ವಿದೇಶ ಪ್ರವಾಸಕ್ಕೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ. 3: ವಿದೇಶ ಪ್ರವಾಸದಿಂದ ದೂರವೇ ಉಳಿದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಹೊಸ ಸೂಟು-ಬೂಟು ಧರಿಸಿ ಹತ್ತು ದಿನಗಳ ಯೂರೋಪ್ ಪ್ರವಾಸಕ್ಕೆ ತೆರಳಿದ್ದಾರೆ.
ಸೋಮವಾರ ಬೆಳಗ್ಗೆ ದೇವನಹಳ್ಳಿಯ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶ ಪ್ರವಾಸ ಕೈಗೊಂಡಿದ್ದು, ಸಿದ್ದರಾಮಯ್ಯ ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಹಾಗೂ ಸಿದ್ದರಾಮಯ್ಯನವರ ಪುತ್ರ ಶಾಸಕ ಯತೀಂದ್ರ ಇದ್ದರು.
ಸದಾ ಶರ್ಟ್, ಪಂಚೆ, ಟವಲ್ನಲ್ಲೆ ಇರುತ್ತಿದ್ದ ಸಿದ್ದರಾಮಯ್ಯ ಬೂದು ಬಣ್ಣದ ಹೊಸ ಸೂಟು-ಬೂಟು ಧರಿಸಿ ವಿದೇಶಕ್ಕೆ ತೆರಳಿದ್ದು ವಿಶೇಷವಾಗಿತ್ತು. ಜರ್ಮನಿ, ಫ್ಯಾನ್ಸ್, ರಷ್ಯಾ ಸೇರಿದಂತೆ ವಿವಿಧ ದೇಶಗಳ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಸೆ.15ಕ್ಕೆ ರಾಜ್ಯಕ್ಕೆ ಹಿಂದಿರುಗಲಿದ್ದಾರೆ.
ಆಹಾರ ಸಚಿವ ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಎಚ್. ಆಂಜನೇಯ ಸೇರಿದಂತೆ ಸಚಿವರು, ಶಾಸಕರು ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು, ವಿದೇಶ ಪ್ರವಾಸ ಕೈಗೊಂಡಿರುವ ತಮ್ಮ ನೆಚ್ಚಿನ ನಾಯಕನಿಗೆ ಇದೇ ವೇಳೆ ಪುಷ್ಪಗುಚ್ಚ ನೀಡಿ ಶುಭ ಕೋರಿದರು.
‘ವಿದೇಶ ಪ್ರವಾಸ ಮಾಡಬೇಕು ಅನ್ನೋದು ಎಲ್ಲರ ಆಸೆ ಮತ್ತು ಕನಸು. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿದ್ದು, ಅವರಿಗೆ ಶುಭ ಕೋರಲು ಬಂದಿದ್ದೆ. ಅವರು 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡಿದ್ದು, ದಣಿವರಿಯದೆ ದುಡಿದರೂ, ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದರೂ, ಅವರು ಎದೆಗುಂದಲಿಲ್ಲ. ಇದೀಗ ಅವರು ವಿದೇಶ ಪ್ರವಾಸ ಕೈಗೊಂಡಿದ್ದು, ಸುಗಮವಾಗಿ ಹೋಗಿಬರಲಿ’
-ಎಚ್.ಆಂಜನೇಯ, ಮಾಜಿ ಸಚಿವ