ಎನ್ಎಸ್ಎಸ್ ಘಟಕದ ವತಿಯಿಂದ ರಕ್ತದಾನ ಶಿಬಿರ
ಬೆಂಗಳೂರು, ಅ.16: ದಿ ಆಕ್ಸ್ಫರ್ಡ್ ವಿಜ್ಞಾನ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಮರಿಸ್ವಾಮಿ, ರಕ್ತದಾನ ಮಾಡುವುದು ಮಾನವೀಯ ಕಾರ್ಯವಾಗಿದ್ದು ಆಪತ್ಕಾಲದಲ್ಲಿ ಜೀವ ಉಳಿಸುವುದಕ್ಕಾಗಿ ರಕ್ತ ನೀಡಬೇಕು. ವಿದ್ಯಾರ್ಥಿಗಳು ರಕ್ತದಾನ ಮಾಡಿ ಮಾನವೀಯತೆಯ ಸೇವೆ ಮಾಡುವುದರ ಮೂಲಕ ಸಮಾಜಕ್ಕೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದು. ರಕ್ತದಾನ ಮಾಡುವವರು ವೈದ್ಯರ ಸಲಹೆ ಮೇರೆಗೆ ರಕ್ತದಾನ ಮಾಡಬೇಕು. ತುರ್ತು ಸನ್ನಿವೇಶದಲ್ಲಿ ಅಪಾಯದಲ್ಲಿನ ಜೀವ ಉಳಿಸಲು ನೆರವಾಗಬೇಕು ಎಂದು ಸಲಹೆ ನೀಡಿದರು.
ರಕ್ತದಾನ ಒಬ್ಬರ ಜೀವ ಉಳಿಸುತ್ತದೆ. ಅದಕ್ಕೆ ಯಾವುದೇ ಪರ್ಯಾಯವಿಲ್ಲ. ಕೇವಲ ಒಂದು ದಾನವು ನಾಲ್ವರ ಜೀವವನ್ನು ಉಳಿಸುತ್ತದೆ. ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚುವರಿ ಕಬ್ಬಿಣಾಂಶದಿಂದ ಅಧಿಕ ರಕ್ತದ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಭಾರತಿ, ಡಾ.ಗಾಯತ್ರಿ ಸುಧೀರ್, ಯುವ ಮೋರ್ಚಾದ ಕಿಶೋರ್ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.