ಅದಾನಿ ಸಮೂಹದ ನಡೆಗಳು ಹೇಳುತ್ತಿರುವ ಸತ್ಯಗಳು
ಅದಾನಿ ಸಮೂಹ ಯೂನಿಯನ್ ಸರಕಾರವನ್ನು ನೇರವಾಗಿ ಬಳಸಿಕೊಂಡು ದೇಶದ ಸಾರ್ವಜನಿಕರ ಬೆವರಿನ ಫಲಗಳಾದ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಅತ್ಯಂತ ಕಡಿಮೆ ಬಿಡ್ಡಿಂಗ್ನಲ್ಲಿ ಸುಲಭವಾಗಿ ಪಡೆದುಕೊಳ್ಳುತ್ತಾ ಸಾಗುತ್ತಿದೆ. ಅದಕ್ಕೂ ಸಾರ್ವಜನಿಕರು ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿ ಹಣವನ್ನೇ ಸಾಲದ ಹೆಸರಲ್ಲಿ ಬಳಸಿಕೊಳ್ಳುತ್ತಾ ಸಾಗುತ್ತಿದೆ. ಯಾವುದೇ ಸ್ವಂತ ಹೂಡಿಕೆ ಹಾಗೂ ಶ್ರಮವಿಲ್ಲದೆ ದೇಶದ ಜನರ ಸಂಪತ್ತನ್ನು ಹಾಗೇನೆ ಎತ್ತಿಕೊಂಡು ತನ್ನ ಮಡಿಲಿಗೆ ಸೇರಿಸುತ್ತಾ ಜಗತ್ತಿನ ಅತೀ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಸೇರಿಕೊಂಡಿದೆ.
ಅತ್ಯಲ್ಪ ಕಾಲದಲ್ಲೇ ಜಾಗತಿಕ ಭಾರೀ ಬಂಡವಾಳಶಾಹಿಯಾಗಿ ಮಾರ್ಪಡಿಸಿಕೊಂಡ ಇಂಡಿಯಾ ಮೂಲದ ಅದಾನಿ ಒಡೆತನದ ಕಾರ್ಪೊರೇಟ್ ಸಮೂಹ ಈಗ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಸದ್ಯಕ್ಕೆ ಪ್ರಧಾನವಾಗಿ ಎರಡು ಕಾರಣಗಳು ಮುಂದಿವೆ. ಮೊದಲನೆಯದು ನಮ್ಮ ದೇಶದ ಒಂದು ಮುಂಚೂಣಿ ಆಂಗ್ಲ ಹಾಗೂ ಹಿಂದಿ ಭಾಷೆಗಳ ದೂರದರ್ಶನ ವಾಹಿನಿ ಕಂಪೆನಿಯಾದ ನ್ಯೂ ಡೆಲ್ಲಿ ಟಿವಿ ಲಿಮಿಟೆಡ್ (ಎನ್ಡಿಟಿವಿ)ನ ಷೆೇರುಗಳನ್ನು ಭಾರೀ ಮಟ್ಟದಲ್ಲಿ ತನ್ನ ಸಹವರ್ತಿ ಕಂಪೆನಿಯೊಂದರ ಮೂಲಕ ಖರೀದಿಸಿ ತನ್ನ ಒಡೆತನಕ್ಕೆ ಸೇರಿಸಿಕೊಳ್ಳಲು ಆಕ್ರಮಣಕಾರಿಯಾಗಿ ಅದಾನಿ ಸಮೂಹ ಮುಂದಾಗಿದೆ
ಇದಕ್ಕೂ ಮೊದಲು ಮೋದಿ ನೇತೃತ್ವದ ಯೂನಿಯನ್ ಸರಕಾರ ಇತರ ವಾಹಿನಿಗಳಂತೆ ತನ್ನ ಪರವಾಗಿ ಪೂರ್ಣವಾಗಿ ನಿಲ್ಲುತ್ತಿಲ್ಲ ಎಂಬ ಕಾರಣದಿಂದ ಎನ್ಡಿಟಿವಿಯ ಮಾಲಕರಾದ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ರನ್ನು ತನ್ನ ದಮನ ಯಂತ್ರಾಂಗಗಳಾದ ಜಾರಿ ನಿರ್ದೇಶನಾಲಯ ಹಾಗೂ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಇನ್ನಿತರ ಸಂಸ್ಥೆಗಳ ಮೂಲಕ ನಿರ್ಬಂಧಿಸಿ ಇಟ್ಟಿತ್ತು. ಹಾಗಾಗಿ 2022ರ ನವೆಂಬರ್ ವರೆಗೆ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ತಮ್ಮ ಕಂಪೆನಿಯ ಷೇರುಗಳ ವ್ಯವಹಾರ ನಡೆಸದಂತೆ ತಡೆದಿಡಲಾಗಿದೆ.
ಎನ್ಡಿಟಿವಿಯ ಪ್ರಣಯ್ ರಾಯ್ ಈ ಹಿಂದೆ ವಿಶ್ವ ಪ್ರಧಾನ್ ಕಮರ್ಶಿಯಲ್ ಪ್ರೈವೇಟ್ ಲಿಮಿಟೆಡ್ (ವಿಪಿಸಿಎಲ್)ಎಂಬ ಸಂಸ್ಥೆಯಿಂದ 50 ದಶಲಕ್ಷ ಡಾಲರುಗಳ ಸಾಲವನ್ನು ಪಡೆದು ಅದಕ್ಕೆ ಪ್ರತಿಯಾಗಿ ಷೇರುಗಳಾಗಿ ಪರಿವರ್ತಿಸಿಕೊಳ್ಳಬಹುದಾದ ವಾರಂಟ್ ನೀಡಿದ್ದರೆಂದು ಹೇಳಲಾಗುತ್ತಿದೆ. ಈಗ ವಿಶ್ವಪ್ರಧಾನ್ ಕಂಪೆನಿಯನ್ನು ಅದಾನಿ ಸಮೂಹ ಖರೀದಿಸಿದ್ದರಿಂದ ಅದಾನಿ ಸಮೂಹ ಆ ವಾರಂಟ್ ಬಳಸಿ ಷೇರುಗಳನ್ನಾಗಿ ಪರಿವರ್ತಿಸಿ ಆ ಮೂಲಕ ಎನ್ಡಿಟಿವಿಯ ಮಾಲಕತ್ವವನ್ನು ತನ್ನದಾಗಿಸಿಕೊಳ್ಳಲು ಹೊರಟಿದೆ. ಈ ಬಗ್ಗೆ ತಮ್ಮೆಂದಿಗೆ ಯಾವುದೇ ಚರ್ಚೆ ನಡೆಸಿಲ್ಲ, ತಮ್ಮ ಗಮನಕ್ಕೆ ಬಂದಿಲ್ಲ, ಅಲ್ಲದೆ ತಮ್ಮ ಕಂಪೆನಿಯ ಷೇರು ವ್ಯವಹಾರಗಳನ್ನು ನಡೆಸಲು ನಿರ್ಬಂಧವಿರುವುದರಿಂದ ಯಾರೂ ಷೇರುಗಳನ್ನು ಕೈವಶ ಮಾಡಲಾಗದು ಎಂದೆಲ್ಲಾ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ಹೇಳಿಕೊಂಡಿದ್ದಾರೆ. ಅದು ತಮ್ಮ ನಡೆಗಳಿಗೆ ಬಾಧಿಸದು. ಆ ನಿರ್ಬಂಧ ಕೇವಲ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ರಿಗೆ ಮಾತ್ರ ಅನ್ವಯಿಸುವಂತಹುದು ಎಂದೆಲ್ಲಾ ಅದಾನಿ ಸಮೂಹವೂ ಹೇಳಿಕೊಂಡಿದೆ. ಆ ವಿಚಾರ ಒಂದು ಕಡೆ ಇದ್ದರೆ ಅದಾನಿ ಸಮೂಹ ಮಾಧ್ಯಮ ಕ್ಷೇತ್ರದಲ್ಲಿ ತನ್ನ ಹಿಡಿತ ಸಾಧಿಸುವ ಪ್ರಯತ್ನದಲ್ಲಿ ತೊಡಗಿರುವುದನ್ನು ಈ ನಡೆಗಳು ಸ್ಪಷ್ಟಪಡಿಸುತ್ತಿದೆ. ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ ಈಗಾಗಲೇ ಆಂಗ್ಲ ಮತ್ತು ಇನ್ನಿತರ ಭಾಷೆಗಳ ಹತ್ತಾರು ವಾಹಿನಿಗಳ ಒಡೆತನ ಸಾಧಿಸಿಕೊಂಡು ಅವುಗಳ ಮೂಲಕ ದೇಶದ ಜನರನ್ನು ಸುಳ್ಳು, ಪಕ್ಷಪಾತಿ, ಅರ್ಧ ಸತ್ಯಗಳ ಮೂಲಕ ದಿಕ್ಕೆಡಿಸಿ ಇಡುವ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತಾ ಬರುತ್ತಿದೆ. ನ್ಯೂಸ್ 18 ಮೂಲಕ ಅಂಬಾನಿ ಸಮೂಹ ದೇಶದ ಸುಮಾರು ಹದಿನಾರಕ್ಕೂ ಹೆಚ್ಚು ಭಾಷೆಗಳಲ್ಲಿ ವಾಹಿನಿಗಳನ್ನು ನಡೆಸುತ್ತಿದೆ. ಅಲ್ಲದೆ ಆಂಗ್ಲ ಭಾಷೆಯ ‘ಟೈಮ್ಸ್ ನೌ’, ಸಿಎನ್ಬಿಸಿ ಮೊದಲಾದ ಟಿವಿ ವಾಹಿನಿಗಳು, ಹಾತ್ ವೇ, ಡೆನ್ ನೆಟ್ ವರ್ಕ್ಸ್ ಮೊದಲಾದ ಕೇಬಲ್ ವಾಹಿನಿಗಳನ್ನು ಹೊಂದಿ ದೇಶದ ಅತೀ ದೊಡ್ಡ ಮಾಧ್ಯಮ ಕಾರ್ಪೊರೇಟಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ವಾರ್ಷಿಕ ಸುಮಾರು ರೂ. 8,000 ಕೋಟಿಗಳಷ್ಟು ಆದಾಯವನ್ನು ಗಳಿಸುತ್ತಿದೆ ಎಂದು ‘ಇಕನಾಮಿಕ್ಸ್ ಟೈಮ್ಸ್’ 2020ರ ಫೆಬ್ರವರಿಯಲ್ಲೇ ವರದಿ ಮಾಡಿತ್ತು. ಈಗ ಅದಾನಿ ಮಾಧ್ಯಮ ಕಾರ್ಪೊರೇಟಾಗಿ ದಾಪುಗಾಲು ಇಡುವ ಪ್ರಯತ್ನ ನಡೆಸುತ್ತಿದೆ. ಹಾಗಾಗಿ ಸುದ್ದಿಗೆ ಗ್ರಾಸವಾಗಿದೆ.
