ಬೆಂಗಳೂರು: ನಿರ್ಮಲಾನಂದನಾಥ ಸ್ವಾಮೀಜಿಯನ್ನು ಭೇಟಿ ಮಾಡಿದ ಅಮಿತ್ ಶಾ
ಬೆಂಗಳೂರು, ಮೇ 10: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಇವರಿಬ್ಬರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಗುರುವಾರ ಬೆಳಗ್ಗೆ ವಿಜಯನಗರದಲ್ಲಿರುವ ಶಾಖಾ ಮಠಕ್ಕೆ ಭೇಟಿ ನೀಡಿದ ಅಮಿತ್ ಶಾ ಸ್ವಾಮೀಜಿಯ ಆಶೀರ್ವಾದ ಪಡೆದು, ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜ್ಯದ ಯಾವುದೇ ನಾಯಕರನ್ನು ಜೊತೆಗೆ ಕರೆದೊಯ್ಯದೇ ಒಬ್ಬರೆ ತೆರಳಿದ್ದರು ಎನ್ನಲಾಗಿದೆ. ಸ್ವಾಮೀಜಿ ಜೊತೆ ಏನು ಮಾತುಕತೆ ನಡೆಸಿರಬಹುದೆಂದು ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಭೇಟಿ ನಂತರ ಟ್ವೀಟ್ಟರ್ನಲ್ಲಿ ಟ್ವೀಟ್ ಮಾಡಿರುವ ಅಮಿತ್ ಶಾ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಆಶೀರ್ವಾದ ದೊರೆಕಿದ್ದು ನನ್ನ ಪುಣ್ಯ. ಅನ್ನ ದಾಸೋಹಿ, ಶಿಕ್ಷಣ ಸಂತ, ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರ ದಿವ್ಯ ಮಾರ್ಗದರ್ಶನ ನಮಗಿದೆ ಎಂದು ಹೇಳಿದ್ದಾರೆ.
Next Story