ಸಾಮಾಜಿಕ ಸುಧಾರಣೆಗಳು ನೆಲೆನಿಂತು ಬೆಳೆಯಲು ಜನರ ಆರ್ಥಿಕ ಸ್ವಾವಲಂಬನೆ ಅಗತ್ಯ
ಈಳವ ಸಮುದಾಯ ಇಂದು ರಾಜಕೀಯವಾಗಿ ಸಾಮಾಜಿಕವಾಗಿ ಬಲಿಷ್ಠ ಸಮುದಾಯ ಎನಿಸಿದ್ದರೂ ಆರ್ಥಿಕವಾಗಿ ಇವರಲ್ಲಿನ ಬಹುಸಂಖ್ಯಾತರು ಸಬಲರಾಗಿಲ್ಲ ಎನ್ನುವುದು ಗಮನಾರ್ಹವಾದುದು. ಅಲ್ಲದೆ ಬ್ರಾಹ್ಮಣಶಾಹಿ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಭಾರೀ ಹೋರಾಟ ನಡೆಸಿ ಇಂದು ದೊಡ್ಡ ಸಂಘಟಿತ ಶಕ್ತಿಯಾಗಿ ಬೆಳೆದಿರುವ ಈಳವ ಸಮುದಾಯದ ದೇವಾಲಯ ಪ್ರವೇಶ ಮೊದಲಾದ ವಿಚಾರಗಳಲ್ಲಿ ಬ್ರಾಹ್ಮಣಶಾಹಿ ಮೌಲ್ಯಗಳನ್ನೇ ಜಾರಿಯಲ್ಲಿ ಇಟ್ಟಿರುವ ವಾಸ್ತವ ಕೂಡ ಕಣ್ಣ ಮುಂದಿದೆ. ಇದಕ್ಕೆಲ್ಲಾ ಈಳವ ಸಮುದಾಯದ ರಾಜಕೀಯ ನಾಯಕತ್ವ ಹಾಗೂ ಸಂಘಟನೆಯ ನಾಯಕತ್ವ ಪ್ರಧಾನ ಕಾರಣ ಎನ್ನುವುದನ್ನು ಗಮನಿಸಬೇಕಾಗಿದೆ.
ನಾರಾಯಣ ಗುರುಗಳ ಜಯಂತಿ ಮುಗಿದಿದೆ. ಹದಿನೆಂಟನೇ ಶತಮಾನದಲ್ಲಿಯೇ ಬ್ರಾಹ್ಮಣಶಾಹಿ ಶೋಷಣೆ, ಅಸ್ಪಶ್ಯತೆ, ಜಾತೀಯತೆ, ಮತೀಯತೆಗಳ ವಿರುದ್ಧ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ತಮ್ಮ ಜೀವನವನ್ನೇ ಮುಡಿಪಿಟ್ಟು ದುಡಿದ ಮಹಾ ಚೇತನ ನಾರಾಯಣಗುರು. ಕೇರಳದ ತಿರುವನಂತಪುರದ ಸಮೀಪದ ಗ್ರಾಮವೊಂದರಲ್ಲಿ ಜನಿಸಿದ ನಾರಾಯಣಗುರುಗಳು ಸ್ವಯಂ ಅಸ್ಪೃಶ್ಯತೆಯನ್ನು ಅನುಭವಿಸಿದವರಾಗಿದ್ದರು. ಸಾಮಾಜಿಕ ಸುಧಾರಣೆಯ ಹೋರಾಟಗಳು ಕೇರಳ ಮಾತ್ರವಲ್ಲದೇ ನಮ್ಮ ಕರ್ನಾಟಕ ಹಾಗೂ ಪಕ್ಕದ ತಮಿಳುನಾಡು ಇನ್ನಿತರ ಕಡೆಗಳಲ್ಲೂ ಪ್ರಭಾವ ಬೀರಿತ್ತು. ಅಂದಿನ ಬ್ರಾಹ್ಮಣಶಾಹಿ ಊಳಿಗಮಾನ್ಯ ಶಕ್ತಿಗಳು ದೇವರು ಹಾಗೂ ದೇವಸ್ಥಾನಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ದಲಿತ ಶೂದ್ರರಿಗೆ ದೇವಸ್ಥಾನ ಪ್ರವೇಶ, ಸಾರ್ವಜನಿಕ ಸ್ಥಳ ಪ್ರವೇಶ, ಶಿಕ್ಷಣ ಹಾಗೂ ಪೂಜೆಗಳನ್ನು ನಿಷೇಧಿಸಿ ಆ ಮೂಲಕ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಹಿಡಿತಗಳನ್ನು ತಮ್ಮಲ್ಲೇ ಇರಿಸಿಕೊಂಡು ಸಾಗಿದ್ದರು. ನಾರಾಯಣಗುರು ದೇವರು ಹಾಗೂ ದೇವಸ್ಥಾನಗಳನ್ನು ಶೂದ್ರರೆಡೆಗೆ ಕೊಂಡೊಯ್ದು ಬ್ರಾಹ್ಮಣಶಾಹಿ ಜಾತೀಯತೆ ಹಾಗೂ ಮತೀಯತೆಗಳ ವಿರುದ್ಧ ಜಾಗೃತಿ ಮೂಡಿಸಲು ಬಳಸಿದರು. ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಘೋಷ ವಾಕ್ಯವನ್ನು ಮುಂದಿರಿಸಿ ಸಂಘಟಿಸಿದರು. ಅದು ಆಗಿನ ಸಮಾಜದಲ್ಲಿ ಬಹಳ ಪ್ರಗತಿಪರ ಪ್ರಭಾವವನ್ನು ಬೀರಿತ್ತು. ಬ್ರಾಹ್ಮಣಶಾಹಿ ಹಿಡಿತಕ್ಕೆ ಭಾರೀ ಪೆಟ್ಟನ್ನು ಕೊಟ್ಟಿತ್ತು.
ಕಾಲ ಕ್ರಮೇಣ ನಾರಾಯಣಗುರುಗಳ ಸಾಮಾಜಿಕ ಪ್ರಭಾವವನ್ನೂ ಕೂಡ ಬ್ರಾಹ್ಮಣಶಾಹಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಬಳಸಿಕೊಳ್ಳಲು ಪ್ರಯತ್ನಿಸುತ್ತಾ ಬರುತ್ತಿದೆ. ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದೆೆ.
ಇಂದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನಾರಾಯಣಗುರುಗಳ ಪ್ರಭಾವದಲ್ಲಿದ್ದ ಈಡಿಗ ಸಮುದಾಯವನ್ನು ಬ್ರಾಹ್ಮಣಶಾಹಿ ಆರೆಸ್ಸೆಸ್ ಮತ್ತದರ ಪರಿವಾರ ಬಹಳ ದೊಡ್ಡ ಪ್ರಮಾಣದಲ್ಲಿ ತನ್ನ ಬ್ರಾಹ್ಮಣಶಾಹಿ ಸಂಚುಗಳಲ್ಲಿ ಭಾಗೀದಾರರನ್ನಾಗಿಸಿ ಜಾತೀವಾದಿ ಹಾಗೂ ಕೋಮುವಾದಿ ಚಟುವಟಿಕೆಗಳಲ್ಲಿ ಮುಳುಗಿಸಿ ಉಸಿರುಗಟ್ಟಿಸತೊಡಗಿ ಬಹಳ ಕಾಲವಾಗಿದೆ. ಅದೇ ರೀತಿಯಲ್ಲಿ ಪಕ್ಕದ ಕೇರಳದಲ್ಲೂ ನಾರಾಯಣ ಗುರುಗಳು ಹಾಗೂ ಈಡಿಗ ಸಮುದಾಯದ ಶಿವಗಿರಿ ಮಠವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಆರೆಸ್ಸೆಸ್ ನಿರಂತರವಾಗಿ ಪ್ರಯತ್ನಿಸುತ್ತಾ ಸಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಕೂಡ ಆಗಾಗ ಶಿವಗಿರಿ ಮಠಕ್ಕೆ ಭೇಟಿ ನೀಡುವ ಕಾರ್ಯ ಮಾಡುತ್ತಿದೆ. ಕೇರಳದ ಈಡಿಗ ಸಮುದಾಯದ ಬಲಶಾಲಿ ಸಂಘಟನೆಯಾದ ಎಸ್ ಎನ್ಡಿಪಿ (ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಮ್) ಯ ನಾಯಕತ್ವವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಾ ಬರುತ್ತಿದೆ. ಇದರ ನಾಯಕರಾದ ವೆಳ್ಳಾಪಳ್ಳಿ ನಟೇಶನ್ ಬಿಜೆಪಿಯ ತೆಕ್ಕೆಗೆ ಸೇರಿಕೊಳ್ಳುವ ಸಾಹಸ ಮಾಡಿದ್ದರು. ಕೊನೆಗೆ ಎಸ್ಎನ್ಡಿಪಿ ಕಾರ್ಯಕರ್ತರ ತೀವ್ರ ವಿರೋಧದಿಂದಾಗಿ ಹಿಂದ್ಸರಿದರೂ ಇವರ ಮಗ ತುಷಾರ್ ವೆಳ್ಳಾಪಳ್ಳಿ ರಾಜ್ಯದ ಎನ್ಡಿಎ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಾ ಆರೆಸ್ಸೆಸ್ ಸಖ್ಯದೊಂದಿಗೆ ಇದ್ದುಕೊಂಡು ‘ಭಾರತ್ ಧರ್ಮ ಜನಸೇನಾ’ ಎಂಬ ರಾಜಕೀಯ ಪಕ್ಷವೊಂದನ್ನು ನಡೆಸತೊಡಗಿದ್ದಾರೆ. ಅದಕ್ಕೂ ನಾರಾಯಣ ಗುರುವನ್ನು ಬಳಸುತ್ತಿದ್ದಾರೆ. ವೆಳ್ಳಾಪಳ್ಳಿ ನಟೇಶನ್ ಕಳೆದ ಇಪ್ಪತ್ತೆಂಟು ವರ್ಷಗಳ ಸುದೀರ್ಘ ಕಾಲದಿಂದಲೂ ಎಸ್ಎನ್ಡಿಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ. ಇವರ ಮಗ ತುಷಾರ್ ಕೂಡ ಎಸ್ಎನ್ಡಿಪಿಯ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ. ಭಾರತ್ ಧರ್ಮ ಸೇನಾ ಎಂಬ ರಾಜಕೀಯ ಪಕ್ಷವನ್ನು ನಟೇಶನ್ ಸ್ಥಾಪಿಸಿ ಅದರ ಉಸ್ತುವಾರಿಯನ್ನು ತುಷಾರ್ ವೆಳ್ಳಾಪಳ್ಳಿಗೆ ಒಪ್ಪಿಸಿದ್ದಾರೆ. ಬಿಜೆಪಿಯೊಂದಿಗೆ ಹತ್ತಿರದ ನಂಟನ್ನು ಸ್ಥಾಪಿಸಿಕೊಂಡು ತಮ್ಮ ವ್ಯಾಪಾರ ವ್ಯವಹಾರಗಳ ರಕ್ಷಣೆಗೆ ತೊಡಗಿದ್ದಾರೆ.
ಎಸ್ಎನ್ಡಿಪಿಯನ್ನು ಬಳಸಿಕೊಂಡು ಮೈಕ್ರೋಫೈನಾನ್ಸ್ ದಂಧೆಯನ್ನು ನಡೆಸಿ ಅದರಲ್ಲಿ ಹಣದ ಅವ್ಯವಹಾರಗಳನ್ನು ನಡೆಸಿದ ಹಾಗೂ ಎಸ್ಎನ್ಡಿಪಿಯ ಕಾರ್ಯಕರ್ತರೊಬ್ಬರ ಮರಣಕ್ಕೆ ಕಾರಣಕರ್ತರಾಗಿದ್ದಾರೆ ಎಂಬ ಗಂಭೀರ ಆರೋಪಗಳು ಇವರ ಮೇಲಿದ್ದು ಆ ಪ್ರಕರಣ ಈಗ ವಿಚಾರಣೆಯಲ್ಲಿದೆ.
ಕೇರಳದಲ್ಲಿ ಈಳವ ಎಂದು ಕರೆಯಲ್ಪಡುವ ಈಡಿಗ ಸಮುದಾಯ ಇಪ್ಪತ್ತನೇ ಶತಮಾನದವರೆಗೂ ಹೇಯವಾದ ಅಸ್ಪಶ್ಯತೆಗೆ ಹಾಗೂ ಜಾತೀಯ ಹಾಗೂ ಲಿಂಗ ದಬ್ಬಾಳಿಕೆಗೆ ಒಳಗಾಗಿತ್ತು. ನಾರಾಯಣ ಗುರುಗಳ ಸುಧಾರಣಾ ಚಳವಳಿ ಆರಂಭವಾದ ನಂತರವೂ ಈ ದಬ್ಬಾಳಿಕೆ ದಮನಗಳು ಮುಂದುವರಿದಿದ್ದವು. ನಂತರವೇ ಎಲ್ಲರಿಗೂ ದೇವಸ್ಥಾನ ಪ್ರವೇಶ, ಸಾರ್ವಜನಿಕ ಪ್ರದೇಶಗಳ ಪ್ರವೇಶ, ಶಿಕ್ಷಣ ಪಡೆಯುವುದು ಶಾಸನಬದ್ಧವಾಯಿತು. ಅಸ್ಪಶ್ಯತೆ ಶಾಸನಾತ್ಮಕವಾಗಿ ನಿಷೇಧವಾಯಿತು. ಆದರೆ ಅದು ಮೊದಲಿನಂತೆ ಇಲ್ಲದಿದ್ದರೂ ಸಾಮಾಜಿಕ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಮುಂದುವರಿದುಕೊಂಡು ಬಂದಿತ್ತು. ಈಗ ಸಂಘಟಿತವಾಗಿರುವ ಈಳವ ಸಮುದಾಯ ಕೇರಳದ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಂಡಿರುವುದರಿಂದಾಗಿ ಸಾಮಾಜಿಕವಾಗಿಯೂ ಪ್ರಬಲವಾಗಿ ಬೆಳೆದು ನಿಂತಿದೆ. ಹಾಗಂತ ಆ ಸಮುದಾಯದ ಬಹುಸಂಖ್ಯಾತರು ಬಡ ಹಾಗೂ ಕೆಳಮಧ್ಯಮ ವರ್ಗವಾಗಿಯೇ ಉಳಿದಿದ್ದಾರೆ. ಕೇರಳದಲ್ಲಿ ಈಳವ, ತೀಯ, ಚೋವ ಎಂದೆಲ್ಲಾ ಕರೆಯಲ್ಪಡುವ ಈ ಸಮುದಾಯ 2010ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯ ಶೇ. 23ರಷ್ಟಿದ್ದಾರೆ. ಆದರೆ ಕೇರಳದ ಮಲಬಾರ್ ಪ್ರದೇಶದ ತೀಯರು ತಾವು ಈಳವ ಅಲ್ಲವೆಂದು ಪ್ರತಿಪಾದಿಸಿ ತಮ್ಮದೇ ಪ್ರತ್ಯೇಕ ತೀಯ ಮಹಾಸಭಾ ಸ್ಥಾಪಿಸಿಕೊಂಡಿದ್ದಾರೆ.
ಈ ಸಮುದಾಯದ ಬಹುಸಂಖ್ಯಾತರು ಸಣ್ಣ ರೈತರು, ಸೇಂದಿ ಇಳಿಸುವವರು, ತೆಂಗು ಕೃಷಿ, ತೆಂಗಿನ ನಾರಿನ ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಈ ಸಮುದಾಯದ ಬಹುತೇಕರು ಇದ್ದಾರೆ. ಈಗ ಒಂದು ಸಣ್ಣ ಸಂಖ್ಯೆ ಬಿಜೆಪಿಯಲ್ಲೂ ಸೇರಿಕೊಂಡು ಸಕ್ರಿಯರಾಗಿದ್ದಾರೆ. ಹಿಂದಿನ ಬ್ರಿಟಿಷ್ ಹಾಗೂ ಫ್ರೆಂಚ್ ಆಡಳಿತಗಳು ತಲಶ್ಯೇರಿ ಹಾಗೂ ಮಾಹೆಗಳಲ್ಲಿ ತೀಯಾ ಸೇನಾ ರೆಜಿಮೆಂಟ್ ಸ್ಥಾಪಿಸಿಕೊಂಡಿದ್ದರು. ಅಲ್ಲದೆ ಕೊಚ್ಚಿ ಹಾಗೂ ಟ್ರಾವಾಂಕೂರಿನ ರಾಜ ಕುಟುಂಬಗಳು ಕೂಡ ತೀಯಾ ಸೇನೆಯನ್ನು ಇಟ್ಟುಕೊಂಡಿದ್ದರು. ಅಂದರೆ ಈಳವ ಸಮುದಾಯಕ್ಕೆ ಸಮರ ಶೀಲ ಸಮುದಾಯವಾಗಿ ಪರಂಪರೆ ಇದೆ. ಸಮರ ಕಲೆಯಾದ ಕಳರಿ ಪಯಟ್ಟು, ಆಯುರ್ವೇದ, ಜಾನಪದ ಕಲೆಗಳಲ್ಲಿ ಈಳವ ಸಮುದಾಯ ಹಿಂದಿನಿಂದಲೂ ತೊಡಗಿಸಿಕೊಂಡಿತ್ತು.