ಎರಡನೇ ಕಾರಣ ಅದಾನಿ ಸಮೂಹ ಹತೋಟಿ ಇಲ್ಲದೆ ಪ್ರಧಾನವಾಗಿ ಸಾಲಗಳ ಮೇಲೆಯೇ ತನ್ನ ಕಂಪೆನಿಗಳ ವ್ಯವಹಾರ, ವಿಸ್ತರಣೆ ಹಾಗೂ ಕಂಪೆನಿಗಳ ಖರೀದಿಗಳನ್ನು ನಡೆಸುತ್ತಿದೆ. ಇದು ಸಾಲದ ಸುಳಿಗೆ ಅದಾನಿ ಸಮೂಹ ಸಿಕ್ಕಿಬೀಳುವ, ಭಾರೀ ಒತ್ತಡಗಳಿಗೆ ಸಿಲುಕುವ ಅಪಾಯಕಾರಿ ಸಾಧ್ಯತೆಗಳಿಗೆ ದಾರಿ ಮಾಡಿಟ್ಟುಕೊಂಡಿದೆ ಎಂದು ‘ಕ್ರೆಡಿಟ್ ಸೈಟ್’ ಎಂಬ ಆರ್ಥಿಕ ಸಾಧಕ ಬಾಧಕಗಳ ಸಂಶೋಧನೆ ನಡೆಸುವ ಸಂಸ್ಥೆಯ ವರದಿ ಹೊರಬಿದ್ದಿದೆ. ಈ ವರದಿ ಬಂದ ಕಾರಣದಿಂದಲೇ ಅದಾನಿ ಸಮೂಹದ ಷೇರುಗಳ ಬೆಲೆಗಳು ಬಹಳ ಇಳಿಕೆ ಕಾಣತೊಡಗಿದವು. ಸುಮಾರು ರೂ.94,000 ಕೋಟಿಗಳಿಗೂ ಹೆಚ್ಚು ನಷ್ಟವನ್ನು ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ಅನುಭವಿಸಿರುವ ವರದಿಯೂ ಹೊರಬಿದ್ದಿದೆ. ಅಷ್ಟೇ ಅಲ್ಲದೇ ‘ಎಸ್ ಆ್ಯಂಡ್ ಪಿ’ ಎಂಬ ಜಾಗತಿಕ ರೇಟಿಂಗ್ ಸಂಸ್ಥೆ ಇಂಡಿಯಾದ ಬ್ಯಾಂಕುಗಳು ಹಾಗೂ ಜಾಗತಿಕ ಹೂಡಿಕೆದಾರರು ಅದಾನಿ ಸಮೂಹದ ಸಾಲ ಹೊಂದುವಿಕೆ ಮೇಲೆ ನಿರ್ಬಂಧ ವಿಧಿಸಲು ಚಿಂತಿಸುತ್ತಿದ್ದಾರೆ ಎಂದು ಹೇಳಿತು.
ಆದರೆ ಅದಾನಿ ಸಮೂಹ ಇದನ್ನು ಅಲ್ಲಗಳೆದು ತಮ್ಮ ಸಮೂಹ ಇದುವರೆಗೂ ಯಾವುದೇ ಸಾಲ ಸೇವೆಗಳಿಗೆ ಧಕ್ಕೆ ಮಾಡಿಲ್ಲ. ಅಲ್ಲದೆ ನಮ್ಮ ಸಮೂಹದ ಸಾಲ ವರದಿಯಾದ ಪ್ರಕಾರ ಅಲ್ಲ. ನಮ್ಮ ಒಟ್ಟು ದೀರ್ಘಾವಧಿ ವಾಸ್ತವ ಸಾಲ 1.37 ಲಕ್ಷ ಕೋಟಿ ರೂ. ಮಾತ್ರ. ನಮ್ಮ ಒಟ್ಟು ಸ್ತಿರಾಸ್ತಿ ರೂ. 3.15 ಲಕ್ಷ ಕೋಟಿಗಳಾಗಿವೆ. ಹಾಗಾಗಿ ನಾವು ಸಾಲದ ಸುಳಿಯಲ್ಲಿ ಇಲ್ಲ ಎಂದೆಲ್ಲಾ ಹೇಳಿಕೊಂಡಿದೆ.
ನಾವಿಲ್ಲಿ ಗಮನಿಸಬೇಕಿರುವುದು ಅದಾನಿ ಸಾಲಗಾರನೋ ಅಲ್ಲವೋ ಎಂಬುದಲ್ಲ. ಬದಲಿಗೆ ಈ ಭಾರೀ ಕಾರ್ಪೊರೇಟ್ಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಸಾರ್ವಜನಿಕರು ಹಾಗೂ ದೇಶಕ್ಕೆ ಎಂತೆಂತಹ ಕಂಟಕಗಳನ್ನು ತಂದಿಡುತ್ತಿದ್ದಾರೆ ಎನ್ನುವುದಾಗಿದೆ. ಸಾಲವೆಂದಾಗ ಪ್ರಧಾನವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ದೇಶದ ನಾಗರಿಕರ ಉಳಿತಾಯಗಳ ಮೊತ್ತವನ್ನೇ ಈ ಭಾರೀ ಕಾರ್ಪೊರೇಟ್ಗಳು ತಮ್ಮ ಸಾಮ್ರಾಜ್ಯ ಕಟ್ಟಲು ಬಳಸಿಕೊಳ್ಳುತ್ತಿವೆ ಎಂದು ಅರ್ಥ. ಹಾಗಾಗಿ ಈ ಕಾರ್ಪೊರೇಟ್ಗಳು ಬಿಕ್ಕಟ್ಟಿಗೆ ಸಿಕ್ಕಾಗ ಕಾನೂನಾತ್ಮಕವಾಗಿಯೇ ದಿವಾಳಿ ಘೋಷಿಸಿಕೊಂಡು ದೇಶದ ಜನಸಾಮಾನ್ಯರ ಸಂಪತ್ತನ್ನು ಆಪೋಶನ ತೆಗೆದುಕೊಳ್ಳುವ ಅಪಾಯಕಾರಿ ಸಾಧ್ಯತೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಾಗಿದೆ. ಈಗಾಗಲೇ ಲಲಿತ್ ಮೋದಿ, ವಿಜಯ್ ಮಲ್ಯ ಇನ್ನಿತರ ಹಲವು ಕಾರ್ಪೊರೇಟ್ಗಳು ದೇಶದ ಸಾವಿರಾರು ಕೋಟಿ ರೂ.ಯ ಸಾರ್ವಜನಿಕ ಹಣವನ್ನು ಬಳಸಿ ಕೈ ಒರೆಸಿಕೊಂಡು ಹೋಗಿ ವಿದೇಶಗಳಲ್ಲಿ ಹಾಯಾಗಿ ಐಷಾರಾಮಿ ಜೀವನ ನಡೆಸುತ್ತಿರುವುದನ್ನು ನಾವು ಗಮನಿಸಬಹುದು. ಈಗಾಗಲೇ ರಾಷ್ಟ್ರೀಕೃತ ಬ್ಯಾಂಕುಗಳು ಕಳೆದ ಐದು ವರ್ಷಗಳಲ್ಲೇ ಹತ್ತಾರು ಲಕ್ಷ ಕೋಟಿ ರೂ. ಇಂತಹ ಭಾರೀ ಕಾರ್ಪೊರೇಟ್ ಸಾಲವನ್ನು ವೃಟ್ಟನ್ ಆಫ್ (written off) ಹೆಸರಿನಲ್ಲಿ ಮನ್ನಾ ಮಾಡಿರುವ ವರದಿಗಳು ಈಗಾಗಲೇ ಬಂದಿವೆ. ಈ ಭಾರೀ ಕಾರ್ಪೊರೇಟ್ಗಳು ಸಾರ್ವಜನಿಕ ಹಣಕಾಸು ಹಾಗೂ ಸಾರ್ವಜನಿಕ ಸಂಸ್ಥೆಗಳ ಸ್ವಾಧೀನಗಳ ಮೂಲಕ ಜಗತ್ತಿನ ಅತೀ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ. 15 ವರ್ಷಗಳ ಹಿಂದೆ ದೇಶದ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿಯೇ ಇರದೇ ಇದ್ದ, ಗುಜರಾತಿನಲ್ಲಿ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಗೌತಮ್ ಅದಾನಿ ಇಂದು ಏಶ್ಯದ ಅತೀ ದೊಡ್ಡ ಶ್ರೀಮಂತನೆಂಬ ಪಟ್ಟಕ್ಕೆ ಬರಲು ಹೇಗೆ ಸಾಧ್ಯವಾಯಿತು ಎನ್ನುವುದು ಬಂಡವಾಳಶಾಹಿ ವ್ಯವಸ್ಥೆಯ ಒಳಹೂರಣ ಅರಿತರೆ ಮಾತ್ರ ಅರ್ಥವಾಗುತ್ತದೆ.
