ತಪ್ಪೊಪ್ಪಿಕೊಂಡರೆ 25 ಲಕ್ಷ ರೂ. ನೀಡುವುದಾಗಿ ಆಮಿಷ: ವಾಗ್ಮೋರೆ ಆರೋಪ
ಗೌರಿ ಲಂಕೇಶ್ ಹತ್ಯೆ ಪ್ರಕರಣ
ಬೆಂಗಳೂರು, ಸೆ.29: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್(ಎಸ್ಐಟಿ) ತನಿಖಾಧಿಕಾರಿಗಳು ಹತ್ಯೆ ಕೃತ್ಯ ಒಪ್ಪಿಕೊಂಡರೆ ಕುಟುಂಬಕ್ಕೆ 25 ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಗಂಭೀರ ಆರೋಪ ಮಾಡಿದ್ದಾನೆ.
ನ್ಯಾಯಾಂಗ ಅವಧಿ ಮುಗಿದ ಹಿನ್ನೆಲೆಯಲ್ಲಿ ಹತ್ತು ಮಂದಿ ಆರೋಪಿಗಳನ್ನು ನಗರದ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ವೇಳೆ ಪೊಲೀಸ್ ವಾಹನದಲ್ಲಿರುವಾಗಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಾಗ್ಮೋರೆ, ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಕುಟುಂಬಸ್ಥರನ್ನು ಬಂಧಿಸಲಾಗುವುದು ಎಂದು ಸಿಟ್ ತನಿಖಾಧಿಕಾರಿಗಳು ಬೆದರಿಸಿದ್ದಾರೆ ಎಂದು ದೂರಿದರು.
ವಾಗ್ಮೋರೆ ಹೇಳಿದ್ದೇನು?: ಗೌರಿ ಹತ್ಯೆ ಪ್ರಕರಣದಲ್ಲಿ ನಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ. ಆದರೆ, ನಾವು ಯಾವುದೇ ತಪ್ಪು ಮಾಡಿಲ್ಲ. ತನಿಖಾಧಿಕಾರಿಗಳು ಬಲವಂತವಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕೃತ್ಯ ಮಾಡಿರುವುದನ್ನು ಒಪ್ಪಿಕೊಂಡರೆ ಕುಟುಂಬಕ್ಕೆ 25 ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಆಪಾದಿಸಿದರು.
ಪ್ರಕರಣ ಸಂಬಂಧ ಆರೋಪಿಗಳನ್ನು ಮತ್ತೆ ಅ.12ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