ಪಾಕಿಸ್ತಾನದ ಶಾಂತಿ ಉಪಕ್ರಮಗಳಿಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್
ಇಸ್ಲಾಮಾಬಾದ್, ಜ. 8: ನನ್ನ ಶಾಂತಿ ಉಪಕ್ರಮಗಳಿಗೆ ಭಾರತ ಸ್ಪಂದಿಸುತ್ತಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಎರಡು ಪರಮಾಣು ಶಕ್ತ ದೇಶಗಳ ನಡುವಿನ ಯುದ್ಧ ಅವುಗಳ ಆತ್ಮಹತ್ಯೆಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟರ್ಕಿಯ ಸುದ್ದಿ ಸಂಸ್ಥೆ ‘ಟಿಆರ್ಟಿ ವರ್ಲ್ಡ್’ಗೆ ನೀಡಿದ ಸಂದರ್ಶನದಲ್ಲಿ, ಭಾರತದೊಂದಿಗೆ ಶಾಂತಿ ಮಾತುಕತೆಗಳನ್ನು ನಡೆಸುವ ಇಚ್ಛೆಯನ್ನು ಇಮ್ರಾನ್ ಖಾನ್ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ ಎಂದು ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕಿ ಇನ್ಸಾಫ್ ಹೇಳಿದೆ.
ಶೀತಲ ಸಮರವೂ ಉಭಯ ದೇಶಗಳ ನಡುವಿನ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
‘‘ಎರಡು ಪರಮಾಣು ಶಕ್ತ ರಾಷ್ಟ್ರಗಳು ಯುದ್ಧದ ಬಗ್ಗೆ ಯೋಚನೆಯನ್ನೂ ಮಾಡಬಾರದು. ಶೀತಲ ಸಮರದ ಬಗ್ಗೆಯೂ ಯೋಚಿಸಬಾರದು, ಯಾಕೆಂದರೆ ಅದು ಯಾವುದೇ ಸಮಯದಲ್ಲಿ ವಿಕೋಪಕ್ಕೆ ಹೋಗಬಹುದು. ಉಭಯ ದೇಶಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಏಕೈಕ ವಿಧಾನವೆಂದರೆ ಪರಸ್ಪರ ಮಾತುಕತೆ ನಡೆಸುವುದು. ಎರಡು ಪರಮಾಣು ಶಕ್ತ ದೇಶಗಳು ಯುದ್ಧದಲ್ಲಿ ತೊಡಗುವುದು ಎಂದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಇಮ್ರಾನ್ ಹೇಳಿದರು’’ ಎಂದು ಅವರ ಪಕ್ಷ ಹೇಳಿದೆ.
‘‘ನೀವು ಒಂದು ಹೆಜ್ಜೆ ಮುಂದೆ ಬನ್ನಿ, ನಾವು ಎರಡು ಹೆಜ್ಜೆ ಮುಂದೆ ಬರುತ್ತೇವೆ ಎಂಬುದಾಗಿ ನಾವು ಹೇಳಿದೆವು. ಆದರೆ, ಪಾಕಿಸ್ತಾನದ ಮಾತುಕತೆ ಕರೆಗಳನ್ನು ಭಾರತ ಹಲವು ಬಾರಿ ತಿರಸ್ಕರಿಸಿದೆ’’ ಎಂದರು.