ರಖೈನ್ ರಾಜ್ಯಕ್ಕೆ ಸೂ ಕಿ ಭೇಟಿ
ಯಾಂಗನ್ (ಮ್ಯಾನ್ಮಾರ್), ನ. 2: ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಗುರುವಾರ ಸಂಘರ್ಷಪೀಡಿತ ರಖೈನ್ ರಾಜ್ಯಕ್ಕೆ ಭೇಟಿ ನೀಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಸೇನಾ ದೌರ್ಜನ್ಯದಿಂದಾಗಿ ರೊಹಿಂಗ್ಯಾ ವಲಸಿಗರು ತೊರೆದು ಹೋಗಿರುವ ಪ್ರದೇಶವೊಂದಕ್ಕೆ ಅವರು ಅಘೋಷಿತ ಭೇಟಿ ನೀಡಿದರು.
ರೊಹಿಂಗ್ಯಾ ಮುಸ್ಲಿಮರ ಪರವಾಗಿ ಮಾತನಾಡಲು ತನ್ನ ನೈತಿಕ ಶಕ್ತಿಯನ್ನು ಬಳಸಲು ವಿಫಲವಾಗಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯನ್ನು ಅಂತಾರಾಷ್ಟ್ರೀಯ ಸಮುದಾಯ ಟೀಕಿಸಿರುವುದನ್ನು ಸ್ಮರಿಸಬಹುದಾಗಿದೆ.
ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಸೇನಾ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸುವುದರೊಂದಿಗೆ ರಖೈನ್ ರಾಜ್ಯದಲ್ಲಿ ಹೊಸದಾಗಿ ಸಂಘರ್ಷ ಆರಂಭವಾಗಿತ್ತು. ಆ ಬಳಿಕ ಸೇನೆ ನಡೆಸಿದ ಭೀಕರ ದಮನ ಕಾರ್ಯಾಚರಣೆಗೆ ಬೆದರಿ 6 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
‘‘ಸರಕಾರದ ಸಲಹೆಗಾರ್ತಿ (ಸೂ ಕಿಯ ಅಧಿಕೃತ ಹುದ್ದೆಯ ಹೆಸರು) ಈಗ ಸಿಟ್ವೆಯಲ್ಲಿದ್ದಾರೆ. ಬಳಿಕ ಅವರು ಮಾಂಗ್ಡಾ ಮತ್ತು ಬುತಿಡ್ವಾಂಗೊಗಳಿಗೂ ಭೇಟಿ ನೀಡಲಿದ್ದಾರೆ’’ ಎಂದು ಸರಕಾರಿ ವಕ್ತಾರ ಝಾವ್ ಹಟಯ್ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಸಾವಿರಾರು ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋಗುವುದಕ್ಕಾಗಿ ಈಗಲೂ ಮಾಂಗ್ಡಾವ್ ಸಮೀಪದ ಕಡಲ ತೀರದಲ್ಲಿ ದೋಣಿಗಳಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.