ಎಸ್ಸಿ-ಎಸ್ಟಿ ನೌಕರರ ಭಡ್ತಿ ಮೀಸಲಾತಿ ಸಂರಕ್ಷಣಾ ರ್ಯಾಲಿ
ಎಸ್ಸಿ-ಎಸ್ಟಿ ನೌಕರರ ಭಡ್ತಿ ಮೀಸಲಾತಿ ಸಂರಕ್ಷಣಾ ರ್ಯಾಲಿ
ಬೆಂಗಳೂರು, ಜೂ.15: ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ/ಎಸ್ಟಿ ನೌಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ಎಸ್ಸಿ-ಎಸ್ಟಿ ನೌಕರರ ಭಡ್ತಿ ಮೀಸಲಾತಿ ರಕ್ಷಣೆ ಮತ್ತು ಸಂವಿಧಾನಬದ್ಧ ಹಕ್ಕುಗಳ ಉಳಿವಿಗಾಗಿ ರಾಜ್ಯ ಮಟ್ಟದ ಪ್ರತಿಭಟನಾ ರ್ಯಾಲಿ ಇಂದು ನಡೆಯಿತು. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೆ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ- ಪಂಗಡದ ನೌಕರರ ಸಂಘಗಳ ಒಕ್ಕೂಟಗಳು ಹಾಗೂ ಎಲ್ಲಾ ದಲಿತಪರ, ಪ್ರಗತಿಪರ ಸಂಘಟನೆಗಳ ನಾಯಕರು ಹಾಗೂ ಸದಸ್ಯರು ಭಾಗವಹಿಸಿದ್ದರು. ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು
* ಭಡ್ತಿ ಮೀಸಲಾತಿ ರಕ್ಷಣೆಗಾಗಿ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರವಾಗಿರುವ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಲು ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
* ಲೋಕಸಭೆಯಲ್ಲಿ ಬಾಕಿ ಇರುವ ಸಂವಿಧಾನದ 117ನೆ ತಿದ್ದುಪಡಿಗೆ ಅನುಮೋದನೆ ಪಡೆಯಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು.
*ಅಸ್ಪೃಶ್ಯತಾ ನಿವಾರಣಾ ಕಾಯ್ದೆ 1989ನ್ನು ಯಾವುದೇ ಕಾರಣದಿಂದಲೂ ಬಲಹೀನಗೊಳ್ಳದಂತೆ ಕ್ರಮ ಕೈಗೊಳ್ಳಬೇಕು.
* ಲೋಕಸಭೆಯಲ್ಲಿ ಅನುಮೋದನೆಯಾಗಿರುವ ಸಂವಿಧಾನದ 77ನೆ ತಿದ್ದುಪಡಿಯ ಅನುಸಾರ ರಾಜ್ಯ ಸರಕಾರ ಆದೇಶ ಹೊರಡಿಸಬೇಕು.