ಪ್ರಾಂಶುಪಾಲರ ಹುದ್ದೆ ಶೀಘ್ರದಲ್ಲೇ ಭರ್ತಿ: ಸಚಿವ ಜಿ.ಟಿ.ದೇವೇಗೌಡ
ಬೆಂಗಳೂರು, ಜೂ.24: ಹಲವಾರು ವರ್ಷಗಳಿಂದ ಕಾಲೇಜು ಪ್ರಾಂಶುಪಾಲರ ನೇಮಕಾತಿ ನೆನೆಗುದಿಗೆ ಬಿದ್ದಿದೆ. ಮುಂದಿನ ದಿನಗಳಲ್ಲಿ ತಜ್ಞರ ಸಲಹೆ ಪಡೆದು ಶೀಘ್ರವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ರವಿವಾರ ನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಅಖಿಲ ಭಾರತೀಯ ವಿಶ್ವವಿದ್ಯಾಲಯ ಮತ್ತು ಅಧ್ಯಾಪಕರ ಸಂಘದ ವತಿಯಿಂದ ಆಯೋಜಿಸಿದ್ದ, ನ್ಯಾಷನಲ್ ಎಜುಕೇಶನ್ ಕಮಿಟಿ ಸಭೆಯಲ್ಲಿ ಅವರು ಉನ್ನತ ಶಿಕ್ಷಣ ವಲಯ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಉನ್ನತ ಶಿಕ್ಷಣ ಕ್ಷೇತ್ರವನ್ನು ಮುನ್ನೆಡಸಲು ಶ್ರಮಿಸುತ್ತೇನೆ ಎಂದರು.
ಮೂತಭೂತ ಸೌಕರ್ಯ, ಹುದ್ದೆಗಳ ಭರ್ತಿ, ಮತ್ತಿತರ ಸೌಕರ್ಯಗಳನ್ನು , 2016ರ ಯುಜಿಸಿ ಜಾರಿಗೆ ತರಲು ಹೇಳಿದ್ದೇನೆ. ಉಪನ್ಯಾಸಕರ ಸಂಘಟನೆಗಳ ನಡುವೆಯೇ ಸಾಕಷ್ಟು ಗೊಂದಲ, ಭಿನ್ನಾಭಿಪ್ರಾಯಗಳಿವೆ. ಹೀಗಾಗಿ, ಕಾರ್ಯಕ್ರಮ ಕ್ಕೆ ಹೋಗಬಾರದೆಂಬ ಒತ್ತಡ ಇತ್ತು. ಆದರೂ ಇಂದು ಮೊದಲ ಸಭೆಗೆ ಆಗಮಿಸಿದ್ದೇನೆ ಎಂದು ಹೇಳಿದರು.
ಸೌಲಭ್ಯಗಳಿಲ್ಲದ ವೇಳೆಯಲ್ಲಿ ಅಂದಿನ ಶಿಕ್ಷಕರ ಸೇವೆಗೂ ಇಂದು ನಿಮಗೆ ಎಲ್ಲ ಸೌಲಭ್ಯಗಳಿದ್ದು ನೀವು ಸಲ್ಲಿಸುತ್ತಿರುವ ಸೇವೆಗೂ ಅಳತೆ ಮಾಡಿ ನೋಡಿ. ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ. ಖಾಸಗಿ ಶಾಲೆಗಳ ಶಿಕ್ಷಕರಿಗೂ ನಮ್ಮ ಸರಕಾರಿ ಶಾಲೆಯ ಶಿಕ್ಷರಿಗೆ ಇರುವ ಸೌಲಭ್ಯಗಳಲ್ಲಿ ಯಾವುದೇ ಕಡಿಮೆ ಇಲ್ಲ. ಹೀಗಾಗಿ, ಶಿಕ್ಷಣದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.
