ದೂರುದಾರರೇ ಅಪರಾಧಿಗಳಾಗಿ ಏಕೆ ಬಿಂಬಿಸಲ್ಪಡುತ್ತಿದ್ದಾರೆ?
ಹಿಮಾಂಶುಕುಮಾರ್ರ ಮೇಲಿನ ನ್ಯಾಯಾಂಗದ ಈ ತೀರ್ಪು ಹಲವಾರು ವಲಯಗಳಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಇದು ಸರಕಾರಿ ಪಡೆಗಳ ಉತ್ತರದಾಯಿತ್ವವನ್ನು ನಗಣ್ಯಗೊಳಿಸುವ, ಸರಕಾರಿ ಪಡೆಗಳ ಕಾನೂನುಬಾಹಿರ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ತೀರ್ಪಾಗಿದೆ ಎಂದು ಮಾನವಹಕ್ಕು ಹಾಗೂ ಕಾನೂನು ವಲಯಗಳು ವ್ಯಾಖ್ಯಾನಿಸಿವೆ. ಈ ಕುರಿತು ಹಲವಾರು ಸಭೆಗಳು, ಕೆಲವು ಪ್ರತಿಭಟನೆಗಳು ನಡೆದಿವೆ. ಅಲ್ಲದೆ ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಗೆ ಭಾರೀ ಧಕ್ಕೆ ನೀಡುವ ತೀರ್ಪು ಎಂದು ಕೂಡ ಇದನ್ನು ಬಣ್ಣಿಸಲಾಗುತ್ತಿದೆ.
ಇತ್ತೀಚೆಗೆ ಇಂಡಿಯಾದ ಸರ್ವೋಚ್ಚ ನ್ಯಾಯಾಲಯ ಬಹಳ ಗಂಭೀರವಾಗಿ ಚಿಂತಿಸಬೇಕಾದ ಪ್ರಕರಣಕ್ಕೆ ಕಾರಣವಾಯಿತು. ಇದೇ ಜುಲೈ 14ರಂದು ಛತ್ತೀಸ್ಗಡದಲ್ಲಿ ಆದಿವಾಸಿ ಜನಸಮೂಹದ ನಡುವೆ ಇದ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಹಿಮಾಂಶುಕುಮಾರ್ ಮತ್ತು ಇತರ 12 ಜನರೊಂದಿಗೆ ದಾಖಲಿಸಿದ್ದ ಮೇಲ್ಮನವಿಯನ್ನು ರದ್ದುಗೊಳಿಸಿತು. ಅಷ್ಟೇ ಅಲ್ಲದೆ ಅವರಿಗೆ 5 ಲಕ್ಷ ರೂಪಾಯಿಗಳ ದಂಡವನ್ನು ನಿಗದಿತ ಸಮಯದೊಳಗೆ ಪಾವತಿಸಬೇಕೆಂದು ತಾಕೀತು ಮಾಡಿ ತೀರ್ಪು ನೀಡಿತು. ಜೊತೆಗೆ ತನ್ನ ತೀರ್ಪಿನಲ್ಲಿ ಛತ್ತೀಸ್ಗಡ ಸರಕಾರಕ್ಕೆ ರಕ್ಷಣಾ ದಳಗಳು ಹಾಗೂ ಪೊಲೀಸರ ಮೇಲೆ ತಪ್ಪುದೂರು ದಾಖಲಿಸಿದ್ದಕ್ಕೆ ಮತ್ತು ಕ್ರಿಮಿನಲ್ ಕುತಂತ್ರ ಹೂಡಿದ್ದಕ್ಕೆ ಇವರ ಮೇಲೆ ದೇಶದ ದಂಡಪ್ರಕ್ರಿಯಾ ಸಂಹಿತೆಯ ವಿವಿಧ ಕಲಮುಗಳಡಿ ಕ್ರಮ ಕೈಗೊಳ್ಳಬಹುದೆಂಬ ಸಲಹೆಯನ್ನೂ ಕೂಡ ತೀರ್ಪಿನ ಭಾಗವಾಗಿ ನೀಡಿತು. ಹಿಮಾಂಶುಕುಮಾರ್ ಬಂಧನಕ್ಕೆ ಒಳಗಾಗಬಹುದಾದ ಸಾಧ್ಯತೆಗಳಿವೆ.
