ಎನ್.ಮಹೇಶ್ ರಾಜೀನಾಮೆ ಪತ್ರ ರಾಜ್ಯಪಾಲರಿಗೆ ರವಾನೆ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಅ.15: ಬಿಎಸ್ಪಿ ಶಾಸಕ ಎನ್.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಮುಂದಿನ ಕ್ರಮಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸೋಮವಾರ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ನಿರ್ದೇಶನದಂತೆ ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಸಿ ಸತೀಶ್ ಮಿಶ್ರಾ, ಮಹೇಶ್ ರಾಜೀನಾಮೆ ಅಂಗೀಕರಿಸುವಂತೆ ಸೂಚಿಸಿದ್ದರು ಎಂದರು.
ಸಚಿವ ಸ್ಥಾನಕ್ಕೆ ಮಹೇಶ್ ನೀಡಿರುವ ರಾಜೀನಾಮೆಗೂ ಈಗ ನಡೆಯುತ್ತಿರುವ ಉಪ ಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ. ಬಿಎಸ್ಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಎಂದಿನಂತೆ ಮುಂದುವರೆಯಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿಯಾಗಿ ನಾನು ಸರಕಾರದ ಹಣದಲ್ಲಿ ಯಾವುದೇ ದುಂದು ವೆಚ್ಚ ಮಾಡುತ್ತಿಲ್ಲ. ನಾನು ಎಲ್ಲಿಯೂ ವಿಶೇಷ ವಿಮಾನ ಬಳಸುವುದಿಲ್ಲ. ಹೆಚ್ಚಾಗಿ ಕಾರಿನಲ್ಲಿಯೇ ಸಂಚರಿಸುತ್ತೇನೆ. ಸಾಧ್ಯವಾದಷ್ಟು ಮಟ್ಟಿಗೆ ಜನರ ತೆರಿಗೆ ಹಣವನ್ನು ಉಳಿಸುತ್ತಿದ್ದೇನೆ ಎಂದು ಅವರು ಹೇಳಿದರು. ನಾನು ನಿನ್ನೆ ಮಂಗಳೂರಿಗೆ ಹೋದಾಗಲೂ ವಿಶೇಷ ವಿಮಾನದಲ್ಲಿ ಹೋಗಿಲ್ಲ. ಸಾಮಾನ್ಯ ವಿಮಾನದಲ್ಲೆ ಹೋಗಿದ್ದೇನೆ. ನಾನು ದುಂದು ವೆಚ್ಚ ಮಾಡುತ್ತೇನೆ ಎಂದು ಮಾಡುತ್ತಿರುವ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ಕುಮಾರಸ್ವಾಮಿ ತಿಳಿಸಿದರು.
ನನ್ನ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ 184 ಜನ ಕೆಲಸ ಮಾಡುತ್ತಿದ್ದಾರೆ. 56 ಜನ ನಿಯೋಜನೆಗೊಂಡಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ 6 ಮಂದಿಗೆ ಕೆಲಸ ಕೊಟ್ಟಿದ್ದೇನೆ. ಇದು ಕೇವಲ ನನ್ನ ಸರಕಾರದ ಅವಧಿಯಲ್ಲಿ ಮಾಡಿರುವ ನಿರ್ಧಾರವಲ್ಲ. ಹಿಂದಿನ ಸರಕಾರದ ಅವಧಿಯಲ್ಲಿಯೂ ಇದೇ ರೀತಿಯ ಪದ್ಧತಿ ಇತ್ತು ಎಂದು ಅವರು ಹೇಳಿದರು.