ಕೇರಳದ ಒಟ್ಟು ಜನಸಂಖ್ಯೆಯ ಶೇ. 33ರಷ್ಟು ಜನರು ಮೇಲ್ಜಾತಿ ಹಾಗೂ ಮೇಲ್ವರ್ಗವಾಗಿದ್ದಾರೆ. ಅದರ ಅರ್ಧದಷ್ಟು ಸಿರಿಯನ್ ಕೆಥೋಲಿಕ್ ಕ್ರಿಶ್ಚಿಯನ್ನರಾಗಿದ್ದಾರೆ. 2011ರ ಸರಕಾರಿ ಸರ್ವೇ ಪ್ರಕಾರ ಬ್ರಾಹ್ಮಣರಲ್ಲಿನ ಶೇ. 13ರಷ್ಟು, ಸೈರೋ ಮಲಬಾರ್ ಕ್ರಿಶ್ಚಿಯನ್ನರ ಶೇ. 6.8ರಷ್ಟು, ಜಾಕೋಬೈಟ್ ಕ್ರಿಶ್ಚಿಯನ್ನರ 5.4ರಷ್ಟು, ನಾಯರ್ ಸಮುದಾಯದ 4.7ರಷ್ಟು ಜನರು ಐದು ಎಕರೆಗಳಿಗಿಂತಲೂ ಹೆಚ್ಚಿನ ಭೂಮಿ ಹೊಂದಿದವರಾಗಿದ್ದಾರೆ. ಆದರೆ ಈಳವ ಸಮುದಾಯದ ಕೇವಲ ಶೇ. 1.4ರಷ್ಟು, ಮುಸ್ಲಿಮರಲ್ಲಿನ ಶೇ. 1.9ರಷ್ಟು, ದಲಿತರಲ್ಲಿನ 0.1ರಷ್ಟು ಜನರು ಮಾತ್ರ ಐದು ಎಕರೆಗಿಂತಲೂ ಹೆಚ್ಚಿನ ಭೂಮಿ ಹೊಂದಿದವರಾಗಿದ್ದಾರೆ. ಕೇರಳದ ಒಟ್ಟು ಜನಸಂಖ್ಯೆಯ ಶೇ. 57ರಷ್ಟು ಜನರು ಒಂದು ಹೆಕ್ಟೇರಿಗಿಂತಲೂ ಕಡಿಮೆ ಭೂ ಹಿಡುವಳಿ ಹೊಂದಿದ್ದಾರೆ ಎಂದು 2011ರ ಸರಕಾರಿ ಅಂಕಿ-ಅಂಶ ಹೇಳುತ್ತದೆ. ಕೇರಳದಲ್ಲಿ ಸೆಂಟ್ ಎಂದು ಹೇಳಲಾಗುವ ತುಂಡು ಭೂಮಿಗಳನ್ನು ಹೊಂದಿದವರೇ ಬಹುಸಂಖ್ಯಾತರಾಗಿದ್ದಾರೆ. ಸೆಂಟ್ ಎಕರೆಯ ನೂರನೇ ಒಂದು ಭಾಗವಾಗಿದೆ.ಕೇರಳದ ಜನಸಾಂದ್ರತೆ ಒಂದು ಚದರ ಕಿಲೋ ಮೀಟರಿಗೆ 819ರಷ್ಟು ಇದೆ. ಇದು ಜಾಗತಿಕವಾಗಿಯೇ ಬಹಳ ಹೆಚ್ಚಿನ ಜನಸಾಂದ್ರತೆಯಾಗಿದೆ. ಗಲ್ಫ್, ಯುರೋಪ್, ಅಮೆರಿಕ, ಆಫ್ರಿಕಾಗಳಲ್ಲೂ ಕೇರಳೀಯರು ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಕಳಿಸುವ ಹಣಕಾಸು ಕೇರಳದ ಆರ್ಥಿಕತೆಯ ಒಂದು ಪ್ರಧಾನ ಮೂಲವಾಗಿದೆ.
