ನ್ಯಾಯಬೆಲೆ ಅಂಗಡಿಗಳಿಗೆ ತೂಕಮಾಪನ ಯಂತ್ರ ಅಳವಡಿಕೆ: ಸಚಿವ ಝಮೀರ್ ಅಹ್ಮದ್
ಬೆಂಗಳೂರು, ಜೂ.21: ರಾಜ್ಯದಲ್ಲಿ 20 ಸಾವಿರ ನ್ಯಾಯ ಬೆಲೆ ಅಂಗಡಿಗಳಿವೆ. ಜನರಿಗೆ ಯಾವುದೇ ರೀತಿಯ ವಂಚನೆಯಾಗದಂತೆ ತಡೆಯಲು ಇಲಾಖೆಯ ವತಿಯಿಂದಲೇ ತೂಕಮಾಪನ ಯಂತ್ರಗಳನ್ನು ಖರೀದಿಸಿ ಹಂಚಿಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ನಗರದ ರಿಚ್ಮಂಡ್ ಟೌನ್ನಲ್ಲಿರುವ ರಾಜ್ಯ ಹಜ್ ಸಮಿತಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತೂಕಮಾಪನ ಯಂತ್ರಕ್ಕೆ ಕನಿಷ್ಠ 15 ಸಾವಿರ ರೂ.ಗಳಂತೆ, 20 ಸಾವಿರ ಯಂತ್ರಗಳ ಖರೀದಿಗೆ 30 ಕೋಟಿ ರೂ.ಅಗತ್ಯವಿದೆ ಎಂದರು.
ಸರಕಾರವು ನ್ಯಾಯ ಬೆಲೆ ಅಂಗಡಿ ಮಾಲಕರಿಗೆ ಒಂದು ಕ್ವಿಂಟಾಲ್ಗೆ ನೀಡುತ್ತಿದ್ದ ಕಮಿಷನ್ ಹಣವನ್ನು 87 ರೂ.ಗಳಿಂದ 100 ರೂ.ಗಳಿಗೆ ಹೆಚ್ಚಿಸಲಾಗಿದೆ. ತೂಕ ಮಾಪನ ಯಂತ್ರಗಳ ಖರೀದಿಗೆ ವ್ಯಯಿಸಲಾಗುವ ಹಣವನ್ನು ಅಂಗಡಿ ಮಾಲಕರಿಂದಲೇ ಕಂತಿನ ರೂಪದಲ್ಲಿ ಪಡೆಯಲಾಗುವುದು. ಇದರಿಂದ ಸರಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಅವರು ಹೇಳಿದರು.
ಪ್ರತಿಯೊಂದು ತಾಲೂಕುಗಳಲ್ಲಿ ಮೂರು ದಿನ ಪ್ರವಾಸ ಕೈಗೊಂಡು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಲಾಗುವುದು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಿಂದ ಈ ಜನತಾ ದರ್ಶನ ಆರಂಭಗೊಳ್ಳಲಿದೆ ಎಂದು ಝಮೀರ್ಅಹ್ಮದ್ ತಿಳಿಸಿದರು.
ಅಲ್ಪಸಂಖ್ಯಾತರ ಬಾಹುಳ್ಯವಿರುವ ಪ್ರದೇಶಗಳ ಅಭಿವೃದ್ಧಿಗೆ ಹಿಂದಿನ ಸರಕಾರ ಜಾರಿಗೆ ತಂದಿದ್ದ ಯೋಜನೆಯಡಿ, ಆಯಾ ತಾಲೂಕಿನಲ್ಲಿರುವ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳ ಪಟ್ಟಿ ಮಾಡಿ ಸ್ಥಳದಲ್ಲೇ 5-6 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದು ಎಂದು ಅವರು ಹೇಳಿದರು.
ಮಲೆನಾಡು, ಗುಡ್ಡಗಾಡು ಪ್ರದೇಶಗಳಿರುವ 4-5 ತಾಲೂಕುಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಸಮಪರ್ಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳಲ್ಲಿ ಇಬ್ಬರು ಸದಸ್ಯರು ಇರುವ ವಿಚಕ್ಷಣ ಸಮಿತಿಗಳನ್ನು ರಚಿಸಿ, ಅವರ ದೃಢೀಕರಣವಿದ್ದಲ್ಲಿ ಪಡಿತರ ವಿತರಿಸಲು ನಿರ್ಧರಿಸಲಾಗಿದೆ.
-ಝಮೀರ್ ಅಹ್ಮದ್ ಖಾನ್, ಆಹಾರ ಸಚಿವ