ವಿಜಿಂಗಮ್ ಯೋಜನೆಯಿಂದ ಯಾರಿಗೆ ಲಾಭ?
ಕಳೆದ ವಾರ ಕೇರಳದ ಅತೀ ದೊಡ್ಡ ಮಹಾನಗರವಾದ ಕೊಚ್ಚಿನ್ನ ಚೆಲ್ಲಾನಮ್ನಿಂದ ಫೋರ್ಟ್ ಕೊಚ್ಚಿಯವರೆಗೆ ಹದಿನೇಳು ಕಿಲೋ ಮೀಟರುಗಳ ಮಾನವ ಸರಪಳಿ ಕಟ್ಟಿ ವಿಜಿಂಗಮ್ ಹೋರಾಟವನ್ನು ಬೆಂಬಲಿಸಿ ಭಾರೀ ಪ್ರತಿಭಟನೆ ನಡೆಯಿತು. ಸಾವಿರಾರು ಜನರು ಈ ಮಾನವ ಸರಪಳಿ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿಜಿಂಗಮ್ ಯೋಜನೆಗೆ ತಮ್ಮ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅದೇ ದಿನವೇ ಕೇರಳ ರಾಜ್ಯದ 25ಕ್ಕೂ ಹೆಚ್ಚು ವಿವಿಧ ಸ್ಥಳಗಳಲ್ಲಿ ವಿಜಿಂಗಮ್ ಯೋಜನೆಯನ್ನು ವಿರೋಧಿಸಿ ಹಾಗೂ ಯೋಜನೆಯನ್ನು ಕೂಡಲೇ ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆಗಳು ನಡೆದವು. ಎಲ್ಲೆಡೆಗಳಲ್ಲೂ ಲ್ಯಾಟಿನ್ ಕೆಥೊಲಿಕ್ ಸಮುದಾಯ, ಮೀನುಗಾರ ಸಮುದಾಯ, ಮೀನು ವ್ಯಾಪಾರಿಗಳ ಸಮುದಾಯ, ಮಹಿಳೆಯರು, ಪರಿಸರವಾದಿಗಳು ಒಗ್ಗೂಡಿ ಪ್ರತಿಭಟಿಸಿದ್ದರು.
ಕೇರಳದ ರಾಜಧಾನಿಯಾದ ತಿರುವನಂತಪುರ ಮೀನುಗಾರ ಸಮುದಾಯದ, ಲ್ಯಾಟಿನ್ ಕೆಥೊಲಿಕ್ ಸಮುದಾಯದ, ಪರಿಸರವಾದಿ ಸಮೂಹಗಳ, ಹೋರಾಟಗಳ ಕೇಂದ್ರಬಿಂದುವಾಗಿ ಮಾರ್ಪಟ್ಟು ಬಹಳ ಕಾಲವಾಗಿದೆ. ತಿರುವನಂತಪುರದ ಸಮುದ್ರ ತೀರವಾದ ವಿಜಿಂಗಮ್ನಲ್ಲಿ ಭಾರೀ ಆಳ ಸಮುದ್ರ ಬಂದರು ನಿರ್ಮಾಣ ಯೋಜನೆಯೇ ಇದಕ್ಕೆಲ್ಲ ಪ್ರಧಾನ ಕಾರಣವಾಗಿದೆ. ಈ ಯೋಜನೆ ಆರಂಭವಾದಾಗಿನಿಂದಲೂ ಹೋರಾಟಗಳು ಒಂದಲ್ಲಾ ಒಂದು ರೀತಿಯಲ್ಲಿ ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಈ ಮಧ್ಯೆ ಜನಸಮುದಾಯಗಳ ಭಾರೀ ಪ್ರತಿಭಟನೆಗಳಿಂದಾಗಿ ಈ ಯೋಜನೆ ನಿರ್ಮಾಣಕಾರ್ಯ ಒಂದು ವಾರ ಕಾಲ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿಯೂ ಬಂದಿತ್ತು. ಇದರ ನಿರ್ಮಾಣ ಕಾರ್ಯ ಶೇ. 