ಹಿಮಾಂಶುಕುಮಾರ್ ಛತ್ತೀಸ್ ಗಡದ ಅತ್ಯಂತ ಹಿಂದುಳಿದ ಪ್ರದೇಶವಾದ ದಂತೇವಾಡದಲ್ಲಿ ಅಲ್ಲಿನ ಮೂಲನಿವಾಸಿ ಬುಡಕಟ್ಟು ಜನರೊಂದಿಗೆ ತಮ್ಮ ಸರಕಾರೇತರ ಸಂಸ್ಥೆಯಾದ ವನವಾಸಿ ಚೇತನಾ ಆಶ್ರಮ್ನ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಗಾಂಧಿವಾದಿಯಾದ ಹಿಮಾಂಶುಕುಮಾರ್ ಆ ಜನರಿಗೆ ಹಕ್ಕುಗಳ ಕುರಿತು, ಅವರಿಗೆ ಇರುವ ಸರಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಅವರಿಗೆ ಶಿಕ್ಷಣ ನೀಡುವುದು, ಸಾರ್ವಜನಿಕ ಪಡಿತರ ಸಿಗುವಂತೆ ಮಾಡುವುದು, ಆರೋಗ್ಯದ ಬಗ್ಗೆ ತಿಳುವಳಿಕೆ ಕೊಡುವುದು, ಔಷಧಿಗಳನ್ನು ಸರಬರಾಜು ಮಾಡುವುದು, ಮತ ನೀಡುವ ವಿಧಾನ ಇತ್ಯಾದಿಗಳನ್ನು ಹೇಳಿಕೊಡುತ್ತಾ ಆದಿವಾಸಿ ಸಮುದಾಯಗಳ ನಡುವೆ ಹಲವಾರು ಸುಧಾರಣೆಗಳನ್ನು ತರುವ ಕಾರ್ಯ ಮಾಡಿದ್ದರು. ಅಲ್ಲದೆ ಸರಕಾರದ ಹಲವು ಯೋಜನೆಗಳ ಜಾರಿಗಾಗಿನ ಸರಕಾರದ ಅಧಿಕೃತ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸಿದ್ದವರು. ಭಾರೀ ಕಾರ್ಪೊರೇಟ್ ಹಾಗೂ ಸರಕಾರಗಳ ದಾಳಿಗಳಿಂದ ತಮ್ಮ ಬದುಕು ಹಾಗೂ ಭೂಮಿಗಳನ್ನು ರಕ್ಷಿಸಿಕೊಳ್ಳಲು ಹೋರಾಡತೊಡಗಿದ ಬುಡಕಟ್ಟು ಜನಸಮುದಾಯಗಳ ಮೇಲೆ ಸರಕಾರ ಮತ್ತದರ ಸಶಸ್ತ್ರಪಡೆಗಳು ಬೆದರಿಕೆ, ಸುಳ್ಳು ದೂರುಗಳು, ಹಲ್ಲೆ, ಕಗ್ಗೊಲೆಗಳನ್ನು ನಡೆಸತೊಡಗಿದಾಗ ಅದನ್ನು ಮಾನವ ಹಕ್ಕು ಹಾಗೂ ಬದುಕುವ ಹಕ್ಕು ಮತ್ತು ನ್ಯಾಯಗಳನ್ನು ರಕ್ಷಿಸುವ ನೆಲೆಯಲ್ಲಿ ಹಿಮಾಂಶುಕುಮಾರ್ ಪ್ರಶ್ನಿಸತೊಡಗಿದರು. ಆಗಿನಿಂದ ಸರಕಾರ ಹಿಮಾಂಶುಕುಮಾರ್ರ ಮೇಲೆ ಪ್ರತೀಕಾರ ಕ್ರಮಗಳಿಗೆ ಇಳಿಯಿತು. ಅವರ ಸರಕಾರೇತರ ಸಂಸ್ಥೆಯಾದ ವನವಾಸಿ ಚೇತನಾ ಆಶ್ರಮದ ಚಟುವಟಿಕೆಗಳನ್ನು ನಿರ್ಬಂಧಿಸಲು ಬೇರೆ ಬೇರೆ ರೀತಿಗಳಲ್ಲಿ ಪ್ರಯತ್ನಿಸತೊಡಗಿತು. ಬೆದರಿಕೆಗಳನ್ನು ಒಡ್ಡತೊಡಗಿತು. ಅವರ ಆಶ್ರಮದ ಮೇಲೆ ಹಲವು ನೆಪ ಹಿಡಿದು ದಾಳಿಗಳನ್ನು ನಡೆಸತೊಡಗಿತು. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕಾಲದಲ್ಲಿ ಛತ್ತೀಸ್ಗಡ ಸರಕಾರ ‘ಸೆಲ್ವಜುಡುಂ’ ಎಂಬ ಸರಕಾರೇತರ ಸಶಸ್ತ್ರ ಪಡೆಯನ್ನು ಸಂಘಟಿಸಿ ಆದಿವಾಸಿಗಳನ್ನು ಆದಿವಾಸಿಗಳ ಮೇಲೆಯೇ ಎತ್ತಿಕಟ್ಟಿ ಶಸ್ತ್ರ ಕೊಟ್ಟು ಯುದ್ಧಕ್ಕಿಳಿಸಿತು. ಅದು ದೊಡ್ಡ ಮಟ್ಟದ ವಿರೋಧಗಳನ್ನು ಹುಟ್ಟುಹಾಕಿತ್ತು. ಆನಂತರ ಆಗಿನ ಗೃಹಸಚಿವ ಚಿದಂಬರಂ ನೇತೃತ್ವದಲ್ಲಿ ‘ಆಪರೇಷನ್ ಗ್ರೀನ್ ಹಂಟ್’ ಹೆಸರಿನ ಕಾರ್ಯಾಚರಣೆಯನ್ನು ಅಲ್ಲಿನ ಮಾವೋವಾದಿ ನಕ್ಸಲೀಯ ಹೋರಾಟವನ್ನು ಹತ್ತಿಕ್ಕಲು ನಡೆಸತೊಡಗಿತು. ಆಗೆಲ್ಲಾ ಸರಕಾರಿ ಪಡೆಗಳು ಕಾನೂನು ಬಾಹಿರವಾಗಿ ಅಮಾಯಕರನ್ನು ಬಂಧಿಸುವುದು, ಚಿತ್ರಹಿಂಸೆಗೆ ಒಳಪಡಿಸುವುದು, ಮಹಿಳೆಯರ ಮೇಲೆ ಅತ್ಯಾಚಾರ, ಚಿತ್ರಹಿಂಸೆಗಳನ್ನು ಮಾಡುವುದು, ಎನ್ಕೌಂಟರ್ ಹೆಸರಿನಲ್ಲಿ ಆದಿವಾಸಿಗಳನ್ನು ಕಗ್ಗೊಲೆ ಮಾಡುವುದು ವಿಪರೀತವಾಗತೊಡಗಿತ್ತು. ಸಾವಿರಾರು ಆದಿವಾಸಿ ಜನಸಮೂಹವನ್ನು ಕರಾಳ ಯುಎಪಿಎ ಕಾಯ್ದೆಯಡಿ ಬಂಧಿಸುತ್ತಾ ಕಾರಾಗೃಹಗಳಿಗೆ ತಳ್ಳತೊಡಗಿದರು. ಎನ್ಕೌಂಟರ್ ಹೆಸರಿನ ನೂರಾರು ಕಗ್ಗೊಲೆಗಳು ನಡೆಯತೊಡಗಿದವು. ಅಂತಹವುಗಳನ್ನು ಹಿಮಾಂಶುಕುಮಾರ್ ಪ್ರಶ್ನಿಸಿ ನ್ಯಾಯಾಂಗದ ಕಟ್ಟೆ ಹತ್ತಿದರು. ಜೊತೆಗೆ ಮಾನವ ಹಕ್ಕು ರಕ್ಷಣೆಗಾಗಿನ ಪ್ರತಿಭಟನೆಗಳನ್ನು ಸಂಘಟಿಸಿದ್ದರು. ಇವೆಲ್ಲದರ ಕುರಿತು ಸುಮಾರು ಆರುನೂರಕ್ಕೂ ಹೆಚ್ಚು ದಾವೆಗಳನ್ನು ನ್ಯಾಯಾಲಯಗಳಲ್ಲಿ ಹಿಮಾಂಶುಕುಮಾರ್ ಹೂಡಿದ್ದರು. ಇದರ ನೆಪದಲ್ಲಿ ಸರಕಾರ ಹಿಮಾಂಶುಕುಮಾರ್ರನ್ನು ಮಾವೋವಾದಿಯೆಂದು ಬಿಂಬಿಸತೊಡಗಿತು.
ಹತ್ತು ಹಲವು ಕಿರುಕುಳಗಳನ್ನು ನೀಡತೊಡಗಿತು. 2009 ಮೇ ತಿಂಗಳಿನಲ್ಲಿ ಸುಮಾರು 500ರಷ್ಟು ಸಶಸ್ತ್ರಪಡೆಗಳು ವನವಾಸಿ ಚೇತನಾ ಆಶ್ರಮ್ ಮೇಲೆ ದಾಳಿನಡೆಸಿ ಅದನ್ನು ನೆಲಸಮಮಾಡಿತು. ಹಿಮಾಂಶುಕುಮಾರ್ರ ಸಹಚರ ಕೊಪ ಕುಂಜಮ್ರನ್ನು ಬಂಧಿಸಲಾಯಿತು. ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 250ರಷ್ಟು ಕಾರ್ಯ ಕರ್ತರಿದ್ದರು. ಅವರೆಲ್ಲರೂ ತಮ್ಮ ಕಾರ್ಯಗಳನ್ನು ನಿಲ್ಲಿಸಬೇಕಾಯಿತು.ಇದರಿಂದಾಗಿ ದಂತೇವಾಡದ ತಮ್ಮ ಚಟುವಟಿಕೆಗಳನ್ನು ಹಿಮಾಂಶುಕುಮಾರ್ ನಿಲ್ಲಿಸಬೇಕಾಗಿ ಬಂತು. ಆನಂತರ ಅವರು ದಿಲ್ಲಿಯಲ್ಲಿ ಉಳಿದುಕೊಳ್ಳಬೇಕಾಗಿ ಬಂತು. ಅಲ್ಲಿಂದಲೇ ತಮ್ಮ ಚಟುವಟಿಕೆಗಳನ್ನು ನಡೆಸಿಕೊಂಡು ಬರತೊಡಗಿದರು. ಛತ್ತೀಸ್ಗಡ ಸರಕಾರ ಸುಮಾರು ನೂರಕ್ಕೂ ಹೆಚ್ಚು ಆರೋಪಪಟ್ಟಿಗಳಲ್ಲಿ ಹಿಮಾಂಶುಕುಮಾರ್ರನ್ನು ಆರೋಪಿಯನ್ನಾಗಿಸಿದ್ದರು. ಅವರ ಆಶ್ರಮದ ಆಸ್ತಿಯನ್ನು ವಶಪಡಿಸಿಕೊಳ್ಳುವ ಪ್ರಚಾರದೊಂದಿಗೆ ಹಿಮಾಂಶುಕುಮಾರ್ರ ಆಶ್ರಮದಲ್ಲಿದ್ದ ಹಳೆಯ ಮಂಚ, ಮುರಿದ ಕುರ್ಚಿಗಳನ್ನು ವಶಪಡಿಸಿಕೊಂಡು ಹಾಸ್ಯಾಸ್ಪದವಾಗಿ ಸರಕಾರಿ ಆಡಳಿತ ವ್ಯವಸ್ಥೆ ನಡೆದುಕೊಂಡಿತು.