ಆರಂಭದಲ್ಲಿ ವಜ್ರದ ಉದ್ಯಮದಲ್ಲಿ ತೊಡಗಿ ನಂತರ ಗುಜರಾತಿನಲ್ಲಿ ತನ್ನ ಕುಟುಂಬದ ಪ್ಲಾಸ್ಟಿಕ್ ಉದ್ಯಮದಲ್ಲಿ ತೊಡಗಿ ನಂತರ 1988ರಲ್ಲಿ ಅದಾನಿ ಎಂಟರ್ ಪ್ರೈಸಸ್ ಎಂಬ ತನ್ನದೇ ಕಂಪೆನಿ ಸ್ಥಾಪಿಸಿದರು. ಅದೀಗ ಬಂದರು, ಗಣಿ, ವಿಮಾನ ನಿಲ್ದಾಣ, ಸಿಮೆಂಟ್, ವಿದ್ಯುತ್, ರೈಲ್ವೆ, ಮಾಧ್ಯಮ, ದೂರ ಸಂಪರ್ಕ, ಸೇನಾ ಕ್ಷೇತ್ರ ಹೀಗೆ ಹಲವು ವಲಯಗಳಲ್ಲಿ ತನ್ನ ಹಿಡಿತ ಸಾಧಿಸುತ್ತಾ ಸಾಗುತ್ತಿದೆ. ನಮ್ಮ ದೇಶ ಮಾತ್ರವಲ್ಲದೆ ಆಸ್ಟ್ರೇಲಿಯ ಮೊದಲಾದ ರಾಷ್ಟ್ರಗಳಲ್ಲೂ ತನ್ನ ವ್ಯವಹಾರ ಹಾಗೂ ಕಂಪೆನಿಗಳನ್ನು ನಡೆಸುತ್ತಿದೆ.
ಎರಡು ವರ್ಷಗಳ ಹಿಂದೆ ಅದಾನಿಯ ಒಟ್ಟು ಆಸ್ತಿ 10 ಬಿಲಿಯನ್ ಡಾಲರ್ಗಳಾಗಿದ್ದರೆ 2022ರ ಮಾರ್ಚ್ ವೇಳೆಗೆ 105 ಬಿಲಿಯನ್ ಡಾಲರ್ಗಳಾಗಿವೆ. ಅಂದರೆ ತೊಂಬತ್ತೈದು ಪಟ್ಟು ಹೆಚ್ಚಳ ಹೇಗೆ ಸಾಧ್ಯವಾಯಿತು ಎನ್ನುವುದನ್ನು ಗಮನಿಸಬೇಕಾಗಿದೆ. ಅದಾನಿ ಸಮೂಹ ಎರಡು ವರ್ಷಗಳಲ್ಲಿ ದೇಶದ ಜನರ ತೆರಿಗೆಯ ಹಣದಿಂದ ಸಾರ್ವಜನಿಕ ವಲಯದಲ್ಲಿ ಕಟ್ಟಿಬೆಳೆಸಿದ ಪ್ರಮುಖ ಬಂದರುಗಳನ್ನು, ವಿಮಾನ ನಿಲ್ದಾಣಗಳನ್ನು ಸರಕಾರದಿಂದ ಖರೀದಿಸಿತು. ಜೊತೆಗೆ ರೈಲ್ವೇ ವಲಯ, ಗಣಿ ಮೊದಲಾದೆಡೆ ಆಕ್ರಮಣಕಾರಿಯಾಗಿ ವಿಸ್ತರಿಸುತ್ತಾ ಹೋಗುತ್ತಿದೆ. ನಮ್ಮ ರಾಜ್ಯದ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಒಡೆತನಕ್ಕೆ ಹೋಗಿದೆ. ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ಪಾಲನ್ನು ಹೊಂದಿದೆ. ಕೇರಳದ ತಿರುವನಂತಪುರದ ವಿಮಾನ ನಿಲ್ದಾಣ ಅದಾನಿಗೆ ಹೋಗಿದೆ. ತಿರುವನಂತಪುರದ ವಿಜಿಂಗಮ್ ಬಂದರು ನಿರ್ಮಾಣ, ಖಾಸಗಿ ಹಾಗೂ ಸಾರ್ವಜನಿಕ ಪಾಲು ಎಂಬ ನೆಪದಡಿ ಅರವತ್ತು ವರ್ಷಗಳ ಉಸ್ತುವಾರಿ ಹಾಗೂ ಲಾಭಗಳಿಕೆ ಅದಾನಿ ಪಾಲಾಗಿದೆ. ಆ ಯೋಜನೆಯ ಅಪಾಯಕಾರಿ ಅಡ್ಡಪರಿಣಾಮಗಳು, ಪರಿಸರಕ್ಕೆ ಮತ್ತು ಮೀನುಗಾರರಿಗೆ ಆಗುವ ಅನಾಹುತಗಳನ್ನು ಮುಂದಿಟ್ಟು ಹೋರಾಟ ಶುರುವಾಗಿ ಕೆಲವು ವರ್ಷಗಳಾಗಿವೆ. ಈ ಯೋಜನೆ ವಿರೋಧಿಸಿ ಈಗಲೂ ಜನರು ಹೋರಾಡುತ್ತಿದ್ದರೂ ಕೇರಳದ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರವಾಗಲೀ ಹಾಗೂ ಈಗಿನ ಸಿಪಿಎಂ ನೇತೃತ್ವದ ಸರಕಾರವಾಗಲೀ ಆ ಯೋಜನೆಯನ್ನು ನಿಲ್ಲಿಸುವ ಮನಸ್ಸು ಮಾಡುತ್ತಿಲ್ಲ ಎನ್ನುವುದನ್ನೂ ಗಮನಿಸಬೇಕಾಗಿದೆ.
ಅಂದರೆ ಅದಾನಿ ಸಮೂಹ ಯೂನಿಯನ್ ಸರಕಾರವನ್ನು ನೇರವಾಗಿ ಬಳಸಿಕೊಂಡು ದೇಶದ ಸಾರ್ವಜನಿಕರ ಬೆವರಿನ ಫಲಗಳಾದ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಅತ್ಯಂತ ಕಡಿಮೆ ಬಿಡ್ಡಿಂಗ್ನಲ್ಲಿ ಸುಲಭವಾಗಿ ಪಡೆದುಕೊಳ್ಳುತ್ತಾ ಸಾಗುತ್ತಿದೆ. ಅದಕ್ಕೂ ಸಾರ್ವಜನಿಕರು ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿ ಹಣವನ್ನೇ ಸಾಲದ ಹೆಸರಲ್ಲಿ ಬಳಸಿಕೊಳ್ಳುತ್ತಾ ಸಾಗುತ್ತಿದೆ. ಯಾವುದೇ ಸ್ವಂತ ಹೂಡಿಕೆ ಹಾಗೂ ಶ್ರಮವಿಲ್ಲದೆ ದೇಶದ ಜನರ ಸಂಪತ್ತನ್ನು ಹಾಗೇನೆ ಎತ್ತಿಕೊಂಡು ತನ್ನ ಮಡಿಲಿಗೆ ಸೇರಿಸುತ್ತಾ ಜಗತ್ತಿನ ಅತೀ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಸೇರಿಕೊಂಡಿದೆ.
ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಬಹುತೇಕ ಬ್ಯಾಂಕುಗಳು ಅದಾನಿಗೆ ಸಾವಿರಾರು ಕೋಟಿ ರೂ.ಗಳ ಭಾರೀ ಮೊತ್ತದ ಸಾಲ ನೀಡುತ್ತಾ ಬರುತ್ತಿವೆ. ಮೇ 26, 2022ರ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ವರದಿಯಂತೆ ಅದಾನಿ ಸಮೂಹದ ಒಟ್ಟು ಗಳಿಕೆ ರೂ. 1,84,810 ಕೋಟಿಗಳಾದರೆ ಒಟ್ಟು ನಿವ್ವಳ ಲಾಭ ರೂ. 12,956 ಕೋಟಿಗಳು. ಆದರೆ ಸಾಲ ರೂ. 2,18,271 ಕೋಟಿಗಳಾಗಿವೆ. ಅದಾನಿ ಸಮೂಹದ ಒಟ್ಟು ಸಂಪತ್ತು ಮಾರುಕಟ್ಟೆ ಮೌಲ್ಯದ ಪ್ರಕಾರ 14,38,823 ಕೋಟಿಗಳಾಗಿವೆ. ಇದು ಅದಾನಿ ಸಮೂಹದ ಕಂಪೆನಿಗಳ ಷೇರುಗಳ ಮಾರುಕಟ್ಟೆ ಮೌಲ್ಯಗಳನ್ನು ಆಧರಿಸಿದ ಒಟ್ಟು ಸಂಪತ್ತಿನ ಲೆಕ್ಕ. ಮಾರುಕಟ್ಟೆ ಮೌಲ್ಯ ಯಾವಾಗ ಬೇಕಾದರೂ ಏರುಪೇರಾಗಬಹುದು. ಕರ್ನಾಟಕದ ಉಡುಪಿ ಬಳಿಯ ನಂದಿಕೂರಿನಲ್ಲಿರುವ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರವನ್ನು 2015ರ ಎಪ್ರಿಲ್ನಲ್ಲಿ ಸುಮಾರು 6,300 ಕೋಟಿ ರೂ.ಗಳಿಗೆ ಅದಾನಿ ಸಮೂಹ ಖರೀದಿಸಿತ್ತು. ಸ್ಥಳೀಯರು ಹಾಗೂ ಇತರ ಪರಿಸರವಾದಿಗಳು, ಮೀನುಗಾರ ಸಮುದಾಯಗಳ ಭಾರೀ ವಿರೋಧದ ನಡುವೆಯೂ ಇದನ್ನು ದೇಶದಲ್ಲೇ ಬಲು ದೊಡ್ಡ ಖಾಸಗಿ ವಿದ್ಯುತ್ ಕಂಪೆನಿಯಾದ ಲ್ಯಾಂಕೋ ಇನ್ ಫ್ರಾಟೆಕ್ ನಂದಿಕೂರಿನಲ್ಲಿ ಸ್ಥಾಪಿಸಿತ್ತು. ಈಗ ಅದಾನಿ ಸಮೂಹ ಅದನ್ನು ಉಡುಪಿ ಪವರ್ ಕಾರ್ಪೊರೇಶನ್ ಲಿಮಿಟೆಡ್ ಎಂದು ನಮೂದಿಸಿಕೊಂಡಿದೆ. ಈ ಸ್ಥಾವರವು 2012ರಲ್ಲಿ 1,200 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದೊಂದಿಗೆ ಕಾರ್ಯಾರಂಭಗೊಂಡಿತ್ತು. ಈಗ ಅದಾನಿ ಸಮೂಹ ಇದನ್ನು ಮತ್ತಷ್ಟು ವಿಸ್ತರಿಸುತ್ತಾ ಸಾಗುತ್ತಿದೆ. ನಮ್ಮ ದೇಶ ಈ ಕಾರ್ಪೊರೇಟ್ ಕೂಟಗಳ ಹಿಡಿತಗಳಿಂದಾಗಿ ಎಂತೆಂತಹ ಅಪಾಯಕಾರಿ ಘಟ್ಟಗಳಿಗೆ ತಲುಪುತ್ತಿದೆ, ದೇಶದ ಸಂವಿಧಾನಾತ್ಮಕ, ಸರಕಾರ, ಕಾನೂನು ವ್ಯವಸ್ಥೆ ಬಹುಸಂಖ್ಯಾತ ಜನಸಾಮಾನ್ಯರ ವಿಚಾರದಲ್ಲಿ ಎಷ್ಟೊಂದು ಶಿಥಿಲವಾಗಿವೆ ಎನ್ನುವುದನ್ನು ಗ್ರಹಿಸಲು ಅದಾನಿ ಸಮೂಹದ ಈ ಬೆಳವಣಿಗೆಗಳನ್ನು ಕೂಡ ಸರಿಯಾಗಿ ಗ್ರಹಿಸಬೇಕಾಗಿದೆ.
ಮಿಂಚಂಚೆ: nandakumarnandana67@gmail.com