ನಾರಾಯಣ ಗುರು, ಕುಮಾರನ್ ಆಶಾನ್, ಡಾ. ಪದ್ಮನಾಭನ್ ಪಲ್ಪು, ಸಹೋದರನ್ ಅಯ್ಯಪ್ಪನ್, ಅಯ್ಯನ್ ಕಾಳಿ ಮೊದಲಾದವರ ನಾಯಕತ್ವದ ಸಮಾಜ ಸುಧಾರಣಾ ಚಳವಳಿ, ಜಾತೀಯತೆ ವಿರೋಧಿ ಚಳವಳಿ ಮತ್ತು ಕಮ್ಯುನಿಸ್ಟ್ ಚಳವಳಿಯ ಪರಿಣಾಮವಾಗಿ ಕೇರಳದಲ್ಲಿ ಜಾತಿ ಶೋಷಣೆ, ತಾರತಮ್ಯತೆ ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಬಹಳ ಕಡಿಮೆ ಎನ್ನಬಹುದು. ಕೇರಳ ಪ್ರಾಥಮಿಕ ಹಾಗೂ ಪ್ರೌಢ ಹಾಗೂ ಪದವಿ ಶಿಕ್ಷಣದಲ್ಲಿ ಬಹಳ ಮುಂದಿದೆ. ಆದರೆ ಉನ್ನತ ಶಿಕ್ಷಣದಲ್ಲಿ ಹೇಳುವಂತಹ ಪ್ರಗತಿಯಾಗಿದೆ ಎನ್ನಲಾಗದು.
ಈಳವ, ನಾಯರ್, ಇನ್ನಿತರ ಶೂದ್ರ ಸಮುದಾಯಗಳ ಮದುವೆ, ಮನೆಯೊಕ್ಕಲು ಮೊದಲಾದ ಆಚರಣೆಗಳಲ್ಲಿ ಬ್ರಾಹ್ಮಣ ಪುರೋಹಿತರ ನೇರ ಪಾತ್ರ ಇರುವುದಿಲ್ಲ. ಆಯಾ ಸಮುದಾಯದ ಹಿರಿಯರೇ ಆಚಾರ ಸಂಪ್ರದಾಯಗಳನ್ನು ನಡೆಸಿಕೊಡುತ್ತಾರೆ. ಮದುವೆ ಕೇವಲ 10 ನಿಮಿಷಗಳ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಯಾವುದೇ ಮಂತ್ರಘೋಷಗಳು ಕೂಡ ಇರುವುದಿಲ್ಲ. ಆದರೆ ಜಾತೀಯತೆ ಬ್ರಾಹ್ಮಣಶಾಹಿ ಮೌಲ್ಯಗಳ ಪಾಲನೆಗಳ ಪ್ರಭಾವ ಬೇರೆ ಬೇರೆ ರೀತಿಗಳಲ್ಲಿ ಈಗಲೂ ಕೇರಳದಲ್ಲಿ ದಟ್ಟವಾಗಿದೆ. ರಾಜ್ಯದ ಹಲವಾರು ದೇವಾಲಯಗಳಲ್ಲಿ ಅನ್ಯ ಧರ್ಮದವರಿಗೆ, ನಾಸ್ತಿಕರಿಗೆ ದೇವಾಲಯ ಪ್ರವೇಶ ನಿಷೇಧಿಸಿ ಬೋರ್ಡ್ ಹಾಕುತ್ತಾರೆ. ಸರಕಾರಿ ಇಲಾಖೆಯಾದ ದೇವಸ್ವಂ ಬೋರ್ಡ್, ನಾಯರ್ ಸರ್ವೀಸ್ ಸೊಸೈಟಿ ಹಾಗೂ ಎಸ್ಎನ್ಡಿಪಿಯ ಹಿಡಿತದಲ್ಲಿರುವ ದೇವಸ್ಥಾನಗಳಲ್ಲೂ ಕೂಡ ಇಂತಹ ಬೋರ್ಡ್ಗಳು ಕಾಣಸಿಗುತ್ತವೆ. ಇಲ್ಲೆಲ್ಲಾ ಮಹಿಳೆಯರಿಗೆ ಹಲವಾರು ನಿಷೇಧಗಳು ನಿಬಂಧನೆಗಳನ್ನು ವಿಧಿಸಿಡಲಾಗಿದೆ. ಮಹಿಳೆಯರು ಅಶುದ್ಧರೆಂಬ ಹಳೇ ಬ್ರಾಹ್ಮಣಶಾಹಿ ಚಿಂತನೆಗಳೇ ಇಲ್ಲಿ ಚಲಾವಣೆಯಲ್ಲಿರುತ್ತವೆ. ಇವನ್ನೆಲ್ಲಾ ಪಾಲನೆ ಮಾಡುವವರಲ್ಲಿ ಬಹಳಷ್ಟು ಜನ ಕಮ್ಯೂನಿಸ್ಟ್ ಪಕ್ಷದ ನಾಯಕರು ಹಾಗೂ ಸದಸ್ಯರು ಕೂಡ ಇದ್ದಾರೆ ಎಂಬುದನ್ನು ಕೂಡ ಗಂಭೀರವಾಗಿ ಗಮನಿಸಬೇಕಾಗಿದೆ.
