ಸಂವಿಧಾನ ರಕ್ಷಣೆಗೆ ದಲಿತ-ಪ್ರಗತಿಪರರು ಒಗ್ಗೂಡಬೇಕು: ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಕರೆ
ಬೆಂಗಳೂರು, ಸೆ. 16: ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಡಾ.ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನ ನಾಶಕ್ಕೆ ಹುನ್ನಾರ ನಡೆದಿದೆ. ಹೀಗಾಗಿ ದಲಿತ, ಪ್ರಗತಿಪರ ಸಂಘಟನೆಗಳು ಹಾಗೂ ಎಡಪಕ್ಷಗಳು ಒಗ್ಗೂಡಬೇಕು ಎಂದು ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ದೊಡ್ಡಬಳ್ಳಾಪುರ ಸಮೀಪದ ಅನಿಬೆಸೆಂಟ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಅಧ್ಯಯನ ಶಿಬಿರದಲ್ಲಿ ‘ಪ್ರಸ್ತುತ ಸಂದರ್ಭದ ಬಿಕ್ಕಟ್ಟುಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು
ಭಾರತೀಯರ ಬದುಕೇ ಇದೀಗ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ನ್ಯಾಯಕ್ಕಾಗಿ, ಬದುಕಿಗಾಗಿ ಹೋರಾಡುವವರನ್ನು ಉಳ್ಳವರ ಪ್ರಭುತ್ವ ದಮನ ಮಾಡುತ್ತಿದೆ ಎಂದ ಅವರು, ಬಡ ದಲಿತರು, ಆದಿವಾಸಿಗಳ ಪರವಾಗಿ ಮಾತಾಡಿದರೆ ನಕ್ಸಲರೆಂದು ಹತ್ತಿಕ್ಕಲಾಗುತ್ತಿದೆ ಎಂದು ಟೀಕಿಸಿದರು.
ಆಳುವ ಸರಕಾರಗಳ ದಮನಕಾರಿ ನೀತಿ ವಿರುದ್ಧ ಚಿಂತಕರು ಮಾತಾಡಿದರೆ ‘ಅರ್ಬನ್ ನಕ್ಸಲ್' ಪಟ್ಟಕಟ್ಟಿ ಜೈಲಿಗಟ್ಟಲಾಗುತ್ತಿದೆ. ಭೀಮಾ ಕೋರೆಗಾಂವನಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸದೆ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದಲಿತ ಚಿಂತಕರಾದ ಆನಂದ್ ತೇಲ್ತುಂಬ್ಡೆ, ವರವರರಾವ್ ಸೇರಿದಂತೆ ನಾಲ್ಕೈದು ಮಂದಿಯನ್ನು ಬಂಧಿಸಿ ಪ್ರಧಾನಿ ಹತ್ಯೆ ಕಥೆ ಹೆಣೆಯಲಾಗಿದೆ. ಸಮಾನತೆಯ ಪರವಾಗಿ ಮಾತಾಡುತ್ತ ಬಂದವರನ್ನು ಮನುವಾದಿಗಳು ಕಿರುಕುಳ ನೀಡುತ್ತಿದ್ದು, ಕೊಲ್ಲುವ ಮಟ್ಟಕ್ಕೆ ಇಳಿದಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಬುದ್ಧ, ಬಸವಣ್ಣ ಇದೇ ರೀತಿ ಚಿತ್ರಹಿಂಸೆ ಅನುಭವಿಸಿ ಹೋದರು. ಇತ್ತೀಚೆಗೆ ನಮ್ಮ ನಡುವಿನ ಚಿಂತಕರಾದ ನರೇಂದ್ರ ಧಾಬೋಳ್ಕರ್, ಡಾ.ಗೋವಿಂದ ಪನ್ಸಾರೆ, ಡಾ. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ರನ್ನು ಇದೇ ರೀತಿ ಬಲಿ ತೆಗೆದುಕೊಂಡರು ಎಂದ ಅವರು, ಈ ಹತ್ಯೆ ರಾಜಕಾರಣದ ವಿರುದ್ಧ ಹೋರಾಟ ಅನಿವಾರ್ಯ ಎಂದರು.
ದಸಂಸ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ಬೆಂಗಳೂರು ವಿಭಾಗೀಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ಸಂಘಟನಾ ಸಂಚಾಲಕ ಕಲ್ಲಪ್ಪ ಕಾಂಬ್ಲೆ, ಮುಖಂಡರಾದ ಶ್ಯಾಂ ಘಾಟ್ಗೆ, ಶರಣಪ್ಪ ಗುಳಬಾಳ, ದೊಡ್ಡಮನಿ, ಶೋಭಾ ಕಟ್ಟಿಮನ, ಕ್ಯಾಲಸನಹಳ್ಳಿ ಶ್ರೀನಿವಾಸ್ ಹಾಜರಿದ್ದರು.