ಆರೆಸ್ಸೆಸ್ನಿಂದ ನ್ಯಾಯಾಂಗಕ್ಕೆ ಅಪಮಾನ: ಸುಪ್ರಿಂ ಕೋರ್ಟ್ ಮದ್ಯಪ್ರವೇಶ ಮಾಡಲಿ; ಪಿಎಫ್ಐ ಒತ್ತಾಯ
ಬೆಂಗಳೂರು, ನ.2: ಬಾಬರಿ ಮಸೀದಿ ವಿವಾದದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಬಾಕಿ ಇರುವಾಗಲೆ ಬಾಬರಿ ಮಸೀದಿ ಧ್ವಂಸಗೊಳಿಸಿದ ಸ್ಥಳದಲ್ಲೇ ರಾಮಮಂದಿರ ನಿರ್ಮಿಸುತ್ತೇವೆಂದು ಆರೆಸ್ಸೆಸ್ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದು, ಇದರ ಬಗ್ಗೆ ಸುಪ್ರೀಂ ಕೋರ್ಟ್ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇಂದ್ರ ಸಮಿತಿ ಒತ್ತಾಯಿಸಿದೆ.
ಆರೆಸ್ಸೆಸ್, ಬಿಜೆಪಿ ಮತ್ತು ಅದರ ಇತರ ಅಂಗಸಂಸ್ಥೆಗಳ ನಾಯಕರು ತಮ್ಮ ನಿರಂತರ ಹೇಳಿಕೆಗಳ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನ್ಯಾಯಾಂಗಕ್ಕೆ ಯಾವುದೇ ಬೆಲೆ ಕೊಡದೆ, ಕಾನೂನು ಬಾಹಿರ ಹೇಳಿಕೆಗಳನ್ನು ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ದೇಶಾದ್ಯಂತ ಕೋಮು ಗಲಭೆ ಸೃಷ್ಟಿಸಿ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಬಾಬರಿ ಮಸೀದಿ ಪ್ರಕರಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ಇದನ್ನು ಅತ್ಯಂತ ಗಂಭೀರ ವಿಷಯ ಎಂದು ಪರಿಗಣಿಸಬೇಕಾಗಿದೆ. ಇಂತಹ ಕ್ರಿಮಿನಲ್ ಮತ್ತು ರಾಷ್ಟ್ರ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಸಂಘ ಪರಿವಾರದ ನಾಯಕರ ವಿರುದ್ಧ ಸುಪ್ರೀಂ ಕೋರ್ಟ್ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಿಎಫ್ಐ ಪ್ರಕಟನೆಯಲ್ಲಿ ತಿಳಿಸಿದೆ.