‘‘ಮಾನವತೆ ವಿರುದ್ಧ ಅಪರಾಧ”ಕ್ಕಾಗಿ ಶ್ರೀಲಂಕಾದ ಉನ್ನತ ಪೊಲೀಸ್ ಅಧಿಕಾರಿಗಳ ವಿಚಾರಣೆಗೆ ಆಗ್ರಹ
ಈಸ್ಟರ್ ಬಾಂಬ್ ಸ್ಫೋಟ
ಕೊಲೊಂಬೊ, ಜು. 1: ಈ ವರ್ಷದ ಎಪ್ರಿಲ್ 21ರಂದು 258 ಜನರ ಸಾವಿಗೆ ಕಾರಣವಾದ ಈಸ್ಟರ್ ಬಾಂಬ್ ಸ್ಫೋಟವನ್ನು ತಡೆಯಲು ವಿಫಲರಾಗುವ ಮೂಲಕ ‘‘ಮಾನವತೆ ವಿರುದ್ಧ ಘೋರ ಅಪರಾಧ’’ ಎಸಗಿದ ಶ್ರೀಲಂಕಾ ಪೊಲೀಸ್ ವರಿಷ್ಠರು ಹಾಗೂ ರಕ್ಷಣಾ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಸರಕಾರಿ ಪ್ರಾಸಿಕ್ಯೂಟರ್ ಸೋಮವಾರ ಹೇಳಿದ್ದಾರೆ.
ಎಪ್ರಿಲ್ 21ರಂದು ಸ್ಥಳೀಯ ಗುಂಪಿನಿಂದ ಆತ್ಮಾಹುತಿ ಬಾಂಬ್ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ನೀಡಿದ ಹೊರತಾಗಿಯೂ ಐಜಿಪಿ ಪುಜಿತ್ ಜಯಸುಂದರ ಹಾಗೂ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫೆರ್ನಾಂಡೊ ಈ ಬಗ್ಗೆ ಗಮನ ಹರಿಸಲು ವಿಫಲರಾಗಿದ್ದಾರೆ ಎಂದು ಸರಕಾರಿ ಪ್ರಾಸಿಕ್ಯೂಟರ್ ಡಪ್ಪುಲಾ ಡೆ ಲಿವೆರಾ ಆರೋಪಿಸಿದ್ದಾರೆ. ಎಪ್ರಿಲ್ 21ರ ದಾಳಿಯನ್ನು ತಡೆಯುವಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಅಧಿಕಾರಿಗಳನ್ನು ಮ್ಯಾಜಿಸ್ಟೇಟ್ ಅವರ ಮುಂದೆ ತರಬೇಕು ಎಂದು ಕಾರ್ಯಕಾರಿ ಪೊಲೀಸ್ ವರಿಷ್ಠರಿಗೆ ರವಾನಿಸಿದ ಪತ್ರದಲ್ಲಿ ಲಿವೆರಾ ಹೇಳಿದ್ದಾರೆ.
ಈ ಇಬ್ಬರು ಶಂಕಿತ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತೆ ಹಾಗೂ ವಿಳಂಬಿಸದೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಂತೆ ಕಾರ್ಯಕಾರಿ ಪೊಲೀಸ್ ವರಿಷ್ಠ ಚಂದನ ವಿಕ್ರಮರತ್ನೆ ಅವರಿಗೆ ಡಿ. ಲಿವೇರಾ ಆದೇಶಿಸಿದ್ದಾರೆ.