2019ಕ್ಕೆ ಪ್ರಧಾನಿ ಮೋದಿ ಮನೆಗೆ: ಎಚ್.ಎಸ್.ದೊರೆಸ್ವಾಮಿ
"ಪ್ರಧಾನಿಗೆ ಕಿವಿ ಕೇಳುವುದಿಲ್ಲ"
ಬೆಂಗಳೂರು, ಮೇ 27: 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಕೊಡಬೇಕಾಗಿದೆ ಎಂದು ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಇಂದಿಲ್ಲಿ ಹೇಳಿದರು.
ರವಿವಾರ ನಗರದ ಶಾಸಕರ ಭವನ ಸಭಾಂಗಣದಲ್ಲಿ ಪ್ರಜಾತಂತ್ರ ಉಳಿಸಲು ಪ್ರಗತಿಪರರ ವೇದಿಕೆ ಆಯೋಜಿಸಿದ್ದ, ‘ಪ್ರಜಾಪ್ರಭುತ್ವ-ಸಂವಿಧಾನ ಅಪಾಯ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದೆಲ್ಲೆಡೆ ಜ್ಯಾತ್ಯತೀತ ಪಕ್ಷಗಳು, ಸಮಾನ ಮನಸ್ಕರರು ಒಂದಾಗುತ್ತಿದ್ದು, ಸೂಕ್ತ ಸಲಹೆ, ಮಾರ್ಗದರ್ಶನದ ಮೂಲಕ 2019ರ ಲೋಕಸಭಾ ಚುನಾವಣೆ ಎದುರಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸ ಬೇಕಾಗಿದೆ. ಈ ನಿಟ್ಟಿನಲ್ಲಿ, ಈಗಲೇ ನಾವು ಕಾರ್ಯ ವೈಖರಿಯಲ್ಲಿ ತೊಡಗಬೇಕೆಂದು ಅವರು ಹೇಳಿದರು.
ಕರ್ನಾಟಕದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾನ ಮನಸ್ಕರರು ಹೋರಾಟ, ಜಾಗೃತಿ ಮೂಡಿಸಿದ ಕಾರಣದಿಂದಾಗಿ ಇಲ್ಲಿ ಜ್ಯಾತ್ಯತೀತ ತತ್ವ ಆಧಾರದ ಮೇಲೆ ಸಮ್ಮಿಶ್ರ ಸರಕಾರ ಬಂದಿದೆ ಎಂದ ಅವರು, ಶೀಘ್ರದಲ್ಲಿಯೇ ಪ್ರಗತಿಪರರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ದೇಶದ ರಾಜಕೀಯ ಪ್ರಗತಿ ಕುರಿತು ಚರ್ಚೆ ನಡೆಸಲಾಗುವುದೆಂದರು.
‘ಮೋದಿಗೆ ಕಿವಿ ಕೇಳುವುದಿಲ್ಲ’
‘ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಗತಿಪರರು ಮಾತ್ರವಲ್ಲದೆ, ಸ್ವಪಕ್ಷೀಯರು ಹೇಳಿದರೂ, ಕಿವಿ ಕೇಳುವುದಿಲ್ಲ ಎಂಬಂತೆ ಇದ್ದಾರೆ’
-ಎಚ್.ಎಸ್.ದೊರೆಸ್ವಾಮಿ ಸ್ವಾತಂತ್ರ ಹೋರಾಟಗಾರ