ಭಾರೀ ಕಾರ್ಪೊರೇಟುಗಳ ಆಣತಿಗಳನ್ನು ಜಾರಿಗೊಳಿಸಲು ಕಾನೂನು, ಸಂವಿಧಾನ, ಪ್ರಜಾತಾಂತ್ರಿಕತೆ ಇತ್ಯಾದಿ ಎಲ್ಲವನ್ನೂ ಮೂಲೆಗೆಸೆದು ಈ ದೇಶದ ಮೂಲನಿವಾಸಿಗಳು ಇನ್ನಿತರ ಜನಸಾಮಾನ್ಯರ ಮೇಲೆ ಯಾವುದೇ ಪ್ರಮಾಣದ ದೌರ್ಜನ್ಯಗಳನ್ನು, ಕಗ್ಗೊಲೆಗಳನ್ನು, ಚಿತ್ರಹಿಂಸೆಗಳನ್ನು ನಡೆಸುವಲ್ಲಿ ಯುಪಿಎ ಸರಕಾರವಾಗಲೀ, ಎನ್ಡಿಎ ಇನ್ನಿತರ ಸರಕಾರವಾಗಲೀ ವ್ಯತ್ಯಾಸವೇನೂ ಕಾಣದು ಎನ್ನುವುದನ್ನು ಇಲ್ಲಿ ಗುರುತಿಸಬೇಕಾಗಿದೆ. ಅದಕ್ಕೆ ಸೋನಿ ಸೋರಿಯಂತಹ ಸಾವಿರಾರು ಉದಾಹರಣೆಗಳಿವೆ. ಅದನ್ನು ಗುರುತಿಸದೆ ಹೋದರೆ ಈ ದೇಶ ಇಂದು ತಲುಪಿರುವ ದುರಂತ ಸ್ಥಿತಿಯನ್ನು ಹಾಗೆಯೇ ಜನಸಾಮಾನ್ಯರ ಸಕ್ರಿಯ ರಾಜಕೀಯ ಮಧ್ಯಪ್ರವೇಶವಿಲ್ಲದೆ ನೈಜ ಪರಿಹಾರದತ್ತ ಹೊರಳಲು ಸಾಧ್ಯವಾಗದೆಂಬ ಸತ್ಯವನ್ನು ಮನಗಾಣಲು ಸಾಧ್ಯವಿಲ್ಲ.