33ರಷ್ಟು ಈಗಾಗಲೇ ಮುಗಿದಿದೆ ಎನ್ನಲಾಗುತ್ತಿದೆ. ಈ ಸಮಸ್ಯೆ ನ್ಯಾಯಾಲಯದ ಕಟಕಟೆಯವರೆಗೂ ಸಾಗಿದೆ. ಕೇರಳದ ಉಚ್ಚ ನ್ಯಾಯಾಲಯ ಅರ್ಜಿದಾರ ಸಂಘಟನೆಗಳ ಕೋರಿಕೆಯಂತೆ ಯೋಜನೆಯ ನಿಲುಗಡೆಯನ್ನು ಮಾನ್ಯ ಮಾಡಿಲ್ಲ. ಶಾಂತಿಯುತವಾದ ಪ್ರತಿಭಟನೆಗೆ ಅವಕಾಶವಿದೆ ಎಂದಿದೆ. ಸರಕಾರ ಹೋರಾಟಗಾರ ಸಮುದಾಯಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ತಿಳಿಸಿದೆ. ನ್ಯಾಯಾಲಯ ಅದಾನಿ ಸಮೂಹದ ಕೋರಿಕೆಯನ್ನು ಮನ್ನಿಸಿ ಯೋಜನೆ ನಿರ್ಮಾಣಕ್ಕೆ ಪೊಲೀಸ್ ರಕ್ಷಣೆಯನ್ನು ಒದಗಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಕಳೆದ ವಾರ ಕೇರಳದ ಅತೀ ದೊಡ್ಡ ಮಹಾನಗರವಾದ ಕೊಚ್ಚಿನ್ ನ ಚೆಲ್ಲಾನಮ್ನಿಂದ ಫೋರ್ಟ್ ಕೊಚ್ಚಿಯವರೆಗೆ ಹದಿನೇಳು ಕಿಲೋ ಮೀಟರುಗಳ ಮಾನವ ಸರಪಳಿ ಕಟ್ಟಿ ವಿಜಿಂಗಮ್ ಹೋರಾಟವನ್ನು ಬೆಂಬಲಿಸಿ ಭಾರೀ ಪ್ರತಿಭಟನೆ ನಡೆಯಿತು. ಸಾವಿರಾರು ಜನರು ಈ ಮಾನವ ಸರಪಳಿ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿಜಿಂಗಮ್ ಯೋಜನೆಗೆ ತಮ್ಮ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅದೇ ದಿನವೇ ಕೇರಳ ರಾಜ್ಯದ 25ಕ್ಕೂ ಹೆಚ್ಚು ವಿವಿಧ ಸ್ಥಳಗಳಲ್ಲಿ ವಿಜಿಂಗಮ್ ಯೋಜನೆಯನ್ನು ವಿರೋಧಿಸಿ ಹಾಗೂ ಯೋಜನೆಯನ್ನು ಕೂಡಲೇ ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆಗಳು ನಡೆದವು. ಎಲ್ಲೆಡೆಗಳಲ್ಲೂ ಲ್ಯಾಟಿನ್ ಕೆಥೊಲಿಕ್ ಸಮುದಾಯ, ಮೀನುಗಾರ ಸಮುದಾಯ, ಮೀನು ವ್ಯಾಪಾರಿಗಳ ಸಮುದಾಯ, ಮಹಿಳೆಯರು, ಪರಿಸರವಾದಿಗಳು ಒಗ್ಗೂಡಿ ಪ್ರತಿಭಟಿಸಿದ್ದರು. ವಿಜಿಂಗಮ್ ವಿವಿಧೋದ್ದೇಶ ಆಳ ಸಮುದ್ರ ಬಂದರು ಯೋಜನೆಯನ್ನು ಕೂಡಲೇ ನಿಲ್ಲಿಸಿ ತಜ್ಞರಿಂದ ಜನರು, ಸಮುದ್ರ, ಜಲಚರಗಳು, ಪರಿಸರದ ಮೇಲೆ ವಿಜಿಂಗಮ್ ಯೋಜನೆಯ ಸಾಧಕ ಬಾಧಕಗಳ ಅಧ್ಯಯನ ನಡೆಸಬೇಕೆಂದು ಒತ್ತಾಯಿಸಲಾಯಿತು.
