'ನನ್ನನ್ನು ಜೀವಂತ ಸುಟ್ಟುಬಿಡಿ' ಎಂದು ಮೋದಿಯೇ ಹೇಳಿದ್ದರು: ಮಾಜಿ ಸಚಿವ ಜಯಚಂದ್ರ
ಬೆಂಗಳೂರು, ನ. 10: ‘ಪ್ರಧಾನಿ ಮೋದಿಯರನ್ನ ಜೀವಂತವಾಗಿ ಸುಡುವ ಕಾಲ ಬಂದಿದೆ’ ಎಂಬ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ, ತಾನು ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಯನ್ನಷ್ಟೇ ಉಲ್ಲೇಖಿಸಿದ್ದೇನೆ ಎಂದು ಸ್ಪಷ್ಟಣೆ ನೀಡಿದ್ದಾರೆ.
ಪ್ರಧಾನಿ ಮೋದಿಯವರ ಮೇಲೆ ನನಗೆ ಅಪಾರ ಗೌರವವಿದೆ. ಗರಿಷ್ಠ ಮೊತ್ತದ ನೋಟುಗಳ ಚಲಾವಣೆ ರದ್ದುಪಡಿಸಿದ ಸಂದರ್ಭದಲ್ಲಿ ಮೋದಿ ಕಪ್ಪು ಹಣ ತರುವ ಭರವಸೆ ನೀಡುವ ವೇಳೆ ‘ನನಗೆ 50 ದಿನ ಕಾಲಾವಕಾಶ ನೀಡಿ, ಅದು ನನ್ನಿಂದ ಆಗದಿದ್ದರೆ ನನ್ನನ್ನು ಜೀವಂತ ಸುಟ್ಟುಬಿಡಿ’ ಎಂದು ಹೇಳಿಕೆ ನೀಡಿದ್ದರು. ತಾನು ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದೇನೆ ಎಂದು ತಿಳಿಸಿದ್ದಾರೆ.
ನೋಟು ಅಮಾನ್ಯೀಕರಣಗೊಂಡು ಎರಡು ವರ್ಷ ಕಳೆದಿದೆ. ಶೇ.99.3ರಷ್ಟು ಹಣ ಆರ್ಬಿಐಗೆ ಜಮಾ ಆಗಿದೆ. ಮೋದಿ ಆಶ್ವಾಸನೆಯಂತೆ ಜನರ ಖಾತೆಗೆ 10ರಿಂದ 15 ಲಕ್ಷ ರೂ.ಜಮಾ ಆಗಿಲ್ಲ. ಜನಸಾಮಾನ್ಯರ ನೋವನ್ನು ತುಮಕೂರಿನಲ್ಲಿ ಹೇಳಿದ್ದೆ. ಅವರ ಹೊರತಾಗಿ ನಾನು ಯಾರಿಗೂ ನೋವುಂಟು ಮಾಡಲು ಅಥವಾ ಯಾವುದೇ ದುರುದ್ದೇಶವಿಲ್ಲ ಎಂದು ಜಯಚಂದ್ರ ಪ್ರಕಟಣೆಯಲ್ಲಿ ಸ್ಪಷ್ಟಣೆ ನೀಡಿದ್ದಾರೆ.