಲಿನ ಆಳುವ ವರ್ಗ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಜೊತೆಗೆ ಅವರ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಬಿಕ್ಕಟ್ಟಿನ ಸಂದರ್ಭಗಳಲ್ಲೆಲ್ಲಾ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿ ಮಾಡುತ್ತಾ ಬಂದಿದೆ. ಅಲ್ಲಿ ಆಳುತ್ತಾ ಬಂದ ಸರಕಾರಗಳು ಭಾರತವನ್ನು ತನ್ನ ದೇಶದ ಜನಸಾಮಾನ್ಯರಿಗೆ ಭಾರೀ ಬೆದರಿಕೆಯಾಗಿದೆ ಎಂದೆಲ್ಲಾ ಬಿಂಬಿಸುತ್ತಾ, ಯುದ್ಧ ಸನ್ನಿಯನ್ನೂ ಕೂಡ ಹುಟ್ಟುಹಾಕುತ್ತಾ ಅಲ್ಲಿನ ಪ್ರಮುಖ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ತಿರುಗಿಸುವ ಕಾರ್ಯಗಳನ್ನು ಮಾಡುತ್ತಾ ಬರುತ್ತಿವೆ. ಚುನಾವಣಾ ಸಂದರ್ಭದಲ್ಲಿ ಜಾಗತಿಕ ಹಣಕಾಸು ಸಂಸ್ಥೆಗಳ ನಿಬಂಧನೆಗಳನ್ನು ಒಪ್ಪಿಕೊಳ್ಳುವುದಿಲ್ಲ, ದೇಶವನ್ನು ಜಾಗತಿಕ ಕಾರ್ಪೊರೇಟ್ಗಳ ಕೈಗೆ ಒಪ್ಪಿಸುವುದಿಲ್ಲ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ ಎಂದೆಲ್ಲಾ ಭರವಸೆಯ ಭಾಷಣಗಳನ್ನು ಮಾಡಿದ್ದ, ಉದಾರವಾದಿಯಂತೆ ತೋರಿಸಿಕೊಂಡಿದ್ದ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ನಂತರ ವರ್ತಿಸಿದ್ದು ಮಾತ್ರ ಅದಕ್ಕೆ ತದ್ವಿರುದ್ಧವಾಗಿ. ಅವರು ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸಾಲನಿಬಂಧನೆಗಳನ್ನು ಚಾಚು ತಪ್ಪದೆ ಪಾಲಿಸುತ್ತಾ ದೇಶವನ್ನು ಹೆಚ್ಚು ಜಾಗತಿಕ ಕಾರ್ಪೊರೇಟ್ಗಳ ಕೈಗೆ ದಾಟಿಸುತ್ತಾ ಹೋದರು. ದೇಶದ ಹಣದುಬ್ಬರ, ನಿರುದ್ಯೋಗಗಳು ಹೆಚ್ಚುತ್ತಾ ಹೋಗಿ ವಿದೇಶಿ ವಿನಿಮಯ ಮೀಸಲು ಕನಿಷ್ಠ ಮಟ್ಟ ತಲುಪಿ ಕಳೆದ ತಿಂಗಳಲ್ಲಿ ಕೇವಲ ಎರಡು ತಿಂಗಳುಗಳ ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳುವಷ್ಟು ವಿದೇಶಿ ಮೀಸಲು ತಲುಪಿತ್ತು.
ಇವೆಲ್ಲದರಿಂದಾಗಿ ಜನರ ಪ್ರತಿರೋಧ ಹೆಚ್ಚಾಗತೊಡಗಿದಾಗ ಐಎಂಎಫ್ ನಿಬಂಧನೆಗಳ ವಿರುದ್ಧವಾಗಿ ತೈಲ ಹಾಗೂ ವಿದ್ಯುತ್ ಬೆಲೆಯನ್ನು ಇಳಿಸಿ ಜನಾಕ್ರೋಶಗಳನ್ನು ಸಮಾಧಾನಪಡಿಸಿ ತಮ್ಮ ಪ್ರಧಾನಿ ಪಟ್ಟವನ್ನು ಉಳಿಸಿಕೊಳ್ಳಲು ಹೆಣಗಿದರು. ಆದರೆ ಈ ಕ್ರಮಗಳನ್ನು ಐಎಂಎಫ್ ನೇರವಾಗಿಯೇ ಟೀಕೆಗೆ ಗುರಿಮಾಡಿ ತನ್ನ ಶರತ್ತುಗಳನ್ನು ಜಾರಿಗೊಳಿಸುವಲ್ಲಿ 'ಒಂದು ಹೆಜ್ಜೆ ಮುಂದಿಟ್ಟಂತೆ ಮಾಡಿ ಎರಡು ಹೆಜ್ಜೆ ಹಿಂದಡಿಯಿಟ್ಟಿದೆ ಇಮ್ರಾನ್ ಖಾನ್ ಸರಕಾರ' ಎಂದಿತ್ತು. ನಂತರ ಇಮ್ರಾನ್ ಖಾನ್ ಸರಕಾರವನ್ನು ಪದಚ್ಯುತಗೊಳಿಸುವ ಕಾರ್ಯ ಬಿರುಸು ಪಡೆಯಲಾರಂಭಿಸಿತು. ಸರಕಾರದೊಂದಿಗೆ ಇದ್ದ ಮಿತ್ರಪಕ್ಷಗಳು ಹಾಗೂ ವಿರೋಧ ಪಕ್ಷಗಳನ್ನೂ ಈ ಕಾರ್ಯಕ್ಕಾಗಿ ಜಾಗತಿಕ ಕಾರ್ಪೊರೇಟುಗಳು ಹಾಗೂ ಅವರ ಹಣಕಾಸು ಸಂಸ್ಥೆಗಳು ಹಲವಾರು ವಿಧಗಳಲ್ಲಿ ಬಳಸಿಕೊಂಡವು. ಅದೀಗ ಕೊನೆಯ ಹಂತ ತಲುಪಿದೆ. ಇಮ್ರಾನ್ ಖಾನ್ ಅವಧಿಯಲ್ಲಿ ಚೀನಾ ಹಾಗೂ ರಶ್ಯದೊಂದಿಗೆ ಹೆಚ್ಚಿನ ಸಂಬಂಧಗಳನ್ನು ಬೆಳೆಸಿಕೊಳ್ಳುವತ್ತ ಸಾಗಿತ್ತು ಪಾಕಿಸ್ತಾನ. ಉಕ್ರೇನ್ ಮೇಲಿನ ರಶ್ಯದ ನೇರ ಆಕ್ರಮಣದ ವಿಚಾರದಲ್ಲಿ ಅಮೆರಿಕ ಪರವಾಗಿ ಇಮ್ರಾನ್ ಖಾನ್ ಸರಕಾರ ನಿಲ್ಲಲಿಲ್ಲ. ಉಕ್ರೇನ್ ಆಕ್ರಮಣ ಕುರಿತಾದ ವಿಶ್ವಸಂಸ್ಥೆಯ ಖಂಡನಾ ನಿರ್ಣಯದಲ್ಲೂ ಮತ ನೀಡುವುದರಿಂದ ಹೊರಗೆ ಉಳಿದಿತ್ತು. ಈ ಕ್ರಮಗಳು ಕೂಡ ಅಮೆರಿಕದ ಅತೃಪ್ತಿಗೆ ಕಾರಣವಾಗಿದ್ದವು. ವಿಶ್ವ ಬ್ಯಾಂಕ್ ಹಾಗೂ ಅಂತರ್ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗಳಂತಹ ಜಾಗತಿಕ ಹಣಕಾಸು ಸಂಸ್ಥೆಗಳು ಬಹುತೇಕವಾಗಿ ಅಮೆರಿಕದ ಹಿಡಿತದಲ್ಲೇ ಇವೆಯೆಂಬುದನ್ನೂ ನಾವಿಲ್ಲಿ ಗಮನಿಸಬೇಕು.
ಪಾಕಿಸ್ತಾನದಲ್ಲಿ ಈಗ ನಿರುದ್ಯೋಗದ ಪ್ರಮಾಣ ಏರುತ್ತಲೇ ಹೋಗುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ವಿಪರೀತವಾಗಿ ಏರುತ್ತಿದೆ. ಹಣದುಬ್ಬರ ಎರಡಂಕಿಯನ್ನು ದಾಟಿ ಮುನ್ನಡೆಯುತ್ತಿದೆ. ಜೊತೆಗೆ ಕೊರೋನ ಮೂಲಕ ಮಾಡಿದ ಬಿಕ್ಕಟ್ಟು ಹಾಗೂ ಉಕ್ರೇನ್ ಬಿಕ್ಕಟ್ಟುಗಳ ನೇರ ಹಾಗೂ ಅಡ್ಡ ಪರಿಣಾಮಗಳು ಸೇರಿಕೊಂಡು ಪರಿಸ್ಥಿತಿ ಬಿಗಡಾಯಿಸಿ ಬಿಟ್ಟಿದೆ. ಇವೆಲ್ಲದರ ಪರಣಾಮವಾಗಿ ಆ ದೇಶದಲ್ಲಿ ರಾಜಕೀಯ ಅಸ್ಥಿರತೆ ಕಾಣಿಸಿಕೊಂಡಿದೆ. ಅಲ್ಲಿನ ಸೇನಾ ಮುಖ್ಯಸ್ಥರು ನೇರವಾಗಿಯೇ ಅಮೆರಿಕ ಪರವಾದ ನಿಲುವುಗಳಿಂದ ಮಾತನಾಡತೊಡಗಿದ್ದಾರೆ. ಸರಕಾರದ ಉಕ್ರೇನ್ ಬಿಕ್ಕಟ್ಟಿನ ಕುರಿತಾದ ನಿಲುವಿಗೂ ಭಿನ್ನವಾಗಿ ಮಾತನಾಡತೊಡಗಿದ್ದಾರೆ. ಅಮೆರಿಕ ಮತ್ತು ನ್ಯಾಟೊ ಇದೇ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದ ಮೇಲಿನ ಚೀನಾದ ಪ್ರಭಾವವನ್ನು ಕಡಿಮೆಗೊಳಿಸಿ ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ತಿರುಗಿಸಿಕೊಳ್ಳುವ ಪ್ರಯತ್ನ ಶುರುವಿಟ್ಟಿದೆ. ಅದಕ್ಕಾಗಿ ಪಾಕಿಸ್ತಾನಕ್ಕೆ ತಮ್ಮ ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೂಲಕ ಕಠಿಣ ನಿಬಂಧನೆಗಳ ಸಾಲ ನೀಡಲು ಮುಂದಾಗಿವೆ. ಆದರೆ ಈಗಾಗಲೇ ಅಂತರ್ರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸಾಲಕ್ಕಾಗಿ ಇಮ್ರಾನ್ ಖಾನ್ ಸರಕಾರ ಪ್ರಯತ್ನ ನಡೆಸಿದ್ದರೂ ಅದು ಸಫಲವಾಗದೆ ಹೋಗಿದೆ. ಇಮ್ರಾನ್ ಖಾನ್ರ ಸರಕಾರ ಬದಲಾಗದೆ ಐಎಂಎಫ್ ಹಣಕಾಸು ಸಾಲ ಸಿಗದು, ಐಎಂ ಎಫ್ ಸಾಲ ದೊರೆಯದೆ ದೇಶ ಮುನ್ನಡೆಸಲು ಆಗದು ಎಂಬಂತಹ ಪರಿಸ್ಥಿತಿ ನಿರ್ಮಿಸಲಾಗಿದೆ. ಹಾಗಾಗಿ ಇಮ್ರಾನ್ ಖಾನ್ ಸರಕಾರಕ್ಕೆ ಇದ್ದ ಬೆಂಬಲ ಬಿದ್ದುಹೋಗಿದೆ.
ಸದ್ಯಕ್ಕೆ ಇಮ್ರಾನ್ ಖಾನ್ ಸರಕಾರ ಬಿದ್ದಿದೆ. ಈಗ ಚುನಾವಣೆಯ ಮೂಲಕ ಹೊಸ ಸರಕಾರ ಬಂದರೂ ಬರಬಹುದು. ಅದು ಸಫಲವಾಗದೆ ಹೋದರೆ ಇಲ್ಲವೇ ಬಿಕ್ಕಟ್ಟನ್ನು ಮುಂದೆ ಮಾಡಿ ನೇರವಾಗಿ ಸೇನಾಡಳಿತ ಜಾರಿಗೆ ಬರುವ ಸಾಧ್ಯತೆಗಳು ಕೂಡ ಇವೆ. ಶ್ರೀಲಂಕಾ ನಂತರ ಈಗ ಪಾಕಿಸ್ತಾನದಲ್ಲಿನ ಬೆಳವಣಿಗೆಗಳು ವಿಶ್ವ ಸಂಸ್ಥೆ, ಐಎಂಎಫ್ ಮೊದಲಾದ ಜಾಗತಿಕ ಹಣಕಾಸು ಸಂಸ್ಥೆಗಳ ಮೂಲಕ ಅಮೆರಿಕ, ಯುರೋಪು ಮೂಲದ ಜಾಗತಿಕ ಭಾರೀ ಕಾರ್ಪೊರೇಟ್ಗಳು ಜಗತ್ತಿನ ರಾಷ್ಟ್ರಗಳನ್ನು ಮತ್ತು ಅದರ ಸರಕಾರಗಳನ್ನು ರಚಿಸುವಲ್ಲಿ ಹಾಗೇನೇ ಬೀಳಿಸುವಲ್ಲಿ, ಆಡಳಿತಗಳಲ್ಲಿ ಹೇಗೆಲ್ಲಾ ನಿಯಂತ್ರಣ ಸಾಧಿಸುತ್ತವೆ. ಚುನಾವಣೆಗಳು ಹಾಗೂ ಜನರ ಮತ ನೀಡುವಿಕೆಗಳೆಲ್ಲಾ ಕೇವಲ ತೋರುಗಾಣಿಕೆಯ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನಾಗಿ ಮಾಡುತ್ತಾ ಜನಸಾಮಾನ್ಯರ ಕಣ್ಣಿಗೆ ಹೇಗೆಲ್ಲಾ ಮಣ್ಣೆರಚುತ್ತಾ ಬರಲಾಗುತ್ತಿದೆ ಎನ್ನುವುದಕ್ಕೆ ಇತ್ತೀಚಿನ ಕೆಲವು ಉದಾಹರಣೆಗಳಾಗಿವೆ. ಶ್ರೀಲಂಕಾ, ಪಾಕಿಸ್ತಾನದಂತಹ ಬಿಕ್ಕಟ್ಟಿನ ಬೆಳವಣಿಗೆಗಳು ಈಗ ನಮ್ಮ ದೇಶವೂ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ನಡೆಯತೊಡಗಿವೆ.
ಮಿಂಚಂಚೆ: nandakumarnandana67@gmail.com