ಇದೀಗ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಕೊಟ್ಟಿರುವ ಪ್ರಕರಣವು ನಕಲಿಯೆಂದು ಹೇಳಲಾದ ಎನ್ಕೌಂಟರ್ಗಳ ಮರುತನಿಖೆಗೆ ಸಂಬಂಧಿಸಿದ್ದಾಗಿದೆ. ಉಚ್ಚ ನ್ಯಾಯಾಲಯವು ತಮ್ಮ ಮನವಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಛತ್ತೀಸ್ಗಡದ ದಂತೇವಾಡದಲ್ಲಿನ(ಈಗ ಸುಕ್ಮಾ ಜಿಲ್ಲೆ) ಎನ್ಕೌಂಟರ್ ಹೆಸರಿನ ನ್ಯಾಯಾಂಗ ಬಾಹಿರ ಕಗ್ಗೊಲೆಗಳ ಕುರಿತು ಪ್ರತ್ಯೇಕ ತನಿಖೆ ನಡೆಸಬೇಕೆಂದು ಕೋರಿ ಹಿಮಾಂಶುಕುಮಾರ್ ಮತ್ತಿತರರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಗೊಂಪಾಡ್ ಕಗ್ಗೊಲೆಯೆಂದು ಹೆಸರಾಗಿದ್ದ ಇದು 2009ರ ಸೆಪ್ಟಂಬರ್ ಹಾಗೂ ಅಕ್ಟೋಬರ್ನಲ್ಲಿ ಗೊಂಪಾಡ್ ಹಾಗೂ ಗಾಚ್ಚನಪಲ್ಲಿ ಸುತ್ತ ಮುತ್ತ ಕನಿಷ್ಠ 17ರಷ್ಟು ಆದಿವಾಸಿಗಳನ್ನು ಕಗ್ಗೊಲೆ ಮಾಡಿದ ಪ್ರಕರಣಗಳಾಗಿದ್ದವು. ಈ ಕಗ್ಗೊಲೆಗಳ ವಿರುದ್ಧ ಹಲವಾರು ಪ್ರತಿಭಟನೆಗಳು ಕೂಡ ನಡೆದಿದ್ದವು. ಹಲವಾರು ಸತ್ಯಶೋಧನಾ ತಂಡಗಳು ವಿವರ ಸಂಗ್ರಹಿಸಿ ಈ ಎನ್ ಕೌಂಟರ್ಗಳು ನೈಜವಾದವುಗಳಲ್ಲ ಎಂದು ಹೇಳಿದ್ದವು. ಛತ್ತೀಸ್ಗಡ್ ಬಚಾವ್ ಆಂದೋಲನ ಮತ್ತು ಹಲವಾರು ರೈತ ಸಂಘಟನೆಗಳು, ಆದಿವಾಸಿ ಸಂಘಟನೆಗಳು ಇನ್ನಿತರ ಸಂಘಟನೆಗಳು ಒಗ್ಗೂಡಿ ಛತ್ತೀಸ್ಗಡದ ಈಗಿನ ಸರಕಾರವನ್ನು ಗೊಂಪಾಡ್ ಹತ್ಯಾಕಾಂಡಗಳ ಮರುತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿವೆ. ದೂರುದಾರರಲ್ಲಿ ಒಬ್ಬರಾದ ಹಿಮಾಂಶುಕುಮಾರ್ರ ಮೇಲೆ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಒತ್ತಾಯಿಸಿವೆ. ಉತ್ತರದಾಯಿತ್ವವನ್ನು ಸರಕಾರಿ ಪಡೆಗಳಿಗೂ ವಿಸ್ತರಿಸಿ ಕಾನೂನಡಿ ಎಲ್ಲರೂ ಸಮಾನರೆಂಬುದನ್ನು ಖಾತರಿಪಡಿಸಲು ಸರ್ವೋಚ್ಚ ನ್ಯಾಯಾಲಯವನ್ನು ಕೋರಿ ಪತ್ರ ಬರೆದಿವೆ.
ಹಿಮಾಂಶುಕುಮಾರ್ರ ಮೇಲಿನ ನ್ಯಾಯಾಂಗದ ಈ ತೀರ್ಪು ಹಲವಾರು ವಲಯಗಳಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಇದು ಸರಕಾರಿ ಪಡೆಗಳ ಉತ್ತರದಾಯಿತ್ವವನ್ನು ನಗಣ್ಯಗೊಳಿಸುವ, ಸರಕಾರಿ ಪಡೆಗಳ ಕಾನೂನುಬಾಹಿರ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ತೀರ್ಪಾಗಿದೆ ಎಂದು ಮಾನವಹಕ್ಕು ಹಾಗೂ ಕಾನೂನು ವಲಯಗಳು ವ್ಯಾಖ್ಯಾನಿಸಿವೆ. ಈ ಕುರಿತು ಹಲವಾರು ಸಭೆಗಳು, ಕೆಲವು ಪ್ರತಿಭಟನೆಗಳು ನಡೆದಿವೆ. ಅಲ್ಲದೆ ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಗೆ ಭಾರೀ ಧಕ್ಕೆ ನೀಡುವ ತೀರ್ಪು ಎಂದು ಕೂಡ ಇದನ್ನು ಬಣ್ಣಿಸಲಾಗುತ್ತಿದೆ. ನ್ಯಾಯ ಬಯಸಿ ನ್ಯಾಯಾಂಗದ ಬಳಿ ಹೋದಾಗ ನ್ಯಾಯಾಂಗ ದೂರುದಾರರನ್ನೇ ಅಪರಾಧಿಯಾಗಿಸಿದರೆ ಆಗುವ ಪ್ರಮಾದಗಳೇನು ಎಂಬ ಗಂಭೀರ ಚರ್ಚೆಗೆ ಮತ್ತೊಮ್ಮೆ ಕಾರಣವಾಗಿದೆ. ಹಿಮಾಂಶುಕುಮಾರ್ ತಾನು ಈ ತೀರ್ಪನ್ನು ಮನ್ನಿಸುವುದಿಲ್ಲ, ಅಲ್ಲದೆ ದಂಡವನ್ನೂ ನೀಡುವುದಿಲ್ಲ. ಒಂದುವೇಳೆ ದಂಡವನ್ನು ನೀಡಿದರೆ ಅದು ಸರಕಾರಿ ಪಡೆಗಳು ನಡೆಸಿದ ಆದಿವಾಸಿಗಳ ಕಗ್ಗೊಲೆಗಳನ್ನು ಸಮರ್ಥಿಸಿದಂತಾಗುತ್ತದೆ. ಅನ್ಯಾಯವನ್ನು ಒಪ್ಪಿಕೊಂಡಂತಾಗುತ್ತದೆ. ಹಾಗಾಗಿ ಅದನ್ನು ತಾನು ಮಾಡಲಾರೆ. ತನ್ನನ್ನು ಬೇಕಾದರೆ ಬಂಧಿಸಲಿ, ಈಗಾಗಲೇ ಕಾರಾಗೃಹದಲ್ಲಿ ಇರುವ ಸಾವಿರಾರು ಆದಿವಾಸಿಗಳೊಂದಿಗೆ ಇರಲು ತನಗೆ ಹಿಂಜರಿಕೆಯೇನೂ ಇಲ್ಲ ಎಂದೆಲ್ಲಾ ಹೇಳಿದ್ದಾರೆ.
