ಬೆಂಗಳೂರು: ಜೂ.2 ರಂದು ರಾಜ್ಯಮಟ್ಟದ ವೈವಿಧ್ಯಮಯ ಸಂಗೀತೋತ್ಸವ
ಬೆಂಗಳೂರು, ಜೂ.1: ಝೇಕಾಂರ ಭಾರತಿ ಸಂಸ್ಥೆ ವತಿಯಿಂದ ಜೂ.2 ರಂದು ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ವೈವಿಧ್ಯಮಯ ಸಂಗೀತೋತ್ಸವ ಹಾಗೂ ಬಸವ ಜಯಂತಿ ಕಾರ್ಯಕ್ರಮವನ್ನು ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕವಿತಾ ಮಾರ್ಗದ, ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಹಿಂದೂಸ್ಥಾನಿ ಗಾಯಕ ಪಂ.ವಿನಾಯಕ ತೊರವಿ, ಸಾಧುಕೋಕಿಲ, ಬಸವರಾಜ ಮುಗಳಖೋಡ, ಶಿವಾನಂದ ಹೇರೂರ, ಸತೀಶ್ ಆರ್ಯನ್, ರೂಪಾಂಜಲಿ ದಿನೇಶ್ ಸೇರಿದಂತೆ ಮುಂತಾದ ಗಾಯಕರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ವಚನ ಸಂಗೀತ, ದಾಸವಾಣಿ, ಸುಗಮ ಸಂಗೀತ ಸೇರಿದಂತೆ ಹಲವು ಗಾಯನಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.
ಸಂಗೀತೋತ್ಸವವನ್ನು ಕವಿ ಡಾ.ದೊಡ್ಡರಂಗೇಗೌಡ ಉದ್ಘಾಟಿಸಲಿದ್ದು, ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಚಿತ್ರ ನಟ ಸಾಧುಕೋಕಿಲ, ವಾಣಿಜ್ಯ ತೆರಿಗೆ ಅಪರ ಆಯುಕ್ತ ವಿಶ್ವನಾಥ್ ಮಾರ್ಗದ, ಡಾ.ಮುದ್ದುಮೋಹನ, ಬಲವಂತರಾವ್ ಪಾಟೀಲ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಿಂದೂಸ್ಥಾನಿ ಗಾಯಕ ವಿನಾಯಕರ ತೊರವಿ, ತಬಲ ವಾದಕ ವಿಶ್ವನಾಥ ನಾಕೋಡ, ಕವಿ ದಂಡಪ್ಪ, ಕೆನರಾ ಬ್ಯಾಂಕ್ ಮ್ಯಾನೇಜರ್ ಡಿ.ಕಲ್ಲೂರಾವ್ ಹಾಗೂ ಕೆ.ವಿರೂಪಾಕ್ಷ ಮತ್ತು ಸಮಾಜ ಸೇವಕ ಕ.ಜಯರಾಮುಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.