ಸಿಗರೇಟ್ ಮೇಲೆ ಭಾರತದ ಭೂಪಟ ಚಿತ್ರ ಬಳಕೆ ವಿಚಾರ: ಕೇಂದ್ರಕ್ಕೆ ಮನವಿ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಸೆ.17: ಐಟಿಸಿ ಕಂಪೆನಿಯ ಇಂಡಿಯಾ ಕಿಂಗ್ಸ್ ಬ್ರಾಂಡ್ನ ಸಿಗರೇಟು ಪೊಟ್ಟಣದ ಮೇಲೆ ಭಾರತದ ಭೂಪಟ ಚಿತ್ರ ಬಳಸುವುದರ ವಿರುದ್ಧ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ.
ಇಂಡಿಯಾ ಕಿಂಗ್ಸ್ ಸಿಗರೇಟು ಪ್ಯಾಕೆಟ್ ಮೇಲೆ ಭಾರತ ಭೂಪಟ ಚಿತ್ರ ಬಳಸದಂತೆ ಐಟಿಸಿ ಕಂಪೆನಿಗೆ ನಿರ್ದೇಶಿಸುವಂತೆ ಕೋರಿ ಲಾಯರ್ಸ್ ಫಾರ್ ಟೊಬ್ಯಾಕೋ ಕಂಟ್ರೋಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ಪೀಠ, ಈ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.
ಇಂಡಿಯಾ ಕಿಂಗ್ಸ್ ಸಿಗರೇಟು ಪ್ಯಾಕೆಟ್ಗಳ ಮೇಲೆ ಭಾರತದ ಭೂಪಟ ಬಳಕೆ ಮಾಡಲಾಗುತ್ತಿದೆ. ಇದು ಭಾರತಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ, ಐಟಿಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಿಗರೇಟು ಪೊಟ್ಟಣದ ಮೇಲೆ ಭಾರತದ ಭೂಪಟ ಬಳಸದಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.