ಇದಕ್ಕೂ ಹಿಂದೆ 2002ರ ಗುಜರಾತ್ ಗಲಭೆ ಹಾಗೂ ಕಗ್ಗೊಲೆಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಾ ಬಂದಿದ್ದ ಪತ್ರಕರ್ತೆ ಹಾಗೂ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ರದ್ದುಗೊಳಿಸಿದ್ದಲ್ಲದೆ ತೀಸ್ತಾರ ಮೇಲೆಯೇ ದುರುದ್ದೇಶಪೂರಿತವಾಗಿ ಪೊಲೀಸ್ ಹಾಗೂ ಗುಜರಾತ್ ಸರಕಾರದ ವಿರುದ್ಧ ದೂರು ನೀಡಿದ ತೀಸ್ತಾ ಮತ್ತಿತರರ ವಿರುದ್ಧ ಇಂಡಿಯಾದ ದಂಡ ಪ್ರಕ್ರಿಯಾ ಸಂಹಿತೆಯ ವಿವಿಧ ಕಲಮುಗಳಡಿ ಕ್ರಮ ಕೈಗೊಳ್ಳಬಹುದೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದನ್ನು ನಾವು ಇಲ್ಲಿ ಗಮನಿಸಬಹುದು. ಇಂಡಿಯಾದ ಸರ್ವೋಚ್ಚ ನ್ಯಾಯಾಲಯ ಗುಜರಾತಿನ ವಿಶೇಷ ತನಿಖಾ ದಳವು ನರೇಂದ್ರ ಮೋದಿಯವರನ್ನು 2002ರ ಗುಜರಾತ್ ಗಲಭೆಯ ಹಿನ್ನೆಲೆಯ ಆರೋಪಗಳಿಂದ ಮುಕ್ತಗೊಳಿಸಿದ್ದನ್ನು 2022ರ ಜೂನ್ 24ರಂದು ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಮನವಿ ಸಲ್ಲಿಸಿದವರಿಗೇನೇ ಶಿಕ್ಷೆಯಾಗುವಂತೆ ನಡೆದುಕೊಂಡಿತು. ನ್ಯಾಯಾಲಯದ ತೀರ್ಪಿನ ಹಿನ್ನೆಲೆ ಸರಕಾರ ತೀಸ್ತಾರನ್ನು ಈಗ ಬಂಧಿಸಿ ಇಟ್ಟಿರುವುದು ಹಲವರಿಗೆ ಗೊತ್ತಿದೆ. ಜೊತೆಗೆ ಈ ಹಿಂದೆ ಗುಜರಾತಿನ ಡಿಜಿಪಿಯಾಗಿ ನಿವೃತ್ತರಾದ ಪೊಲೀಸ್ ಅಧಿಕಾರಿ ಶ್ರೀಕುಮಾರ್ ರನ್ನು ಕೂಡ ಇದೇ ಪ್ರಕರಣದಡಿ ಬಂಧಿಸಿಡಲಾಗಿದೆ. ಅವರಿಗೆ ಜಾಮೀನನ್ನು ಕೂಡ ನಿರಾಕರಿಸಲಾಗುತ್ತಿದೆ. ಗುಜರಾತ್ ನರಮೇಧದ ಸಂಬಂಧ ಗುಜರಾತಿನ ಹಿಂದಿನ ಮೋದಿ ಸರಕಾರದಲ್ಲಿ ಮಂತ್ರಿಯಾಗಿದ್ದ ಮಾಯಾ ಕೊಡ್ನಾನಿ ಹಾಗೂ ಬಾಬು ಬಜರಂಗಿ ಮೇಲಿನ ನರೋದಾ ಪಾಟಿಯಾ ನರಮೇಧದ ಪ್ರಕರಣದಲ್ಲಿ ಆರೋಪಗಳು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಬೇಕಾಗಿ ಬಂದಿದ್ದನ್ನು ನಾವಿಲ್ಲಿ ಗಮನಿಸಬಹುದು. ಮೋದಿ ಪ್ರಧಾನಿಯಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಆರೋಪ ಮುಕ್ತರಾಗಿ ಕೊಡ್ನಾನಿ ಬಿಡುಗಡೆಯಾದರು. ಬಾಬಾ ಬಜರಂಗಿಗೆ ನಂತರ ಜಾಮೀನು ನೀಡಲಾಯಿತು.
