ಕೆಪಿಎಸ್ಸಿ: ಎಸ್ಸಿ-ಎಸ್ಟಿ, ಓಬಿಸಿ ಮೀಸಲಾತಿ ಮಿತಿ; ಸಂವಿಧಾನ ವಿರೋಧಿ ಆದೇಶ ಹಿಂಪಡೆಯಲು ವ್ಯಾಪಕ ಒತ್ತಾಯ
ಬೆಂಗಳೂರು, ನ. 16: ಕೆಪಿಎಸ್ಸಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಮಿತಿಗೊಳಿಸಿ ಹೊರಡಿಸಿರುವ ಆದೇಶ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸಾಮಾಜಿಕ-ಆರ್ಥಿಕವಾಗಿ ತೀವ್ರ ಹಿನ್ನೆಡೆಯಾಗಲಿದ್ದು, ರಾಜ್ಯ ಸರಕಾರ ಕೂಡಲೇ ತನ್ನ ಆದೇಶ ಹಿಂಪಡೆಯಬೇಕೆಂಬ ಒತ್ತಾಯ ಕೇಳಿಬಂದಿದೆ.
ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ನೇರಮೀಸಲಾತಿ ಪಡೆಯಲು ಅರ್ಹವಿರುವ ಸಮುದಾಯಗಳ ಜನಸಂಖ್ಯೆಯು ಸುಮಾರು ಶೇ.93ರಷ್ಟಿದ್ದು, ಸದರಿ ಸಮುದಾಯಗಳ ಮೀಸಲಾತಿ ಪ್ರಮಾಣ ಶೇ.50ಕ್ಕೆ ಮಿತಿಗೊಳಿಸಿದರೆ ಎಸ್ಸಿ-ಎಸ್ಟಿ, ಓಬಿಸಿಗಳಿಗೆ ಅನ್ಯಾಯ ಆಗಲಿದೆ. ಆದುದರಿಂದ ಕೂಡಲೇ ಮಧ್ಯಪ್ರವೇಶಿಸಿ ಈ ವರ್ಗಗಳ ಹಕ್ಕುಗಳ ರಕ್ಷಣೆ ಮಾಡಬೇಕೆಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಈ ಮಧ್ಯೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಇನ್ನಿತರರು ಎಸ್ಸಿ-ಎಸ್ಟಿ, ಓಬಿಸಿ ಮೆರಿಟ್ ಕಡೆಗಣಿಸಿ ಆಯ್ಕೆ ಮಾಡಲು ಮುಂದಾಗಿರುವ ಸಂವಿಧಾನ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ, 2016ರಲ್ಲಿ ಹೈಕೋರ್ಟ್ 1998, 1999 ಹಾಗೂ 2004ರಲ್ಲಿನ ಕೆಎಎಸ್ ನೇಮಕಕ್ಕೆ ಅನ್ವಯ ಆಗುವಂತೆ ತೀರ್ಪು ನೀಡಿದೆಯೇ ಹೊರತು ಇತರೆ ನೇರ ನೇಮಕಾತಿಗೆ ಅನ್ವಯಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೀಸಲಾತಿ ಶೇ.50ರಷ್ಟು ದಾಟಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆಯೇ ಹೊರತು, ಮೀಸಲಾತಿ ಇಚ್ಛಿಸಿದ ಅಭ್ಯರ್ಥಿಗಳು ನೇರ ನೇಮಕಾತಿಯಲ್ಲಿ ಹೆಚ್ಚಿನ ಅಂಕಗಳಿಸಿದ್ದರೂ, ಅವರು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ ಹುದ್ದೆಗಳಿಗೆ ಪರಿಗಣಿಸಬಾರದು ಎಂದು ಎಲ್ಲಿಯೂ ತಿಳಿಸಿಲ್ಲ. ಯಾವುದೇ ನೇಮಕಾತಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಹುದ್ದೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೆಲ್ಲ ಸ್ಪರ್ಧಿಸಬಹುದಾಗಿರುತ್ತದೆ. ಆದರೆ, ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನ.3ರಂದು ಮೀಸಲಾತಿ ಮಿತಿಗೊಳಿಸಿ ಆದೇಶ ಹೊರಡಿಸಿರುವುದು ಆತಂಕಕಾರಿ. ಇದು ಸಂವಿಧಾನ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಆಶಯಗಳಿಗೆ ವಿರುದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದ್ದಾರೆ.
‘ಕೆಪಿಎಸ್ಸಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಹೆಚ್ಚು ಅಂಕಗಳನ್ನು ಪಡೆದಿದ್ದಲ್ಲಿ ಅಂತಹವರನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸುವಂತೆ ಸೂಕ್ತ ಕಾನೂನು ರಚಿಸಬೇಕು. ರಾಜ್ಯ ಸರಕಾರ ಹೊರಡಿಸಿರುವ ಸಂವಿಧಾನ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು’
-ಎಚ್.ಎಂ.ರೇವಣ್ಣ ವಿಧಾನ ಪರಿಷತ್ ಸದಸ್ಯ
ಕೆಪಿಎಸ್ಸಿ ನೇಮಕದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಕೆಪಿಎಸ್ಸಿ ಕಾರ್ಯದರ್ಶಿ ಆಯೋಗದ ಗಮನಕ್ಕೆ ತಾರದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೆ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯವರು ಈ ಸಂಕೀರ್ಣ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಾರದೆ ಆದೇಶ ಹೊರಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ಹೇಸರು ಹೇಳಲು ಇಚ್ಛಿಸದ ಕೆಪಿಎಸ್ಸಿ ಸದಸ್ಯರು