ದಶಕದ ಹಿಂದೆ ಕೊಚ್ಚಿಯಲ್ಲಿ ನಿರ್ಮಿಸಿದ ವಲ್ಲಾರ್ ಪಾಡಮ್ ಕಂಟೈನರ್ ಟ್ರಾನ್ಸ್ ಶಿಪ್ಮೆಂಟ್ ಟರ್ಮಿನಲ್ ಯೋಜನೆಯಿಂದ ಸುತ್ತಮುತ್ತಲಿನ ಸಮುದ್ರ ತೀರಗಳಲ್ಲಿ ಆಗುತ್ತಿರುವ ಸಮುದ್ರ ಕೊರೆತ, ಪರಿಸರ ಸಂಬಂಧಿ ಸಮಸ್ಯೆಗಳು, ಜಲಚರಗಳ ನಾಶ, ಜನರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಕೂಡ ಈ ಸಂದರ್ಭದಲ್ಲಿ ಪ್ರಸ್ತಾಪಿಸಿ ಪರಿಹಾರಕ್ಕಾಗಿ ಒತ್ತಾಯಿಸಲಾಯಿತು. ಈ ಯೋಜನೆಯಿಂದ ನಿರ್ವಸಿತರಾಗಿರುವ 250ಕ್ಕೂ ಹೆಚ್ಚು ಕುಟುಂಬಗಳಿಗೆ ಈಗಲೂ ಪುನರ್ವಸತಿ ಕಲ್ಪಿಸದೆ ಇರುವ ಸರಕಾರದ ಗಂಭೀರ ಸಮಸ್ಯೆಯನ್ನು ಉದಾಹರಣೆಯೊಂದಿಗೆ ಬೊಟ್ಟು ಮಾಡಿ ಹೋರಾಟಗಾರರು ವಿವರಿಸಿದ್ದೂ ನಡೆಯಿತು. ದುಬೈ ಪೋರ್ಟ್ಸ್ ವರ್ಲ್ಡ್ ನಿರ್ಮಿಸಿ ಮೂವತ್ತು ವರ್ಷಗಳವರೆಗೆ ಹತೋಟಿ ಇಟ್ಟುಕೊಂಡಿರುವ ಕೊಚ್ಚಿ ಇಂಟರ್ ನ್ಯಾಷನಲ್ ಕಂಟೈನರ್ ಟ್ರಾನ್ಸ್ ಶಿಪ್ಮೆಂಟ್ ಟರ್ಮಿನಲ್ ಎಂಬ ಬಹುಪ್ರಚಾರಿತ ಇಂಡಿಯಾದ ಮೊದಲ ಇಂತಹ ಟರ್ಮಿನಲ್ ಆರಂಭವಾಗಿ ಹತ್ತು ವರ್ಷಗಳಿಗೂ ಹೆಚ್ಚು ಕಾಲವಾಗಿದ್ದರೂ ಇದುವರೆಗೂ ಬಾಧಿತ ಕುಟುಂಬಗಳ ಪುನರ್ವಸತಿ ಮಾಡದೆ ಸರಕಾರಗಳು ಕಾಲ ತಳ್ಳುತ್ತಲೇ ಬರುತ್ತಿವೆ. ವಿಜಿಂಗಮ್ ವಿವಿದೋದ್ದೇಶ ಆಳ ಸಮುದ್ರ ಬಂದರು ಯೋಜನೆ ವ್ಯವಸ್ಥಿತವಾಗಿ ಅದಾನಿ ಸಮೂಹದ ಕೈಗೆ ಹೋಗುವಂತೆ ಮಾಡಲಾಗಿದೆ.
ಅದರ ಏಕೈಕ ಟೆಂಡರುದಾರ ಅದಾನಿ ಸಮೂಹವಾಗಿತ್ತು. ಈಗಿರುವ ಒಪ್ಪಂದದ ಪ್ರಕಾರ ಈ ಬಂದರಿನ ಹಣಕಾಸು, ನಿರ್ಮಾಣ, ನಿರ್ವಹಣೆ, ವರ್ಗಾವಣೆ ಆಧಾರದಲ್ಲಿ ಅದಾನಿ ಸಮೂಹ ಸುಮಾರು ಅರವತ್ತು ವರ್ಷಗಳ ಕಾಲ ಈ ಬಂದರಿನ ಮೇಲೆ ನೇರ ಹತೋಟಿ ಹೊಂದಿರುತ್ತದೆ. ಕೇರಳ ಸರಕಾರ 'ವಿಜಿಂಗಮ್ ಇಂಟರ್ ನ್ಯಾಷನಲ್ ಸೀ ಪೋರ್ಟ್ಸ್ ಲಿಮಿಟೆಡ್' ಎಂಬ ಕಂಪೆನಿಯ ಮೂಲಕ ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಿದ್ದರೂ ಅದಾನಿ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಆ್ಯಂಡ್ ಎಸ್ಇಝೆಡ್ ಅರವತ್ತು ವರ್ಷಗಳ ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ. ಆರಂಭದಲ್ಲಿ ಮೂವತ್ತು ವರ್ಷಗಳಷ್ಟು ಇದ್ದ ಅವಧಿಯನ್ನು ನಂತರದಲ್ಲಿ ಹಲವು ನೆಪಗಳೊಡ್ಡಿ ಅರವತ್ತು ವರ್ಷಗಳಿಗೆ ಹೆಚ್ಚಿಸಿದ್ದೂ ನಡೆದಿದೆ. ಈ ಯೋಜನೆ 2015ರಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರವಿದ್ದಾಗ ಆರಂಭವಾಗಿದ್ದು ಈಗ ಎಡರಂಗ ಸರಕಾರ ಆ ಯೋಜನೆಯನ್ನು ಬಿಗಿಪಟ್ಟು ಹಿಡಿದು ಜಾರಿಮಾಡತೊಡಗಿದೆ. ಹೋರಾಡುತ್ತಿರುವ ಜನ ಸಮೂಹವನ್ನು ಯಾಮಾರಿಸಲು ಎಲ್ಲಾ ಪ್ರಯತ್ನಗಳನ್ನೂ ಎಡರಂಗ ಸರಕಾರ ನಡೆಸುತ್ತಿದೆ. ಈ ಯೋಜನೆಯಿಂದ ಜನಸಮುದಾಯಗಳಿಗಾಗಲೀ, ಪರಿಸರಕ್ಕಾಗಲೀ, ಜಲಚರಗಳಿಗಾಗಲೀ ಯಾವುದೇ ಹಾನಿಯಾಗದು. ನಿರ್ವಸಿತರಿಗೆ ಯೋಗ್ಯ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿಕೊಂಡು ಬರತೊಡಗಿದೆ.ಆದರೆ ಕಾರ್ಯದಲ್ಲಿ ಯಾವುದೇ ಪುನರ್ವಸತಿ ಕಾರ್ಯಗಳು ಕಾಣದಿರುವುದು, ಜನರು ಎತ್ತಿರುವ ಪರಿಸರ, ಕಡಲ್ಕೊರೆತ ಇತ್ಯಾದಿ ಕಂಟಕಗಳ ಬಗ್ಗೆ ಯಾವುದೇ ಖಚಿತ ಉತ್ತರದಾಯಿತ್ವವನ್ನು ಎಡರಂಗ ಸರಕಾರ ವಹಿಸದೆ ಹೋಗಿದೆ.
ಸ್ವತಹ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೋರಾಡುತ್ತಿರುವ ಜನರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಈ ಯೋಜನೆಯ ವಿರುದ್ಧ ನಡೆಯುತ್ತಿರುವ ಹೋರಾಟ ಪೂರ್ವ ಯೋಜಿತವಾದುದು. ಹೋರಾಟಗಾರರು ಹೊರಗಿನವರು. ಹೊರಗಿನವರ ಚಿತಾವಣೆಯಿಂದ ಈ ಅಭಿವೃದ್ಧಿ ಯೋಜನೆಯನ್ನು ವಿರೋಧಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ವಿಜಿಂಗಮ್ ಬಂದರು ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದೆಲ್ಲಾ ಹೇಳಿಕೆಗಳನ್ನು ಕೇರಳ ವಿಧಾನಸಭೆಯಲ್ಲೇ ನೀಡಿದ್ದಾರೆ. ಮುಖ್ಯಮಂತ್ರಿ ವಿಜಯನ್ರ ಇಂತಹ ಹೇಳಿಕೆಗಳಿಗೆ ಹಲವು ವಲಯಗಳಿಂದ ಭಾರೀ ವಿರೋಧಗಳು ವ್ಯಕ್ತವಾಗಿವೆ. ಇಡೀ ಯೋಜನೆಯನ್ನೇ ಹೊರಗಿನವರಿಗೆ ಕೊಟ್ಟು, ಕೇರಳದ ನೆಲ ಹಾಗೂ ಕಡಲ ತೀರದ ನಿಯಂತ್ರಣವನ್ನು ಅರವತ್ತು ವರ್ಷಗಳವರೆಗೆ ಹೊರಗಿನ ಅದಾನಿಯಂತಹ ಪರಾವಲಂಬಿ ಕಾರ್ಪೊರೇಟ್ಗಳಿಗೆ ವಹಿಸಿರುವುದೂ ಅಲ್ಲದೆ, ಅದಾನಿಗೆ ಜನಸಾಮಾನ್ಯರ ಖರ್ಚಿನಲ್ಲಿ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಲಕ್ಷಾಂತರ ಕೋಟಿ ರೂ. ಲಾಭ ಒದಗಿಸಿಕೊಡುವ, ಕೇರಳದ ಜನಸಮುದಾಯಗಳಿಗೆ ಹಾಗೂ ಪರಿಸರಕ್ಕೆ ಭಾರೀ ಹಾನಿ ಹಾಗೂ ನಷ್ಟಗಳನ್ನು ತಂದೊಡ್ಡುವ ಈ ಯೋಜನೆಯನ್ನು ವಿರೋಧಿಸುವವರು ಹೊರಗಿನವರು ಎನ್ನುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರದು ಎಂತಹ ಸೋಗಲಾಡಿತನವೆಂದು ಭಾರೀ ಟೀಕೆಯೂ ವ್ಯಕ್ತವಾಗಿದೆ.
ನೂರೈವತ್ತು ಮೀಟರು ಅಗಲ 600ರಿಂದ 700 ಎಕರೆಗಳಷ್ಟು ವಿಸ್ತೀರ್ಣವಿರುವ ಈ ಬಂದರಿನ ನಿರ್ಮಾಣದಿಂದಾಗಿ ಸುಮಾರು 50,000ದಷ್ಟು ಮೀನುಗಾರರ ಬದುಕುಗಳಿಗೆ, 200ಕ್ಕೂ ಹೆಚ್ಚಿನ ಬಗೆಯ ಮೀನು ಇನ್ನಿತರ ಜಲಚರಗಳಿಗೆ ಗಂಭೀರವಾಗಿ ಬಾಧಿಸುತ್ತದೆ, ಈ ಯೋಜನೆಯ ಸುತ್ತಮುತ್ತಲಿನ ನೂರಾರು ಕಿಲೋಮೀಟರುಗಳ ವ್ಯಾಪ್ತಿಯಲ್ಲಿ ಗಂಭೀರವಾದ ಕಡಲ್ಕೊರೆತಗಳಿಗೆ ಕಾರಣವಾಗುತ್ತದೆ ಎಂದು ಯೋಜನೆಯನ್ನು ವಿರೋಧಿಸಿ ಹೋರಾಡುತ್ತಿರುವ ಸಂಘಟನೆಗಳು ಪ್ರತಿಪಾದಿಸುತ್ತಿವೆ. ಈಗಿರುವ ಒಪ್ಪಂದದ ಪ್ರಕಾರ ಯೋಜನೆಯ ಶೇ. 68ರಷ್ಟು ಹಣಕಾಸು ಮತ್ತು ಬೇಕಾಗುವ ಒಟ್ಟು ಭೂಮಿ ಕೇರಳ ಸರಕಾರ ಹಾಗೂ ಜನರದ್ದಾಗಿದ್ದರೆ ಅದಾನಿಗೆ ಈ ಯೋಜನೆಯಿಂದ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚಿನ ಲಾಭ ದೊರೆಯಲಿದೆ. ಈ ಯೋಜನೆಯ ಶೇ. 30ರಷ್ಟು ಭೂಮಿಯನ್ನು ಹೊಟೇಲ್, ರೆಸಾರ್ಟ್, ಮಾಲ್ ಇನ್ನಿತರ ವಾಣಿಜ್ಯಾತ್ಮಕ ಉದ್ದೇಶಗಳಿಗಾಗಿ ಅದಾನಿ ಸಮೂಹ ಬಳಸುತ್ತದೆ. ಹದಿನೈದು ವರ್ಷಗಳು ಕಳೆದ ನಂತರವೇ ಬರುತ್ತಿರುವ ಒಟ್ಟು ಲಾಭದಲ್ಲಿ ಕೇವಲ ಶೇ. 1ರಷ್ಟನ್ನು ಮಾತ್ರ ಕೇರಳ ಸರಕಾರ ಪಡೆಯತೊಡಗುತ್ತದೆ. ಉಳಿದಂತೆ ಅರವತ್ತು ವರ್ಷಗಳ ಅವಧಿ ಮುಗಿದ ನಂತರವೇ ಕೇರಳ ಸರಕಾರದ ಹಿಡಿತಕ್ಕೆ ಈ ಬಂದರು ವರ್ಗಾವಣೆಯಾಗುತ್ತದೆ. ಅಲ್ಲದೆ ಈ ಯೋಜನೆಯ ಅಕ್ಕಪಕ್ಕದ ಪ್ರದೇಶವನು ್ನಅದಾನಿ ಸಮೂಹ ಖರೀದಿಸಿ ಇಡತೊಡಗಿದೆ.