ನಮ್ಮ ತಂದೆ ಕಾಲದಲ್ಲಿ ಶಿಕ್ಷಕರು ಕಾಲ್ನಡಿಗೆ ಮೂಲಕ ಶಾಲೆಗೆ ಹೋಗುತ್ತಿದ್ದರು, ನಂತರ ಸೈಕಲ್ನಲ್ಲಿ ಹೋಗಿ ಪಾಠ ಮಾಡುತ್ತಿದ್ದರು. ಶಿಕ್ಷಣದ ಮೌಲ್ಯಗಳ ಬಗ್ಗೆ ತಿಳಿಸಿಕೊಡುತ್ತಿದ್ದರು ಎಂದ ಅವರು, ಗುರು ಸ್ಥಾನ ಸಿಕ್ಕಿರುವುದು ಪೂರ್ವಜರ ಪುಣ್ಯ ಫಲ. ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದರೆ, ಸಭೆ ನಡೆಸಿ, ಪಟ್ಟಿ ಮಾಡಿ ನನಗೆ ಕೊಡಿ. ಅದನ್ನು ಪ್ರಾಮಾಣಿಕವಾಗಿ ಜರಿಗೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಖಾಸಗಿ ಕಾಲೇಜುಗಳ ಸಾಧನೆಗಳ ಮುಂದೆ ಸರಕಾರಿ ಶಾಲೆಗಳ ಸಾಧನೆ ತಲೆ ತಗ್ಗಿಸುವಂತಿದೆ. ನಿಮಗೆ ಎಲ್ಲ ಸೌಲಭ್ಯಗಳು ನೀಡಿದರೂ ಸಹ ಖಾಸಗಿ ಶಾಲೆಗಳ ಸಾಧನೆ ಮುಂದೆ ಸರಕಾರಿ ಕಾಲೇಜುಗಳು ತಲೆ ತಗ್ಗಿಸುವಂತಾಗಿದೆ. ಇನ್ನು, ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕರೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಹೀಗಾಗಿ, ನೀವು ನಿಮ್ಮ ಕೆಲಸಕ್ಕೆ ನ್ಯಾಯ ಒದಗಿಸಿ ಎಂದ ಅವರು, ಖಾಸಗಿ ಕಾಲೇಜುಗಳನ್ನು ಮೀರಿಸುವ ನಿಟ್ಟಿನಲ್ಲಿ ನಮ್ಮ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ತಯಾರಿಸಬೇಕು ಎಂದು ಸೂಚಿಸಿದರು.
ಎಚ್.ಡಿ.ದೇವೇಗೌಡರ ಸಮಯದಲ್ಲಿ ಆಗಿನ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡ ಸಮಯದಲ್ಲಿ ಬಹಳಷ್ಟು ಶೈಕ್ಷಣಿಕ ಅಭಿವೃದ್ಧಿ ನಡೆದಿದೆ. ಆಗ ನಾನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಗಿದ್ದೆ. ಆಗ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ನಾನು ಭಾಗವಹಿಸಿ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದೆ ಎಂದು ಹೇಳಿದರು.
ಮಂತ್ರಿಯಾದ ನಂತರ ನನ್ನ ವಿದ್ಯಾಭ್ಯಾಸದ ವಿವರ ನೀಡಿದೆ. ಕಂದಾಯ ಖಾತೆ ಕೊಡಿ, ರೈತರ ಜೊತೆ ಕೂಡಿ ಕೆಲಸ ಮಾಡುತ್ತೇನೆ ಅಂದೆ. ಆದರೆ ಒಪ್ಪಲಿಲ್ಲ. ಆದರೀಗ, ಮನಪೂರ್ವಕವಾಗಿ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಆಯುಕ್ತೆ ಡಾ.ಎನ್.ಮಂಜುಳಾ, ಸಂಘದ ಅಧ್ಯಕ್ಷ ಕೇಶವ್ ಭಟ್ಟಾಚಾರ್ಯ,ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಸೇರಿ ದೇಶದ ಕಾಲೇಜುಗಳ ಅಧ್ಯಾಪಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
‘ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಭಟನೆ ಸೂಕ್ತ ಮಾರ್ಗವಲ್ಲ. ಗುರುವಿನ ಸ್ಥಾನ ಶಾಶ್ವತ. ಗುರು ಸ್ಥಾನ ಸಿಕ್ಕಿರುವುದು ಪೂರ್ವಜರ ಪುಣ್ಯ ಫಲ. ಖಾಸಗಿ ಶಾಲೆ, ಕಾಲೇಜುಗಳನ್ನು ಮೀರಿಸುವಂತೆ ಸರಕಾರಿ ಕಾಲೇಜುಗಳು ಬೆಳೆಯಬೇಕು. ಹೀಗಾಗಿ ಸಭೆಯಲ್ಲಿ ಶಿಕ್ಷಣ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿ, ದಾಖಲು ಮಾಡಿ ನನಗೆ ವರದಿ ನೀಡಿದರೆ ಅದನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’
-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ
‘ವಿಶ್ವ ವಿದ್ಯಾಲಯಗಳಲ್ಲಿ ಬ್ರಿಟಿಷ್ ಸಂಸ್ಕೃತಿ ಜೀವಂತವಾಗಿದೆ. ಇಂದಿನ ಪ್ರೊಫೆೆಸರ್ಗಳು ರಾಜಕಾರಣಿಗಳ ಹಿಂದೆ ಮನವಿ ಹಿಡಿದು ಓಡಾಡುವುದು ತಮ್ಮ ವೃತ್ತಿಗೆ ಶೋಭೆಯಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿದರು’