ಬಗರ್ಹುಕುಂ ಸಾಗುವಳಿ: ಫಾರಂ ನಂ.57ರಡಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ; ಸಚಿವ ದೇಶಪಾಂಡೆ
ಬೆಂಗಳೂರು, ಸೆ. 17: ಬಗರ್ಹುಕುಂ ಸಾಗುವಳಿದಾರರು ಭೂ ಮಂಜೂರಾತಿಗೆ ಫಾರಂ 57ರ ಅಡಿಯಲ್ಲಿ ಅರ್ಜಿ ಸಲ್ಲಿಸಲು 2019ರ ಮಾರ್ಚ್ 16ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್ಹುಕುಂ ಸಾಗುವಳಿದಾರರು ಸರಕಾರಿ ಭೂಮಿಯನ್ನು ಉಳುಮೆ ಮಾಡುತ್ತಿದ್ದರೆ ಫಾರಂ 50 ಹಾಗೂ 53 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ಬಳಿಕ ಭೂ ಮಂಜೂರಾತಿ ನೀಡಲಾಗಿದೆ. ಇದೀಗ ಸಾಗುವಳಿದಾರರು ಹಾಗೂ ಜನಪ್ರತಿನಿಧಿಗಳ ಬೇಡಿಕೆ ಹಿನ್ನೆಲೆಯಲ್ಲಿ 2005ರ ಜನವರಿ 1ರ ವರೆಗೆ ಅರ್ಹರಿಗೆ ಭೂಮಿ ಮಂಜೂರು ಮಾಡಲು ಫಾರಂ 57 ಅಡಿಯಲ್ಲಿ ಅಕ್ಟೋಬರ್ 1ರಿಂದ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಫಾರಂ ನಂ. 50ಅಡಿಯಲ್ಲಿ ಒಟ್ಟು 10.88 ಲಕ್ಷ ಅರ್ಜಿಗಳು ಬಂದಿದ್ದು, ಆ ಪೈಕಿ 3.74 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸಿದ್ದು, 9,937 ಅರ್ಜಿಗಳು ಬಾಕಿ ಇವೆ. ಅದೇ ರೀತಿ ಫಾರಂ ನಂ. 53 ಅಡಿಯಲ್ಲಿ 10.96 ಲಕ್ಷ ಅರ್ಜಿಗಳ ಪೈಕಿ 2.10 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸಿದ್ದು, 1.84 ಲಕ್ಷ ಅರ್ಜಿಗಳನ್ನು ವಿಲೆವಾರಿಗೆ ಬಾಕಿ ಇವೆ. ಬಾಕಿ ಇರುವ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದರು.
‘ಬಗರ್ಹುಕುಂ ಯೋಜನೆಯಡಿ ಅನರ್ಹರಿಗೆ ಭೂಮಿ ಮಂಜೂರು ಮಾಡಿದ್ದರೆ ಈ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳು ಇಂತಹ ಪ್ರಕರಣಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ವರದಿ ಬಂದ ಬಳಿಕ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’
-ಆರ್.ವಿ.ದೇಶಪಾಂಡೆ, ಕಂದಾಯ ಸಚಿವ