ಟೆಹರಾನ್ ಅವಳಿದಾಳಿಯ ಸೂತ್ರಧಾರನ ಹತ್ಯೆ; ಇರಾನ್
ಟೆಹ್ರಾನ್,ಜೂ.11: ಕಳೆದವಾರ ರಾಜಧಾನಿಯಲ್ಲಿ ನಡೆದ ಅವಳಿದಾಳಿ ಘಟನೆಗಳ ಸೂತ್ರಧಾರಿಯನ್ನು ತಾನು ಹತ್ಯೆಗೈದಿರುವುದಾಗಿ ಇರಾನ್ ರವಿವಾರ ತಿಳಿಸಿದೆ. ದಾಳಿ ಘಟನೆಯ ಬಳಿಕ ಶಂಕಿತ ಆರೋಪಿಯು ‘ನೆರೆಯದೇಶಕ್ಕೆ’ ಪಲಾಯನಗೈದಿದ್ದ. ಆದರೆ ಇರಾನ್ನ ಗುಪ್ತಚರ ಏಜೆಂಟರು ಹಾಗೂ ಸಹವರ್ತಿಬೇಹುಗಾರಿಕಾದಳದ ಅಧಿಕಾರಿಗಳು ಆತನನ್ನು ಅಲ್ಲಿಂದಲೇ ‘ನರಕಕ್ಕೆ’ ಕಳುಹಿಸಿದ್ದಾರೆಂದು ಬೇಹುಗಾರಿಕಾ ಸಚಿವ ಮುಹಮ್ಮದ್ಅಲಾವಿ ಹೇಳಿರುವುದಾಗಿ ಅಧಿಕೃತಸುದ್ದಿಸಂಸ್ಥೆ ‘ಇರ್ನಾ’ ರವಿವಾರ ವರದಿ ಮಾಡಿದೆ. ಆದರೆ ಈ ಬಗ್ಗೆ ಅಲಾವಿ ಯಾವುದೇ ವಿವರಣೆ ಹಾಗೂ ಪುರಾವೆಗಳನ್ನು ನೀಡಿಲ್ಲವೆಂದು ತಿಳಿದುಬಂದಿದೆ.
ಕಳೆದ ಬುಧವಾರ ಶಂಕಿತ ಐದು ಮಂದಿ ಐಸಿಸ್ ಉಗ್ರರು ಟೆಹರಾನ್ನಲ್ಲಿರುವ ಇರಾನ್ ಸಂಸತ್ ಭವನ ಹಾಗೂ ಕ್ರಾಂತಿಕಾರಿನಾಯಕ ಅಯತೊಲ್ಲಾರಹುಲ್ಲಾಖೊಮೇನಿ ಅವರ ಸ್ಮಾರಕದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಕನಿಷ್ಠ 12 ಮಂದಿಯನ್ನುಹತ್ಯೆಗೈದಿದ್ದರು. ಈ ಸಂದರ್ಭದಲ್ಲಿ ಭದ್ರತಾಪಡೆಗಳು ತಕ್ಷಣವೇ ಪ್ರತಿದಾಳಿ ನಡೆಸಿ ಎಲ್ಲಾ ಐವರು ಉಗ್ರರನ್ನು ಕೊಂದುಹಾಕಿದ್ದರು.
ಮೃತ ಉಗ್ರರೆಲ್ಲರೂ ಐಸಿಸ್ಗೆ ಸೇರಿದವರಾಗಿದ್ದು ಅವರು ಈ ತನಕ ಇರಾಕ್ ಹಾಗೂ ಸಿರಿಯಗಳಲ್ಲಿ ಕಾರ್ಯಾಚರಿಸುತ್ತಿದ್ದರೆಂದು ಇರಾನ್ ತಿಳಿಸಿದೆ. ಭಯೋತ್ಪಾದಕ ದಾಳಿ ಘಟನೆಗೆ ಸಂಬಂಧಿಸಿ 25ಕ್ಕೂ ಅಧಿಕಮಂದಿಯನ್ನು ಬಂಧಿಸಿರುವುದಾಗಿ ಇರಾನ್ತಿಳಿಸಿದೆ.