ನ್ಯಾ.ಶ್ರೀನಿವಾಸೇಗೌಡರಲ್ಲಿ ಬದ್ಧತೆ, ಸರಳತೆಯಿತ್ತು: ನ್ಯಾ.ದಿನೇಶ್ ಮಾಹೇಶ್ವರಿ
ಬೆಂಗಳೂರು, ಜೂ.14: ನ್ಯಾಯಮೂರ್ತಿ ಬಿ.ಶ್ರೀನಿವಾಸೇಗೌಡ ಅವರು ಕಕ್ಷಿದಾರರನ್ನು ರಾಜಿಗೆ ಪ್ರೋತ್ಸಾಹಿಸುತ್ತಿದ್ದ ಗುಣ ಶ್ಲಾಘನೀಯ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದ್ದಾರೆ.
ಶುಕ್ರವಾರ (ಜೂ.15) ನಿವೃತ್ತಿ ಹೊಂದಲಿರುವ ನ್ಯಾಯಮೂರ್ತಿ ಬಿ.ಶ್ರೀನಿವಾಸೇಗೌಡ ಅವರಿಗೆ ಗುರುವಾರ ಸಂಘದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಂಗನಾಥ್, ಶ್ರೀನಿವಾಸೇಗೌಡ ಅವರು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು ಒಂದು ದಶಕದವರೆಗೆ ನ್ಯಾಯಮೂರ್ತಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮಾತನಾಡಿ, ಶ್ರೀನಿವಾಸೇಗೌಡ ತಮ್ಮ ಸರಳತೆ, ಬದ್ಧತೆ ಹಾಗೂ ಆತ್ಮೀಯತೆಯಿಂದ ಎಲ್ಲರ ಪ್ರೀತಿಪಾತ್ರರಾಗಿದ್ದರು ಎಂದು ಪ್ರಶಂಸಿಸಿದರು.
ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಆರ್.ದೇವದಾಸ್, ಪಿ.ಎಂ.ನವಾಜ್, ಎಸ್. ಸುಜಾತ, ಎಚ್.ಟಿ.ನರೇಂದ್ರ ಪ್ರಸಾದ್, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ, ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎಂ.ಎನ್.ಗಂಗಾಧರಯ್ಯ ಉಪಸ್ಥಿತರಿದ್ದರು. ಶ್ರೀನಿವಾಸೇಗೌಡ ಅವರು 2008ರ ಜೂನ್ 2ರಂದು ಹೆಚ್ಚುವರಿ ನ್ಯಾಯಮೂರ್ತಿ ಆಗಿ ನೇಮಕಗೊಂಡಿದ್ದರು.