ನ್ಯಾಯಾಂಗಕ್ಕೆ ನ್ಯಾಯಕ್ಕಾಗಿ ಮೊರೆ ಹೋದರೆ ಮೊರೆ ಹೋದವರನ್ನೇ ಅಪರಾಧಿಗಳನ್ನಾಗಿಸಿ ಬೇಟೆಯಾಡುವ ಪ್ರಕ್ರಿಯೆಗಳು ಇಂಡಿಯಾದಲ್ಲಿ ಹೆಚ್ಚಾಗತೊಡಗಿವೆ. ಇದಕ್ಕೆ ಹಿಮಾಂಶುಕುಮಾರ್ ಪ್ರಕರಣ ಇತ್ತೀಚಿನ ಸೇರ್ಪಡೆಯಾಗಿದೆ. ಈಗ ನರ್ಮದಾ ಬಚಾವೊ ಆಂದೋಲನದ ಮೇಧಾ ಪಾಟ್ಕರ್ ಮೇಲೆ ಹಣಕಾಸು ಅವ್ಯವಹಾರದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಜಾರ್ಖಂಡ್ನ ಸ್ವತಂತ್ರ ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್ರನ್ನು ಕೆಲವು ಪ್ರಕರಣ ಹೊರಿಸಿ ಬಂಧಿಸಿಡಲಾಗಿದೆ. ರೂಪೇಶ್ ಜನಪರ ವರದಿಗಾರಿಕೆ ಮಾಡುತ್ತಾ ಆದಿವಾಸಿಗಳು ಮತ್ತಿತರ ಜನಸಾಮಾನ್ಯರ ಸಮಸ್ಯೆಗಳನ್ನು ಕೇಂದ್ರೀಕರಿಸಿ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದರು.
ಕಳೆದ ಕೆಲವು ವರ್ಷಗಳಿಂದ ದೂರುದಾರರ ಮೇಲೆಯೇ ಪ್ರಕರಣ ದಾಖಲಿಸುವ ಪ್ರಕ್ರಿಯೆಗಳು, ಅಲ್ಲದೆ ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವ ಪ್ರಕರಣಗಳು ಪೊಲೀಸ್ ವ್ಯವಸ್ಥೆ ಹೆಚ್ಚಿಸುತ್ತಾ ಬಂದಿರುವುದನ್ನು ನಾವು ಗಮನಿಸಬಹುದು. ಒತ್ತಡ ಬಂದಾಗ ಒಂದು ವೇಳೆ ಕ್ರಮ ಕೈಗೊಂಡಂತೆ ತೋರಿಸಿದರೂ ಆರೋಪಿಗಳು ಬಂಧನಕ್ಕೆ ಒಳಗಾಗದೆ ದೂರುದಾರರನ್ನು ಹಲವಾರು ಪ್ರಕರಣಗಳಲ್ಲಿ ಸಿಲುಕಿಸಿ ಕಾರಾಗೃಹಗಳಿಗೆ ತಳ್ಳುವ ಪ್ರಕ್ರಿಯೆಗಳೂ ಹೆಚ್ಚಳಗೊಳ್ಳುತ್ತಲೇ ಬರುತ್ತಿವೆ. ಇದಕ್ಕೆ ಒಂದು ಉದಾಹರಣೆಯಾಗಿ ಭೀಮಾ ಕೋರೆಗಾಂವ್ ಪ್ರಕರಣ ಸ್ಪಷ್ಟವಾಗಿ ನಮ್ಮ ಮುಂದಿದೆ. ಇಂತಹವುಗಳ ಪ್ರಧಾನ ಗುರಿ ಮಾನವ ಹಕ್ಕು ಕಾರ್ಯಕರ್ತರು, ಜನಪರ ವಕೀಲರು, ಜನಪರ ಹೋರಾಟಗಾರರು, ಜನಪರ ಪತ್ರಕರ್ತರು, ದಲಿತ ದಮನಿತ ಆದಿವಾಸಿಗಳ ಪರವಾಗಿ ನಿಂತು ಕೆಲಸಮಾಡುತ್ತಿರುವವರು, ಪ್ರಜಾತಂತ್ರವಾದಿ ಬುದ್ಧಿಜೀವಿಗಳು, ಜನಪರ ಕಲಾವಿದರು, ಜನಪರ ಸಾಹಿತಿಗಳು ಇತ್ಯಾದಿ ಸಮಾಜಮುಖಿ ಸಮುದಾಯಗಳೇ ಆಗಿದ್ದಾರೆ ಎನ್ನುವುದು ಕೂಡ ಸ್ಪಷ್ಟವಾಗಿ ನಮಗೆ ಕಾಣುವ ಸಂಗತಿಯಾಗಿದೆ.
