ವಸತಿ ವಂಚಿತ 69 ಸಾವಿರ ಫಲಾನುಭವಿಗಳಿಗೆ ಮತ್ತೊಮ್ಮೆ ಅವಕಾಶ: ಯು.ಟಿ.ಖಾದರ್
ರಾಜೀವ್ ಗಾಂಧಿ ವಸತಿ ನಿಗಮ
ಬೆಂಗಳೂರು, ಸೆ.1: ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ವಿವಿಧ ತಾಂತ್ರಿಕ ಕಾರಣಗಳಿಗಾಗಿ ವಸತಿ ವಂಚಿತರಾದ 69 ಸಾವಿರ ಫಲಾನುಭವಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಶನಿವಾರ ನಗರದ ಕಾವೇರಿ ಭವನದಲ್ಲಿರುವ ರಾಜೀವ್ ಗಾಂಧಿ ವಸತಿ ನಿಗಮದ ಸ್ಪಂದನಾ ಸಹಾಯವಾಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಮನೆಗಳು ಮಂಜೂರಾಗಿದ್ದ ಕೆಲವರಿಗೆ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿತ್ತು. ಇನ್ನು ಕೆಲವರಿಗೆ ಅನುದಾನ ಬಿಡುಗಡೆಯಾಗಿಲ್ಲ. ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಮಂಜೂರಾಗಿದ್ದ ಮನೆಯನ್ನು ರದ್ದು ಪಡಿಸಲಾಗಿತ್ತು. ಹೀಗಾಗಿ ಅವಕಾಶ ವಂಚಿತ ಎಲ್ಲ ಫಲಾನುಭವಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ವಸತಿ ಯೋಜನೆಯ ಫಲಾನುಭವಿಗಳ ಆದಾಯ ಮಿತಿಯನ್ನು ಬಿಪಿಎಲ್ ಆದಾಯ ಮಿತಿಗೆ ಏರಿಕೆ ಮಾಡಿಲ್ಲ. 32 ಸಾವಿರ ರೂ.ಆದಾಯ ಇರುವ ಫಲಾನುಭವಿಗಳು ಶೇ.10ರಷ್ಟು ಮಾತ್ರ ಸಿಗುತ್ತಾರೆ. ಉಳಿದ ಶೇ.90 ರಷ್ಟು ಮಂದಿ ಸೌಲಭ್ಯ ವಂಚಿತರಾಗುತ್ತಿದ್ದಾರೆ. ಹೀಗಾಗಿ ವಸತಿ ಯೋಜನೆಗಳ ಫಲಾನುಭವಿಗಳ ಆದಾಯ ಮಿತಿಯನ್ನು ಬಿಪಿಎಲ್ ಅನುಗುಣವಾಗಿ 1.20 ಲಕ್ಷ ರೂ.ಗೆ ಹೆಚ್ಚಿಸುವಂತೆ ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಸರಕಾರ ವಸತಿ ಯೋಜನೆಗಳಿಗೆ ಆಧಾರ್ ನಂಬರ್ ಜೋಡಣೆ ಮಾಡುತ್ತಿದೆ. ಇಲಾಖೆಯಲ್ಲಿ ಕಚ್ಚಾ ಪಕ್ಕ ಯೋಜನೆಯಿದ್ದು, ಅದರಡಿ ಮನೆ ದುರಸ್ತಿಗೆ 15 ಸಾವಿರ ರೂ.ಅನುದಾನ ನೀಡಲಾಗುತ್ತಿದೆ. ಈ ಸೌಲಭ್ಯ ಪಡೆದವರ ಆಧಾರ್ ಸಂಖ್ಯೆಯು ಇಲಾಖೆಯಲ್ಲಿ ನಮೂದಾಗಿದೆ. ಅಂತಹ ಫಲಾನುಭವಿಗಳಿಗೆ ಹೊಸ ಮನೆಗಳನ್ನು ಮಂಜೂರು ಮಾಡುವಾಗ ಈ ಹಿಂದೆ ಸೌಲಭ್ಯ ಪಡೆಯಲಾಗಿದೆ ಎಂಬ ಕಾರಣಕ್ಕೆ ಅವರ ಹೆಸರು ಬ್ಲಾಕ್ ಆಗಿದೆ. ಮುಂದಿನ ದಿನಗಳಲ್ಲಿ ಕಚ್ಚಾ, ಪಕ್ಕಾ ಯೋಜನೆಯ ಫಲಾನುಭವಿಗಳಿಗೂ ಹೊಸ ಮನೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಈವರೆಗೂ 40 