ಭಾರತ, ಚೀನಾ ನಡುವೆ ಉದ್ವಿಗ್ನತೆಯನ್ನು ನಾವು ಬಯಸುವುದಿಲ್ಲ
ಮಾಲ್ದೀವ್ಸ್ ಮಾಜಿ ಅಧ್ಯಕ್ಷ ನಶೀದ್
ಬೆಂಗಳೂರು, ಫೆ. 17: ಭಾರತ ಮತ್ತು ಚೀನಾಗಳ ನಡುವೆ ಯಾವುದೇ ರೀತಿಯ ಉದ್ವಿಗ್ನತೆ ನಿರ್ಮಾಣವಾಗುವುದನ್ನು ಮಾಲ್ದೀವ್ಸ್ ಬಯಸುವುದಿಲ್ಲ ಎಂದು ಆ ದೇಶದ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಶನಿವಾರ ಹೇಳಿದ್ದಾರೆ.
‘ದ ಹಿಂದೂ’ ಪತ್ರಿಕೆಯು ಇಲ್ಲಿ ಶನಿವಾರ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೇಳಿದರು.
ರಾಜಕೀಯ ಬಿಕ್ಕಟ್ಟು ನೆಲೆಸಿರುವ ಮಾಲ್ದೀವ್ಸ್ನಲ್ಲಿ ಯಾವುದೇ ರೀತಿಯ ಸೇನಾ ಮಧ್ಯಪ್ರವೇಶ ನಡೆಸುವುದನ್ನು ಚೀನಾ ಈ ಹಿಂದೆ ವಿರೋಧಿಸಿರುವುದನ್ನು ಸ್ಮರಿಸಬಹುದಾಗಿದೆ. ಇಂಥ ಯಾವುದೇ ಕ್ರಮವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಅದು ಹೇಳಿದೆ. ಮಾಲ್ದೀವ್ಸ್ ಅಧ್ಯಕ್ಷರು ಬ್ರಿಟನ್ನಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ.
‘‘ನಾವು ಚೀನಾವನ್ನು ಮೆಚ್ಚುತ್ತೇವೆ. ನಾನು ಚೀನಾ ವಿರೋಧಿಯಲ್ಲ. ಸರಕಾರದ ರೀತಿಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ ಎಂದಷ್ಟೇ ನಾವು ಹೇಳುವುದು. ನಿಮ್ಮ ಹಣವನ್ನು ರಹಸ್ಯವಾಗಿ ತುರುಕಿಸಬೇಡಿ. ಪಾರದರ್ಶಕತೆ ಕಾಯ್ದುಕೊಳ್ಳಿ ಹಾಗು ಪ್ರಜಾಸತ್ತಾತ್ಮಕ ಮನೋಭಾವ ಬೆಳೆಸಿಕೊಳ್ಳಿ. ಆಗ ಶಾಂತಿ ತಾನಾಗಿ ಏರ್ಪಡುತ್ತದೆ’’ ಎಂದರು.