ಬಿಜೆಪಿ ಮುಖಂಡರ ಬಾಯಿಗೆ ಬೀಗ ಹಾಕಿ: ಮಲ್ಲಿಕಾರ್ಜುನ ಖರ್ಗೆ
ಸಂವಿಧಾನ ಬದಲಾವಣೆ ಹೇಳಿಕೆ
ಬೆಂಗಳೂರು, ಡಿ. 31: ಸಂವಿಧಾನ ಬದಲಿಸುವ ಮಾತುಗಳನ್ನು ಆಡುವ ಬಿಜೆಪಿ ಮುಖಂಡರ ಬಾಯಿಗೆ ಬೀಗ ಹಾಕುವ ಕೆಲಸವನ್ನು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಡಬೇಕೆಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಹಾ ಮಾರುವ ವ್ಯಕ್ತಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದು, ಕೂಲಿ ಕಾರ್ಮಿಕನ ಪುತ್ರನಾದ ತಾನು ಲೋಕಸಭೆ ಕಾಂಗ್ರೆಸ್ ಮುಖಂಡನ ಸ್ಥಾನಕ್ಕೇರಲು ಸಂವಿಧಾನವೇ ಮೂಲ ಕಾರಣ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಕೆಲ ಸಣ್ಣ-ಪುಟ್ಟ ವಿಚಾರಗಳಿಗಾಗಿ ಈಗಾಗಲೇ ಸಂವಿಧಾನ ಹಲವು ಬಾರಿ ತಿದ್ದುಪಡಿಯಾಗಿದೆ. ಸಂವಿಧಾನದಿಂದ ದೇಶ ಸದೃಢವಾಗಿದೆ. ಸಂಸತ್ನಲ್ಲಿ ಇಂತಹ ವಿಚಾರ ಪ್ರಸ್ತಾಪವಾದರೆ ಮೊದಲು ನಾವು ಖಂಡಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ರಾಜಕೀಯ ಪ್ರವೇಶ ಮಾಡಬಹುದು. ನಟ ರಜನಿಕಾಂತ್ ಅವರು ಯಾವ ತತ್ವ-ಸಿದ್ಧಾಂತದ ಮೇಲೆ ಪಕ್ಷ ಕಟ್ಟುತ್ತಾರೆ ಎಂಬುದನ್ನು ಕಾದು ನೋಡಬೇಕು'
-ಮಲ್ಲಿಕಾರ್ಜುನ ಖರ್ಗೆಲೋಕಸಭೆ ಕಾಂಗ್ರೆಸ್ ನಾಯಕ