ಬಾಧಿತರಿಗೆ ಪುನರ್ವಸತಿಯೂ ಇರುವುದಿಲ್ಲ, ಪರಿಸರ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುವುದಿಲ್ಲ. ರಾಜ್ಯಕ್ಕೆ, ಪರಿಸರಕ್ಕೆ ಮತ್ತು ಜನರಿಗೆ ಆಗುವ ನೇರ ಹಾಗೂ ಪರೋಕ್ಷ ನಷ್ಟಗಳ ಜವಾಬ್ದಾರಿಯನ್ನು ಸರಕಾರಗಳಾಗಲೀ, ಅದಾನಿ ಸಮೂಹವಾಗಲೀ ಭರಿಸುವುದಿಲ್ಲ. ಅಲ್ಲದೆ ಯೋಜನೆಯಲ್ಲಿ ಈಗಲೂ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ, ಮುಂದೆಯೂ ಹೇಳಿಕೊಳ್ಳುವಂತಹ ಉದ್ಯೋಗಾವಕಾಶ ಇರುವುದಿಲ್ಲ ಎಂದು ಹೋರಾಡುತ್ತಿರುವ ಸಂಘಟನೆಗಳು ಹೇಳುತ್ತಿವೆ.
ಅದಲ್ಲದೆ ವಿಜಿಂಗಮ್ ಯೋಜನೆಗೆ ವಿರುದ್ಧವಾದ ಅಭಿಪ್ರಾಯಗಳನ್ನು ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ವರದಿ ನೀಡಿತ್ತು. ಈ ಯೋಜನೆಯ ನಿಬಂಧನೆಗಳು ಕೇರಳ ಸರಕಾರದ ಹಿತಾಸಕ್ತಿಗಳ ವಿರುದ್ಧವಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಯೋಜನೆಯ ರಿಯಾಯಿತಿ ಅವಧಿಯನ್ನು ಹೆಚ್ಚಿಸಿರುವುದರಿಂದಾಗಿಯೇ ಅದಾನಿಗೆ ಹೆಚ್ಚುವರಿಯಾಗಿ 297 ಬಿಲಿಯನ್ ರೂ. ಲಾಭವಾಗಲಿದೆ ಎಂದು ಹೇಳಲಾಗಿದೆ. ಸುಮಾರು 7,525 ಕೋಟಿ ರೂ. ವೆಚ್ಚದ್ದೆಂದು ಹೇಳಲಾಗಿರುವ ಈ ಯೋಜನೆಯ ನಿರ್ಮಾಣ ಕಾರ್ಯ ಆರಂಭದಲ್ಲಿ 2019 ಡಿಸೆಂಬರ್ ಮತ್ತು ಆಗಸ್ಟ್ 2020ರ ಮಧ್ಯೆ ಮುಗಿಯಲಿದೆ ಎಂದು ಹೇಳಲಾಗಿತ್ತು. ಆದರೆ ಈಗ 2023ಕ್ಕೆ ಮೊದಲ ಹಂತ ಮುಗಿಯಲಿದೆ ಎಂದು ಹೇಳಲಾಗುತ್ತಿದೆ. ವಿಜಿಂಗಮ್ ಬಂದರು ಅಂತರ್ರಾಷ್ಟ್ರೀಯವಾಗಿ ಸಿಂಗಾಪುರ, ಕೊಲಂಬೊ ಮತ್ತು ದುಬೈ ಬಂದರುಗಳಿಗೆ ಪೈಪೋಟಿ ನೀಡಲಿದೆ ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ ಈ ಹಿಂದೆ ಕೊಚ್ಚಿಯಲ್ಲಿ ನಿರ್ಮಿಸಿರುವ ವಲ್ಲಾರ್ ಪಾಡಮ್ ಕಂಟೈನರ್ ಟರ್ಮಿನಲ್ ಹೇಳಿಕೊಂಡಿರುವಂತೆ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಬದಲಿಗೆ ಒಂದು ವಿಫಲ ಯೋಜನೆಯಾಗಿ ಮಾರ್ಪಟ್ಟಿದೆ ಎಂಬ ಗಂಭೀರ ಟೀಕೆಗಳನ್ನು ಎದುರಿಸಲು ತೊಡಗಿ ಬಹಳ ಕಾಲವಾಗಿದೆ. ಆ ಯೋಜನೆ ಕೂಡ ದುಬೈ ಮೂಲದ ಕಂಪೆನಿಯ ಹತೋಟಿಯಲ್ಲಿದೆ ಎನ್ನುವುದನ್ನು ಗಮನಿಸಬೇಕಾಗಿದೆ.
ವಿಜಿಂಗಮ್ ಯೋಜನೆಯ ರೂಪುಗೊಳ್ಳುವಿಕೆಗೆ ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಕಾಲದ ಚರಿತ್ರೆಯನ್ನು ಹೊಂದಿದೆ ಎನ್ನಲಾಗುತ್ತಿದೆ. ಅಂದರೆ ಜಾಗತೀಕರಣ ಆರಂಭವಾದ ನಂತರದಿಂದ ಈ ಯೋಜನೆ ಗರಿಗೆದರತೊಡಗಿದೆ.