ಇದು ಇಡೀ ಆಡಳಿತ ವ್ಯವಸ್ಥೆಯೊಂದು ಸಂಪೂರ್ಣವಾಗಿ ಫ್ಯಾಶಿಸ್ಟೀಕರಣದತ್ತ ಸಾಗುತ್ತಿರುವ ಬಹಳ ಅಪಾಯಕಾರಿಯಾದ ಬೆಳವಣಿಗೆಗಳಾಗಿವೆ. ಈ ಪ್ರಕ್ರಿಯೆಗಳು ಮತ್ತಷ್ಟು ಮೊನಚುಗೊಳ್ಳುತ್ತಾ ಸಾಗಿದ್ದು ಅಯೋಧ್ಯಾ ತೀರ್ಪಿನ ನಂತರ ಎನ್ನಬಹುದು. ಅಯೋಧ್ಯೆಯ ಬಾಬರಿ ಮಸೀದಿ ಉರುಳಿಸಿದ್ದು ಅಪರಾಧಿ ಷಡ್ಯಂತ್ರವೆಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದ್ದರೂ ಆ ಷಡ್ಯಂತ್ರ ಹೂಡಿದವರೆಂದು ಯಾರನ್ನೂ ಶಿಕ್ಷಿಸದೆ ಆರೋಪಿಗಳನ್ನು ಆರೋಪಮುಕ್ತರನ್ನಾಗಿಸಿತು. ಈ ತೀರ್ಪನ್ನು ಬೇರೆ ಯಾವುದೇ ಪ್ರಕರಣಗಳಿಗೆ ಅನ್ವಯಿಸಿ ನೋಡಲಾಗದೆಂದು ತೀರ್ಪಿನಲ್ಲಿ ಹೇಳಲಾಗಿದ್ದರೂ ಆ ತೀರ್ಪು ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ನ್ಯಾಯಾಂಗದ ನಡಾವಳಿಗಳು ಹಾಗೂ ವಿಚಾರಣೆಗಳ ಮೇಲೆ ಪ್ರಭಾವ ಬೀರತೊಡಗಿರುವುದನ್ನು ನಾವು ಗಮನಿಸಬಹುದು. ಈಗ ದೂರುದಾರರನ್ನೇ ಅಪರಾಧಿಗಳನ್ನಾಗಿಸುವ ನ್ಯಾಯಾಂಗದ ಪ್ರಕ್ರಿಯೆಗಳು ಬಲಪಡೆಯತೊಡಗಿವೆ. ಸರಕಾರ ಹಾಗೂ ಅದರ ಪಡೆಗಳು ಕಾನೂನಿಗೆ ಹಾಗೂ ಸಂವಿಧಾನಾತ್ಮಕ ನಡಾವಳಿಗಳಿಗೆ ಅತೀತರನ್ನಾಗಿಸಲಾಗುತ್ತಿದೆ. ಇವರು ಯಾರಿಗೂ ಉತ್ತರದಾಯಿಗಳಲ್ಲದಂತೆ ಇಂತಹ ನಡೆಗಳ ಮೂಲಕ ಅಧಿಕೃತವಾಗಿಯೇ ಆಗುವಂತಾಗುತ್ತಿದೆ.
ಭಾರೀ ಜಾಗತಿಕ ಕಾರ್ಪೊರೇಟುಗಳಿಗೆ ದೇಶದ ಪ್ರತಿಯೊಂದು ಸಂಪನ್ಮೂಲಗಳ ಹಿಡಿತ ಒಪ್ಪಿಸುವ ಸರಕಾರದ ತೀವ್ರಗೊಂಡಿರುವ ನಡೆಗಳಿಗೂ, ದೇಶವಿಂದು ಸಾಗುತ್ತಿರುವ ಭೀಕರ ಆರ್ಥಿಕ ಬಿಕ್ಕಟ್ಟಿಗೂ ದೇಶದ ಸರಕಾರಿ ಯಂತ್ರಾಂಗವು ಅನುಸರಿಸುತ್ತಿರುವ ಅಂಕೆಯಿಲ್ಲದ ಅಪ್ರಜಾತಾಂತ್ರಿಕ ನಿರಂಕುಶ ನಡೆಗಳಿಗೂ, ನ್ಯಾಯಾಂಗದ ಮೂಲಕ ಹೊರಡುತ್ತಿರುವ ಇಂತಹ ತೀರ್ಪುಗಳಿಗೂ ಪರಸ್ಪರ ಸಂಬಂಧಗಳಲ್ಲಿ ನಾವು ದೇಶದ ಈ ಎಲ್ಲಾ ಬೆಳವಣಿಗೆಗಳನ್ನು ಅವಲೋಕಿಸಿ ಗ್ರಹಿಸಬೇಕಾದ ಅಗತ್ಯ ಇದೆ.
ಮಿಂಚಂಚೆ: nandakumarnandana67@gmail.com