ಆದರೆ ಆರ್ಥಿಕ ಸಬಲತೆಯ ವಿಚಾರದಲ್ಲಿ ದಲಿತ ಆದಿವಾಸಿ ಸಮುದಾಯಗಳು ಈಗಲೂ ಹಿಂದಿವೆ. ಇವರು ಸರಕಾರದ ಪಡಿತರ ಇತ್ಯಾದಿ ಸೌಲಭ್ಯಗಳ ಮೇಲೆಯೇ ಹೆಚ್ಚೂ ಕಮ್ಮಿ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಸರಕಾರಿ ಪಡಿತರ, ಪಿಂಚಣಿ ಇತ್ಯಾದಿ ಸೌಲಭ್ಯಗಳನ್ನು ಅವಲಂಬಿಸಿರುವ ಜನಸಂಖ್ಯೆಕೇರಳದಲ್ಲಿ ಬಹುಸಂಖ್ಯಾತವಾಗಿದೆ. ಈಳವ ಸಮುದಾಯ ಇಂದು ರಾಜಕೀಯವಾಗಿ ಸಾಮಾಜಿಕವಾಗಿ ಬಲಿಷ್ಠ ಸಮುದಾಯ ಎನಿಸಿದ್ದರೂ ಆರ್ಥಿಕವಾಗಿ ಇವರಲ್ಲಿನ ಬಹುಸಂಖ್ಯಾತರು ಸಬಲರಾಗಿಲ್ಲ ಎನ್ನುವುದು ಗಮನಾರ್ಹವಾದುದು. ಅಲ್ಲದೆ ಬ್ರಾಹ್ಮಣಶಾಹಿ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಭಾರೀ ಹೋರಾಟ ನಡೆಸಿ ಇಂದು ದೊಡ್ಡ ಸಂಘಟಿತ ಶಕ್ತಿಯಾಗಿ ಬೆಳೆದಿರುವ ಈಳವ ಸಮುದಾಯದ ದೇವಾಲಯ ಪ್ರವೇಶ ಮೊದಲಾದ ವಿಚಾರಗಳಲ್ಲಿ ಬ್ರಾಹ್ಮಣಶಾಹಿ ಮೌಲ್ಯಗಳನ್ನೇ ಜಾರಿಯಲ್ಲಿ ಇಟ್ಟಿರುವ ವಾಸ್ತವ ಕೂಡ ಕಣ್ಣ ಮುಂದಿದೆ. ಇದಕ್ಕೆಲ್ಲಾ ಈಳವ ಸಮುದಾಯದ ರಾಜಕೀಯ ನಾಯಕತ್ವ ಹಾಗೂ ಸಂಘಟನೆಯ ನಾಯಕತ್ವ ಪ್ರಧಾನ ಕಾರಣ ಎನ್ನುವುದನ್ನು ಗಮನಿಸಬೇಕಾಗಿದೆ. ಅಂದರೆ ಕೇರಳದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಹಿಡಿತ ಈಗಲೂ ಮೇಲ್ಜಾತಿ, ಮೇಲ್ವರ್ಗದ ಕೈಯಲ್ಲೇ ಇದೆ. ನಂಬೂದಿರಿ, ನಾಯರ್, ಕೆಥೋಲಿಕ್ ಕ್ರಿಶ್ಚಿಯನ್ರೇ ಪ್ರಧಾನ ಪಾತ್ರಧಾರಿಗಳಾಗಿದ್ದಾರೆ. ಈಳವ, ಮುಸ್ಲಿಮ್ ಮೊದಲಾದ ಸಮುದಾಯಗಳ ರಾಜಕೀಯ ಪಾಲ್ಗೊಳ್ಳುವಿಕೆ ಇತರೆಡೆಗಳಿಗಿಂತ ಇಲ್ಲಿ ಹೆಚ್ಚಾಗಿದೆ ಎನ್ನಬಹುದು. ಸಿಪಿಐ, ಸಿಪಿಐ (ಎಂ) ನಂತಹ ಕಮ್ಯೂನಿಸ್ಟ್ ಪಕ್ಷಗಳ ಎಡಪ್ರಜಾಸತ್ತಾತ್ಮಕ ರಂಗ ಕೂಡ ಮೇಲ್ಜಾತಿ ಮೇಲ್ವರ್ಗಗಳ ಹಿಡಿತಗಳಲ್ಲೇ ಬಹಳ ಕಾಲ ಸಾಗಿ ಬಂದ ಉದಾಹರಣೆಯೂ ಇದೆ. ಈಗ ರಾಜಕೀಯ ನಾಯಕತ್ವದಲ್ಲಿ ಈಳವ, ಇನ್ನಿತರ ಸಮುದಾಯದ ಹಿನ್ನೆಲೆಯವರಿದ್ದರೂ ಅವರ ವರ್ಗ ಹಿತಾಸಕ್ತಿಗಳು ದಲಿತ ದಮನಿತ ಹಿಂದುಳಿದವರ ಪರವಾಗಿ ನಿಲ್ಲಲು ಬಿಡುತ್ತಿಲ್ಲ. ಕೇರಳದ ರಾಜಕೀಯದಲ್ಲಿ ನಾಯರ್, ಕೆಥೋಲಿಕ್ ಕ್ರಿಶ್ಚಿಯನ್, ಈಳವ ಸಮುದಾಯಗಳ ಸಂಘಟನಾ ನಾಯಕರೆೇ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎನ್ನುವ ಸತ್ಯವೂ ನಮ್ಮ ಮುಂದಿದೆ.
