ಗ್ರಾಹಕರೊಂದಿಗಿನ ಅವಿನಾಭಾವ ಸಂಬಂಧವನ್ನು ಬಿಚ್ಚಿಡುವ ‘ವಿದ್ಯಾರ್ಥಿ ಭವನ’
ಬೆಂಗಳೂರಿನವರು ಅಷ್ಟೇ ಏಕೆ ಹೊರ ನಾಡಿನವರು, ಹೊರ ದೇಶದಲ್ಲಿರುವವರು ಕೂಡ ಬಸವನ ಗುಡಿಯ ಗಾಂಧಿ ಬಝಾರ್ನಲ್ಲಿರುವ ವಿದ್ಯಾರ್ಥಿ ಭವನದ ಬಿಸಿ ಬಿಸಿ, ಗರಿ ಗರಿ, ರುಚಿ ರುಚಿಯಾದ ಬೆಣ್ಣೆ ಮಸಾಲ ದೋಸೆಯ ಸವಿಯನ್ನು ಸವಿದವರೇ. ಬಸವನ ಗುಡಿಯ ಗಾಂಧಿ ಬಝಾರ್ನ ಮುಖ್ಯ ಭಾಗದಲ್ಲಿರುವ ಈ ವಿದ್ಯಾರ್ಥಿ ಭವನ ಸ್ವಾತಂತ್ರ ಪೂರ್ವದಿಂದ ಹುಟ್ಟಿ ಎಂಟು ದಶಕಗಳಿಂದ ಆಧುನಿಕತೆಯ ಭರಾಟೆಯಲ್ಲೂ ತಲೆಮಾರಿನ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ, ಶುಚಿ ರುಚಿ ಎರಡನ್ನೂ ಸರಿದೂಗಿಸಿಕೊಂಡು ತನ್ನತನವನ್ನು ಹಾಗೆಯೇ ಉಳಿಸಿಕೊಂಡು ಬರುತ್ತಿರುವ ಹೋಟೆಲ್.
ಇದರ ಇತಿಹಾಸದ ಗರ್ಭದಲ್ಲಿ ಬಸವನಗುಡಿಯ ಅನೇಕ ಮಹನೀಯರು ಬಂದು ಹೋಗಿರುವುದನ್ನು ನಾಟಕದಲ್ಲಿ ಸ್ಮರಿಸುತ್ತಾ, ಪರಿಚಯಿಸುತ್ತಾ ನಾಟಕ ಸಾಗುತ್ತದೆ. ಟಿ.ಪಿ. ಕೈಲಾಸಂ, ಅಡಿಗರು, ಡಿವಿಜಿ, ನಿಸಾರ್ ಅಹಮದ್, ಡಾ. ರಾಜ್ ಕುಮಾರ್, ಸಿ. ಅಶ್ವಥ್, ಇನ್ಫೋಸಿಸ್ ನಾರಾಯಣ ಮೂರ್ತಿಯವರು ಇನ್ನೂ ಅನೇಕ ಸಾಧಕರು, ಹಿರಿಯರು ಭವನದ ದೋಸೆ ಸವಿ ಸವಿಯುತ್ತಾ ಅನೇಕ ಗಹನವಾದ ವಿಚಾರಗಳನ್ನು ಚರ್ಚಿಸಿದ, ನಿರ್ಧರಿಸಿದ ಸಂದರ್ಭಗಳನ್ನು ಪ್ರಸ್ತುತಪಡಿಸುವ ರೀತಿ ಸೊಗಸಾಗಿದೆ.
ಗಾಂಧಿ ಬಝಾರ್ ಕೇವಲ ಒಂದು ಸಾಧಾರಣ ಮಾರುಕಟ್ಟೆ ಅಲ್ಲ, ಅದು ಅನೇಕ ಜನರ ಜೀವನದ ಆಧಾರವಾಗಿರುವುದರ ಜೊತೆಗೆ ಅಲ್ಲಿ ನಡೆದಿರುವ ಅನೇಕ ಘಟನೆಗಳ, ಭಾವನಾತ್ಮಕ ಸಂಬಂಧಗಳ ಬೆಸುಗೆ ಎನ್ನುವುದನ್ನು ತೋರಿಸಿರುವ ಪರಿ ಅಚ್ಚರಿ ಮೂಡಿಸುತ್ತದೆ. ವಿದ್ಯಾರ್ಥಿ ಭವನದ ಇತಿಹಾಸದ ಕತೆಗಳನ್ನು ತಿಳಿಸುತ್ತಾ ಗ್ರಾಹಕರಿಗೂ ಭವನಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಬಿಚ್ಚಿಡುತ್ತದೆ. ಅತಿ ಸಣ್ಣ ಪಾತ್ರದಿಂದ ಮುಖ್ಯ ಪಾತ್ರಧಾರಿಗಳ ವರೆಗೆ ಎಲ್ಲರೂ ತಮ್ಮ ತಮ್ಮ ನಟನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮಧ್ಯೆ ಮಧ್ಯೆ ಬರುವ ಸುಶ್ರಾವ್ಯ ಸಂಗೀತ, ಹಾಡುಗಾರಿಕೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಅದರಲ್ಲೂ ಗಾಂಧಿ ಬಝಾರ್ ಬಗ್ಗೆ ಹಾಡುವ ಹಾಡು ಕೇಳಲು ಖುಷಿ ಕೊಡುತ್ತದೆ. ನಾಟಕದುದ್ದಕ್ಕೂ ಅಲ್ಲಲ್ಲಿ ತಿಳಿಯಾದ ನವಿರಾದ ಹಾಸ್ಯ ನಾಟಕದ ಹಿರಿಮೆಯನ್ನು ಹೆಚ್ಚಿಸಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಮಾಧ್ಯಮ ಲೋಕದ ಅದರಲ್ಲೂ ದೃಶ್ಯ ಮಾಧ್ಯಮಗಳು ಟಿಆರ್ಪಿ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಹಿಡಿತ ತಪ್ಪಿಆಡುವ ಭಾಷೆ, ದ್ವಂದ್ವಾರ್ಥ ಕೊಡುವ ಜೋಕುಗಳು, ಅರೆ ಬೆಂದ ಮಡಿಕೆಯಂತೆ ಪರಿಪೂರ್ಣತೆ ಇಲ್ಲದೆ, ಟಿ.ವಿ. ಮುಂದೆ ನಾಲ್ಕು ಗೋಡೆಗಳ ಮಧ್ಯೆ ಕೂತ ವೀಕ್ಷಕರಿಗೆ ಕಿರಿ ಕಿರಿ ಮಾಡುವ ಇಂದಿನ ದಿನಗಳಲ್ಲಿ ಅಪರೂಪಕ್ಕೆಂಬಂತೆ ಒಂದು ಉತ್ತಮ ನಾಟಕ ನೋಡಲು ಸಿಕ್ಕಿದ್ದು ನಿಜಕ್ಕೂ ಸಂತೋಷದ ವಿಷಯವೇ. ಇದು ನಗರದ ಒತ್ತಡದ ಬದುಕಿನಲ್ಲೊಂದು ಬದಲಾವಣೆಯನ್ನು ನೀಡುತ್ತದೆ. ಸದಾ ಗಿಜಿಗಿಡುವ ವಿದ್ಯಾರ್ಥಿ ಭವನ ಹೋಟೆಲ್ನಲ್ಲಿ ದೋಸೆಯನ್ನು ಬಯಸಿ ಉದ್ದುದ್ದ ಸರತಿ ಸಾಲಿನಲ್ಲಿ ನಿಂತು ಆರ್ಡರ್ ಮಾಡುವ ಗ್ರಾಹಕರಿಗೆ ಅದೆಷ್ಟು ಸಲ ಬಿಸಿ ಕಾವಲಿಯ ಮೇಲೆ ಹಪ ಹಪಿಸಿ ತನ್ನನ್ನು ತಾನು ಸುಟ್ಟುಕೊಂಡು ಗ್ರಾಹಕರ ನಾಲಿಗೆಯ ಸವಿಗೆ ಒಡ್ಡಿಕೊಳ್ಳಬೇಕು ಎನ್ನುವುದನ್ನು ಖ್ಯಾತ ನಟರಾದ ಸಿಹಿ ಕಹಿ ಚಂದ್ರು ಅವರು ತಮ್ಮ ಅನುಭವದ ನಟನೆಯಿಂದ ನಾಟಕವನ್ನು ಗೆಲ್ಲಿಸಿದ್ದಾರೆ. ದೋಸೆಯ ಪಾತ್ರ ಅವರಿಗಾಗಿಯೇ ಸೃಷ್ಟಿಯಾದ ಪಾತ್ರ ಎನಿಸುತ್ತದೆ. ವಿದ್ಯಾರ್ಥಿ ಭವನದ ಅರುಣ್ ಕುಮಾರ್ ಅಡಿಗ ಅವರ ಸಹಮತಿ, ಸಹಕಾರದೊಂದಿಗೆ ಬೆಂಗಳೂರು ಥಿಯೇಟರ್ ಫೌಂಡೇಷನ್ ಸಹೋಗದೊಂದಿಗೆ ವಿದ್ಯಾರ್ಥಿ ಭವನ ತಂಡ ಮೇ 6, 7, 8 ಮೂರು ದಿನಗಳ ಕಾಲ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶಿಸಿದ ವಿದ್ಯಾರ್ಥಿ ಭವನ ನಾಟಕವನ್ನು ಖ್ಯಾತ ನಾಟಕ ರಚನೆಕಾರರಾದ ಶ್ರೀ ರಾಜೇಂದ್ರ ಕಾರಂತ್ ಅವರು ರಚಿಸಿದ್ದರೆ, ಶ್ರೀ ಅರ್ಜುನ್ ಕಬ್ಬಿಣ ಅವರು ನಿರ್ದೇಶಿಸಿದ್ದಾರೆ.. ಒಟ್ಟಿನಲ್ಲಿ ಒತ್ತಡದ ಬದುಕಿನ ನಡುವೆ ಈ ನಾಟಕ ನೋಡುಗರನ್ನು ಸ್ವಲ್ಪಮಟ್ಟಿಗಾದರೂ ಸಂತಸದಿಂದ ಇಟ್ಟಿದ್ದರಲ್ಲಿ ಸಂದೇಹವೇ ಇಲ್ಲ.