ಭಾರತೀಯರೆಲ್ಲರಿಗೂ ಸಂವಿಧಾನ ಒಂದೇ ಗ್ರಂಥ: ನಿವೃತ್ತ ನ್ಯಾ. ನಾಗಮೋಹನ ದಾಸ್
ಬೆಂಗಳೂರು, ಆ.25: ಎಲ್ಲ ಧರ್ಮದವರಿಗೂ ಒಂದೊಂದು ಗ್ರಂಥಗಳಿವೆ. ಆದರೆ, ಭಾರತೀಯರೆಲ್ಲರಿಗೂ ಸಂವಿಧಾನ ಒಂದೇ ಗ್ರಂಥ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.
ಶನಿವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಸಮುದಾಯ ಕರ್ನಾಟಕ, ಸಹಯಾನ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿದ್ದ, ‘ಸಂವಿಧಾನ ಓದು’ ಅಭಿಯಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತ ಮಾತ್ರವಲ್ಲ, ವಿಶ್ವದ 193 ರಾಷ್ಟ್ರಗಳು ಪ್ರತ್ಯೇಕ ಸಂವಿಧಾನವನ್ನು ರಚಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಯಸಿ ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ. ಅನೇಕ ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಸಮುದಾಯಗಳ ಆಚಾರ-ವಿಚಾರಗಳಲ್ಲಿ ಭಿನ್ನತೆ ಇದ್ದರೂ ಕೂಡ, ಇದೆಲ್ಲವನ್ನು ಸಂವಿಧಾನ ನಡೆಸಿಕೊಂಡು ಬರುತ್ತಿದೆ. ಎಲ್ಲ ಧರ್ಮದವರಿಗೂ ಒಂದೊಂದು ಗ್ರಂಥಗಳಿವೆ, ಭಾರತೀಯರೆಲ್ಲರಿಗೂ ಸಂವಿಧಾನ ಒಂದೇ ಗ್ರಂಥ ಎಂದು ಹೇಳಿದರು.
ಸಾಮಾಜಿಕ ನ್ಯಾಯವು ಬುದ್ಧ, ಬಸವಣ್ಣ, ಭಕ್ತಿ ಪಂಥ, ದಾಸ ಸಾಹಿತ್ಯದಲ್ಲಿ ಇದೆ. ಅದು ನೈತಿಕ, ಸಾಮಾಜಿಕ ನೀತಿಯಾಗಿತ್ತು. ರಾಜನೀತಿಯಾಗಿ ಉಳಿಯಲಿಲ್ಲ. ಆದರೆ, ಅದು ಸಂವಿಧಾನದ ಮೂಲಕ ರಾಜನೀತಿಯಾಗಿ ಸಮಾನತೆ ಕಂಡುಕೊಳ್ಳಲಾಗಿದೆ ಎಂದು ತಿಳಿಸಿದರು.
ಭಾರತವೂ ವಿಶ್ವದ ವಿಜ್ಞಾನ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ 10 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಕಾಶ್ಮೀರದಿಂದ- ಕನ್ಯಾಕುಮಾರಿಯವರೆಗೂ ಅಖಂಡ ಭಾರತ ಗಣರಾಜ್ಯವಾಗಿದ್ದು, ಸಂವಿಧಾನದ ಮೂಲಕ ಅನೇಕ ಸಮಸ್ಯೆಗಳು ನಿವಾರಣೆಯಾಗಿವೆ. ನಮ್ಮ ಎಲ್ಲ ಕಾನೂನುಗಳ ತಾಯಿ ಸಂವಿಧಾನ, ಅದರ ಮಹತ್ವ ಮೂಲತತ್ವ, ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ಸಂವಿಧಾನ ಕೃತಿ, ಸಾಹಿತ್ಯ, ಕವಿತೆ, ಕಾದಂಬರಿ ಅಲ್ಲ. ಇದು ಒಂದು ಕಾರ್ಯಕ್ರಮದ ಗ್ರಂಥ. ದೇಶದ ಜನರನ್ನು ಅರ್ಥ ಮಾಡಿಕೊಂಡರೆ, ಸಂವಿಧಾನ ಅರ್ಥ ಆಗುತ್ತದೆ. ಜನರನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಪ್ರಜಾ ಇತಿಹಾಸ, ಸಾಮಾಜಿಕ. ಆರ್ಥಿಕ, ರಾಜಕೀಯ ಅಸಮಾನತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜನಾಭಿಪ್ರಾಯ ತೆರೆದುಕೊಳ್ಳುವುದು ಸಂವಿಧಾನ ತಿಳಿದಾಗಲೇ, ಸಂವಿಧಾನವನ್ನು ಇನ್ನೂ ನಮ್ಮ ಜನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಚುನಾವಣೆಯಲ್ಲಿ ಮತ ಹಾಕೋದು, ಬೇಕಾದವರ ಆಯ್ಕೆ ಮಾಡುವುದಷ್ಟೇ ಸಂವಿಧಾನ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರಕಾರಗಳು ಸ್ವಾರ್ಥ, ಸ್ವಜನಪಕ್ಷಪಾತ, ನಿರಂಕುಶವನ್ನು ಬಿಟ್ಟು ಸಾಂವಿಧಾನಿಕವಾಗಿ ನಡೆದುಕೊಳ್ಳಬೇಕು ಎಂದು ನಾಗಮೋಹನ ದಾಸ್ ನುಡಿದರು.