ಕೇರಳದ ಬಹುಸಂಖ್ಯಾತ ಜನಸಮುದಾಯಗಳ ಜೀವನ ಮಟ್ಟ ನೈಜ ಅರ್ಥದಲ್ಲಿ ಬದಲಾಗಿಲ್ಲ. ಅವರ ಆರ್ಥಿಕ ಸಬಲೀಕರಣವೂ ಹಾಗೇನೇ ಆಗಿದೆ. ಸರಕಾರ ಒದಗಿಸುವ ಪಡಿತರ, ಪಿಂಚಣಿ ಇತ್ಯಾದಿಗಳಿಂದಾಗಿ ಕೇರಳದ ಬಹುಸಂಖ್ಯಾತ ಜನಸಾಮಾನ್ಯರ ಜೀವನ ಮಟ್ಟ ಮಧ್ಯಮ ವರ್ಗದ ಮಟ್ಟದಲ್ಲಿದೆ ಎಂದು ಹೇಳಬಹುದು. ಆದರೆ ಈಗ ಕೇಂದ್ರ ಸರಕಾರ ವೃದ್ಧಾಪ್ಯ ಹಾಗೂ ವಿಧವಾ ಪಿಂಚಣಿ, ಉಚಿತ ಪಡಿತರ, ಉಚಿತ ವಿದ್ಯುತ್, ಉದ್ಯೋಗ ಭರವಸೆ, ವಿದ್ಯಾರ್ಥಿ ವೇತನ ಇತ್ಯಾದಿಗಳನ್ನು ರದ್ದುಗೊಳಿಸುತ್ತಾ ಬರುತ್ತಿದೆ. ಅನಿಲ ಸಬ್ಸಿಡಿ ಬಹುತೇಕ ಜನರಿಗೆ ಕನಸಾಗಿ ಬಿಟ್ಟಿದೆ. ಹೀಗಿರುವಾಗ ಆಹಾರ, ಕೃಷಿ, ವಿದ್ಯುತ್, ಕೈಗಾರಿಕೆ ಹೀಗೆ ಯಾವ ಕ್ಷೇತ್ರದಲ್ಲಿಯೂ ಸ್ವಾವಲಂಬನೆ ಸಾಧಿಸದ ಕೇರಳದ ಆರ್ಥಿಕತೆ ಹಾಗೂ ಸಾಮಾಜಿಕ ಸಬಲತೆಯ ಭವಿಷ್ಯ ಏನಾಗಬಹುದು ಎನ್ನುವುದಕ್ಕೆ ಬಹಳ ಆಲೋಚಿಸುವ ಅಗತ್ಯ ಇಲ್ಲವಲ್ಲ. ಪ್ರಭುತ್ವ ಪ್ರಾಯೋಜಿತ ಮತ್ತು ಅವಲಂಬಿತ ಜೀವನ ಮಟ್ಟ ಸುಧಾರಣೆ ದೀರ್ಘ ಕಾಲ ಬಾಳಲು ಸಾಧ್ಯವಾಗದು ಎನ್ನುವುದಕ್ಕೆ ಕೇರಳ ಕೂಡ ಉದಾಹರಣೆಯಾಗಿ ನಿಲ್ಲುತ್ತದೆ.
ಮಿಂಚಂಚೆ: nandakumarnandana67@gmail.com