ಯಡಿಯೂರಪ್ಪ ಆಪ್ತ ಮಂಜುನಾಥ ಗೌಡ ಜೆಡಿಎಸ್ ಗೆ ಸೇರ್ಪಡೆ
ಬೆಂಗಳೂರು, ಜ.23: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆಪ್ತರಾಗಿದ್ದ, ತೀರ್ಥಹಳ್ಳಿಯಲ್ಲಿ ಕೆಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಂಜುನಾಥ ಗೌಡ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಗೆ ಸೇರ್ಪಡೆಯಾದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ, “ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರಂತಹ ಪ್ರಾಮಾಣಿಕ ಅಧಿಕಾರಿಯನ್ನು ಸರಕಾರ ವರ್ಗಾವಣೆ ಮಾಡಿದೆ. ಮಹಾಮಸ್ತಕಾಭಿಷೇಕದ ಸಿದ್ಧತೆ ಕೆಲಸ ನಡೆಯುತ್ತಿದ್ದು, ಇಲ್ಲಿ ಹಣ ಹೊಡೆಯಲು ರೋಹಿಣಿ ಬಿಡಲಿಲ್ಲ. ಇದಕ್ಕಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಸಿಂಧೂರಿಯವರನ್ನು ವರ್ಗಾವಣೆ ಮಾಡಬೇಡಿ, ಮಹಾಮಸ್ತಕಾಭಿಷೇಕ ಕಾರ್ಯ ಆಗಬೇಕು
ಎಂದು ಮುಖ್ಯಕಾರ್ಯದರ್ಶಿಗೆ ಮನವಿ ಮಾಡಿದ್ದೆ. ಆದರೆ ರಾತ್ರೋ ರಾತ್ರಿ ವರ್ಗಾವಣೆ ಆದೇಶ ಹೊರಬಿದ್ದಿದೆ. ಮುಖ್ಯಕಾರ್ಯದರ್ಶಿ ಅವರನ್ನ ಕೇಳಿದಾಗ ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದಿದ್ದಾರೆ” ಎಂದು ದೇವೇಗೌಡ ಹೇಳಿದರು.
ರಾಜ್ಯ ಸರಕಾರ ಕೆಟ್ಟ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿಯ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ. ಇನ್ನು ಮುಂದೆ ಹಾಸನದಲ್ಲಿ ನಡೆಯುವ ಯಾವ ಕಾರ್ಯಕ್ರಮದಲ್ಲೂ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ದೇವೇಗೌಡ ಇದೇ ಸಂದರ್ಭ ಹೇಳಿದರು.
ಈ ಸಂದರ್ಭ ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗದ ಜಿಲ್ಲಾ ಜೆಡಿಎಸ್ ಅದ್ಯಕ್ಷ ಶ್ರೀಕಾಂತ್ , ಜಿಲ್ಲಾ ಮುಖಂಡ ಮದನ್ , ಮಾಜಿ ಶಾಶಕ ನಾಡಗೌಡ, ಅನ್ನದಾನಿ ಮೊದಲಾದವರು ಉಪಸ್ಥಿತರಿದ್ದರು.