ಪೌರ ಕಾರ್ಮಿಕರ ಗೋಳು ಕೇಳದ ಅಧಿಕಾರಿಗಳು : ಹಲವು ತಿಂಗಳಿನಿಂದ ಪೌರಕಾರ್ಮಿಕರಿಗೆ ಸಂಬಳವಿಲ್ಲ
ಬೆಂಗಳೂರು, ಮೇ 25: ಬಿಬಿಎಂಪಿ ಕೇಂದ್ರ ಕಚೇರಿಯ ಕೂಗಳತೆಯ ದೂರದಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಪೌರಕಾರ್ಮಿಕರಿಗೆ ಕಳೆದ 5 ತಿಂಗಳಿಂದ ಸಂಬಳ ಕೊಡದೆ ಬಿಟ್ಟಿ ಚಾಕರಿ ಮಾಡಿಸಿಕೊಳ್ಳಲಾಗುತ್ತಿದೆ. ಸಂಬಳವಿಲ್ಲದೆ ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ದಿನಕ್ಕೆ ಮೂರು ಹೊತ್ತು ಊಟ ಹಾಕಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಬಿಬಿಎಂಪಿ ಕೇಂದ್ರ ಕಚೇರಿ ಸಮೀಪವಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ವಾರ್ಡ್ನಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕಳೆದ 5ತಿಂಗಳಿಂದ ಸಂಬಳ ಕೊಡದೆ ಬಿಬಿಎಂಪಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷತನವನ್ನು ಖಂಡಿಸಿ ಕಳೆದ ಎರಡು ದಿನದಿಂದ ಧರ್ಮರಾಯಸ್ವಾಮಿ ದೇವಸ್ಥಾನ ಸೇರಿದಂತೆ ಸುತ್ತಮುತ್ತ ಕಸವನ್ನು ತೆಗೆಯದೆ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪೌರ ಕಾರ್ಮಿಕರ ಸಮಸ್ಯೆ ಕೇವಲ ಒಂದು, ಎರಡು ವಾರ್ಡ್ಗಳಿಗೆ ಸೀಮಿತವಾಗಿಲ್ಲ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲೂ ಪೌರಕಾರ್ಮಿಕರಿಗೆ ಸರಿಯಾದ ಸಂಬಳ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಚುನಾವಣೆಯ ನೆಪವೊಡ್ಡಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಪೌರಕಾರ್ಮಿಕರ ನೌಕರರ ಸಂಘದ ನಾಯಕಿ ನಿರ್ಮಲಾ ಆರೋಪಿಸಿದರು.
ನನ್ನ ಬದುಕು ಯಾರಿಗೂ ಬೇಡ: ನನ್ನ ಮಕ್ಕಳಿಗೆ ನಾನೆ ದಿಕ್ಕು. ನಾನೇನೋ ಹಸಿವು ತಡೆದುಕೊಳ್ಳಬಲ್ಲೆ. ಆದರೆ ನನ್ನ ಎರಡು ಮಕ್ಕಳು ತಡೆಯಲ್ಲ. ಹೊಟ್ಟೆ ತುಂಬ ಊಟ ಹಾಕಲು ಸಾಧ್ಯವಾಗುತ್ತಿಲ್ಲ. ಶಾಲೆಗಳು ಪ್ರಾರಂಭವಾಗಿವೆ. ಒಂದು ಜೊತೆ ಬಟ್ಟೆ ಕೊಡಿಸಲು ಆಗುತ್ತಿಲ್ಲ. ಕಳೆದ 5ತಿಂಗಳಿನಿಂದ ಕೆಲಸ ಮಾಡಿಯೂ ಸಂಬಳ ಸಿಗದೆ, ಮನೆ ನಡೆಸಲು ಪರದಾಡುತ್ತಿದ್ದೇನೆಂದು ಪೌರಕಾರ್ಮಿಕ ಮಹಿಳೆ ತನ್ನ ನೋವನ್ನು ಹಂಚಿಕೊಂಡರು.
ಪೌರಕಾರ್ಮಿಕರು ಸಮಸ್ಯೆಯನ್ನು ಬಗೆ ಹರಿಸುವಂತಹ ಕಾಳಜಿ ಅಧಿಕಾರಿಗಳಿಗೆ ಇಲ್ಲವಾಗಿದೆ. ಪೌರಕಾರ್ಮಿಕರ ಕುರಿತು ಕಿಂಚಿತ್ ಕಾಳಜಿ ವಹಿಸಿದರೂ ಸಮಸ್ಯೆಗಳನ್ನು ಸುಲಭವಾಗಿ ಬಗೆ ಹರಿಸಬಹುದು. ತುತ್ತು ಅನ್ನಕ್ಕಾಗಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಅವರ ಶ್ರಮಕ್ಕೆ ತಕ್ಕ ಸಂಬಳ ಕೊಡದೆ ಸತಾಯಿಸುತ್ತಿರುವುದು ಮನುಷ್ಯತ್ವವಲ್ಲ. ಪೌರಕಾರ್ಮಿಕರಿಗೆ ಸಂಬಳ ಕೊಡದೆ ಶೋಷಿಸುತ್ತಿರುವ ಬಿಬಿಎಂಪಿ ವಿರುದ್ಧ ಶೀಘ್ರದಲ್ಲೆ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
-ನಿರ್ಮಲಾ, ಪೌರಕಾರ್ಮಿಕ ಸಂಘದ ನಾಯಕಿ