ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ
ಬೆಂಗಳೂರು, ಮೇ 4: ಯುವಕನೊಬ್ಬನಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ನಗರದ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ವಿದ್ಯಾರಣ್ಯಪುರ ದೊಡ್ಡಬೊಮ್ಮಸಂದ್ರದ 4ನೇ ಕ್ರಾಸ್ ನಿವಾಸಿ ಡೇವಿಡ್(34) ಕೊಲೆಯಾದ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ಘಟನೆ ವಿವರ: ಕಾರು ಚಾಲಕನಾಗಿದ್ದ ಡೇವಿಡ್ನನ್ನು, ಗುರುವಾರ ರಾತ್ರಿ ದುಷ್ಕರ್ಮಿಗಳು ಗಂಗಮ್ಮನಗುಡಿ ವ್ಯಾಪ್ತಿಯ ರಾಮಚಂದ್ರಪುರ ಮುಖ್ಯರಸ್ತೆ ಬಳಿ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಅರ್ಧ ಕಿ.ಮೀ ದೂರದ ಶಾಲೆ ಆವರಣದ ಧ್ವಜಸ್ತಂಭದ ಬಳಿ ಬಿಸಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ಸುದ್ದಿ ತಿಳಿದ ಗಂಗಮ್ಮನಗುಡಿ ಠಾಣೆ ಪೊಲೀಸರು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ತಲೆ ಇಲ್ಲದ ದೇಹ ಮಾತ್ರ ಪತ್ತೆಯಾಯಿತು. ಈ ಸಂದರ್ಭದಲ್ಲಿ ಮಳೆ ಬರುತ್ತಿತ್ತು. ಪೊಲೀಸರು ಸುತ್ತಮುತ್ತ ರುಂಡಕ್ಕಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ.
ಶುಕ್ರವಾರ ಮುಂಜಾನೆ ಶಾಲೆಯೊಂದರ ಬಳಿ ರುಂಡ ಪತ್ತೆಯಾಗಿದ್ದು, ತದನಂತರ ರುಂಡ ಕೊಲೆಯಾದ ಯುವಕ ಡೇವಿಡ್ ನದ್ದು ಎಂದು ಗುರುತಿಸಲಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಗಂಗಮ್ಮನಗುಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ತನಿಖೆ ಕೈಗೊಂಡಿದ್ದಾರೆ.