ಕ್ಯಾಲಿಫೋರ್ನಿಯ: ಗುರುದ್ವಾರದ ಅರ್ಚಕನಿಗೆ ಆಗಂತುಕನಿಂದ ಹಲ್ಲೆ
ವಾಶಿಂಗ್ಟನ್, ಜು. 27: ಕ್ಯಾಲಿಫೋರ್ನಿಯದಲ್ಲಿನ ಗುರುದ್ವಾರವೊಂದರ ಅರ್ಚಕನಿಗೆ ಗುರುವಾರ ರಾತ್ರಿ ಹಲ್ಲೆ ನಡೆಸಲಾಗಿದೆ ಎಂದು ಮಾಧ್ಯಮ ವರದಿಗಳು ಶುಕ್ರವಾರ ಹೇಳಿವೆ.
ಗುರುದ್ವಾರದ ಆವರಣದಲ್ಲಿರುವ ತನ್ನ ಮನೆಯನ್ನು ಕಿಟಿಕಿ ಮುರಿದು ಪ್ರವೇಶಿಸಿದ ಆಗಂತುಕನೊಬ್ಬ ತನ್ನ ಮೇಲೆ ಹಲ್ಲೆ ನಡೆಸಿದನು ಎಂದು ಅರ್ಚಕ ಅಮರ್ಜಿತ್ ಸಿಂಗ್ ಸ್ಥಳೀಯ ಪತ್ರಿಕೆ ‘ಫ್ರೆಸ್ನೊ ಬೀ’ಗೆ ತಿಳಿಸಿದರು.
ನನ್ನ ದೇಶಕ್ಕೆ ವಾಪಸಾಗುವಂತೆ ಗದರಿಸಿದ ಅವನು, ನನಗೆ ಅಶ್ಲೀಲ ಮಾತುಗಳಿಂದ ಬೈದನು ಎಂದು ಅವರು ಹೇಳಿದರು.
ಸ್ಯಾನ್ಫ್ರಾನ್ಸಿಸ್ಕೊದ ಪೂರ್ವಕ್ಕೆ 160 ಕಿ.ಮೀ. ದೂರಲ್ಲಿರುವ ಗುರುದ್ವಾರ ‘ಮೋಡೆಸ್ಟೊ ಸೆರಿಸ್’ನಲ್ಲಿ ಅಮರ್ಜಿತ್ ಸಿಂಗ್ ಅರ್ಚಕರಾಗಿದ್ದಾರೆ. ‘‘ಅವನು ನನ್ನ ಕುತ್ತಿಗೆಗೆ ಹೊಡೆದನು. ದೇಶ, ದೇಶ, ವಾಪಸ್ ಹೋಗು, ವಾಪಸ್ ಹೋಗು, ದೇಶ ಎಂಬುದಾಗಿ ಹೇಳಿದನು’’ ಎಂದು ಅವರು ಹೇಳಿದರು.
ತನಿಖೆ ಆರಂಭಿಸಿರುವ ಸ್ಥಳೀಯ ಪೊಲೀಸರು, ಇದು ದ್ವೇಷಾಪರಾಧವೇ, ಅಲ್ಲವೇ ಎಂದು ಈಗಲೇ ಹೇಳಲು ಸಾಧ್ಯವಾಗದು ಎಂದಿದ್ದಾರೆ.
Next Story