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಅದರ ಎಲ್ಲ ದತ್ತಾಂಶಗಳನ್ನು ಕಂಪ್ಯೂಟರೀಕರಣಗೊಳಿಸಲಾಗುವುದು. ಈಗಾಗಲೆ 6 ಲಕ್ಷ ಮನೆಗಳ ದತ್ತಾಂಶ ಕಂಪ್ಯೂಟರೀಕರಣಗೊಂಡಿದೆ. ಯೋಜನೆ ಫಲಾನುಭವಿಗಳ ಕೋಡನ್ನು ದಾಖಲಿಸಿದರೆ ಆ ಮನೆಯ ಸ್ಥಿತಿಗತಿ ಮತ್ತು ಫಲಾನುಭವಿಗಳ ಸಂಪೂರ್ಣ ವಿವರ ಗೋಚರಿಸುವಂತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕೊಡಗು ಸಂತ್ರಸ್ತರಿಗೆ ಮನೆ ಬಾಡಿಗೆ: ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಮನೆ ಕಳೆದುಕೊಂಡವರ ಪುನರ್ವಸತಿಗೆ ಎರಡು ರೀತಿಯ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಒಂದು ಖಾಯಂ ಮನೆಗಳನ್ನು ನಿರ್ಮಿಸುವುದಕ್ಕಾಗಿ 42 ಎಕರೆ ಭೂಮಿಯನ್ನು ಗುರುತಿಸಿ, ಅದರಲ್ಲಿ 24ಎಕರೆ ಭೂಮಿಯ ದಾಖಲೆಗಳನ್ನು ವಸತಿ ಇಲಾಖೆಗೆ ಈಗಾಗಲೆ ನೀಡಿದೆ. ಕೆಲವರ ಮನೆಗಳು ಕೊಚ್ಚಿ ಹೋಗಿದ್ದು, ನಿವೇಶನ ಸುಸ್ಥಿತಿಯಲ್ಲಿದೆ. ಅಂತಹ ಜಾಗದಲ್ಲಿ ಮನೆ ನಿರ್ಮಿಸಲು ಅನುವು ಮಾಡಲಾಗುವುದು. ಕೆಲವು ಜಾಗಗಳಲ್ಲಿ ಮನೆ ನಿರ್ಮಿಸಲು ಸಾಧ್ಯವಾಗದಂತೆ ನಿವೇಶನವೂ ಕೊಚ್ಚಿ ಹೋಗಿದೆ. ಅವರಿಗೆ ನಿವೇಶನ ಜತೆ ಮನೆ ನಿರ್ಮಿಸಿಕೊಡಲು ಯೋಜನೆ ಸಿದ್ಧವಾಗಿದೆ ಎಂದು ಅವರು ಹೇಳಿದರು.
ನಿರ್ವಸತಿಗರಿಗೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಡುವ ಪ್ರಸ್ತಾವನೆ ಇದೆ. ಆದರೆ, ತಾತ್ಕಾಲಿಕ ಶೆಡ್ಗಳ ನಿರ್ಮಾಣ ಖರ್ಚು, ವಿದ್ಯುದ್ದೀಕರಣ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳಿಗೆ ಮಾಡಿದ ಖರ್ಚು ವ್ಯರ್ಥವಾಗುತ್ತದೆ. ಹೀಗಾಗಿ ತಾತ್ಕಾಲಿಕ ಶೆಡ್ಗಳ ಬದಲಾಗಿ ಮನೆ ಕಳೆದುಕೊಂಡವರಿಗೆ ತಿಂಗಳಿಗೆ ಮನೆ ಬಾಡಿಗೆ ಕೊಟ್ಟು ಅಷ್ಟರಲ್ಲಿ ಹೊಸದಾಗಿ ಖಾಯಂ ಮನೆಗಳನ್ನು ನಿರ್ಮಿಸಿಕೊಡುವುದು ಸೂಕ್ತವೆಂದು ಮುಖ್ಯಮಂತ್ರಿಗಳಿಗೆ ವಸತಿ ಇಲಾಖೆ ಸಲಹೆ ನೀಡಿದೆ ಎಂದು ಅವರು ಹೇಳಿದರು.
ವಸತಿ ಯೋಜನೆಯ ಫಲಾನುಭವಿಗಳು ಹಾಗೂ ಸಾರ್ವಜನಿಕರು ಸರಕಾರದ ವಸತಿ ಯೋಜನೆಗೆ ಸಂಬಂಧಿಸಿದ ಯಾವುದೆ ಕುಂದು ಕೊರತೆಗಳನ್ನು ಹಾಗೂ ಸಲಹೆಗಳ ಮಾಹಿತಿಗಾಗಿ ಸ್ಪಂದನ ವಸತಿ ಸಹಾಯವಾಣಿ-080-23118888ಕ್ಕೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.