ಬೆಂಗಳೂರು: ಕಡ್ಡಾಯ ಮತದಾನಕ್ಕೆ ಜಾಗೃತಿ ಅಭಿಯಾನ
ಬೆಂಗಳೂರು, ಮೇ 5: ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಿಟಿಜನ್ ಫಾರ್ ಬೆಂಗಳೂರು ಹಾಗೂ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಸಂಘಟನೆಗಳು ‘ನಮ್ಮ ಮತ ನಮ್ಮ ಹಿತ’ ಎಂಬ ಅಣಕು ಮತದಾನ ಅಭಿಯಾನ ನಡೆಸಿದವು.
ಶನಿವಾರ ನಗರದ ಟೌನ್ಹಾಲ್ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಯ ನೂರಾರು ಜನರು ಮತ ಹಾಕಿದರು.
ಈ ವೇಳೆ ಚಿತ್ರನಟ ಚೇತನ್ ಮಾತನಾಡಿ, ಸಮಾಜದ ಬದಲಾವಣೆಗೆ ಮತದಾನ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ ಜನರ ಶ್ರೇಯೋಭಿವೃದ್ದಿಗೆ ದುಡಿಯುವ ನಾಯಕರನ್ನು ಆಯ್ಕೆಮಾಡಬೇಕಾದ ಹೊಣೆ ಎಲ್ಲರ ಮೇಲಿದೆ. ರಾಜ್ಯವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಸರಕಾರವನ್ನು ಆಯ್ಕೆ ಮಾಡಲು ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು ಎಂದು ಎಂದು ಹೇಳಿದರು.
ಸಿಟಿಜನ್ ಫಾರ್ ಬೆಂಗಳೂರು ಸಂಸ್ಥೆ ಸದಸ್ಯ ವಿನೋದ್ ಮಾತನಾಡಿ, ಬೆಂಗಳೂರಿನಲ್ಲಿ ಮುಖ್ಯವಾಗಿ ಕಸ ವಿಲೇವಾರಿ ಅವ್ಯವಸ್ಥೆ, ಗಾರ್ಬೆಜ್ ಮಾಫಿಯ, ರಸ್ತೆ, ನೀರು, ಚರಂಡಿ, ಮಹಿಳಾ ಸುರಕ್ಷತೆ ಸೇರಿ ನಾನಾ ಸಮಸ್ಯೆ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ, ಮತದಾರರನ್ನು ಮತಗಟ್ಟೆಯೆಡೆಗೆ ಸೆಳೆಯಲು ನಗರದ ವಿವಿಧೆಡೆಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಗರದ ಸಾವಿರಾರು ನಾಗರಿಕರು ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಚಿತ್ರ ನಿರ್ದೇಶಕ ಸಾದತ್ಖಾನ್ ಮಾತನಾಡಿ, ಜಾತಿ, ಧರ್ಮವೆಂದು ಜೋತು ಬಿದ್ದು ಮತದಾನ ಮಾಡುವುದರಲ್ಲಿ ಅರ್ಥವಿಲ್ಲ. ಹೀಗಾಗಿ, ಜನರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವಂತಹ ನಾಯಕನನ್ನು ಆಯ್ಕೆ ಮಾಡಲು ಮತದಾನ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಾಸಂತಿ ಹರಿಪ್ರಸಾದ್, ಪೃಥ್ವಿ, ಸಿಟಿಜನ್ ಫಾರ್ ಬೆಂಗಳೂರಿನ ಸಂಚಾಲಕ ಹೇಮಂತ್ ಸೇರಿ ಪ್ರಮುಖರಿದ್ದರು.