ಡಿಕೆಶಿಗೆ ಆಮಿಷವೊಡ್ಡಿದ್ದ ಅಮಿತ್ ಶಾ: ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆರೋಪ
ಬೆಂಗಳೂರು, ಮೇ 31: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಗುಜರಾತ್ನ ಕಾಂಗ್ರೆಸ್ ಶಾಸಕರು ನಮ್ಮ ರಾಜ್ಯಕ್ಕೆ ಬಂದಿದ್ದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ದೂರವಾಣಿ ಕರೆ ಮಾಡಿ ಆಮಿಷವೊಡ್ಡಿದ್ದರು ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆರೋಪಿಸಿದ್ದಾರೆ.
ಗುರುವಾರ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗುಜರಾತ್ನ 42 ಶಾಸಕರ ಪೈಕಿ 38 ಮಂದಿ ನಿಮ್ಮ ಬಳಿಯೇ ಇರಲಿ, ನಾಲ್ವರು ಶಾಸಕರನ್ನು ಮಾತ್ರ ನನಗೆ ನೀಡಿ ಎಂದು ಶಿವಕುಮಾರ್ಗೆ ಅಮಿತ್ ಶಾ ಕೇಳಿದ್ದರು ಎಂದರು.
ಇದರ ಬದಲಿಗೆ ನಾನು ನಿಮಗೆ ಬಹಳ ದೊಡ್ಡ ಸಹಾಯವನ್ನು ಮಾಡುತ್ತೇನೆ ಎಂದು ಅಮಿತ್ ಶಾ ನೀಡಿದ ಆಮಿಷಕ್ಕೆ ಶಿವಕುಮಾರ್ ಒಪ್ಪಲಿಲ್ಲ. ನಾನು ಪಕ್ಕಾ ಕಾಂಗ್ರೆಸ್ಸಿಗ, ನನ್ನ ದೇಹದಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಈ ವಿಚಾರದಲ್ಲಿ ನನ್ನನ್ನು ಕ್ಷಮಿಸಿ ಎಂದು ಅಮಿತ್ ಶಾಗೆ ಶಿವಕುಮಾರ್ ಪ್ರತ್ಯುತ್ತರ ನೀಡಿದರು. ಆ ಸಂದರ್ಭದಲ್ಲಿ ನಾನು ಶಿವಕುಮಾರ್ ಜೊತೆಯಲ್ಲಿದ್ದೆ ಎಂದು ಲಿಂಗಪ್ಪ ಹೇಳಿದರು.