ಅಂಪೈರ್ ಇಲ್ಲದ ಆಟ ಆಡುತ್ತಿರುವ ಬಿಎಸ್ವೈ: ಸಂಸದ ಡಿ.ಕೆ.ಸುರೇಶ್
"ಹೆದರಿ ಹೋಗುವ ಜಾಯಮಾನ ಡಿಕೆಶಿ ಅವರದಲ್ಲ"
ಬೆಂಗಳೂರು, ಸೆ. 19: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಂಪೈರ್ ಇಲ್ಲದೆ ‘ಆಟ’ ಆಡುತ್ತಿದ್ದು, ಯಾರು ಅಂಪೈರ್ ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಬುಧವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಅವರ ಸಹೋದರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಎದುರಾಳಿ ಇಲ್ಲದೆ ಡಿಕೆಶಿ ಪಾನ್ ಮೂವ್ ಮಾಡುತ್ತಿದ್ದಾರೆಂಬ ಬಿಎಸ್ವೈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಹೆದರುವ ಜಾಯಮಾನ ಅವರದಲ್ಲ: ನಮ್ಮ ಅಣ್ಣ ಯಾವುದೋ ಭಯದಿಂದ ಆಸ್ಪತ್ರೆಗೆ ದಾಖಲಾಗಿಲ್ಲ. ಹೆದರಿ ಹೋಗುವ ಜಾಯಮಾನ ಅವರದಲ್ಲ. ಭಗವಂತ, ಗುರುಗಳು ಹಾಗೂ ಜನರ ಆಶೀರ್ವಾದ ಅವರ ಮೇಲಿದೆ. ಎಲ್ಲವನ್ನು ದೈರ್ಯವಾಗಿ ಎದುರಿಸುತ್ತೇವೆ ಎಂದು ಅವರು ಹೇಳಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆಗಿಂತ ಇಂದು ಚೇತರಿಸಿಕೊಂಡಿದ್ದಾರೆ. ಇಂದು ಸಂಜೆ ಅಥವಾ ನಾಳೆ(ಸೆ.20) ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆಂದು ಅವರು ಸ್ಪಷ್ಟಣೆ ನೀಡಿದರು.
ಅವರನ್ನೇ ಕೇಳಿ: ಬೆಳಗಾವಿಯ ಜಾರಕಿಹೊಳಿ ಸಹೋದರರು ಹಾಗೂ ನಮಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಭಿನ್ನಮತದ ಬಗ್ಗೆ ಅವರನ್ನೇ ಕೇಳಬೇಕು. ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.