ಕಾಶ್ಮೀರ ಹಿಂಸೆ: ಮಧ್ಯಪ್ರವೇಶಕ್ಕೆ ವಿಶ್ವಸಂಸ್ಥೆಗೆ ಪಾಕ್ ಮನವಿ
ಇಸ್ಲಾಮಾಬಾದ್,ಮೇ 27: ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ಪಾಕಿಸ್ತಾನವು ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಶನಿವಾರ ಕರೆ ನೀಡಿದೆ.
ಗಡಿನಿಯಂತ್ರಣ ರೇಖೆಯಲ್ಲಿ ಭಾರತೀಯ ಪಡೆಗಳು ನಿರಂತರವಾಗಿ ಕದನವಿರಾಮ ಉಲ್ಲಂಘಿಸುತ್ತಿರುವುದಾಗಿ ಪಾಕ್ ಪ್ರಧಾನಿಯ ವಿದೇಶಾಂಗ ಸಲಹೆಗಾರ ಸರ್ತಾಝ್ ಆಝೀಝ್ ಹೇಳಿಕೆಯೊಂದರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರಿಗಳು ನಡೆಸುತ್ತಿರುವ ಚಳವಳಿಗೆ ಕೆಟ್ಟಹೆಸರು ತರಲು ಭಾರತವು ಪ್ರಯತ್ನಿಸುತ್ತಿದೆಯೆಂದು ಅವರು ಆಪಾದಿಸಿದ್ದಾರೆ. ಬಹುಸಂಖ್ಯಾತ ಕಾಶ್ಮೀರಿಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಉದ್ದೇಶದಿಂದ ಭಾರತವು ಕಾಶ್ಮೀರದ ಜನಸಂಖ್ಯಾ ಸ್ವರೂಪವನ್ನೇ ಬದಲಾಯಿಸಲು ಯತ್ನಿಸುತ್ತಿದೆಯೆಂದು ಆಝೀಝ್ ವಿಶ್ವಸಂಸ್ಥೆಯ ಗಮನಸೆಳೆದಿದ್ದಾರೆ.
ಸ್ವಯಂನಿರ್ಧಾರದ ಹಕ್ಕಿಗಾಗಿ ಕಾಶ್ಮೀರಿಗಳು ನಡೆಸುತ್ತಿರುವ ಚಳವಳಿಗೆ ಪಾಕಿಸ್ತಾನವು ಅಚಲವಾದ ಬೆಂಬಲ ನೀಡುವುದಾಗಿ ಅವರು ಪುನರುಚ್ಚರಿಸಿದ್ದಾರೆ.
Next Story