ಭೂಮಿಯ ಕಾಂತೀಯ ವಲಯದಲ್ಲಿ ಬಿರುಕು
ಭಾರತೀಯ ವಿಜ್ಞಾನಿಗಳಿಂದ ಪತ್ತೆ
ವಾಶಿಂಗ್ಟನ್, ನ. 3: ಭಾರತದಲ್ಲಿರುವ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಸೂಕ್ಷ್ಮ ಕಾಸ್ಮಿಕ್ ರೇ ವೀಕ್ಷಣಾಲಯವು ಭಾರೀ ಪ್ರಮಾಣದಲ್ಲಿ ಗೆಲಾಕ್ಟಿಕ್ ಕಾಸ್ಮಿಕ್ ಕಿರಣಗಳನ್ನು ದಾಖಲಿಸಿಕೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯ ಕಾಂತೀಯ ಪದರದಲ್ಲಿ ಬಿರುಕು ಉಂಟಾಗಿರುವುದನ್ನು ಇದು ತೋರಿಸಿದೆ.
ಸೌರ ಬಿಂಬದಿಂದ ಹೊರಟ ಪ್ಲಾಸ್ಮಾದ ಬೃಹತ್ ಮೋಡವು ಭೂಮಿಯ ಮೇಲೆ ಅತಿ ಹೆಚ್ಚಿನ ವೇಗದಿಂದ ಅಪ್ಪಳಿಸಿದಾಗ ಈ ಬಿರುಕು ಉಂಟಾಗಿದೆ. ಇದರಿಂದಾಗಿ ಭೂಮಿಯ ಕಾಂತೀಯವಲಯದಲ್ಲಿ ಬೃಹತ್ ಒತ್ತಡ ಉಂಟಾಗಿದ್ದು, ತೀವ್ರ ಭೂಕಾಂತೀಯ ಬಿರುಗಾಳಿಯನ್ನು ಸೃಷ್ಟಿಸಿದೆ.
ತಮಿಳುನಾಡಿನ ಊಟಿಯಲ್ಲಿರುವ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನ ಕಾಸ್ಮಿಕ್ ರೇ ಪ್ರಯೋಗಾಲಯದಲ್ಲಿರುವ ‘ಗ್ರೇಪ್ಸ್-3’ ಮ್ಯೂಆನ್ ಟೆಲಿಸ್ಕೋಪ್ನಲ್ಲಿ ಕಳೆದ ವರ್ಷ ಎರಡು ಗಂಟೆಗಳ ಕಾಲ ಸುಮಾರು 20 ಜಿಇವಿ ಗೆಲಾಕ್ಟಿಕ್ ಕಾಸ್ಮಿಕ್ ಕಿರಣಗಳು ಅಪ್ಪಳಿಸಿರುವುದು ದಾಖಲಾಗಿದೆ.
ಸೌರ ಬಿಂಬದಿಂದ ಹೊರಟ ಪ್ಲಾಸ್ಮಾದ ದೈತ್ಯ ಮೋಡವೊಂದು ಗಂಟೆಗೆ ಸುಮಾರು 25 ಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಗೆ ಅಪ್ಪಳಿಸಿದೆ. ಆಗ ಭೂಮಿಯ ಕಾಂತೀಯವಲಯದಲ್ಲಿ ಭೂಮಿಯ ತ್ರಿಜ್ಯದ 11ರಿಂದ 4 ಪಟ್ಟಿನಷ್ಟು ಒತ್ತಡ ಉಂಟಾಗಿದೆ.
ಸೌರ ಬಿರುಗಾಳಿಯು ವಿದ್ಯುತ್ ಜಾಲ, ಜಿಪಿಎಸ್, ಉಪಗ್ರಹ ಕಾರ್ಯಾಚರಣೆಗಳು ಮತ್ತು ದೂರಸಂಪರ್ಕಗಳಲ್ಲಿ ವ್ಯತ್ಯಯ ಉಂಟು ಮಾಡಬಹುದಾಗಿದೆ.