"ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ, ರಫೇಲ್ ಒಪ್ಪಂದದ ಬಗ್ಗೆಯಾದರೂ ಮಾತನಾಡಿ"
ಪ್ರಧಾನಿ ಮೋದಿಯನ್ನು ಕೆಣಕಿದ ಸಿದ್ದರಾಮಯ್ಯ
ಬೆಂಗಳೂರು, ಅ.13: ‘ಮಾನ್ಯ ನರೇಂದ್ರ ಮೋದಿಯವರೇ ಪ್ರಧಾನ ಸೇವಕರಾಗಿ ತಾವು ಜನಸೇವೆಯನ್ನು ಮಾಡಲಿಲ್ಲ. ಚೌಕಿದಾರರಾಗಿ ನಿಮ್ಮ ಕಣ್ಣ ಮುಂದೆಯೇ ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ. ರಫೇಲ್ ಒಪ್ಪಂದದ ಬಗ್ಗೆಯಾದರೂ ಮಾತನಾಡಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೋದಿಯವರನ್ನು ಟ್ವಿಟ್ಟರ್ನಲ್ಲಿ ಕೆಣಕಿದ್ದಾರೆ.
ರಫೇಲ್ ಒಪ್ಪಂದದಲ್ಲಿ ತಾವು ಅಂಬಾನಿಯವರಿಗೆ ತೋರುತ್ತಿರುವ ನಿಷ್ಠೆಯನ್ನು ದೇಶದ ಬಗೆಗೆ ತೋರಿದ್ದರೆ ರೂಪಾಯಿ ಮೌಲ್ಯವಿಂದು ಡಾಲರ್ ಎದುರು 74 ರೂ.ಗಡಿ ದಾಟುತ್ತಿರಲಿಲ್ಲ. ದೇಶದ ಪ್ರಧಾನಿಯೊಬ್ಬರು ಬಂಡವಾಳಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನ ಮಂತ್ರಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಗತಿಯೇನು? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಅತ್ಯಂತ ಕಟುಶಬ್ಧಗಳಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Next Story