ತರೀಕೆರೆ: ಮಾನವ ಕಳ್ಳ ಸಾಗಣೆ ಜಾಲ ಪತ್ತೆ
ನಾಲ್ವರ ಬಂಧನ
ರಕ್ಷಿಸಲ್ಪಟ್ಟವರು
► ಐವರು ಯುವಕರ ರಕ್ಷಣೆ
► ಪ್ರಮುಖ ಆರೋಪಿಗಳಿಗಾಗಿ ಮುಂದುವರಿದ ಶೋಧ
► ತರೀಕೆರೆಯ ಕೆ.ಚಟ್ಟನಹಳ್ಳಿಯಲ್ಲಿ ಘಟನೆ
►ಬೀರೂರು ಪೊಲೀಸರ ಕಾರ್ಯಾಚರಣೆ
ತರೀಕೆರೆ, ಜ.23: ಜೀತದಾಳುಗಳಾಗಿ ದುಡಿಯುತ್ತಿದ್ದ ಐವರು ಯುವಕರನ್ನು ಸ್ವಯಂ ಸೇವಾ ಸಂಘಗಳ ನೆರವಿನಿಂದ ರಕ್ಷಿಸಿದ ಬೀರೂರು ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ತರೀಕೆರೆ ತಾಲೂಕಿನ ಕೆ.ಚಟ್ಟನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಹಾರಾಷ್ಟ್ರದ ರಾಮೇಶ್ವರ (23) ಮಧ್ಯ ಪ್ರದೇಶದ ಸಂತೋಷ್(30), ರಾಜಪಾಲ್ (22), ಸುಭಾಷ್(22) ಮತ್ತು ಲಾಲಾ ಝಲ್ಲರ್ (18) ರಕ್ಷಿಸಲ್ಪಟ್ಟ ಯುವಕರು. ಮಧ್ಯಪ್ರದೇಶದ ಸಂಜಯ್ ಎಂಬಾತ ಕೆಲಸ ಕೊಡಿಸುವುದಾಗಿ ನಂಬಿಸಿ ಮಧ್ಯ ಪ್ರದೇಶದಿಂದ ತನ್ನ ಸಹೋದರ ಮತ್ತು ಇತರ ನಾಲ್ಕು ಮಂದಿಯನ್ನು ಕರೆಸಿಕೊಂಡು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಸಂತೋಷ್ನ ಸಹೋದರ ಮಿಶ್ರಿ ಬಿನ್ ಗುಶು ಪರಾಟೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತರೀಕೆರೆ ತಾಲೂಕಿನ ಕೆ.ಚಟ್ಟನಹಳ್ಳಿ ಗ್ರಾಮದಲ್ಲಿ ಜೀತದಾಳುಗಳಾಗಿ ಇವರಿಂದ ಕೊಳವೆ ಬಾವಿ ಕೊರೆಸುವ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೆ, ಸಂಜಯ್ ತನ್ನ ಸಹೋದರನನ್ನು ಮನೋಜ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಈ ಬಗ್ಗೆ ತನಗೆ ದೂರವಾಣಿ ಮೂಲಕ ಮಾಹಿತಿ ಸಿಕ್ಕಿದೆ ಎಂದು ಮಿಶ್ರಿ ದೂರಿನಲ್ಲಿ ತಿಳಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೀರೂರು ಪೊಲೀಸರು, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕೆ.ಚಟ್ಟನಹಳ್ಳಿ ಗ್ರಾಮದ ಘಟನಾ ಸ್ಥಳಕ್ಕೆ ದಾಳಿನಡೆಸಿ ಸಂತೋಷ್, ರಾಜಪಾಲ್, ಸುಭಾಷ್, ಲಾಲಾ ಝಲ್ಲರ್, ಮಹಾರಾಷ್ಟ್ರದ ರಾಮೇಶ್ವರ ಅವರನ್ನು ರಕ್ಷಿಸಿದ್ದಾರೆ. ಸ್ಥಳದಲ್ಲಿದ್ದ ಬೋರ್ವೆಲ್ ಕೊರೆಯುವ ಲಾರಿಯ ಇಬ್ಬರು ಚಾಲಕರು, ಓರ್ವ ಅಡುಗೆ ಸಹಾಯಕ, ಮತ್ತೋರ್ವ ಕೆಲಸಗಾರ ಸೇರಿ ಒಟ್ಟು, ನಾಲ್ವರನ್ನು ಬಂಧಿಸಿದ್ದು, ಬೋರ್ವೆಲ್ ಕೊರೆಯುವ ಲಾರಿಯೊಂದನ್ನು ವಶಕ್ಕೆ ಪಡೆದು, ಪಟ್ಟಣದ ಉಪ ವಿಭಾಗಾಧಿಕಾರಿ ಬಿ.ಬಿ. ಸರೋಜಾ ಸಮ್ಮುಖದಲ್ಲಿ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳಾದ ಮಧ್ಯಪ್ರದೇಶದ ಸಂಜಯ್ ಮತ್ತು ಮನೋಜ್ಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.