ಆರಂಭದಲ್ಲಿ ಎರಡು ಸುತ್ತು ಟೆಂಡರ್ ಪ್ರಕ್ರಿಯೆ ನಡೆದು ಮೊದಲ ಸುತ್ತಿನಲ್ಲಿ ಈ ಯೋಜನೆಯ ಟೆಂಡರ್ ಗುತ್ತಿಗೆ ಚೀನಾ ಕಂಪೆನಿಯ ಪಾಲಾಗಿತ್ತು. ನಂತರ ಯೂನಿಯನ್ ಸರಕಾರ ಅದಕ್ಕೆ ಅನುಕೂಲಕರವಾಗಿಲ್ಲದ್ದರಿಂದಾಗಿ ಅದು ನಿಂತು ಹೋಗಿತ್ತು. ನಂತರ ಎರಡನೇ ಸುತ್ತಿನ ಟೆಂಡರ್ ಪ್ರಕ್ರಿಯೆ ನಡೆದು ಲ್ಯಾಂಕೋ ಕಂಪೆನಿಗೆ ಹೋಗಿತ್ತು. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಕಾನೂನು ಹೋರಾಟ ಶುರುವಾದ ಮೇಲೆ ಲ್ಯಾಂಕೋ ಸಮೂಹ ಆ ಟೆಂಡರಿನಿಂದ ಹಿಂದಕ್ಕೆ ಸರಿಯಿತು. ನಂತರ ವೆಲ್ಸ್ಪನ್ ಕಂಪೆನಿಯ ಪಾಲಾಗಿತ್ತು. ಅದರಲ್ಲೂ ಕೇರಳ ಸರಕಾರದ ಜೊತೆಗೆ ಹೊಂದಾಣಿಕೆಯಾಗದ್ದರಿಂದ ಬಿದ್ದುಹೋಯಿತು. ನಂತರವೇ ಅದಾನಿ ಸಮೂಹ ಏಕೈಕ ಬಿಡ್ಡರ್ ಆಗಿ ವಿಜಿಂಗಮ್ ಯೋಜನೆಯನ್ನು ತನ್ನ ಪಾಲಾಗಿಸಿಕೊಂಡಿತ್ತು. ಇದರಲ್ಲಿ ವೆಲ್ಸ್ಪನ್ ಜೊತೆಗಿದ್ದ ತಗಾದೆಗಳಿಗಿಂತಲೂ ಹೆಚ್ಚಿನ ಕಠಿಣ ನಿಬಂಧನೆಗಳು ಹಾಗೂ ಹೆಚ್ಚಿನ ಕಾಲಾವಧಿಯಿದ್ದಾಗಲೂ ಆಗಿನ ಕಾಂಗ್ರೆಸ್ ಸರಕಾರ ಯಾವುದೇ ತಕರಾರು ಮಾಡದೆ ಯೋಜನೆ ಕಾರ್ಯಗೊಳಿಸುವತ್ತ ಸಾಗಿತ್ತು.
ಈಗ ಮಾತ್ರ ವಿಧಾನ ಸಭೆಯಲ್ಲಿ ಈ ಯೋಜನೆಗೆ ತೋರುಗಾಣಿಕೆಯ ವಿರೋಧವನ್ನು ಕಾಂಗ್ರೆಸ್ ವ್ಯಕ್ತಪಡಿಸುತ್ತಿದೆ. ಯಾಕೆಂದರೆ ಈ ವಿವಾದದ ರಾಜಕೀಯ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುವ ಪರಿಸ್ಥಿತಿ ಕೂಡ ಇಲ್ಲ. ಬಿಜೆಪಿಗೂ ಕೂಡ ಆ ಸಾಧ್ಯತೆ ಇಲ್ಲ. ಅಲ್ಲದೆ ಈ ಯೋಜನೆಯನ್ನು ವಿರೋಧಿಸಿ ಹೋರಾಡುತ್ತಿರುವವರಲ್ಲಿ ಬಹುತೇಕರು ಎಡರಂಗದ ಬೆಂಬಲಿಗರೇ ಆಗಿದ್ದಾರೆ. ಹಾಗಾಗಿ ಎಡರಂಗ ಸರಕಾರ ಈ ಮಟ್ಟಕ್ಕೆ ನಿರಾತಂಕವಾಗಿದೆ ಎನ್ನಬಹುದು. ಆದರೆ ಈ ಯೋಜನೆಯ ವಿರೋಧಿ ಹೋರಾಟಗಳಿಂದಾಗಿ ಕೇರಳದ ನಾಲ್ಕೈದು ಜಿಲ್ಲೆಗಳಲ್ಲಿ ತನ್ನ ಮತಬೆಂಬಲ ಕುಸಿಯುವ ಆತಂಕವನ್ನೂ ಕೂಡ ಎಡರಂಗ ಸರಕಾರ ಎದುರಿಸುತ್ತಿದೆ. ಬಹು ಪ್ರಚರಿತ ಸೆಮಿ ಹೈಸ್ಪೀಡ್ ರೈಲು ಯೋಜನೆ ವಿರೋಧಿ ಬಿಸಿಯಿನ್ನೂ ಆರದೇ ಇರುವಾಗ ವಿಜಿಂಗಮ್ ವಿರೋಧಿ ಹೋರಾಟ ದಿನೇ ದಿನೇ ತೀವ್ರಗೊಳ್ಳ ತೊಡಗಿರುವುದು ಭಾಷಣಗಳಲ್ಲಿ ಭಾರೀ ಕಾರ್ಪೊರೇಟ್ ವಿರೋಧಿ ಪದಪುಂಜಗಳನ್ನು ಹಾರಿಸಿಬಿಡುತ್ತಾ ಇರುವ ಎಡರಂಗ ಸರಕಾರಕ್ಕೆ ಭಾರೀ ಮುಜುಗರಗಳಿಗೆ ಕಾರಣವಾಗಿದೆ.
ಈ ಯೋಜನೆಗೆ ಪ್ರಬಲ ವಿರೋಧ ತೋರುತ್ತಿರುವವರಲ್ಲಿ ಲ್ಯಾಟಿನ್ ಕೆಥೊಲಿಕ್ ಸಮುದಾಯ ಮೊದಲ ಸ್ಥಾನದಲ್ಲಿದ್ದರೆ ಇತರ ಮೀನುಗಾರ ಸಮುದಾಯ, ಮುಸ್ಲಿಮ್ ಸಮುದಾಯ ಇನ್ನಿತರರು ನಂತರದ ಸ್ಥಾನದಲ್ಲಿದ್ದಾರೆ. ಕೇರಳದಲ್ಲಿ ಲ್ಯಾಟಿನ್ ಕೆಥೊಲಿಕ್ ಕ್ರಿಶ್ಚಿಯನ್ ಸಮುದಾಯ ಕೇರಳದ ಒಟ್ಟು ಕ್ರಿಶ್ಚಿಯನ್ ಸಮುದಾಯದ ಜನಸಂಖ್ಯೆಯ ಶೇ. 13ರಷ್ಟಿದೆ. ವಿಜಿಂಗಮ್ ಯೋಜನೆಯಿಂದ ಬಾಧಿತರಾಗುವವರಲ್ಲಿ ಈ ಸಮುದಾಯದ ಮೀನುಗಾರರೇ ಪ್ರಧಾನವಾಗಿದ್ದಾರೆ.
ನಮ್ಮ ರಾಜ್ಯದ ಪ್ರಗತಿಪರ ವಲಯದ ಬಹಳಷ್ಟು ಜನರು ಕೇರಳದ ಎಡರಂಗ ಸರಕಾರವನ್ನು ಎತ್ತಿಹಿಡಿಯುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. ಕೇರಳವನ್ನು ಯಶಸ್ವಿ ಅಭಿವೃದ್ಧಿ ಮಾದರಿಯನ್ನಾಗಿಯೂ ಬಿಂಬಿಸುತ್ತಾ ಬರುತ್ತಿದ್ದಾರೆ. ಆದರೆ ಅದಾನಿಯಂತಹ ಭಾರೀ ಪರಾವಲಂಬಿ ಕಾರ್ಪೊರೇಟುಗಳ ಹಿತಾಸಕ್ತಿಗಳನ್ನು ಕಾಯ್ದು ರಕ್ಷಿಸುತ್ತಾ ಸಾಗುವಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಡಳಿತವಾಗಲೀ ಸಿಪಿಐ (ಎಂ) ನೇತೃತ್ವದ ಎಲ್ಡಿ ಎಫ್ ಆಡಳಿತವಾಗಲೀ ಮೂಲಭೂತವಾಗಿ ತಾರತಮ್ಯ ತೋರದು ಎನ್ನಲು ವಿಜಿಂಗಮ್ ಯೋಜನೆಯನ್ನು ಜಾರಿಗೊಳಿಸುತ್ತಿರುವ ಪರಿ ಒಂದು ತಾಜಾ ಉದಾಹರಣೆಯಾಗಿದೆ.
ಮಿಂಚಂಚೆ: nandakumarnandana67@gmail.com