ಕಾಡುಪ್ರಾಣಿಗಳ ಹಾವಳಿ ತಡೆಗೆ ಬಂದಿದೆ ‘ಯಂತ್ರ ಮಾನವ’
ಬ್ರಹ್ಮಾವರ, ಅ. 22: ಇಂದು ರೈತರು ಬೆವರು ಹರಿಸಿ ಬೆಳೆದ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ಕಂಟಕಪ್ರಾಯವಾಗಿರುವುದು ಕಾಡುಪ್ರಾಣಿಗಳು. ಪಶ್ಚಿಮ ಘಟ್ಟಗಳಿಗೆ ಒತ್ತಾಗಿ ಇರುವ ಕರಾವಳಿ ಜಿಲ್ಲೆಗಳ ರೈತರು ವಿವಿಧ ರೀತಿಯ ಕಾಡುಪ್ರಾಣಿಗಳ ಹಾವಳಿಯಿಂದ ಹೈರಾಣಗೊಂಡು ಕೃಷಿಯಿಂದಲೇ ವಿಮುಖ ರಾಗುತಿದ್ದಾರೆ.
ರೈತರು ಎದುರಿಸುತ್ತಿರುವ ಕಾಡುಪ್ರಾಣಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳಲು ರೈತರು, ಜನಸಾಮಾನ್ಯರು ಹಾಗೂ ವಿಜ್ಞಾನಿಗಳು ಹಲವು ಮಾದರಿಗಳನ್ನು ರಚಿಸಿ ತಾತ್ಕಾಲಿಕ ಯಶಸ್ಸು ಕಂಡರೂ, ಯಾವುದೂ ರೈತರಿಗೆ ಶಾಶ್ವತ ಪರಿಹಾರವಾಗಿ ಒಲಿದಿಲ್ಲ.
ಇದೀಗ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂದು ನಡೆದ ಕೃಷಿ ಮಹೋತ್ಸವದ ವೇಳೆ ವಿಜ್ಞಾನಿಯೊಬ್ಬರು ನೂತನವಾಗಿ ನಿರ್ಮಿಸಿದ ‘ಯಂತ್ರ ಮಾನವ’ ನನ್ನು ಅನಾವರಣಗೊಳಿಸಲಾಯಿತು. ಇಲ್ಲಿನ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಶಂಕರ್ ಎನ್. ಅಭಿವೃದ್ಧಿ ಪಡಿಸಿದಈ ಯಂತ್ರ ಮಾನವ ಕೆಲವಾರು ವೈಶಿಷ್ಟಗಳೊಂದಿಗೆ ವಿನೂತನವೆನಿಸಿದೆ.
ಇದು ಕಡಿಮೆ ವೆಚ್ಚದಲ್ಲಿ, ಪ್ರಾಣಿಗಳಿಗೆ ಹಾನಿಯಾಗದಂತೆ, ರೈತನ ಬೆಳೆ ರಕ್ಷಿಸುವ ಪ್ರಯತ್ನವಾಗಿದೆ ಎಂದು ಡಾ.ಶಂಕರ್ ನುಡಿದರು. ಇದೊಂದು ಮನುಷ್ಯಾಕೃತಿ ಬೊಂಬೆಯಾಗಿದ್ದು, 360 ಡಿಗ್ರಿ ತಿರುಗುವ ಯಂತ್ರ. ಈ ಬೊಂಬೆಯ ಗಂಟಲು ಭಾಗದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಈ ಕೆಮರಾದಲ್ಲಿ ತೋಟ ಅಥವಾ ಗದ್ದೆಯಲ್ಲಿ ಓಡಾಡುವ ಕಾಡುಪ್ರಾಣಿಗಳನ್ನು ಗುರುತಿಸಿ ಅದನ್ನು ಬೆದರಿಸಲು ಆ ಪ್ರಾಣಿ ಹೆಚ್ಚಾಗಿ ಹೆದರುವ ವೈರಿ ಪ್ರಾಣಿಗಳ ಶಬ್ದ (ಸಿಂಹ ಇತ್ಯಾದಿ) ಅಳವಡಿಸಲಾಗಿದೆ. ರಾತ್ರಿ ವೇಳೆ ಫ್ಲಾಶ್ಲೈಟ್ ಬಳಸಿ ಪ್ರಾಣಿಗಳನ್ನು ಬೆದರಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಯಂತ್ರವು ರಾಸ್ಟ್ರೇರಿಪೈ ತಂತ್ರಜ್ಞಾನದಡಿ ಕೆಲಸ ಮಾಡುತ್ತದೆ. ಕೆಮರಾದಲ್ಲಿ ಸೆರೆಹಿಡಿದ ಚಿತ್ರವನ್ನು ಸಂಸ್ಕರಿಸುವ ಮೂಲಕ ಪ್ರಾಣಿಗಳ ಓಡಾಟವನ್ನು ಗ್ರಹಿಸುವುದಲ್ಲದೇ ತಕ್ಷಣ ತೋಟದ ಮಾಲಕನ ಮೊಬೈಲ್ನಲ್ಲಿ ಅಳವಡಿಸಿದ ಆ್ಯಪ್ಗೆ ಸಂದೇಶ/ಕರೆ ಮಾಡುತ್ತದೆ. ಈ ಸಂದೇಶ/ಕರೆಯನ್ನು ಮಾಲಕ ಸ್ವೀಕರಿಸಿದಲ್ಲಿ ತೋಟದ, ಗದ್ದೆಯ ಚಿತ್ರಣವನ್ನು ನೇರವಾಗಿ ಮೊಬೈಲ್ನಲ್ಲಿ ನೋಡಬಹುದು. ಇದರಿಂದ ರೈತರು ತಕ್ಷಣವೇ ತೋಟಕ್ಕೆ ಬಂದು ಪ್ರಾಣಿಗಳನ್ನು ಬೆದರಿಸಿ ಓಡಿಸುವ ಕೆಲಸ ಮಾಡಬಹುದು.
ಸೋಲಾರ್ ವಿದ್ಯುತ್ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುವ ಈ ಯಂತ್ರಕ್ಕೆ ಕನಿಷ್ಠ 20 ಸಾವಿರ ರೂ.ವೆಚ್ಚವಾಗಿದೆ. ಈ ಯಂತ್ರದ ಕಾರ್ಯವ್ಯಾಪ್ತಿ ಸದ್ಯ 4000 ಚದರ ಅಡಿಗಳಷ್ಟಿದೆ. ಇಷ್ಟು ದೂರದ ಚಟುವಟಿಕೆಗಳ ಮೇಲೆ ಈ ಯಂತ್ರ ನಿಗಾ ಇರಿಸುವ ಸಾಮರ್ಥ್ಯವನ್ನು ಹೊಂದಿದೆ. ಯಂತ್ರವನ್ನು ಮೇಲ್ದರ್ಜೆಗೇರಿಸಿದರೆ ಇನ್ನೂ ದೂರದ ಚಟುವಟಿಕೆಗಳನ್ನು ಗ್ರಹಿಸಲು ಸಾಧ್ಯ ವಾಗಬಹುದು ಎಂದು ಡಾ.ಶಂಕರ್ ತಿಳಿಸಿದರು.
ಸೋಲಾರ್ ಶಕ್ತಿಯಿಂದ ಕೆಲಸ ಮಾಡುವ ಕಾರಣ ದಿನದ 24 ಗಂಟೆಯೂ ಇದು ಕಾರ್ಯನಿರ್ವಹಿಸಬಹುದಾಗಿದೆ. ತೋಟಕ್ಕೆ ಅಥವಾ ಗದ್ದೆಗೆ ನುಗ್ಗುವ ಕಾಡುಪ್ರಾಣಿಗಳನ್ನು ತಾನೇ ಓಡಿಸುವ ಪ್ರಯತ್ನ ನಡೆಸುವ ಈ ಯಂತ್ರ, ಮಾಲಕನಿಗೂ ತಕ್ಷಣವೇ ಮಾಹಿತಿ ನೀಡಿ ಆತನನ್ನು ಎಚ್ಚರಿಸುವ ಕೆಲಸ ಮಾಡಲಿದೆ ಎಂದು ಯಂತ್ರ ಮಾನವ ರೂವಾರಿ ಡಾ.ಶಂಕರ್ ವಿವರಿಸಿದರು.