ಸಿಎಂ ಪರಿಹಾರ ನಿಧಿಗೆ ನಟ ಶಿವರಾಜ್ ಕುಮಾರ್ ನೆರವು
ಬೆಂಗಳೂರು, ಆ.20: ಕೊಡಗು ಜಿಲ್ಲೆಯಲ್ಲಿ ಮಹಾ ಮಳೆಗೆ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿರುವ ಹಿರಿಯ ನಟ ಡಾ.ಶಿವರಾಜ್ಕುಮಾರ್, ಮುಖ್ಯಮಂತ್ರಿಯ ಪರಿಹಾರ ನಿಧಿಗೆ 10 ಲಕ್ಷ ರೂ.ಗಳ ನೆರವು ನೀಡಿದ್ದಾರೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಶಿವರಾಜ್ಕುಮಾರ್, 10 ಲಕ್ಷ ರೂ.ಗಳ ನೆರವಿನ ಚೆಕ್ ಹಸ್ತಾಂತರಿಸಿದರು. ಅಲ್ಲದೇ, ಇದೇ ಸಂದರ್ಭದಲ್ಲಿ ಸಂತ್ರಸ್ತರಿಗೆ ಹೆಚ್ಚಿನ ನೆರವು ಒದಗಿಸುವಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೊಡಗು ಜಿಲ್ಲೆಯಲ್ಲಿ ಆಗಿರುವ ಅನಾಹುತವನ್ನು ಗಮನಿಸಿದರೆ ಪರಿಸರದ ಜೊತೆ ನಾವು ಆಟವಾಡಬಾರದು ಎಂಬ ಸಂದೇಶ ಸಿಗುತ್ತದೆ. ಮರಗಳ ಮಾರಣ ಹೋಮ, ಜನರ ಸಂಕಷ್ಟ ನೋಡಿದರೆ ತುಂಬಾ ಸಂಕಟವಾಗುತ್ತದೆ. ಅಲ್ಲಿ ಆಗಿರುವ ಅನಾಹುತವನ್ನು ಯಾವ ರೀತಿಯಲ್ಲಿ ಸರಿಪಡಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.
ನೆರೆಯ ರಾಜ್ಯ ಕೇರಳದಲ್ಲಿಯೂ ಇದೇ ಪರಿಸ್ಥಿತಿಯಿದೆ. ಮಳೆ ಆದಷ್ಟು ಶೀಘ್ರ ಕಮ್ಮಿಯಾಗಲಿ. ಪರಿಹಾರ ಕಾರ್ಯ ತ್ವರಿತಗತಿಯಲ್ಲಿ ಆಗಿ, ನೊಂದವರಿಗೆ ಪರಿಹಾರ ಸಿಗುವಂತಾಗಲಿ ಎಂದು ಶಿವರಾಜ್ಕುಮಾರ್ ತಿಳಿಸಿದರು.